ಗುಹೆ ಎಂದರೆ ಅದೇನೋ ಒಂದು ಬಗೆಯ ಭಯ ಉಂಟಾಗುವುದು ಸಹಜ. ಆದರೆ ಇಂತಹ ಗುಹೆಗಳಲ್ಲೇ ಅನೇಕ ಋಷಿಮುನಿಗಳು ತಪಸ್ಸನ್ನು ಗೈದು ಸಾಧನೆ ಮಾಡಿದ್ದಾರೆ ಎನ್ನುವುದನ್ನು ನಾವು ಮೆಚ್ಚಲೇ ಬೇಕು. ನೈಸರ್ಗಿಕವಾಗಿಯೇ ನಿರ್ಮಾಣ ಗೊಂಡ ಅನೇಕ ಗುಹೆಗಳು ನಮ್ಮ ನಾಡಲ್ಲಿವೆ. ಕೆಲವು ಗುಹೆಗಳಲ್ಲಿ ದೇವರನ್ನು ಆರಾಧಿಸುವುದರಿಂದ ಪವಿತ್ರ ಕ್ಷೇತ್ರವಾಗಿ ಹೊರ ಹೊಮ್ಮಿವೆ. ಅದ್ಭುತ ಧಾರ್ಮಿಕ ಶಕ್ತಿಯಿಂದ ಆಕರ್ಷಿಸಲ್ಪಡುವ ಗುಹಾಲಯಗಳ ಕಿರು ಪರಿಚಯ ಮಾಡಿಕೊಳ್ಳೋಣ ಬನ್ನಿ.
ಬಾದಾಮಿ ಗುಹಾಲಯ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಬರುವ ಈ ಗುಹಾಲಯ ಚಾಲುಕ್ಯರ ಕಾಲದ್ದು. ಇದಕ್ಕೆ 6 ಮತ್ತು 8ನೇ ಶತಮಾನದ ಇತಿಹಾಸವಿದೆ. ಶಿವ ಗುಹಾಲಯ, ಜೈನ ಗುಹಾಲಯ ಹಾಗೂ ಎರಡು ವಿಷ್ಣು ಗುಹಾಲಯಗಳು ಇಲ್ಲಿವೆ. ಪ್ರವಾಸಿಗರ ಆಕರ್ಷಕ ಕ್ಷೇತ್ರವಾದ ಇದು ಬೆಂಗಳೂರಿನಿಂದ 448 ಕಿ.ಮೀ. ವ್ಯಾಪ್ತಿಯಲ್ಲಿದೆ.
PC: flickr.com
ನರಸಿಂಹ ಝರನಿ ಗುಹಾಲಯ
ಬೀದರ್ನಲ್ಲಿರುವ ನರಸಿಂಹ ಝರನಿ ಗುಹಾಲಯ ಒಂದು ಪವಿತ್ರ ಕ್ಷೇತ್ರ. ಇಲ್ಲಿ ನರಸಿಂಹ ದೇವರನ್ನು ಆರಾಧಿಸಲಾಗುತ್ತದೆ. 300 ಮೀ. ಸುರಂಗವನ್ನು ಹೊಂದಿರುವ ಈ ಗುಹಾಲಯಕ್ಕೆ ಭಕ್ತರ ಹರಿವು ಅಪಾರ. ಇಲ್ಲಿಯ ಆರಾಧನೆಯಿಂದ ಕಷ್ಟಗಳು ಪರಿಹಾರವಾಗುವುದು ಎನ್ನುವ ನಂಬಿಕೆಯಿಂದೆ. ಬೆಂಗಳೂರಿನಿಂದ ಸುಮಾರು 689 ಕಿ.ಮೀ. ವ್ಯಾಪ್ತಿಯಲ್ಲಿದೆ.
PC: wikimapia.org
ಅಂತರ ಗಂಗೆ ಗುಹಾಲಯ
ಕೋಲರದಲ್ಲಿರುವ ಅಂತರಗಂಗೆ ಶತಸೃಂಗ ಬೆಟ್ಟದ ಮೇಲಿದೆ. ಬಹಳ ಆಳದಲ್ಲಿ ಗಂಗೆಯ ಹುಟ್ಟು ಕಾಣುತ್ತದೆ. ಇಲ್ಲಿ ರಾತ್ರಿ ಹಾಗೂ ಹಗಲು ಎರಡು ಸಮಯದಲ್ಲೂ ಚಾರಣ ಮಾಡಬಹುದು. ಇಲ್ಲಿರುವ ಗುಹೆಯ ಮಾರ್ಗ ಬಹಳ ಕಿರಿದಾದ ದಾರಿಯನ್ನು ಹೊಂದಿದೆ. ಗುಹೆಯ ಒಳಗೆ ಏನಿದೆ ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ನೋಡಬೇಕು. ಬೆಂಗಳೂರಿನಿಂದ 67.5 ಕಿ.ಮೀ. ದೂರದಲ್ಲಿದೆ.
PC: flickr.com
ಕವಲ ಗುಹಾಲಯ
ದಾಂಡೇಲಿಯಲ್ಲಿರುವ ಈ ಗುಹಾಲಯಕ್ಕೆ ಮೊದಲು 375 ಮೆಟ್ಟಿಲನ್ನು ಹತ್ತಿ ಸಾಗಬೇಕು. ನಂತರ ಗುಹೆಯಲ್ಲಿ ಇಳಿಯಬೇಕು. ನೈಸರ್ಗಿಕವಾಗಿಯೇ ಸೃಷ್ಟಿಯಾದ ಈ ಗುಹೆಯಲ್ಲಿ ಶಿವಲಿಂಗವನ್ನು ಆರಾಧಿಸಲಾಗುತ್ತದೆ. ಗುಹೆಯ ಹತ್ತಿರವೇ ಕಾಳಿ ನದಿಯ ಹರಿವು ಇರುವುದನ್ನು ನೋಡಬಹುದು. ಸುಂದರ ವಾತಾವರಣ ಹಾಗೂ ಪ್ರಕೃತಿ ಸಂಪತ್ತಿನಿಂದ ಆವರಿಸಿದೆ. ದಾಂಡೇಲಿಯಿಂದ 25 ಕಿ.ಮೀ. ಹಾಗೂ ಬೆಂಗಳೂರಿನಿಂದ 455.3 ಕಿ.ಮೀ. ವ್ಯಾಪ್ತಿಯಲ್ಲಿದೆ.
PC: flickr.com
ಶಿವ ಗುಹಾಲಯ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಶಿವ ಗುಹಾಲಯವಿದೆ. ಕುಡ್ಲ ಕಡಲ ತೀರದದ ಹತ್ತಿರ ಇರುವ ಈ ಗುಹೆ ಬಹಳ ಕಿರಿದಾಗಿದೆ. ಬಹಳ ಕತ್ತಲಾಗಿರುವುದರಿಂದ ಟಾರ್ಚ್ ಬೆಳಕನ್ನು ಬಳಸ ಬೇಕಾಗುತ್ತದೆ. ಇಲ್ಲಿ ಬಾವಲಿಗಳ ವಾಸ ಹೆಚ್ಚಾಗಿದೆ. ಇದರೊಳಗೆ ಒಂದು ಚಿಕ್ಕ ಗುಡಿಯಂತಿದೆ. ಅದರೊಳಗೆ ಪ್ರವೇಶವಿಲ್ಲ. ಗೋವಿನ ಕಿವಿಯ ಆಕಾರದಲ್ಲಿರುವ ಈ ಗುಹೆಯಲ್ಲಿ ಒಮ್ಮೆ ಹೋಗಿ ಬಂದರೆ ನಮ್ಮ ಪಾಪಗಳೆಲ್ಲಾ ಶಮನವಾಗುತ್ತದೆ ಎನ್ನುವ ನಂಬಿಕೆಯಿದೆ. ಬೆಂಗಳೂರಿನಿಂದ 485 ಕಿ. ಮೀ. ದೂರದಲ್ಲಿದೆ.
PC: flickr.com
ನೆಲ್ಲಿ ತೀರ್ಥ ಗುಹಾಲಯ
ಕಟೀಲಿನಿಂದ ಸುಮಾರು 10.ಕಿ.ಮೀ ದೂರದಲ್ಲಿ ಈ ಗುಹಾಲಯವಿದೆ. ಇದು ಕ್ರಿ.ಶ. 1487ರ ಕಾಲಕ್ಕೆ ಸೇರಿದ್ದು ಎನ್ನಲಾಗುತ್ತದೆ. ಈ ಗುಹೆಯಲ್ಲಿ ಜಾಬಾಲಿ ಮುನಿಗಳು ತಪಸ್ಸು ಮಾಡಿ ದೇವಿಯ ದರ್ಶನ ಮಾಡಿದರು ಎನ್ನುವ ಇತಿಹಾಸವಿದೆ. ಈ ಗುಹೆ ಪಕ್ಕದಲ್ಲೇ ಸೋಮನಾಥ ದೇವಸ್ಥಾನವಿದೆ. ಬೆಂಗಳೂರಿನಿಂದ 357 ಕಿ.ಮೀ. ದೂರದಲ್ಲಿದೆ.
PC: wikipedia.org
ರೇವಲ್ಪಾಡಿ ಗುಹಾಲಯ
ಐಹೊಳೆಯಲ್ಲಿರುವ ಈ ಗುಹೆ ವಿಶೇಷ ಆಕೃತಿಯಿಂದ ಕೂಡಿದೆ. ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಪ್ರವಾಸ ತಾಣವಾಗಿರುವ ಈ ಗುಹಾಲಯಕ್ಕೆ ಭಕ್ತರ ಹರಿವು ಹೆಚ್ಚೆಂದು ಹೇಳಬಹುದು. ಇದು ಬೆಂಗಳೂರಿನಿಂದ 446.4 ಕಿ.ಮೀ. ವ್ಯಾಪ್ತಿಯಲ್ಲಿದೆ.
PC: wikipedia.org