ವಿಷ್ಣುವಿನ ಏಳನೇಯ ಅವತಾರವಾದ ರಾಮನಿಗೆ ಮುಡಿಪಾದ ಅನೇಕ ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು. ಉತ್ತರ ಭಾರತದಲ್ಲಿ ಬಲು ಜನಪ್ರೀಯನಾಗಿರುವ ರಾಮನು ದಕ್ಷಿಣ ಭಾರತದಲ್ಲೂ ಸಹ ಅಷ್ಟೆ ಹೆಸರುವಾಸಿಯಾದರೂ ಅವನಿಗೆ ಮುಡಿಪಾದ ದೇವಾಲಯಗಳ ಸಂಖ್ಯೆ ಶಿವ, ಗಣೇಶ ಮುಂತಾದವರಿಗೆ ಹೋಲಿಸಿದಾಗ ಬಲು ಕಡಿಮೆ ಅಂತಾನೆ ಹೇಳಬಹುದು.
ಅದಾಗ್ಯೂ ದಕ್ಷಿಣ ಭಾರತದಲ್ಲಿ ಕಂಡುಬರುವ ರಾಮನ ದೇವಾಲಯಗಳು ಸಾಕಷ್ಟು ಮಹತ್ವಗಳಿಸಿದ ದೇವಾಲಯಗಳಾಗಿದ್ದು ಭಕ್ತಗಣರಿಂದ, ಪ್ರವಾಸಿಗರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುತ್ತವೆ. ಅದರಲ್ಲೂ ವಿಶೇಷವಾಗಿ ಕೇರಳ ರಾಜ್ಯದಲ್ಲಿ ರಾಮನಿಗೆ ಮುಡಿಪಾದ ಅಥವಾ ರಾಮನ ನಾಲ್ಕು ಪ್ರಮುಖ ದೇವಾಲಯಗಳಿದ್ದು ಅವುಗಳಲ್ಲೊಂದಾಗಿದೆ ವಿಲ್ವದ್ರಿನಾಥ ದೇವಾಲಯ.
ಚಿತ್ರಕೃಪೆ: Aruna
ಲಕ್ಷ್ಮಣನ ಸನ್ನಿಧಿಯೂ ಇರುವ ಅಪರೂಪದ ದೇವಾಲಯಗಳ ಪೈಕಿ ಇದೂ ಸಹ ಒಂದು. ಮೂಲತಃ ಇಲ್ಲಿ ಪ್ರಧಾನ ದೇವರುಗಳೆಂದರೆ ವಿಷ್ಣುವಿನ ಅವತಾರವಾದ ರಾಮಭದ್ರಸ್ವಾಮಿ ಹಾಗೂ ಅವನ ಸಹೋದರನಾದ ಲಕ್ಷ್ಮಣ ಸ್ವಾಮಿ. ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಈ ದೇವಾಲಯವು ನಗರ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ತಿರುವಿಲ್ಮಮಲ ಎಂಬ ಗ್ರಾಮದಲ್ಲಿ ಸ್ಥಿತವಿದೆ.
ಸಾಕಷ್ಟು ಪ್ರಭಾವಶಾಲಿಯಾಗಿರುವ ಈ ದೇವಾಲಯವು ಅತ್ಯಂತ ರೋಚಕವಾದ ಕಥೆಯನ್ನು ಹೊಂದಿದೆ. ಅದರ ಪ್ರಕಾರ, ಕಶ್ಯಪ ಮುನಿಗಳ ಪುತ್ರನಾದ ಅಮಲಕನೆಂಬುವವನು ಇಲ್ಲಿ ಅತಿ ಕಠಿಣ ತಪಸ್ಸು ಮಾಡಿದನೆಂಬ ಪ್ರತೀತಿಯಿದೆ. ಹೀಗೊಮ್ಮೆ ಅವನ ತಪಸ್ಸು ಮಾಡುತ್ತಿದ್ದಾಗ ದೇವತೆಗಳಿಗೆ ಅವನ ತಪಸ್ಸು ಫಲಿತವಾಗಿ ಅವನಿಗೆ ಸ್ವರ್ಗ ಸಿಗಬಹುದೆಂಬ ಆತಂಕ ಊಂತಾಯಿತು.
ಚಿತ್ರಕೃಪೆ: Aruna
ಆದ ಕಾರಣ, ಅಮಲಕನ ತಪಸ್ಸನ್ನು ಭಂಗ ಮಾಡುವ ಉದ್ದೇಶದಿಂದ ದೆವೇಂದ್ರನು ಅಪ್ಸರೆಯರನ್ನು ಕಳುಹಿಸಿದನು. ಅಪ್ಸರೆಯರು ಎಷ್ಟೆ ಪ್ರಯತ್ನಿಸಿದರೂ ಅಮಲಕನ ತಪಸ್ಸಿಗೆ ಭಂಗ ಉಂಟು ಮಾಡಲು ಆಗಲಿಲ್ಲ. ಇತ್ತ ಅಸುರರಿಗೂ ಸಹ ವಿಷಯ ತಿಳಿದು ಅಮಲಕನ ತಪಸ್ಸು ಭಂಗಗೊಳಿಸಿದರೂ ಅವನ ಕಣ್ಣಿನಿಂದ ಬಂದ ಬೆಂಕಿಯಿಂದ ಸುಟ್ಟು ಕರಕಲಾದರು. ಕೊನೆಗೆ ನಾರಾಯಣನು ಪ್ರತ್ಯಕ್ಷನಾದನು ಅಮಲಕನಿಗೆ.
ಸಂತಸಗೊಂಡ ಅಮಲಕ ನಾರಾಯಣನನ್ನು ಕುರಿತು ಅನಂತ ಶಯನ ಹಾಗೂ ಮಡದಿಯರಾದ ಶ್ರೀ ಹಾಗೂ ಭೂಮಿಯೊಂದಿಗೆ ಇಲ್ಲಿಯೆ ನೆಲೆಸಿ ಲೋಕ ಕಲ್ಯಾಣ ಉಂಟುಮಾಡಬೇಕೆಂದು ಪ್ರಾರ್ಥಿಸಿದನು. ಅದಕ್ಕೊಪ್ಪಿದ ನಾರಾಯಣ ಅಲ್ಲಿಯೆ ನೆಲೆಸಿದ. ಹೀಗೆ ವಿಲ್ವಾದ್ರಿಯು ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಸ್ಥಳವಾಗಿ ಬೆಳೆಯತೊಡಗಿತು. ಇತ್ತ ಅಸುರರಲ್ಲಿ ಕೋಪ ಉಂಟಾಗಿ ಆ ದೇವಾಲಯವನ್ನು ನಾಶ ಮಾಡಲು ನಿರ್ಧರಿಸಿದರು.
ಚಿತ್ರಕೃಪೆ: Aruna
ಅದರಂತೆ ಅತ್ಯಂತ ಶೂರ ಹಾಗೂ ಬಲಶಾಲಿ ಅಸುರನನ್ನು ಅಲ್ಲಿಗೆ ಕಳುಹಿಸಿದರು. ಅವನು ಅಲ್ಲಿ ಬ್ರಾಹ್ಮಣ ವೇಶದಲ್ಲಿ ಬಂದು ತಂಗಿದನು. ದಿನದ ಸಮಯ ಎಲ್ಲರಂತೆ ಸಾಮಾನ್ಯ ಬ್ರಾಹ್ಮಣನಾಗಿ ರಾತ್ರಿಯಾದಂತೆ ಎಲ್ಲರೂ ಮಲಗಿದ ಮೇಲೆ ಅಸುರ ರೂಪ ಪಡೆದು ದೇವಾಲಯದ ಆಕಳುಗಳನ್ನು ತಿಂದು ತೇಗುತ್ತಿದ್ದ. ಒಮ್ಮೊಮ್ಮೆ ಕೆಲ ಬ್ರಾಹ್ಮಣ ಮನುಷ್ಯರನ್ನೂ ತಿನ್ನುತ್ತಿದ್ದ.
ಒಂದೊಮ್ಮೆ ಅವನು ಕಾಯುತ್ತಿದ್ದ ದಿನವು ಬಂದೆ ಬಿಟ್ಟಿತು. ಆ ದಿನ ರಾತ್ರಿ ನರ ಭಕ್ಷಣೆ ಮಾಡಿ ದೇವಾಲಯದೊಳಗೆ ಪ್ರವೇಶಿಸಿ ಖಂಬಗಳನ್ನೆಲ್ಲ ನಾಶ ಪಡಿಸಲಾರಂಭಿಸಿದ. ಈ ಸಮಯದಲ್ಲಿ ನಾರಾಯಣನು ಎರಡನೇಯ ಬಾರಿಗೆ ತನ್ನ ಅತ್ಯುಗ್ರ ರೂಪವಾದ ನರಸಿಂಹನ ಅವತಾರದಲ್ಲಿ ಬಂದು ಘರ್ಜಿಸುತ್ತ ಹಿರಣ್ಯಕಶಿಪನ್ನು ಸಂಹರಿಸಿದ ರೀತಿಯಲ್ಲೆ ಆ ಅಸುರನನ್ನು ಸಂಹರಿಸಿದ.
ಚಿತ್ರಕೃಪೆ: Aruna
ಅಸುರನ ಆರ್ತನಾದ ಕೇಳಿ ದೇವಾಲಯದಲ್ಲಿದ್ದವರೆಲ್ಲರೂ ಬೆಚ್ಚಿ ಬಿದ್ದು ಬಂದು ನೋಡಿದಾಗ ಅವರಿಗೆ ಎದುರಾಗಿದ್ದುದು ನರಸಿಂಹನ ರೂಪ. ಕೆಲವರು ಭಯದಿಂದ ಮೂರ್ಛೆ ಹೋದರೆ ಇನ್ನೂ ಕೆಲವರು ಮಂಡಿಯೂರಿ ಕುಳಿತು ಪ್ರಾರ್ಥಿಸತೊಡಗಿದರು. ಆ ಸಮಯಕ್ಕೆ ಅಲ್ಲಿಗೆ ಬಂದ ಅಮಲಕರು ನಾರಾಯಣನನ್ನು ಜಪಿಸುತ್ತ ಮತ್ತೆ ಮೂರ್ತಿಯಲ್ಲಿ ಮರಳುವಂತೆ ಪ್ರಾರ್ಥಿಸಿದರು.
ಪರಶುರಾಮರಿಂದ ನಿರ್ಮಿತ 108 ಶಿವಾಲಯಗಳು
ಅದೂ ಸಹ ಕಷ್ಟವಾದಾಗ ಶಂಕರನನ್ನು ನೆನೆದರು. ಶಮ್ಕರನು ತನ್ನ ಕೆಲ ಅಂಶದ ಶಕ್ತಿಯನ್ನು ಆ ಶಕ್ತಿಯೊಂದಿಗೆ ಬೆರೆಸಿ ಮತ್ತೆ ಆ ವಿಗ್ರಹದಲ್ಲಿ ಸೇರುವಂತೆ ಮಾಡಿತು. ಇಲ್ಲಿಂದಲೆ ಶಂಕರನಾರಾಯಣ ಎಂಬ ಹೊಸ ಅಂಶವೊಂದು ಬೆಳಕಿಗೆ ಬಂದಿತೆನ್ನಲಾಗಿದೆ. ಹೀಗಾಗಿ ಈ ದೇವಾಲಯವು ಸಾಕಷ್ಟು ಪ್ರಾಮುಖ್ಯತೆಗಳಿಸಿದೆ.