ಇಂದು ಈ ಕೋಟೆ ತಾಣವು ಅಳಿದುಳಿದ ರಚನೆಗಳಿಂದ ತನ್ನದೆ ಆದ ವಿಶಿಷ್ಟ ಇತಿಹಾಸವನ್ನು ಪ್ರವಾಸಿಗರಿಗೆ ಹೇಳುತ್ತದೆ. ಹಾನಿಗೊಳಗಾದ ಮಂಟಪಗಳು, ಖಂಬಗಳು ಹಾಗೂ ಇತರೆ ಕೋಟೆಯ ರಚನೆಗಳು ಭಯಮಿಶ್ರಿತವಾದಂತಹ ವಾತಾವರಣದಲ್ಲಿವೆಯೆನೊ ಅನಿಸುವಂತಿದೆ. ಭೇಟಿ ನೀಡಿದಾಗ ವಿಚಿತ್ರ ಭಾವನೆಯು ಮನದಲ್ಲಿ ಮೂಡುವ ಹಾಗೆ ಮಾಡುತ್ತದೆ ಈ ತಾಣ.
ಪ್ರಸ್ತುತ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವು ತೆಲುಗು ಮಾತನಾಡಲಾಗುತ್ತಿದ್ದ ಪ್ರದೇಶಗಳಲ್ಲಿ ಹಿಂದೆ ಕಾಕತೀಯರು ಶತಮಾನಗಳ ಕಾಲ ರಾಜ್ಯವಾಳಿದ ಕುರುಹುಗಳು ಸಿಗುತ್ತವೆ. ಕರ್ನಾಟಕದ ಮಟ್ಟಿಗೆ ಹೇಗೆ ವಿಜಯನಗರ ಅರಸರು ವೈಭವದ ದಿನಗಳನ್ನು ನೆನಪಿಸುತ್ತಾರೊ ಅದೆ ರೀತಿಯಾಗಿ ತೆಲುಗು ಸಂಸ್ಕೃತಿಯ ಗತ ವೈಭವ ತೋರಿಸುವವರು ಕಾಕತೀಯರು.
ಮೈ ಜುಮ್ ಅನ್ನುವಂತೆ ಮಾಡುವ ರಾಜ್ಗಡ್ ಕೋಟೆ!
ಕಾಕತೀಯರಲ್ಲಿ ಬಹು ಮುಖ್ಯವಾಗಿ ರಾಣಿ ರುದ್ರಮ್ಮ ದೇವಿಯನ್ನು ನೆನೆಯಲಾಗುತ್ತದೆ. ಅಲ್ಲದೆ ಓರುಗಲ್ಲು ಶತಮಾನಗಳ ಕಾಲ ಕಾಕತೀಯರ ರಾಜಧಾನಿ ನಗರವಾಗಿ ಮೆರೆದಿತ್ತು. ಅಂದಿನ ಆ ಓರುಗಲ್ಲು ಪಟ್ಟಣವೆ ಇಂದು ತೆಲಂಗಾಣ ರಾಜ್ಯದಲ್ಲಿರುವ ವಾರಂಗಲ್ ನಗರ.
ಐತಿಹಾಸಿಕ ತಾಣ
ಹಾಗಾಗಿ ಕಾಕತೀಯರ ಇತಿಹಾಸ, ಕಥೆ ಹೇಳುವ ಐತಿಹಾಸಿಕ ತಾಣವಾಗಿ ವಾರಂಗಲ್ ಗಮನಸೆಳೆಯುತ್ತದೆ. ಅಲ್ಲದೆ, ಇಲ್ಲಿರುವ ಕೋಟೆಯು ಕಾಕತೀಯರ ಅದ್ಭುತ ನಿರ್ಮಾಣ ಕೌಶಲ್ಯಗಳನ್ನು ಸೂಚಿಸುವ ಕೋಟೆಯಾಗಿ ಮೆರೆಯುತ್ತದೆ.
ಚಿತ್ರಕೃಪೆ: AnushaEadara
ದಕ್ಷಿಣ ಭಾರತ
ಕಾಕತೀಯರು ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಸುಮಾರು ಕ್ರಿ.ಶ. 1083 ರಿಂದ ಕ್ರಿ.ಶ. 1323 ರವರೆಗೆ ಶತಮಾನಗಳ ಕಾಲ ರಾಜ್ಯಾಭಾರವನ್ನು ಮಾಡಿದ್ದಾರೆ. ಇವರ ಕಾರ್ಯಾಭಾರತ್ದಲ್ಲಿ ಹಲವು ಪ್ರಮುಖ ರಾಜರುಗಳಿದ್ದರೂ ಪ್ರಮುಖವಾಗಿ ರಾಣಿ ರುದ್ರಮ್ಮ ದೇವಿಯವರನ್ನು ಹೆಚ್ಚು ನೆನೆಯಲಾಗುತ್ತದೆ.
ಚಿತ್ರಕೃಪೆ: AnushaEadara
ವಾರಂಗಲ್
ಪ್ರಸ್ತುತ ತೆಲಂಗಾಣ ರಾಜ್ಯದಲ್ಲಿರುವ ಪ್ರಸಿದ್ಧ ವಾರಂಗಲ್ ಪಟ್ಟಣವು ಕಾಕತೀಯರ ರಾಜಧಾನಿ ಪಟ್ಟಣವಾಗಿ ಮೆರೆದಿತ್ತು. ಅಂತೆಯೆ ಕಾಕತೀಯರು ಅದ್ಭುತವಾಗಿ ನಿರ್ಮಿಸಿದ್ದಾರೆನ್ನಲಾಗುವ ಕೋಟೆಯನ್ನು ಇಂದಿಗೂ ಇಲ್ಲಿ ಕಾಣಬಹುದು. ಇದು ವಾರಂಗಲ್ ಕೋಟೆ ಎಂತಲೆ ಪ್ರಸಿದ್ಧವಾಗಿದ್ದು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: Banthi
ಸರ್ಕಾರಿ ಲಾಂಛನ!
ಕಾಕತೀಯರ ಕೊಡುಗೆ ತೆಲುಗುವಿನಲ್ಲಿ ಎಷ್ಟಿದೆ ಎಂದರೆ ಕಾಕತೀಯ ತೋರಣ ಅಥವಾ ಇಲ್ಲಿರುವ ಕಾಕತೀಯ ಕಮಾನು (ಆರ್ಕ್) ರಚನೆಯನ್ನು ತೆಲಂಗಾಣ ಸರ್ಕಾರವು ತನ್ನ ಲಾಂಛನವನ್ನಾಗಿ ಅಂಗೀಕರಿಸಿದೆ. ಹಾಗಾಗಿ ತೆಲಂಗಾಣದ ಐತಿಹಾಸಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ತಾಣವಾಗಿ ವಾರಂಗಲ್ ಕೋಟೆ ಜನರ ಗಮನಸೆಳೆಯುತ್ತದೆ.
ಚಿತ್ರಕೃಪೆ: ShashiBellamkonda
ನಂತರ ಶೈವರ ಪ್ರಭಾವ
ಒಂಭತ್ತನೇಯ ಶತಮಾನದಲ್ಲಿ ಈ ಪ್ರದೇಶವು ಜೈನರ ಪ್ರಭಾವಕ್ಕೊಳಗಾಗಿತ್ತು ಆ ನಂತರದಲ್ಲಿ ಜೈನ ಪ್ರಭಾವ ಕಡಿಮೆಯಾಗಿ ಹಿಂದು ಶೈವದ ಪ್ರಭಾವ ಹೆಚ್ಚಾಯಿತು. ನಂತರ ಕಾಕತೀಯರು ಈ ಪ್ರದೇಶವನ್ನು ಆಳತೊಡಗಿದರು. ಮೊದಲು ಕೋಟೆಯನ್ನು ಸಣ್ಣ ಸ್ತರದಲ್ಲಿ ನಿರ್ಮಿಸಿದರು.
ಚಿತ್ರಕೃಪೆ: ShashiBellamkonda
ವೈಶಾಲ್ಯತೆ
ನಂತರ ವಿವಿಧ ಕಾಲಮಾನಗಳಲ್ಲಿ ಆಳಿದ ಕಾಕತೀಯ ಅರಸರು ಈ ಕೋಟೆಯ ವಿಶಾಲತೆಯನ್ನು, ಇನ್ನೂ ಹೆಚ್ಚಿನ ರಚನೆಗಳನ್ನು ಅದ್ದೂರಿಯಾಗಿ ನಿರ್ಮಿಸತೊಡಗಿದರು. ಈ ಸಾಮ್ರಾಜ್ಯದಲ್ಲಿ ಪ್ರಮುಕಹವಾಗಿ ಗುರುತಿಸಲ್ಪಡುವ ಆಡಳಿತಗಾರಿಣಿ ರಾಣಿ ರುದ್ರಮ್ಮ ದೇವಿ. (1262-1289).
ಚಿತ್ರಕೃಪೆ: ShashiBellamkonda
ಪ್ರತಾಪರುದ್ರ
ರಾಣಿಯು ತನ್ನ ತಂದೆ ಗಣಪತಿದೇವನ ಸಲಹೆಯಂತೆ ತನ್ನ ಮೊಮ್ಮಗನಾದ ಪ್ರತಾಪರುದ್ರನನ್ನು ತನ್ನ ಮಗನಾಗಿ ದತ್ತು ಪಡೆದುಕೊಂಡಿದ್ದಳು. ಕಾಯಸ್ತ ಮುಖ್ಯಸ್ಥನಾದ ಅಂಬದೇವನೊಂದಿಗೆ 1289 ರ ಕದನದಲ್ಲಿ ರಾಣಿ ರುದ್ರಮ್ಮ ದೇವಿ ಹತಳಾದಳು. ನಂತರ ಆ ಸಿಂಹಾಸನಕ್ಕೆ ವಾರಸುದಾರನಾಗಿದ್ದ ಪ್ರತಾಪರುದ್ರ ಅಧಿಕಾರಕ್ಕೆ ಬಂದನು.
ಚಿತ್ರಕೃಪೆ: ShashiBellamkonda
ವಿಸ್ತರಿಸಿದ
ಹೀಗೆ ಅಧಿಕಾರಕ್ಕೆ ಬಂದ ಪ್ರತಾಪರುದ್ರನು ವಾರಂಗಲ್ ನಗರವನ್ನು ಆಳತೊಡಗಿದನು ಹಾಗೂ ಕೋಟೆಯನ್ನು ಇನ್ನಷ್ಟು ವಿಸ್ತರಿಸಿಕೊಂಡನು. ಆದರೆ ಅವನ ಸಮಾಧಾನ ಬಹು ಕಾಲದವರೆಗೆ ಉಳಿಯಲಿಲ್ಲ. ದೆಹಲಿ ಸುಲ್ತಾನರ ಕಣ್ಣು ಕಾಕತೀಯರ ವೈಭವದ ಮೇಲೆ ಬಿದ್ದೆ ಬಿಟ್ಟಿತು.
ಚಿತ್ರಕೃಪೆ: ShashiBellamkonda
ಆಕ್ರಮಣ
1396 ರಲ್ಲಿ ಮೊದಲ ಬಾರಿಗೆ ದೆಹಲಿ ಸುಲ್ತಾನರು ವಾರಂಗಲ್ ಮೇಲೆ ದಾಳಿ ಮಾಡಿಯೆ ಬಿಟ್ಟರು. ತಮ್ಮ ದೈತ್ಯ ಸೈನ್ಯದೊಂದಿಗೆ ಸುಲಭವಾಗಿ ಗೆಲ್ಲಬಹುದೆಂದುಕೊಂಡಿದ್ದ ಸುಲ್ತಾನರಿಗೆ, ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತೆ ಕಾಕತೀಯರಿಂದ ತೀವ್ರವಾದ ಪ್ರತಿರೋಧ ಎದುರಿಸಬೇಕಾಯಿತು.
ಚಿತ್ರಕೃಪೆ: randhir
ವಶಮಾಡಿಕೊಂಡರು
ಆದರೂ ಕಾಲ ಸರಿದಂತೆ ಹಲವಾರು ಬಾರಿ ಭಗೀರಥ ಪ್ರಯತ್ನಗಳನ್ನು ಮಾಡಿ ಕೊನೆಗೆ ವಾರಂಗಲ್ ಕೋಟೆಯನ್ನ ಸುತ್ತುವರೆದೆ ಬಿಟ್ಟರು. ಆಗ ಚಿಕ್ಕ ಸೈನ್ಯ ಹೊಂದಿದ್ದ ಪ್ರತಾಪರುದ್ರ ಸ್ಥಿತಿಯನ್ನರಿತು ದೆಹಲಿ ಸುಲ್ತಾನನೊಂದಿಗೆ ರಾಜಿ ಮಾಡಿಕೊಂಡನು.
ಚಿತ್ರಕೃಪೆ: randhir
ಕಪ್ಪು ಕಾಣಿಕೆ
ಆ ಒಪ್ಪಂದದ ಪ್ರಕಾರವಾಗಿ ಪ್ರತಾಪರುದ್ರ ಅಪಾರ ಪ್ರಮಾಣದ ಸಂಪತ್ತುಗಳನ್ನು, ಚಿನ್ನಾ ಭರಣಗಳನ್ನು ದೆಹಲಿ ಸುಲ್ತಾನನಿಗೆ ಕಪ್ಪು ಕಾಣಿಕೆಯಾಗಿ ನೀಡಿ ಮತ್ತೆ ವಾರಂಗಲ್ ನಗರವನ್ನಾಳ ತೊಡಗಿದನು. ಆದರೆ ಪ್ರತಿ ವರ್ಷವೂ ಅವನು ದೆಹಲಿ ಸುಲ್ತಾನರಿಗೆ ಕಪ್ಪು ಕಾಣಿಕೆ ಒಪ್ಪಿಸಲೇ ಬೇಕಾಗಿತ್ತು.
ಚಿತ್ರಕೃಪೆ: Abhinaba Basu
ದಾಳಿಯಾಯಿತು
ಹೀಗೆ ಕೆಲವು ಸಮಯದ ನಂತರ ಪ್ರತಾಪರುದ್ರ ಕಪ್ಪು ಕಾಣಿಕೆ ಕೊಡುವುದನ್ನು ನಿಲ್ಲಿಸಿ ಬಿಟ್ಟನು. ಅದರ ಪರಿಣಾಮವಾಗಿ ಮತ್ತೆ ದೆಹಲಿ ಸುಲ್ತಾನರಿಂದ ದಾಳಿಗೊಳಗಾಗಿ, ಮತ್ತೆ ಸಂಪತ್ತನ್ನು ಹೇರಳವಾಗಿ ಅವರಿಗೆ ನೀಡಿ ವಾರಂಗಲ್ ಅನ್ನು ಆಳಿಕೊಂಡನು. ರುದ್ರಪ್ರತಾಪ ದೆಹಲಿ ಸುಲ್ತಾನನಿಗೆ ಕೊಟ್ಟ ಆಭರಣಗಳಲ್ಲಿ ಪ್ರಖ್ಯಾತ ವಜ್ರ ಕೋಹಿನೂರ್ ಸಹ ಸೇರಿತ್ತೆನ್ನಲಾಗಿದೆ.
ಚಿತ್ರಕೃಪೆ: Rajib Ghosh
ಕೊನೆಯ ಬಾರಿ
ಹೀಗೆ ಹಲವು ವರ್ಷಗಳು ಕಳೆದವು. ಸಮಯ ಚಾಚಿದಂತೆ ಪ್ರತಾಪರುದ್ರ ಮತ್ತೆ ದೆಹಲಿ ಸುಲ್ತಾನರಿಗೆ ವಾರ್ಷಿಕ ಕಾಣಿಕೆ ಕೊಡುವುದನ್ನು ನಿಲ್ಲಿಸಿಯೆ ಬಿಟ್ಟನು. ಈ ಬಾರಿ ದೆಹಲಿ ಅರಸನು ಅವನನ್ನು ಬಂಧಿಸಿ ತರುವಂತೆ ಆದೇಶ ನೀಡಿದನು. ಮತ್ತೆ ದೆಹಲಿ ಸೈನ್ಯವು ವಾರಂಗಲ್ ನನ್ನು ಸುತ್ತುವರೆದು ರುದ್ರಪ್ರತಾಪನನ್ನು ಬಂಧಿಸಿ ದೆಹಲಿ ಕರೆದೊಯ್ಯಲಾರಂಭಿಸಿತು.
ಚಿತ್ರಕೃಪೆ: Manoj K
ಆತ್ಮಹತ್ಯೆ!
ಈ ಸಂದರ್ಭದಲ್ಲಿ ರಾಜಾ ಪ್ರತಾಪರುದ್ರನು ಗೋದಾವರಿ ನದಿಯೊಂದರ ತಟದ ಮೇಲೆ ಕಾಯಿಲೆಗೆ ತುತ್ತಾಗಿ ಪ್ರಾಣ ಬಿಟ್ಟನು ಎಂದು ಹೇಳಲಾಗುತ್ತದಾದರೂ ಕೆಲವು ಮುಲಗಳ ಪ್ರಕಾರ, ಈ ಅವಮಾನವನ್ನು ಸಹಿಸಲಾಗದ ರುದ್ರಪ್ರತಾಪ ಸ್ವ ಇಚ್ಛೆಯಿಂದ ಆತ್ಮ ಹತ್ಯೆ ಮಾಡಿಕೊಂಡ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: AnushaEadara
ಎಲ್ಲೆಡೆ
ದೆಹಲಿ ಸೈನ್ಯ ವಾರಂಗಲ್ ಅನ್ನು ಮುತ್ತುವರೆದಿದ್ದ ಸಂದರ್ಭದಲ್ಲಿ ಸಾಕಷ್ಟು ಹಾನಿಗಳನ್ನು ವಾರಂಗಲ್ ಕೋಟೆಗೆ ಮಾಡಿತು. ಮುಸ್ಲಿಮ್ ಸೇನಾಧಿಕಾರಿಯ ನಿರ್ದೇಶನದಂತೆ ಶಿವ ದೇವಾಲಯವನ್ನು ನಾಶಗೊಳಿಸುವುದಲ್ಲದೆ ಕೋಟೆ ಸಂಕೀರ್ಣದಲ್ಲಿ ಮಸೀದಿಯನ್ನೂ ಸಹ ನಿರ್ಮಿಸಿತು.
ಚಿತ್ರಕೃಪೆ: AnushaEadara
ನಾಶವಾಗಿ ಹೋದವು
ಒಂದೊಮ್ಮೆ ಶಾಂತಿ ಸಮೃದ್ಧತೆಯಿಂದ ಮೆರೆದಿದ್ದ ವಾರಂಗಲ್ ಕೋಟೆ ದೆಹಲಿ ಸುಲ್ತಾನರ ಆಕ್ರಮಣ ನೋಡಬೆಕಾಯಿತು. ತನ್ನ ಜನರ ಆಕ್ರಂದನ ಕೇಳಿಸಿಕೊಳ್ಳುವ ಸ್ಥಿತಿ ತಲುಪಿತು. ಆದ್ದರಿಂದ ಇಂದಿಗೂ ಈ ಕೋಟೆಯ ತಾಣವನ್ನು ಭೇಟಿ ನೀಡಿ ಸೂಕ್ಷ್ಮ ಮನಸ್ಸಿನಿಂದ ಗಮನಿಸಿದಾಗ ಕೋಟೆಯು ಹೇಳುತ್ತಿರುವ ಕಣ್ಣೀರ ಕಥೆಯು ಯಾವ ಪ್ರವಾಸಿಗನಿಗಾಗಲಿ ಕ್ಕೇಳಿಸದೆ ಇರಲ್ಲ.
ಚಿತ್ರಕೃಪೆ: AnushaEadara
ಕಥೆ ಹೇಳುತ್ತವೆ
ಕೋಟೆ ಸಂಕೀರ್ಣದ ಒಂದೊಂದು ಭಾಗಗಳೂ ಒಂದೊಂದು ವಿಶೇಷತೆಗಳನ್ನು ಅನಾವರಣಗೊಳಿಸುತ್ತವೆ. ಕಾಕತೀಯರ ಕಾಲದ ಅದ್ಭುತವಾದ ಕೆತ್ತನೆಗಳು, ಶಿಲ್ಪಕಲಾ ಕೌಶಲ್ಯಗಳು ಪ್ರವಾಸಿಗರ ಮುಂದೆ ಅನಾವರಣಗೊಳ್ಳುತ್ತವೆ.
ಚಿತ್ರಕೃಪೆ: Maharajsaran
ರಿಕ್ಷಾ ದೊರೆಯುತ್ತವೆ
ಪ್ರಸ್ತುತ ವಾರಂಗಲ್ ನಗರದ ಆಗ್ನೇಯ ಭಾಗದಲ್ಲಿರುವ ಈ ಅದ್ಭುತ ಕೋಟೆ ತಾಣಕ್ಕೆ ತೆರಳಲು ನಗರದ ಬಸ್ಸು/ರೈಲು ನಿಲ್ದಾಣದಿಂದ ಸಾಕಷ್ಟು ರಿಕ್ಷಾ ಹಾಗೂ ಬಾಡಿಗೆ ಕಾರುಗಳು ದೊರೆಯುತ್ತವೆ. ವಾರದ ಎಲ್ಲ ದಿನಗಳಲ್ಲೂ ಕೋಟೆಯು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದು ನಿಗದಿತ ಪ್ರವೇಶ ಶುಲ್ಕ ಹೊಂದಿದೆ. ಕೋಟೆ ತೆಗೆದಿರುವ ಸಮಯ ಬೆಳಿಗ್ಗೆ 10 ಘಂಟೆಯಿಂದ ಸಂಜೆ 7 ಘಂಟೆಯವರೆಗೆ.
ಚಿತ್ರಕೃಪೆ: Aravind pakide
ಎಷ್ಟು ದೂರ?
ವಾರಂಗಲ್ ಹೈದರಾಬಾದ್ ನಗರದಿಂದ ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಹೈದರಾಬಾದ್ ನಿಂದ ರೈಲು ಹಾಗೂ ಬಸ್ಸುಗಳು ಲಭ್ಯವಿದೆ. ವಾರಂಗಲ್ ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಹೈದರಾಬಾದಿನೊಂದಿಗೆ ಸಂಪರ್ಕ ಹೊಂದಿದೆ.
ಚಿತ್ರಕೃಪೆ: Banthi