ಉದಯಪುರವನ್ನು ಕೆರೆಗಳ ನಗರ ಎಂದೂ ಕರೆಯಲಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಮ್ಗಳು ಮತ್ತು ವನ್ಯಧಾಮಗಳನ್ನು ಹೊಂದಿದೆ. ಎರಡನೇ ಮಹಾರಾಣ ಉದಯ್ ಸಿಂಗ್ll ಈ ನಗರವನ್ನು 1559ರಲ್ಲಿ ಸಂಸ್ಥಾಪಿಸಿದ. ಈ ಅರಮನೆಯು ಭಾರತದ ಪ್ರಮುಖ ಪ್ರವಾಸಿ ತಾಣ ಮತ್ತು ಶ್ರೀಮಂತ ಸಂಪ್ರದಾಯ ಹಾಗೂ ಸಂಸ್ಕೃತಿಗೆ ಹೆಸರಾದದ್ದು.
ಪಿಚೋಲಾ ಕೆರೆಯನ್ನು ಸುಮಾರು 1362ರಲ್ಲಿ ಕೃತಕವಾಗಿ ನಿರ್ಮಿಸಲಾಯಿತು. ಆಣೆಕಟ್ಟಿನ ಪರಿಣಾಮವಾಗಿ ನೀರು ಇಲ್ಲಿ ಸಂಗ್ರಹವಾಗಿ ಸುತ್ತಲಿನ ಪ್ರದೇಶದ ನೀರಿನ ಕೊರತೆಯನ್ನು ನೀಗಿಸಲು ಈ ಕೆರೆ ಸಹಾಯ ಮಾಡಿದೆ. ಈ ಸುತ್ತಲಿನ ಸೌಂದರ್ಯವನ್ನು ಗಮನಿಸಿದ ಮಹಾರಾಣ ಉದಯ್ ಸಿಂಗ್, ಈ ಕೆರೆಯ ದಡದಲ್ಲಿ ನಗರವೊಂದನ್ನ ನಿರ್ಮಿಸಲು ಯೋಜಿಸಿದ. ಫತೇಹ್ ಸಾಗರವು ಇನ್ನೊಂದು ಪ್ರಮುಖ ಕೃತಕ ಕೆರೆ. ಇದನ್ನು 1678ರಲ್ಲಿ ಮಹಾರಾಣ ಫತೇಹ್ ಸಿಂಗ್ ನಿರ್ಮಿಸಿದರು. ಇತರ ಪ್ರಮುಖ ಕೆರೆಗಳೆಂದರೆ ರಾಜಸಮಾನಂದ್ ಕೆರೆ, ಉದಯಸಾಗರ ಕೆರೆ ಮತ್ತು ಜೈಸಮಂದ್ ಕೆರೆ.
ಇತರೆ ಆಕರ್ಷಣೆಗಳು
ಇಲ್ಲಿ ಹಲವು ಅರಮನೆಗಳು ಮತ್ತು ಕೋಟೆಗಳಿವೆ. ಇದು ರಜಪೂತರ ಆಡಳಿತದ ಪ್ರಮುಖ ಸಾಕ್ಷಿಯಾಗಿ ಇಂದಿಗೂ ನಿಂತಿದೆ. ನಗರ ಅರಮನೆಯನ್ನು ಮಹಾರಾಜ ಉದಯ್ ಮಿರ್ಜಾ ಸಿಂಗ್ 1559ರಲ್ಲಿ ನಿರ್ಮಿಸಿದ್ದರು. ಈ ಅರಮನೆ ಇಂದಿಗೂ ಪ್ರಮುಖ ಆಕರ್ಷಕ ತಾಣ. ಎಲ್ಲವನ್ನೂ ಸೇರಿಸಿದರೆ ಒಟ್ಟು 11 ಅರಮನೆಗಳು ಈ ಮುಖ್ಯ ಅರಮನೆಯ ಕಾಂಪೌಂಡಿನ ಒಳಗೆ ಇದೆ. ಇದರ ಜೊತೆಗೆ ಕೆರೆ ಅರಮನೆಯು ಇಲ್ಲಿನ ಪ್ರಮುಖ ಪ್ರವಾಸಿ ತಾಣ. ಇದರ ಕಲಾತ್ಮಕತೆ ಎಂಥವರನ್ನೂ ಮುದಗೊಳಿಸುತ್ತದೆ. ಈ ಅರಮನೆಯು ಸದ್ಯ 5-ಸ್ಟಾರ್ ಹೋಟೆಲ್ ಆಗಿದೆ. ಗುಲಾಬಿ ಬಣ್ಣದ ಕಲ್ಲುಗಳು, ಕಮಲದ ಎಲೆಗಳು ಮತ್ತು ಪೇಂಟ್ ಮಾಡಿದ ಗಾಜಿನ ಕಲಾಕೃತಿಗಳಿಂದ ಇಲ್ಲಿನ ಕೋಣೆಗಳನ್ನು ಅಲಂಕರಿಸಲಾಗಿದೆ.
ಸಮುದ್ರ ಮಟ್ಟದಿಂದ ಸುಮಾರು 944 ಮೀಟರು ಎತ್ತರದಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಕ ತಾಣವೆಂದರೆ ಸಜ್ಜನಗಢ ಅರಮನೆ. ಇದನ್ನು ಮಳೆಗಾಲದ ಅರಮನೆ ಎಂದೂ ಕರೆಯಲಾಗುತ್ತದೆ. ಮಹಾರಾಣ ಸಜ್ಜನ್ ಸಿಂಗ್ ಈ ಅರಮನೆಯನ್ನು 1884ರಲ್ಲಿ ನಿರ್ಮಿಸಿದ. ಈ ಅರಮನೆಯಿಂದ ಸುಂದರವಾದ ಮೋಡಗಳನ್ನು ಹತ್ತಿರವಾಗಿರುವಂತೆ ನೋಡಬಹುದಾಗಿದೆ. ಇದರ ಜೊತೆಗೆ ಬಗೋರೆ ಕಿ ಹವೇಲಿ ಮತ್ತು ಫತೇಹ್ ಪ್ರಕಾಶ್ ಅರಮನೆಯೂ ಕೂಡಾ ಇಲ್ಲಿನ ಪ್ರಮುಖ ಆಕರ್ಷಕ ತಾಣಗಳು.
ಸಮಯ ಸಿಕ್ಕರೆ ಪ್ರವಾಸಿಗರು ಇಲ್ಲಿರುವ ವಿವಿಧ ಮ್ಯೂಸಿಯಂ ಮತ್ತು ಗ್ಯಾಲರಿಗಳನ್ನು ಭೇಟಿ ಮಾಡಬಹುದು. ನಗರ ಅರಮನೆ ಮ್ಯೂಸಿಯಂನಲ್ಲಿ ರಾಜ ಮನೆತನದ ಹಲವು ಆಕರ್ಷಕ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇದರ ಹೊರತಾಗಿ, ಕ್ರಿಸ್ಟಲ್ ಗ್ಯಾಲರಿಯಲ್ಲಿ ಒಂದಷ್ಟು ಸಮಯವನ್ನು ಕಳೆಯಬಹುದು. ಇದು ಫತೇಹ್ ಪ್ರಕಾಶ್ ಅರಮನೆಯಲ್ಲಿದೆ. ಈ ಗ್ಯಾಲರಿಯು ಓಸ್ಲರ್ಸ್ ಕ್ರಿಸ್ಟಲ್ಗಳ ಸಂಗ್ರಹವನ್ನು ಹೊಂದಿದೆ. ಸುಂದರವಾದ ಸೋಫಾ ಸೆಟ್ಗಳು, ಅಲಂಕೃತ ಕಾರ್ಪೆಟ್ಗಳು, ಕ್ರಿಸ್ಟಲ್ ಡ್ರೆಸ್ಗಳು, ಕಾರಂಜಿಗಳು ಮತ್ತು ಇತರ ಸಾಮಗ್ರಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇನ್ನೊಂದು ಪ್ರಮುಖ ಮ್ಯೂಸಿಯಂ ಎಂದರೆ, ಆಹಾರ್ ಆರ್ಕಿಯಲಾಜಿಕಲ್ ಮ್ಯೂಸಿಯಂ. ಇಲ್ಲಿ ಪುರಾತನ ಕಾಲದ ಜನ ಜೀವನದ ಸಂಗತಿಗಳನ್ನು ನೋಡಬಹುದು.
ಇಲ್ಲಿ ಹಲವು ಉದ್ಯಾನಗಳಿವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸಹೇಲಿಯೋಂಕಿ ಬಾರಿ, ಬಡಾ ಮಹಲ್, ಗುಲಾಬ್ ಬಾಘ್, ಮಹಾರಾಣ ಪ್ರತಾಪ್ ಮೆಮೋರಿಯಲ್, ಲಕ್ಷ್ಮಿ ಚೌಕ್ ಮತ್ತು ದಿಲ್ ಕುಶಾಲ್. ರಾಜ್ ಆಂಗನ್ ಅನ್ನು ಗೋಲ್ ಮಹಲ್ ಎಂದೂ ಕರೆಯಲಾಗುತ್ತದೆ. ಉದಯಪುರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದೂ ಒಂದು. ಇಲ್ಲಿನ ಕರಕುಶಲ ಕಲೆ ಜನಪ್ರಿಯವಾದದ್ದು. ಜಾಗ್ ಮಂದಿರ, ಸುಖಾದಿಯಾ ಸರ್ಕಲ್, ನೆಹ್ರು ಗಾರ್ಡನ್, ಎಕ್ಲಿಗಂಜಿ ದೇವಸ್ಥಾನ, ರಾಜೀವ ಗಾಂಧಿ ಪಾರ್ಕ್, ಸಾಸ್ ಬಹು ದೇವಸ್ಥಾನ ಮತ್ತು ಶ್ರೀನಾಥ್ಜಿ ದೇವಸ್ಥಾನಗಳೂ ಕೂಡಾ ಇಲ್ಲಿ ಜನಪ್ರಿಯವಾದದ್ದು.
ಡಬೋಕ್ ವಿಮಾನ ನಿಲ್ದಾಣ, ಇದನ್ನು ಮಹಾರಾಣ ಪ್ರತಾಪ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತಿದ್ದು, ಉದಯಪುರದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ. ನಿರಂತರ ವಿಮಾನ ಸೇವೆಯಿಂದ ಬಹುತೇಕ ಭಾರತದ ಎಲ್ಲಾ ನಗರಗಳಿಗೂ ಸಂಪರ್ಕವನ್ನು ಹೊಂದಿದೆ. ನಗರಕ್ಕೆ ಬ್ರಾಡ್ಗೇಜ್ ರೈಲ್ವೆ ಸ್ಟೇಷನ್ ಇದೆ. ಭಾರತದ ಹಲವು ನಗರಗಳಿಂದ ರೈಲುಗಳು ಇಲ್ಲಿಗೆ ಬರುತ್ತವೆ. ಪ್ರವಾಸಿಗರು ಉದಯಪುರಕ್ಕೆ ರಾಜಸ್ತಾನದ ಪ್ರಮುಖ ನಗರಗಳಿಂದ ಬಸ್ ಸೇವೆಗಳ ಮೂಲಕವೂ ಬರಬಹುದು.
ಉದಯಪುರವು ವರ್ಷದ ಬಹುತೇಕ ಎಲ್ಲಾ ಸಮಯದಲ್ಲೂ ಒಣ ಹವೆಯನ್ನು ಹೊಂದಿರುತ್ತದೆ. ಸಪ್ಟೆಂಬರಿನಿಂದ ಮಾರ್ಚಿನ ಅವಧಿಯಲ್ಲಿ ಉದಯಪುರಕ್ಕೆ ಪ್ರವಾಸ ಹೋಗುವುದು ಸೂಕ್ತ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿಗೆ ಹೋಗುವುದನ್ನು ಇಷ್ಟಪಡುವುದಿಲ್ಲ. ಯಾಕೆಂದರೆ ಗರಿಷ್ಟ ತಾಪಮಾನ ಈ ಅವಧಿಯಲ್ಲಿ ಸುಮಾರು 45 ಡಿಗ್ರಿ ಇರುತ್ತದೆ. ಮಳೆಗಾಲದಲ್ಲಿ ಸಾಕಷ್ಟು ಮಳೆ ಬೀಳುತ್ತದೆ. ಇದರಿಂದಾಗಿ ಬೇಸಿಗೆಯ ಬಿಸಿಯು ಕಡಿಮೆಯಾಗುತ್ತದೆ. ಚಳಿಗಾಲದ ವಾತಾವರಣ ತುಂಬಾ ಪ್ರಶಾಂತವಾದದ್ದು. ನಗರವನ್ನು ಸುತ್ತಾಡಲು ಈ ಅವಧಿ ಸೂಕ್ತ.