ಮಕರ ಸಂಕ್ರಾತಿ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುವುದೇ ಈ ಹಬ್ಬದ ಮುಖ್ಯವಾದ ವಿಶೇಷತೆ. ಸಾಮಾನ್ಯವಾಗಿ "ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡು" ಎಂದು ಎಲ್ಲೆಡೆ ಕೇಳಿ ಬರುವ ಘೋಷ ವಾಕ್ಯವಾಗಿದೆ. ಇದು ಮುಖ್ಯವಾಗಿ ರೈತರಿರುವ ಹಳ್ಳಿಗಳಲ್ಲಿ ಸುಗ್ಗಿ ಕಾಲವಾದ ಜನವರಿ ತಿಂಗಳಿನಲ್ಲಿ ವಿಜೃಂಬಣೆಯಿಂದ ಆಚರಿಸಲಾಗುತ್ತದೆ.
ಸಂಕ್ರಾತಿಯನ್ನು ಮುಖ್ಯವಾಗಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಈ ಹಬ್ಬವನ್ನು ಕರೆಯುತ್ತಾರೆ. ಹಾಗೆಯೇ ವಿವಿಧ ಬಗೆಯಲ್ಲಿ ಆಚರಿಸುತ್ತಾರೆ. ಹಾಗಾದರೆ ಲೇಖನದ ಮೂಲಕ ಎಲ್ಲೆಲ್ಲಿ ಯಾವ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ ಎಂಬುದನ್ನು ತಿಳಿಯೋಣ.
ಮಕರ ಸಂಕ್ರಾತಿ ಹಬ್ಬದಂದು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?
ಕರ್ನಾಟಕ
ಕರ್ನಾಟಕದಲ್ಲಿ ಸಂಕ್ರಾತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು,ಬೆಲ್ಲ. ಈ ಹಬ್ಬದಲ್ಲಿ ಎಳ್ಳು-ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ ಹಂಚುವುದು ಸಂಪ್ರದಾಯ. ಇದೊಂದು ಮಂಗಳಕರವಾದ ದಿನವಾಗಿದ್ದು, ರೈತರಿಗೆ ಸುಗ್ಗಿಯ ಹಬ್ಬವಾಗಿದೆ. ನಮ್ಮ ಕರ್ನಾಟಕದಲ್ಲಿ ಈ ಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಗಾಳಿಪಟ ಹಾರಿಸುವುದು, ರಂಗೋಲಿ ಸ್ಪರ್ಧೆ ಇಲ್ಲಿ ಮುಖ್ಯವಾಗಿ ಆಚರಿಸಲಾಗುತ್ತದೆ ಎಂದೇ ಹೇಳಬಹುದು. ರಂಗೋಲಿ ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆಯೇ ಆಗಿದೆ. ಈ ಸಮಯದಲ್ಲಿಯೇ ಧನ-ಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡಿಸುವುದು ಇನ್ನೊಂದು ಧಾರ್ಮಿಕ ಪದ್ಧತಿ ಎಂದೇ ಹೇಳಬಹುದು.
ಮಕರ ಸಂಕ್ರಾತಿ ಹಬ್ಬದಂದು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?
ತಮಿಳುನಾಡು
ತಮಿಳುನಾಡಿನಲ್ಲಿಯೂ ಕೂಡ ಈ ಹಬ್ಬವನ್ನು ಅತ್ಯಂಯ ವಿಜೃಂಬಣೆಯಿಂದ ಆಚರಿಸುತ್ತಾರೆ. ಇಲ್ಲಿ ಮಕರ ಸಂಕ್ರಾತಿಯನ್ನು "ಪೊಂಗಲ್" ಎಂದು ಕರೆಯುತ್ತಾರೆ. ಇಲ್ಲಿ ಸತತ 4 ದಿನಗಳ ಕಾಲ ಹಬ್ಬವನ್ನು ಆಚರಿಸುತ್ತಾರೆ. ಆ ನಾಲ್ಕು ದಿನಗಳು ಕೂಡ ವಿಶೇಷವಾದುದು. ಮೊದಲ ದಿನವಾದ ಭೋಗಿಯಂದು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮರುದಿನದಂದು ಪೊಂಗಲ್, ಈ ಸಮಯದಲ್ಲಿ ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಸಿಹಿ ಅಡುಗೆಯನ್ನು ತಯಾರಿಸಲಾಗುತ್ತದೆ. ಕೊನೆಯ ದಿನ ಮಾಟ್ಟು ಪೊಂಗಲ್, ಆಗ ಗೋಪೂಜೆಯನ್ನು ಮಾಡುತ್ತಾರೆ. ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ "ಜಲ್ಲಿ ಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ಕೂಡ ನಡೆಯುತ್ತದೆ.
ಮಕರ ಸಂಕ್ರಾತಿ ಹಬ್ಬದಂದು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?
ಕೇರಳ
ಮಕರ ಸಂಕ್ರಾತಿ ಎಂದ ತಕ್ಷಣ ನೆನೆಪಿಗೆ ಬರುವುದು ಕೇರಳದ ಮಕರ ಜ್ಯೋತಿ ಅಯ್ಯಪ್ಪ ಸ್ವಾಮಿ ದೇವಾಲಯ. ಈ ದಿನವನ್ನು ಕೇರಳಿಗರು "ಮಕರ ವಿಳಕ್ಕು" ಎಂದೂ ಸಹ ಕರೆಯುತ್ತಾರೆ. ಶಬರಿಮಲೈನಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಕೂಡ ಇದೆ. ಈ ಸಮಯದಲ್ಲಿಯೇ ದೇಶ-ವಿದೇಶದಿಂದ ಭಕ್ತರು ಸ್ವಾಮಿಯ ದರ್ಶನ ಮಾಡಿ ಬರುತ್ತಾರೆ. ಈ ಸಮಯದಲ್ಲಿ ಜ್ಯೋತಿಯು ಶಬರಿಮಲೈ ಬೆಟ್ಟದಿಂದ 3 ಬಾರಿ ಗೋಚರವಾಗುತ್ತದೆ. ಹೀಗೆ ವಿಜೃಂಬಣೆಯಿಂದ ಕೇರಳದ ಜನರು ಮಕರ ವಿಳಕ್ಕುವನ್ನು ಆಚರಿಸುತ್ತಾರೆ.
ಮಕರ ಸಂಕ್ರಾತಿ ಹಬ್ಬದಂದು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?
ಆಂಧ್ರ ಪ್ರದೇಶ
ಆಂಧ್ರ ಪ್ರದೇಶದಲ್ಲಿ ಅತ್ಯಂತ ವಿಶೇಷವಾಗಿಯೇ ಅಲ್ಲದೇ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಭೋಗಿ ಎಂದು ಕರೆಯುವ ಈ ಹಬ್ಬವನ್ನು ಇಲ್ಲಿನ ಜನರು ಅನೇಕ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಗಾಳಿಪಟವನ್ನು ಹಾರಿಸುವುದು, ರಂಗೋಲಿಯನ್ನು ಬಿಡುವುದು, ಧನಕರುಗಳನ್ನು ಅಲಂಕರಿಸುವುದು, ಗ್ರಾಮದ ದೇವರುಗಳನ್ನು ಉತ್ಸವಕ್ಕೆ ಕರೆದುಕೊಂಡು ಹೋಗುವುದು, ಸಿಹಿ ತಿಂಡಿಗಳನ್ನು ತಯಾರಿಸಿ ಮನೆ ಮನೆಗೆ ನೀಡುವುದು ಇತ್ಯಾದಿ.