ವಿರೂಪಾಕ್ಷ ಎಂಬುದು ಶಿವನ ಇನ್ನೊಂದು ರೂಪವಾಗಿದೆ. ಒಂದು ಪ್ರಾಚೀನ ಗ್ರಂಥದ ಪ್ರಕಾರ, ಹಿಂದೆ ನಾಗಾಗಳು ಬುಡಕಟ್ಟು ಜನಾಂಗದವರಾಗಿದ್ದು ನಿಸರ್ಗದ ಅಪ್ರತಿಮ ಶಕ್ತಿಯಾದ ಶಿವನನ್ನು ಆರಾಧಿಸುತ್ತಿದ್ದರು. ಆದರೆ ಅವರು ಶಿವನನ್ನು ವಿರೂಪಾಕ್ಷನ ರೂಪದಲ್ಲಿ ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ. ಹಾಗಾಗಿ ನಾಗಾಗಳ ನಾಯಕ ಅಥವಾ ಪ್ರಧಾನ ದೇವನಾಗಿ ವಿರೂಪಾಕ್ಷ ಗುರುತಿಸಲ್ಪಡುತ್ತಾನೆ.
ಇನ್ನೊಂದು ಕಥೆಯ ಪ್ರಕಾರ, ಇಂದಿನ ನೇಪಾಳದಲ್ಲಿ ಪಶುಪತಿನಾಥನ ದೇವಾಲಯವು ವಿರೂಪಾಕ್ಷನೊಂದಿಗೆ ನಂಟನ್ನು ಹೊಂದಿದೆ ಎನ್ನಲಾಗುತ್ತದೆ. ನಾಗಾಗಳಲ್ಲಿ ಶ್ಲೇಷಮಂತಕನೆಂಬುವವನಿದ್ದನು. ಈತ ಶಿವನ ಪರ್ಮ ಭಕ್ತನಾಗಿದ್ದನು ಹಾಗೂ ಶಿವನಲ್ಲಿ ಐಕ್ಯವಾಗುವ ಉದ್ದೇಶದಿಂದ ಕಠಿಣ ತಪಗೈದು ಕೊನೆಗೆ ಶಿವನಲ್ಲಿ ಒಂದಾದನು. ಆತನೆ ವಿರೂಪಾಕ್ಷನಾಗಿ ಇಂದು ಗುರುತಿಸಲ್ಪಡುತ್ತಾನೆ ಎಂಬ ಅಭಿಪ್ರಾಯವೂ ಸಹ ಇದೆ.
ಹಂಪಿ ವಿರೂಪಾಕ್ಷ, ಚಿತ್ರಕೃಪೆ: Nlgirish
ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಿರುಪಾಕ್ಷನು ಶಿವನ ಮತ್ತೊಂದು ಅವತಾರ ಎನ್ನುವುದಷ್ಟೆ. ವಿರೂಪಾಕ್ಷನಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಎರಡು ಅತ್ಯಂತ ಪ್ರಾಚೀನ ಮಂದಿರಗಳಿವೆ. ಈ ಎರಡೂ ದೇವಾಲಯಗಳಿರುವುದು ಕರ್ನಾಟಕದ ಅತ್ಯದ್ಭುತ ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲೆ ಎಂಬುದು ಮತ್ತೊಂದು ವಿಶೇಷ.
ಹೌದು, ಒಂದು ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿರುವ ವಿರೂಪಾಕ್ಷನ ಸನ್ನಿಧಿಯಾದರೆ, ಇನ್ನೊಂದು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಎಂಬಲ್ಲಿರುವ ವಿರೂಪಾಕ್ಷನ ದೇವಾಲಯ. ತುಂಗಭದ್ರಾ ನದಿ ತಟದಲ್ಲಿ ನೆಲೆಸಿರುವ ಹಂಪಿಯು ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿರುವ ಅದ್ಭುತ ಐತಿಹಾಸಿಕ ಪಟ್ಟಣ. ವಿಜಯನಗರ ಸಾಮ್ರಾಜ್ಯದ ಗತ ವೈಭವದ ಕಥೆ ಹೇಳುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದುರುವ ಸ್ಥಳ.
ಚಿತ್ರಕೃಪೆ: Jean-Pierre Dalbéra
ಇಲ್ಲಿರುವ ವಿರೂಪಾಕ್ಷನ ದೇವಾಲಯವು ಸಾಕಷ್ಟು ಅದ್ಭುತವಾದ ಕೆತ್ತನೆಗಳಿಂದ ಕೂಡಿರುವುದನ್ನು ಕಾಣಬಹುದು. ಈ ದೇವಾಲಯದ ಇತಿಹಾಸವು ಏನಿಲ್ಲವೆಂದರೂ ಏಳನೇಯ ಶತಮಾನಕ್ಕೆ ಕರೆದೊಯ್ಯುತ್ತವೆ. ಮೊದ ಮೊದಲು ಚಿಕ್ಕ ದೇಗುಲವಾಗಿ ನಿರ್ಮಾಣಗೊಂಡ ಈ ರಚನೆಯು ವಿವಿಧ ಕಾಲದಲ್ಲಿ ದೊಡ್ಡ ದೇವಾಲಯವಾಗಿ ಪರಿವರ್ತನೆಯಾಯಿತು. ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯನಗರ ಅರಸರು ಇದರ ಮಹೋನ್ನತಿಗೆ ಕಾರಣಕರ್ತರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ವಿಜಯನಗರ ಅರಸರಕ ಕಾಣಿಕೆಯೆ ಅಪಾರ.
ವಿಜಯನಗರ ಸಾಮ್ರಾಜ್ಯದ ಬಲು ಜನಪ್ರೀಯ ಹಾಗೂ ಮುಖ್ಯ ದೊರೆಯಾಗಿದ್ದ ಕೃಷ್ಣದೇವರಾಯನು ವಿರೂಪಾಕ್ಷನ ಪರಮ ಭಕ್ತನಾಗಿದ್ದನು. ಅಂತೆಯೆ ಈ ದೇವಾಲಯಕ್ಕೆ ಹೆಚ್ಚುವರಿಯಾಗಿ ಮಂಟಪವೊಂದನ್ನು ನಿರ್ಮಿಸಿದುದನ್ನು ಇತಿಹಾಸದಿಂದ ತಿಳಿಯಬಹುದು. ಅಲ್ಲದೆ ಈ ಮಂಟಪವು ಅತ್ಯದ್ಭುತವಾದೆ ಕೆತ್ತನೆ ಕೆಲಸಗಳಿಂದ ಕೂಡಿದ್ದು ವಿಜಯನಗರದ ವಾಸ್ತುಶೈಲಿಯ ವೈಭವ ಸೂಚಿಸುತ್ತದೆ.
ಪಟ್ಟದಕಲ್ಲು ವಿರೂಪಾಕ್ಷ, ಚಿತ್ರಕೃಪೆ: Dineshkannambadi
ಎರಡನೆಯದಾಗಿ ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಐತಿಹಸಿಕ ಪ್ರವಾಸಿ ಸ್ಥಳವಾದ ಪಟ್ಟದಕಲ್ಲು ಎಂಬಲ್ಲಿರುವ ವಿರೂಪಾಕ್ಷನ ದೇವಾಲಯ. ಈ ದೇವಾಲಯವು ಎಂಟು ಹಾಗೂ ಒಂಭತ್ತನೆಯ ಶತಮಾನಗಳ ಮಧ್ಯದ ಸಮಯದಲ್ಲಿ ನಿರ್ಮಾಣವಾದುದೆಂದು ತಿಳಿದುಬರುತ್ತದೆ.
ಪಟ್ಟದಕಲ್ಲು ಸಹ ಹಮ್ಪಿಯಂತೆ ಹಲವಾರು ದೇಗುಲಗಳನ್ನು ಹೊಂದಿರುವ ಒಂದು ಬೃಹತ್ತಾದ ಸಂಕೀರ್ಣವಾಗಿದೆ. ಇಲ್ಲಿರುವ ಎಲ್ಲ ದೇವಾಲಯಗಳ ಪೈಕಿ ದೊಡ್ಡದಾದ ಹಾಗೂ ಆಕರ್ಷಕವಾಗಿ ನಿರ್ಮಿತವಾಗಿರುವ ದೇವಾಲಯಗಳಲ್ಲಿ ವಿರೂಪಾಕ್ಷನ ದೇವಾಲಯವನ್ನೆ ಹೆಸರಿಸಬಹುದಾಗಿದೆ.
ಹಂಪಿ: ಅವಶೇಷಗಳ ಮಧ್ಯದಲೊಂದು ವೈಭವದ ಸಾಮ್ರಾಜ್ಯ
ಕಂಚಿಯ ಪಲ್ಲವರ ಮೇಲೆ ಎರಡನೆಯ ವಿಕ್ರಮಾದಿತ್ಯ ರಾಜನ ಅಮೋಘ ಜಯವನ್ನು ಆಚರಿಸುವ ಗೌರವಾರ್ಥವಾಗಿ ಅವನ ಮಡದಿಯಾದ ಲೋಕಮಹಾದೇವಿಯು 745 ರಲ್ಲಿ ವಿರೂಪಾಕ್ಷನ ಈ ದೇವಾಲಯ ನಿರ್ಮಿಸಿದಳೆಂಬ ಅಂಶವು ಇತಿಹಾಸದಿಂದ ತಿಳಿದುಬರುತ್ತದೆ.
ಅದ್ಭುತ ಐತಿಹಾಸಿಕ ಆಕರ್ಷಣೆಗಳ ಬಾಗಲಕೋಟೆ