ವಾರಾಂತ್ಯ ಬಂದರೆ ಸಾಕು ಯಾವುದಾದರೂ ಪ್ರಶಾಂತವಾದ ಸ್ಥಳಕ್ಕೆ ಭೇಟಿ ನೀಡಿ ಕಾಲ ಕಳೆಯಬೇಕು ಎಂಬುದು ಸಾಮಾನ್ಯವೇ. ಅದರಲ್ಲೂ ಬೆಂಗಳೂರಿನ ಜನರಿಗಂತೂ ದಿನನಿತ್ಯವು ಕೆಲಸದ ಜಂಜಾಟದಿಂದ ಹೊರಬರಲು ಹಾಗು ಮನಸ್ಸನ್ನು ನೆಮ್ಮದಿಯಾಗಿರಿಸಲು ಕೆಲವೊಂದು ಸುಂದರವಾದ ಸ್ಥಳಕ್ಕೆ ಭೇಟಿ ನೀಡುವುದುಂಟು. ಬೆಂಗಳೂರಿಗೆ ಸಮೀಪವಾಗಿರುವ ನಂದಿ ಬೆಟ್ಟಕ್ಕೆ ರಾಜ್ಯದ ವಿವಿದೆಡೆಯಿಂದ ಪ್ರವಾಸಿಗರು ತೆರಳುತ್ತಿರುತ್ತಾರೆ.
ನಂದಿ ಬೆಟ್ಟ ನೋಡಿದವರು ಮತ್ತೇ ಬೇರೆ ಯಾವುದಾದರು ಮನೋಹರವಾದ ದೃಶ್ಯಗಳನ್ನು ಹೊಂದಿರುವ ಬೆಟ್ಟಕ್ಕೆ ಭೇಟಿ ನೀಡಬಹುದಲ್ಲ ಎಂದು ಯೋಚಿಸುವುದು ಸಹಜವೇ. ಅಂತಹವರಿಗೆ ಈ ಲೇಖನದಲ್ಲಿ ತಿಳಿಸಲಾಗುವ ಬೆಟ್ಟವು ಅತ್ಯುತ್ತಮ ಹಾಗು ಆನಂದವನ್ನು ಉಂಟು ಮಾಡುವ ಪ್ರವಾಸಿ ತಾಣ ಎಂದೇ ಹೇಳಬಹುದು. ಈ ಸುಂದರವಾದ ಬೆಟ್ಟದ ಹೆಸರು ಆವಳ ಬೆಟ್ಟ. ಇದು ಬೆಂಗಳೂರಿನಿಂದ ಸುಮಾರು 110 ಕಿ.ಮೀ ಗಳಷ್ಟು ದೂರದಲ್ಲಿದೆ.
ಈ ಸುಂದರವಾದ ಬೆಟ್ಟದ ಕುರಿತು ಸಂಕ್ಷೀಪ್ತ ಮಾಹಿತಿ ಲೇಖನದ ಮೂಲಕ ಪಡೆಯಿರಿ.
1.ಅವಳಬೆಟ್ಟ
PC:Govinda Samy
ಮಾನ್ಸೂನ್ ಎಂದರೆ ಪ್ರವಾಸಿಗರಿಗೆ ಮಂತ್ರಮುಗ್ಧರನ್ನಾಗಿಸುವ ಕಾಲ. ಬೆಂಗಳೂರಿನಿಂದ ಅವಳ ಬೆಟ್ಟ ಸೇರುವವರೆವಿಗೂ ನೀವು ಅನೇಕ ಬೆಟ್ಟಗಳನ್ನು ದರ್ಶಿಸುತ್ತಾ ಸಾಗಬಹುದು. ಅವುಗಳಲ್ಲಿ ನಂದಿ ಹಿಲ್ಸ್ ಕೂಡ ಒಂದು. ಇದೊಂದು ಸುಂದರವಾದ ಪ್ರವಾಸಿ ತಾಣವೇ ಆಗಿರದೇ ಒಂದು ಪುಣ್ಯಕ್ಷೇತ್ರವಿರುವ ತಾಣ ಕೂಡ ಹೌದು. ಅವಳಬೆಟ್ಟವು ಒಂದು ಹಿಂದೂ ಪುಣ್ಯಕ್ಷೇತ್ರವನ್ನು ಹೊಂದಿದೆ. ಇದನ್ನು ಧೇನುಗಿರಿ ಲಕ್ಷ್ಮೀ ನರಸಿಂಹ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ. ಈ ಬೆಟ್ಟವು ನಂದಿ ಬೆಟ್ಟದ ರೀತಿಯಲ್ಲಿಯೇ ಹತ್ತಲು ಅನುಕೂಲಕರವಾದ ಮೆಟ್ಟಿಲು ಸೌಲಭ್ಯಗಳಿವೆ. ನಂದಿ ಬೆಟ್ಟದ ಮಾದರಿಯಲ್ಲಿಯೇ ಬೆಟ್ಟದ ಮೇಲೆ ಪವಿತ್ರವಾದ ದೇವಾಲಯವಿದೆ. ಆ ಸುಂದರವಾದ ದೇವಾಲಯದ ಸಮೀಪದಲ್ಲಿಯೇ ಕೊಳವು ಕೂಡ ಇದೆ.
2.ಪ್ರಾಕೃತಿಕ ಸೌಂದರ್ಯ
PC:Govinda Samy
ನದಿಬೆಟ್ಟದ ರೀತಿಯಲ್ಲಿಯೇ ಅದ್ಭುತವಾದ ಪ್ರಾಕೃತಿಕ ಸೊಬಗನ್ನು ಈ ಬೆಟ್ಟವು ಹೊಂದಿದೆ. ಅದ್ದರಿಂದಲೇ ಅನೇಕ ಪ್ರವಾಸಿಗರು ವಾರಾಂತ್ಯದ ಸಮಯದಲ್ಲಿ ಅವಳ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ. ಆದರೂ ಕೂಡ ಈ ಬೆಟ್ಟದ ಬಗ್ಗೆ ಮಾಹಿತಿ ಜನರಿಗೆ ಅಷ್ಟಾಗಿ ತಿಳಿದಿಲ್ಲದ ಕಾರಣ ನಂದಿ ಬೆಟ್ಟಕ್ಕೆ ಹೋಲಿಸಿದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ವಿಶೇಷವೆನೆಂದರೆ ನಂದಿ ಬೆಟ್ಟದ ಹಾಗೆ ಇಲ್ಲಿ ಅಷ್ಟೊಂದು ಜನದಟ್ಟನೆಯಿಂದ ಕೂಡಿರುವುದಿಲ್ಲ. ಟ್ರೆಕ್ಕಿಂಗ್ ಮಾಡಬೇಕು ಎಂದು ಅಂದುಕೊಂಡಿರುವವರು ಸುಲಭವಾಗಿ ಮೆಟ್ಟಿಲಿನ ಸಹಾಯದಿಂದ ತಲುಪಬಹುದು.
3.ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ
PC:YOUTUBE
ಸ್ಥಳೀಯ ಕಥೆಯ ಪ್ರಕಾರ ನರಸಿಂಹ ಸ್ವಾಮಿ ಈ ಪ್ರದೇಶದಲ್ಲಿ ಲಕ್ಷ್ಮೀಯನ್ನು ವಿವಾಹವನ್ನು ಮಾಡಿಕೊಂಡ ಹಾಗೆ ಹೇಳುತ್ತಾರೆ. ನರಸಿಂಹ ಸ್ವಾಮಿಯ ಮೇಲೆ ಕೋಪದಿಂದ ಚೆಂಚುಲಕ್ಷ್ಮೀಯು ಈ ಬೆಟ್ಟದ ಮೇಲೆ ನೆಲೆಸಿದಳಂತೆ. ಇಂದಿಗೂ ಆ ದೇವಾಲಯಗಳನ್ನು ಕಾಣಬಹುದು. ಸಮುದ್ರ ಮಂಥನದಿಂದ ಉತ್ಪತ್ತಿಗೊಂಡ ಕಾಮಧೇನು ತನ್ನ ಮೊದಲ ಹೆಜ್ಜೆಯನ್ನು ಈ ತಾಣದಲ್ಲಿಟ್ಟಿದುದರಿಂದ ಈ ಕ್ಷೇತ್ರಕ್ಕೆ ಧೇನುಗಿರಿ ಎಂಬ ಹೆಸರುಬಂದಿತು ಹಾಗೂ ಬೆಟ್ಟವು ಆವಲಕೊಂಡ ಇಲ್ಲವೆ ಆವಲಬೆಟ್ಟ ಎಂಬ ಹೆಸರೂ ಸಹ ಪಡೆಯಿತು. "ಅವಲ" ಎಂಬದು ತೆಲುಗು ಭಾಷೆಯ ಪದ. ಅವಳ ಎಂದರೆ ಪಶು ಎಂದೂ, ಬೆಟ್ಟ ಎಂದರೆ ಗಿರಿ ಎಂದು ಅರ್ಥ.
4.ಬೆಟ್ಟದ ಮೇಲೆ ಕೊಳ
PC:YOUTUBE
ನರಸಿಂಹ ಸ್ವಾಮಿ ದೇವಾಲಯವನ್ನು ದಾಟಿದ ನಂತರ ಬೆಟ್ಟದ ಶಿಖರದ ಮೇಲೆ ತೆರಳುವಾಗ ಒಂದು ಸುಂದರವಾದ ಕೊಳವು ಕಾಣಿಸುತ್ತದೆ. ಅವಲಬೆಟ್ಟದಲ್ಲಿ ಈ ಕೊಳವು ಕೂಡ ಅತ್ಯಂತ ಆಕರ್ಷಣೀಯ ಎಂದೇ ಹೇಳಬಹುದು. ಆ ಶಿಖರದಿಂದ ನೋಡಿದರೆ ಸುತ್ತಮುತ್ತಲ ಪ್ರಾಕೃತಿಯ ಸೌಂದರ್ಯವನ್ನು ಹಾಗು ಗ್ರಾಮಗಳನ್ನು ಕಣ್ಣಾರೆ ಕಂಡು ಆನಂದಿಸಬಹುದು.
5.ಪ್ರಧಾನವಾದ ಆಕರ್ಷಣೆ
PC:Govinda Samy
ಬೆಟ್ಟದ ಶಿಖರದ ದೊಡ್ಡದಾದ ಕಲ್ಲು ಅವಲಬೆಟ್ಟದ ಆಕರ್ಷಣೆಗಳಲ್ಲಿ ಒಂದು. ಅದರ ಮೇಲೆ ಕುಳಿತುಕೊಂಡು ಎಲ್ಲಾ ಪ್ರವಾಸಿಗರು ತಪ್ಪದೇ ಫೋಟುವನ್ನು ಕ್ಲಿಕ್ಕಿಸದೇ ಇರಲಾರರು. ಇನ್ನು ಇದು ಮಳೆಗಾಲವಾದ್ದರಿಂದ ವೇಗದಿಂದ ಗಾಳಿಯು ಬೀಸುತ್ತಿರುತ್ತದೆ. ಸ್ಥಿರವಾಗಿ ನಿಲ್ಲಾರದಷ್ಟು ವೇಗವಾಗಿ ಗಾಳಿ ಬೀಸುವುದರಿಂದ ಜಾಗ್ರತೆಯಾಗಿರುವುದು ಉತ್ತಮ. ಅಲ್ಲಿ ಯಾವುದೇ ಹೋಟೆಲ್ಗಳ ಸೌಲಭ್ಯವಿಲ್ಲ. ಹಾಗಾಗಿ ಮೊದಲೇ ಆಹಾರದ ವ್ಯವಸ್ಥೆ ಮಾಡಿಕೊಂಡು ಹೋಗುವುದು ಉತ್ತಮ. ಇಲ್ಲಿ ಕೋತಿಗಳ ಹಾವಳಿ ಕೂಡ ಅಧಿಕವಾಗಿಯೇ ಇದೆ.
6.ತಲುಪುವ ಬಗೆ ಹೇಗೆ?
PC:YOUTUBE
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆವಲಬೆಟ್ಟವು ಪೆರೆಸಂದ್ರ ಎಂಬ ಗ್ರಾಮದ ಬಳಿ ಸ್ಥಿತವಿದೆ. ಇಲ್ಲಿಗೆ ತಲುಪಲು ಬೆಂಗಳೂರಿನ ಮುಲವಾಗಿ ರಾಷ್ಟ್ರೀಯ ಹೆದ್ದಾರಿ ಏಳನ್ನು ಬಳಸಿಕೊಂಡು ಚಿಕ್ಕಬಳ್ಳಾಪುರ ತೆರಳಿ ಅಲ್ಲಿಂದ ಹದಿನೈದು ಕಿ.ಮೀ ಸಾಗಿ ಪೆರೆಸಂದ್ರ ಎಂಬ ಹಳ್ಳಿಯ ಬಳಿ ಎಡ ತಿರುವು ಪಡೆದು ಸಾಗಬೇಕು. ಹೀಗೆ ಸಾಗುತ್ತ ಮಂಡಿಕಲ್ ಎಂಬ ಹಳ್ಳಿ ತಲುಪಿ ಅಲ್ಲಿಂದ ಇನ್ನೂ ಹನ್ನೊಂದು ಕಿ.ಮೀ ಸಾಗಿದರೆ ಆವಲಬೆಟ್ಟವು ದೊರಕುತ್ತದೆ. ಮಾರ್ಗಗೊಂದಲವಾದಲ್ಲಿ ಸ್ಥಳೀಯರನ್ನು ವಿಚಾರಿಸಬಹುದು. ಚಿಕ್ಕಬಳ್ಳಾಪುರ ಬಸ್ಸು ನಿಲ್ದಾಣದಿಂದ ಮಂಡಿಕಲ್ ಗ್ರಾಮಕ್ಕೆ ಬಸ್ಸುಗಳು ದೊರೆಯುತ್ತವೆ.