ಉತ್ತರಕಾಶಿಯು ಒಂದು ಸುಂದರವಾದ ಜಿಲ್ಲೆಯೆಂಬ ಖ್ಯಾತಿ ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 1158 ಮೀಟರ್ ಎತ್ತರದಲ್ಲಿರುವ ಈ ತಾಣ ಭೂಮಿಯ ಮೇಲಿನ ಸ್ವರ್ಗವೆಂದೆ ಹೇಳಬಹುದು. ಉತ್ತರಖಂಡ ರಾಜ್ಯದ ಒಂದು ಜಿಲ್ಲೆಯ ಸ್ಥಾನಮಾನ ಇದಕ್ಕಿದೆ. 1960 ರ ಫೆ.24 ರಂದು ಉತ್ತರಖಂಡದ ಈ ಜಿಲ್ಲೆಯು ಉದಯಿಸಿದ್ದು, ತನ್ನ ಉತ್ತರದ ದಿಕ್ಕಿನಲ್ಲಿ ಹಿಮಾಚಲ ಪ್ರದೇಶ ಹಾಗೂ ಟಿಬೇಟ್ ನಿಂದ ಸುತ್ತುವರೆದಿದ್ದರೆ ಪೂರ್ವ ದಿಕ್ಕಿನಲ್ಲಿ ಚಮೋಲಿ ಜಿಲ್ಲೆಯಿದೆ.
ಹಿಂದು ಧಾರ್ಮಿಕ ಆಚರಣೆಗಾರರಿಗೆ ಇದೊಂದು ಪವಿತ್ರ ತಾಣ. ಪಟ್ಟಣಗಳ ನಗರಿ ಹಾಗೂ ಉತ್ತರದ 'ಕಾಶಿ' ಅಂತಲೂ ಜನಪ್ರಿಯವಾಗಿದೆ. ಈ ಪವಿತ್ರ ತಾಣ ಉತ್ತರಕಾಶಿಯು, ಗಂಗಾ ನದಿಯ ದಡದ ಮೇಲಿದೆ. ಹೃಷಿಕೇಶದಿಂದ ಈ ಸ್ಥಳ 145 ಕಿ.ಮೀ. ದೂರದಲ್ಲಿದೆ. ಇದರ ಸುತ್ತೂ ಸಾಕಷ್ಟು ಜನಪ್ರಿಯ ಧಾರ್ಮಿಕ ತಾಣಗಳು ಇವೆ. ಗಂಗೋತ್ರಿ ಹಾಗೂ ಯಮುನೋತ್ರಿ ಇದರಲ್ಲಿ ಪ್ರಮುಖವಾದವುಗಳು. ಈ ತಾಣವು ಉತ್ತರ ಕುರುಸ್, ಖಾಸಾಸ್, ಕುನಿನ್ದಾಸ್, ತಂಗನಾಸ್, ಪ್ರತಾಂಗನಾಸ್ ಎಂಬ ಬುಡಕಟ್ಟು ವಾಸಿಗಳ ಜನಾಂಗವನ್ನು ಹೊಂದಿದೆ.
ಉತ್ತರ ಕಾಶಿಯು ಸುಂದರ ದೇವಾಲಯಗಳಿಂದಾಗಿ ಬಹಳ ಜನಪ್ರಿಯವಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಅತ್ಯಂತ ಜನಪ್ರಿಯ ಕೆಲ ದೇವಾಲಯಗಳೆಂದರೆ ವಿಶ್ವನಾಥ ದೇಗುಲ, ಪೊಂಕು ದೇವತಾ ಟೆಂಪಲ್, ಭೈರವ ದೇವಾಲಯ, ಕುತೇತಿ ದೇವಿ ವೇವಾಲಯ, ಕರುಣ ದೇವ್ತಾ ಟೆಂಪಲ್, ಗಂಗೋತ್ರಿ ದೇಗುಲ, ಯಮುನೋತ್ರಿ ಮಂದಿರ ಹಾಗೂ ಸಹಾನಿ ದೇವಾಲಯಗಳಾಗಿವೆ.
ವಿಶ್ವನಾಥ ಮಂದಿರದಲ್ಲಿ ಹಿಂದು ದೇವರಾದ ಶಿವನ ಆರಾಧನೆ ಆಗುತ್ತದೆ. ಇದು ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಲ್ಲಿ ಅತ್ಯಂತ ಪ್ರಮುಖ ದೇಗುಲವಾಗಿದೆ. ಉತ್ತರ ಕಾಶಿಯ ಸ್ಥಳೀಯ ಬಸ್ ನಿಲ್ದಾಣದಿಂದ ಕೇವಲ 300 ಮೀಟರ್ ದೂರದಲ್ಲಿದೆ. ಮಣಿಕರ್ಣಿಕಾ ಘಟ್ಟ ಈ ಪ್ರದೇಶದ ಇನ್ನೊಂದು ಪ್ರಮುಖ ಧಾರ್ಮಿಕ ತಾಣ. ಪುರಾಣದ ಪ್ರಕಾರ, ಉತ್ತರಕಾಶಿಯಲ್ಲೆ ಪ್ರಸಿದ್ಧ ಮುನಿ ಜಡ ಭರತ ಎಂಬುವರು ಪಾಶ್ಚಾತ್ತಾಪ ಪಟ್ಟಿದ್ದರು. ಅಲ್ಲದೇ ಈ ತಾಣವು ಕೇದಾರ ಖಂಡ ಎಂದು ಕೂಡ ಜನಪ್ರಿಯವಾಗಿದ್ದು, ಈ ಹೆಸರು ಪ್ರಸಿದ್ಧ ಹಿಂದೂ ಧರ್ಮಗ್ರಂಥ ಸ್ಕಂದ ಪುರಾಣದಲ್ಲಿ ಪ್ರಸ್ತಾಪವಾಗಿದೆ.
ನಂದನವನ ತಪೋವನವು ಗಂಗೋತ್ರಿಯಿಂದ ಆರು ಕಿ.ಮೀ. ದೂರದಲ್ಲಿದೆ. ಸಾಕಷ್ಟು ಅತ್ಯಾಕರ್ಷಕ ಬೆಟ್ಟಗಳ ಸುಂದರ ಶೃಂಗಗಳನ್ನು ಇಲ್ಲಿ ನಿಂತು ನೋಡಬಹುದಾಗಿದೆ. ಇವುಗಳಲ್ಲಿ ಶಿವಲಿಂಗ, ಥಾಲೈ ಸಾಗರ್, ಭಾಗೀರಥಿ, ಕೇದಾರ್ ಡೂಮ್, ಸುದರ್ಶನ ಪ್ರಮುಖವಾದವುಗಳು. ಉತ್ತರಕಾಶಿ- ಗಂಗೋತ್ರಿ ಮಾರ್ಗದಲ್ಲಿರುವ ದಯಾರ ಬುಗ್ಯಾಲ ತಾಣಕ್ಕೆ ಭೇಟಿ ನೀಡಲು ಈ ಮಾರ್ಗವಾಗಿ ಸಾಕಷ್ಟು ಪ್ರವಾಸಿಗರು ಹೋಗುತ್ತಾರೆ. ಸ್ಥಳ ವೀಕ್ಷಣೆಗೆ ಅತ್ಯಂತ ಜನಪ್ರಿಯವಾಗಿರುವ ಈ ತಾಣ ಸಮುದ್ರ ಮಟ್ಟದಿಂದ 3048 ಮೀಟರ್ ಎತ್ತರದಲ್ಲಿದೆ.
ಹರ್ ಕಿ ದುನ್ ಇಲ್ಲಿನ ಒಂದು ಶಾಶ್ವತ ಟ್ರೆಕ್ಕಿಂಗ್ ತಾಣವಾಗಿದೆ. ಇದು ಕೂಡ ಸಮುದ್ರ ಮಟ್ಟದಿಂದ 3506 ಮೀಟರ್ ಎತ್ತರದಲ್ಲಿದೆ. ಇದರ ಮೇಲೆ ಸಾಕಷ್ಟು ಪ್ರವಾಸಿ ಮಂದಿರ, ಬಂಗ್ಲೆಗಳು ಇವೆ. ಹೀಗಾಗಿ ಪ್ರವಾಸಿಗರು ಇಲ್ಲಿ ತಂಗಿ ತಾಣದ ಸೌಂದರ್ಯ ಸವಿಯಬಹುದು. ಶಕ್ತಿ ದೇವಾಲಯವು ಇಲ್ಲಿನ ವಿಶ್ವನಾಥ ದೇವಾಲಯದ ಎದುರು ಸ್ಥಾಪಿತವಾಗಿರುವ ಅತ್ಯಂತ ಪ್ರಮುಖ ಮಂದಿರ. ಇದು ಕೂಡ ಅತ್ಯಂತ ಜನಪ್ರಿಯ ಧಾರ್ಮಿಕ ತಾಣ. ಇಲ್ಲಿನ ದೇವಾಲಯದ ಒಂದು ಪ್ರಮುಖ ಆಕರ್ಷಣೆ ಎಂದರೆ 26 ಅಡಿ ಎತ್ತರದ ಗಮನ ಸೆಳೆಯುವ ತ್ರಿಶೂಲ.
ಉತ್ತರ ಕಾಶಿಯ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ತಾಣಗಳಲ್ಲಿ ದೋದಿತಾಲ್ ಹೆಸರಿನ ಕೆರೆಯೂ ಒಂದು. ಇದು ಸಮುದ್ರ ಮಟ್ಟದಿಂದ 3307 ಮೀಟರ್ ಎತ್ತರದಲ್ಲಿದೆ. ಈ ತಾಣವನ್ನು ತಲುಪ ಬಯಸುವ ಪ್ರವಾಸಿಗರಿಗೆ ರಸ್ತೆ ಮಾರ್ಗ ಹಾಗೂ ಟ್ರೆಕ್ಕಿಂಗ್ ಮಾರ್ಗ ಹೀಗೆ ಎರಡೂ ಮಾರ್ಗಗಳು ಮುಕ್ತವಾಗಿವೆ. ಹನುಮಾನ್ ಛೋಟಿ ಹಾಗೂ ಯಮುನೋತ್ರಿಗೆ ತೆರಳುವ ಟ್ರೆಕ್ಕಿಂಗ್ ಮಾರ್ಗಕ್ಕೆ ಮೂಲ ಸ್ಥಳ ಇದಾಗಿದೆ.
ಇವೆಲ್ಲವನ್ನು ಹೊರತುಪಡಿಸಿ ಇತ್ತೀಚೆಗೆ ಅಭಿವೃದ್ಧಿ ಹೊಂದಿರುವ ಪ್ರವಾಸಿ ತಾಣ ಮನೇರಿ. ಉತ್ತರಕಾಶಿಯಿಂದ ಇದು 13 ಕಿ.ಮೀ ದೂರದಲ್ಲಿದೆ. ಸೂಕ್ತ ಕಾಲದಲ್ಲಿ ಆಗಮಿಸುವ ಪ್ರವಾಸಿಗರಿಗೆ ಇಲ್ಲಿನ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ವೀಕ್ಷಿಸುವ ಅವಕಾಶ ಇದೆ. ಇದನ್ನು 1965 ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಈ ಹೆಸರು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರಿಂದ ಬಂದಿದೆ. ಇದು ದೊಡ್ಡ ಗುಡ್ಡಗಳಿಂದ ಕೂಡಿದ ತಾಣ. ಗಂಗನಿ, ಸತ್ತಲ್, ದಿವ್ಯಶಿಲಾ ಹಾಗೂ ಸೂರ್ಯ ಕುಂಡ ಇಲ್ಲಿನ ಇತರೆ ಜನಪ್ರಿಯ ತಾಣಗಳು.
ಉತ್ತರಕಾಶಿಗೆ ಸಮೀಪದ ವಿಮಾನ ನಿಲ್ದಾಣ ಡೆಹ್ರಾಡೂನ್ನ ಜಾಲಿ ಗ್ರಾಂಟ್. ಇದು ಇಲ್ಲಿಂದ 162 ಕಿ.ಮೀ. ದೂರದಲ್ಲಿದೆ. ರೈಲು ಸಂಪರ್ಕಕ್ಕೆ ಹೃಷಿಕೇಶ ಸಮೀಪದ ನಿಲ್ದಾಣ. ಸಮೀಪದ ಪಟ್ಟಣ, ನಗರಗಳಿಂದ ಪ್ರವಾಸಿಗರು ಬಸ್ ಮೂಲಕ ಕೂಡ ಆಗಮಿಸಬಹುದು. ಡೆಹ್ರಾಡೂನ್, ಹರಿದ್ವಾರ, ಹೃಷಿಕೇಶ, ಮಸ್ಸೂರಿ ಮುಂತಾದ ಕಡೆಗಳಿಂದ ಸರ್ಕಾರಿ ಬಸ್ ಸೇವೆಯೂ ಇದೆ.
ಉತ್ತರಕಾಶಿ ವರ್ಷದ ಬಹುತೇಕ ಸಮಯ ಉತ್ತಮ ಹಾಗೂ ಸಹನೀಯ ವಾತಾವರಣ ಹೊಂದಿರುತ್ತದೆ. ಆದಾಗ್ಯೂ ಬೇಸಿಗೆ ಹಾಗೂ ಮಳೆಗಾದಲ್ಲಿ ಈ ಪ್ರಮುಖ ತಾಣವನ್ನು ಭೇಟಿ ಮಾಡಲು ಸೂಚಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಸಾಕಷ್ಟು ಉತ್ಸವಗಳು, ಹಬ್ಬಗಳು ನಡೆಯುತ್ತವೆ.