ಯಮುನಾ ನದಿ ತೀರದಲ್ಲಿರುವ ವೃಂದಾವನ ಪಟ್ಟಣವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಊರಾಗಿದೆ. ಏಕೆಂದರೆ ಈ ಊರಿನಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯದ ಬಹುಪಾಲು ಭಾಗವನ್ನು ಕಳೆದನಂತೆ. ಶ್ರೀ ಕೃಷ್ಣನಿಗೆ ಸಂಬಂಧಿಸಿದ ಅನೇಕ ಲೀಲೆಗಳಿಗೆ ಈ ಊರು ಸಾಕ್ಷಿಯಾಗಿದೆ. ಇಲ್ಲಿನ ಸ್ಥಳ ಪುರಾಣಗಳು ಕೃಷ್ಣನ ಲೀಲೆಗೆ ಜೀವಂತ ಸಾಕ್ಷಿಗಳಾಗಿವೆ. ಶ್ರೀ ಕೃಷ್ಣನು ರಾಧೆ ಮತ್ತು ಇನ್ನಿತರ ಸಖಿಯರ ಜೊತೆಗೆ ಪ್ರೀತಿಯ ಸಂದೇಶದ ಧ್ಯೋತಕವಾದ ರಾಸಲೀಲೆಯೆಂಬ ದೈವಿಕ ನೃತ್ಯ ಪ್ರಕಾರವನ್ನು ಆಡಿದನೆಂದು, ಗೋಪಿಕೆಯರು ಸ್ನಾನ ಮಾಡುತ್ತಿದ್ದಾಗ ಅವರ ವಸ್ತ್ರಾಪಹರಣ ಮಾಡಿದ್ದು ಮತ್ತು ಹಲವಾರು ರಾಕ್ಷಸರನ್ನು ಸಂಹರಿಸಿದ್ದು, ಇದೇ ಊರಿನಲ್ಲಿ. ವೃಂದಾವನವು 5000 ದೇವಾಲಯಗಳನ್ನು ಹೊಂದಿದ್ದು, ಹಿಂದೂಗಳ ಪಾಲಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ.
ವೃಂದಾವನವು ಕಾಲಾನುಕ್ರಮೇಣ ತನ್ನ ಅಂತಃಸತ್ವವನ್ನು ಕಳೆದುಕೊಂಡಿತು. ಆದರೆ ಭಗವಾನ್ ಚೈತನ್ಯ ಮಹಾಪ್ರಭುರವರು 1515ರಲ್ಲಿ ಇದನ್ನು ಪುನರುಜ್ಜೀವನಗೊಳಿಸಿದರು. ಈ ಮಹಾ ಸಂತರು ವೃಂದಾವನಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನಿಗೆ ಸಂಬಂಧಿಸಿದ ಹಲವಾರು ಸ್ಥಳಗಳನ್ನು ಶೋಧಿಸಲು ಆರಂಭಿಸಿದರು. ಅವರು ತಮ್ಮ ದೈವ ಶಕ್ತಿಯಿಂದ ವೃಂದಾವನದ ದಟ್ಟ ಅರಣ್ಯದಲ್ಲಿ ಕಳೆದು ಹೋಗಿದ್ದ, ಶ್ರೀ ಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಶೋಧಿಸಿ, ಅವುಗಳಿಗೆ ಮರು ಜೀವ ನೀಡಿದರು. ವೃಂದಾವನಕ್ಕೆ ಹಿಂದೂಗಳ ಎಲ್ಲಾ ಮಹಾ ಸಂತರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರು ಭೇಟಿ ನೀಡಿರುತ್ತಾರೆ. ವೃಂದಾವನಕ್ಕೆ ಒಮ್ಮೆ ಭೇಟಿ ನೀಡಿ, ಅಲ್ಲಿ ಜನರು ಹೇಗೆ ತಮ್ಮ ದೈನಂದಿನ ಕೆಲಸಗಳನ್ನು ರಾಧ ಕೃಷ್ಣರ ಜಪ ಮಾಡುತ್ತ ನಿರ್ವಹಿಸುತ್ತಿರುತ್ತಾರೆ ಎಂಬುದನ್ನು ಕಾಣಿರಿ.
ವೃಂದಾವನ ಮತ್ತು ಅದರ ಸುತ್ತ - ಮುತ್ತ ಇರುವ ಪ್ರವಾಸಿ ತಾಣಗಳು
ಈ ಮೊದಲೇ ಹೇಳಿದಂತೆ ವೃಂದಾವನದಲ್ಲಿ ಸುಮಾರು 5000 ದೇವಾಲಯಗಳಿದ್ದು, ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಮತ್ತು ಪ್ರಮುಖವಾದ ಯಾತ್ರಾಸ್ಥಳವಾಗಿದೆ. ಹಲವಾರು ದೇವಾಲಯಗಳು ಅತ್ಯಂತ ಪ್ರಾಚೀನವಾದವುಗಳಾಗಿವೆ. ಅಲ್ಲದೆ ಕೆಲವು ದೇವಾಲಯಗಳು ಮೊಘಲ್ ರಾಜರ ಆಕ್ರಮಣದ ವೇಳೆಯಲ್ಲಿ ನಾಶಗೊಂಡಿವೆ. ಅದರಲ್ಲಿಯೂ ಔರಂಗಜೇಬನ ಕಾಲದಲ್ಲಿ ವೃಂದಾವನದ ಬಹುಪಾಲು ದೇವಾಲಯಗಳು ನಾಶಗೊಂಡವು. ಆದರು ಕೆಲವು ದೇವಾಲಯಗಳು ಅಳಿದು ಉಳಿದು ಶ್ರೀ ಕೃಷ್ಣನ ಕಥಾನಕವನ್ನು ನಮಗೆ ತಿಳಿಸುತ್ತಿವೆ. ಬಂಕೆ ಬಿಹಾರಿ ದೇವಾಲಯ, ರಂಗಜಿ ದೇವಾಲಯ, ಗೋವಿಂದ್ ದೇವ್ ದೇವಾಲಯ ಮತ್ತು ಮದನ್ ಮೋಹನ್ ದೇವಾಲಯಗಳು ಇಲ್ಲಿನ ಪ್ರಮುಖ ದೇವಾಲಯಗಳಾಗಿವೆ. ಇಸ್ಕಾನ್ ದೇವಾಲಯವು ಇಲ್ಲಿನ ದೇವಾಲಯಗಳ ಸಾಲಿಗೆ ನೂತನ ಸೇರ್ಪಡೆಯಾಗಿದೆ. ಶಾಂತಿ ಮತ್ತು ಆತ್ಮ ಸಾಕ್ಷಾತ್ಕಾರವನ್ನು ಹುಡುಕಿಕೊಂಡು ಬರುವ ವಿದೇಶಿಯರ ಪಾಲಿಗೆ ಇದು ವರವಾಗಿದೆ. ಇಲ್ಲಿ ವೇದಗಳ ಬಗ್ಗೆ ಮತ್ತು ಭಗವದ್ಗೀತೆಯ ಬಗ್ಗೆ ಇಂಗ್ಲೀಷಿನಲ್ಲಿ ಪ್ರವಚನ ನೀಡಲಾಗುತ್ತದೆ.
ಇಲ್ಲಿ ಕೆಲವು ದೇವಾಲಯಗಳನ್ನು ಶ್ರೀ ಕೃಷ್ಣನ ಸಂಗಾತಿಯಾದ ರಾಧೆಗಾಗಿ ನಿರ್ಮಿಸಲಾಗಿದೆ. ರಾಧಾ ಗೋಕುಲಾನಂದ ದೇವಾಲಯ ಮತ್ತು ಶ್ರೀ ರಾಸ್ ಬಿಹಾರಿ ಅಷ್ಟ ಸಖಿ ದೇವಾಲಯಗಳು ಇವುಗಳಲ್ಲಿ ಒಂದಾಗಿದೆ. ಇಲ್ಲಿ ಅಷ್ಟ ಸಖಿ ಎಂಬುದು ಶ್ರೀ ಕೃಷ್ಣನ ಜೊತೆಗೆ ರಾಸ ಲೀಲೆಯಲ್ಲಿ ಪಾಲ್ಗೊಂಡ ಎಂಟು ಜನ ಸಖಿಯರನ್ನು ಸೂಚಿಸುತ್ತದೆ.
ದೇವಾಲಯಗಳ ಹೊರತಾಗಿ ಕೇಸಿ ಘಾಟ್ ಸಹ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹಿಂದೂಗಳ ನಂಬಿಕೆಗಳ ಪ್ರಕಾರ ಯಮುನಾ ನದಿಯ ಘಾಟ್ನಲ್ಲಿ ( ನದಿ ತೀರದ ಮೆಟ್ಟಿಲುಗಳು) ತೀರ್ಥ ಸ್ನಾನ ಮಾಡುವುದರಿಂದ ಸಕಲ ಪಾಪಕರ್ಮಗಳಿಂದ ನಿವಾರಣೆ ಹೊಂದಬಹುದಂತೆ. ಹಾಗಾಗಿ ಇಲ್ಲಿ ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ಮತ್ತು ಸಂಜೆಯ ಸಮಯದಲ್ಲಿ ಆರತಿಯನ್ನು ಸಹ ಬೆಳಗಲಾಗುತ್ತದೆ.
ವೃಂದಾವನಕ್ಕೆ ತಲುಪುವುದು ಹೇಗೆ
ವೃಂದಾವನಕ್ಕೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ದೆಹಲಿ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವನ್ನು ಹೊಂದಿದೆ.
ಭೇಟಿ ನೀಡಲು ಅತ್ಯುತ್ತಮ ಅವಧಿ
ನವೆಂಬರ್ ನಿಂದ ಮಾರ್ಚ್ ವರೆಗಿನ ಅವಧಿಯು ವೃಂದಾವನಕ್ಕೆ ಭೇಟಿ ನೀಡಲು ಅತ್ಯುತ್ತಮ ಅವಧಿಯಾಗಿರುತ್ತದೆ.