ಮಳೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವೇ. ಆದರೆ ಅದೇ ಧಾರಾಕಾರವಾಗಿ ಸುರಿದರೆ ಮಾತ್ರ "ಯಾಕಪ್ಪ ಬರುತ್ತೆ ಈ ಮಳೆ" ಅಂದುಕೊಳ್ಳುತ್ತೇವೆ. ಆದರೆ ಯುವಕರಿಗೆ ಮಾತ್ರ ಸಾಹಸ ಚಟುವಟಿಕೆಗಳನ್ನು ಮಾಡಬೇಕು ಎಂದು ಸದಾ ಹತೊರೆಯುತ್ತಿರುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಏನೋ ಒಂದು ಬಗೆಯ ಲವಲವಿಕೆಗಳನ್ನು ಕಾಣಬಹುದು.
ಹಾಗಾಗಿ ಈ ಸಮಯದಲ್ಲಿಯೇ ಕೆಲವು ಟ್ರೆಕ್ಕಿಂಗ್ ಮಾಡುವ ತಾಣಕ್ಕೆ ತೆರಳಬೇಕು ಎಂದು ಯುವಕರು ಹಂಬಲಿಸುವುದುಂಟು. ಲೇಖನದಲ್ಲಿ ತಿಳಿಸಲಾಗುವ ಸ್ಥಳಗಳು ಮಳೆಗಾಲದ ಅವಧಿಯಲ್ಲಿ ಹಚ್ಚಹಸಿರಿನಿಂದ ಶೃಂಗಾರಗೊಂಡ ವಧುವಿನಂತೆ ಪ್ರಕೃತಿಯು ಕಾಣುತ್ತಾಳೆ. ಈ ಅವಧಿಯ ಟ್ರೆಕ್ಕಿಂಗ್ ನಿಮಗೆ ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭವವನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಬೇಡ.
ತಡಿಯಾನ್ಮೊಲ್
ಇದೊಂದು ಪ್ರಕೃತಿ ರಮಣೀಯತೆಯನ್ನು ಹೊಂದಿರುವ ತಾಣ. ಇದು ಸಮುದ್ರ ಮಟ್ಟದಿಂದ ಸರಿಸುಮಾರು 5700 ಅಡಿಗಳಷ್ಟು ಎತ್ತರದಲ್ಲಿದೆ. ಸುಪ್ರಸಿದ್ಧವಾದ ಕೂರ್ಗ್ನ ಆಹ್ಲಾದಕರವಾದ ವಾತಾವರಣ ಮತ್ತು ವಿಶಾಲವಾಗಿ ಹರಡಿಕೊಂಡಿರುವ ಹಚ್ಚ ಹಸಿರಿನ ಕಣಿವೆಗಳು ಎಂಥವರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಈ ತಾಣಕ್ಕೆ ಟ್ರೆಕ್ಕಿಂಗ್ ಪ್ರೇಮಿಗಳು ತೆರಳಬಹುದಾಗಿದೆ. ಮಳೆಗಾಲದ ಅವಧಿಯಲ್ಲಿ ಅದ್ಭುತವಾದ ಅನುಭವ ನೀಡುತ್ತದೆ ಈ ಸುಂದರವಾದ ತಾಣ.
ಕುಮಾರ ಪರ್ವತ
ಭಾರತ ದೇಶದ ಸ್ಕಾಟ್ಲೆಂಡ್ ಎಂದೇ ಖ್ಯಾತಿ ಹೊಂದಿರುವ ತಾಣ ಇದಾಗಿದೆ. ಇದು ಕೂರ್ಗ್ನಲ್ಲಿರುವ ಮತ್ತೊಂದು ಸುಂದರವಾದ ಚಾರಣ ತಾಣವು ಕುಮಾರ ಪರ್ವತ ಆಗಿರುತ್ತದೆ. ಸರಿಸುಮಾರು 5600 ಅಡಿಗಳಷ್ಟು ಎತ್ತರದಲ್ಲಿರುವ ಕುಮಾರ ಪರ್ವತವು ಕೂರ್ಗ್ನ 2 ನೇ ಅತ್ಯುನ್ನತ ಶಿಖರ ಕೂಡ ಆಗಿದೆ. ಪುಷ್ಪಗಿರಿ ವನ್ಯಧಾಮವು ಅತ್ಯುತ್ತಮವಾದ ತಾಣವೆಂದು ಗುರುತಿಸಿಕೊಂಡಿದೆ. ಮಳೆಗಾಲದ ಅವಧಿಯಲ್ಲಿ ಈ ತಾಣವು ಅತ್ಯಂತ ಸುಂದರವಾಗಿ ಕಾಣುವುದರಿಂದ ಅತಿ ಹೆಚ್ಚು ಯುವಕರು ಭೇಟಿ ನೀಡುತ್ತಾರೆ.
ಕೊಡಚಾದ್ರಿ
ಶಿವಮೊಗ್ಗಕ್ಕೆ ಸಮೀಪದಲ್ಲಿರುವ ಕೊಡಚಾದ್ರಿಯು ಅತ್ಯಂತ ಸುಂದರವಾದ ಪ್ರವಾಸಿ ತಾಣವಾಗಿದೆ. ಇದು ಕರ್ನಾಟಕ ರಾಜ್ಯದ 10 ನೇ ದೊಡ್ಡದಾದ ಶಿಖರವಾಗಿದೆ. ಸರಿಸುಮಾರು 4400 ಅಡಿಗಳಷ್ಟು ಎತ್ತರದಲ್ಲಿ ಅದ್ಭುತವಾದ ಕೊಡಚಾದ್ರಿ ಪರ್ವತ ಶಿಖರವಿದೆ. ದಟ್ಟವಾದ ಅರಣ್ಯ ಪ್ರದೇಶಗಳಿಂದ ಅವೃತ್ತವಾಗಿರುವ ಈ ಕೊಡಚಾದ್ರಿಯನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇದನ್ನು "ಪ್ರಾಕೃತಿಕ ಪಾರಂಪರಿಕ ತಾಣ"ವೆಂದು ಘೋಷಿಸಲ್ಪಟ್ಟಿದೆ.
ಮುಳ್ಳಯ್ಯನಗಿರಿ
ಚಿಕ್ಕಮಂಗಳೂರಿಗೆ ಸಮೀಪದಲ್ಲಿರುವ ಮುಳ್ಳಯ್ಯನಗಿರಿಯು ಕರ್ನಾಟಕ ರಾಜ್ಯದ ಅತ್ಯುನ್ನತವಾದ ಶಿಖರವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 6300 ಅಡಿಗಳಷ್ಟು ಎತ್ತರದಲ್ಲಿದೆ ಈ ಮುಳ್ಳಯ್ಯನಗಿರಿ. ಇಲ್ಲಿನ ಶಿಖರ ಅತ್ಯಂತ ಸುಂದರವಾದ ಪ್ರದೇಶವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಟ್ರೆಕ್ಕಿಂಗ್ ಮಾಡಲು ಬಯಸುವವರು ಈ ಮುಳ್ಳಯ್ಯನಗಿರಿಯ ಶಿಖರವನ್ನು ಕಂಡು ರೋಮಾಂಚನಕಾರಿ ಅನುಭೂತಿಯನ್ನು ಪಡೆಯಲು ಹತೊರೆಯುತ್ತಾರೆ. ಈ ಶಿಖರದ ಅರ್ಧಭಾಗದ ದೂರದವರೆಗೆ ಸಾರಿಗೆ ಸೌಕರ್ಯ ಕೂಡ ಇದೆ.
ಬ್ರಹ್ಮಗಿರಿ
ಬ್ರಹ್ಮಗಿರಿಗೆ ಕೈಗೊಳ್ಳಬಹುದಾದ ಚಾರಣವು ಬಹುತೇಕ ಸುಲಭವಾದ ಚಾರಣವೇ ಆಗಿದೆ. ಕರ್ನಾಟಕದಲ್ಲಿ ಮಳೆಗಾಲದ ಅವಧಿಯಲ್ಲಿ ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ ಎಂದ ಕೂಡಲೇ ಮೊದಲು ನೆನಪಾಗುವುದೇ ಬ್ರಹ್ಮಗಿರಿ. ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದ ವಯನಾಡ್ ಜಿಲ್ಲೆಗಳ ನಡುವೆ ಇರುವುದೇ ಈ ಅದ್ಭುತವಾದ ಬ್ರಹ್ಮಗಿರಿ.
ಸಮುದ್ರಮಟ್ಟದಿಂದ 5200 ಅಡಿಗಳಷ್ಟು ಎತ್ತರದಲ್ಲಿದೆ. ಸುಂದರವಾದ ಗುಹೆಗಳು, ಜಲಪಾತಗಳು ಮತ್ತು ಸಮೃದ್ಧವಾದ ಸಸ್ಯ ಹಾಗು ಪ್ರಾಣಿ ಸಂಕುಲಗಳು ಇವೆಲ್ಲಾ ಬ್ರಹ್ಮಗಿರಿಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪ್ರವಾಸಿಗರಿಗೆ ಈ ಅದ್ಭುತವಾಸ ಸ್ಥಳಗಳನ್ನು ಅಸ್ವಾಧಿಸಲು ಸಹಕರಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ.
ಕುದುರೆಮುಖ
ಕುದುರೆ ಮುಖ ನಮ್ಮ ಕರ್ನಾಟಕ ರಾಜ್ಯದ 3 ನೇ ಅತ್ಯುನ್ನತವಾದ ಶಿಖರವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 6200 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿನ ಸೌಂದರ್ಯವನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಕುದುರೆ ಮುಖವು ಒಂದು ನಿರ್ಧಿಷ್ಟವಾದ ಕೋನದಿಂದ ಸೂಕ್ಷ್ಮವಾಗಿ ಗಮನಿಸಿದರೆ ಕುದುರೆಯ ಮುಖವನ್ನು ಹೋಲುವಂತಯೇ ಇದೆ.
ಇದು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖದ ಚಾರಣ ಹಾದಿಯು ರಮಣೀಯವಾಗಿದ್ದು, ಜೀವವೈವಿಧ್ಯತೆಗಳ ಆಶ್ರಯ ತಾಣವಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗವಾಗಿರುವ ಬೆಟ್ಟ ಪ್ರದೇಶಗಳ ದಟ್ಟವಾದ ಅರಣ್ಯವನ್ನು ಹೊಂದಿದೆ. ಈ ಸುಂದರವಾದ ಪ್ರದೇಶಗಳಿಗೆ ಒಮ್ಮೆ ಈ ಮಳೆಗಾಲದ ಸಮಯದಲ್ಲಿ ಭೇಟಿ ನೀಡಿ ಬನ್ನಿ.