ಏಷ್ಯಾದಲ್ಲಿಯೇ ಅತಿದೊಡ್ಡ ಏಕಶಿಲಾ ಪರ್ವತ ಎಂಬ ಖ್ಯಾತಿ ಮಧುಗಿರಿ ಬೆಟ್ಟದ್ದು. ಈ ಬೆಟ್ಟದ ಸುತ್ತಲಿನ ಜಾಗ ಗಣಿಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಎತ್ತರದ ಬೆಟ್ಟ, ಪುರಾತನಕಾಲದ ಕಲ್ಲಿನ ಕೋಟೆ, ಸುತ್ತ ಇರುವ ಪರಿಸರದ ಆಕರ್ಷಣೆಯಿಂದಾಗಿ ಇದೊಂದು ಪ್ರವಾಸ ತಾಣ ಎನಿಸಿಕೊಂಡಿದೆ. ಮೈಸೂರು ರಾಜರ ಒಡೆತನದಲ್ಲಿದ್ದ ಸಿದ್ಧನಾಯಕನೆಂಬ ಸೈನಾಧಿಕಾರಿಯು ಈ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ. ಆ ಕಾಲದಲ್ಲಿ ನಿರ್ಮಿಸಿರುವ ಕೋಟೆಯನ್ನು ಇಂದು ಐತಿಹಾಸಿಕ ನೆನಪಿನ ಕಾಣಿಕೆಯಾಗಿ ಈ ಕೋಟೆಯನ್ನು ಕಾಣಬಹುದು. ಇತಿಹಾಸದ ವೈಭವ ಹಾಗೂ ಪರಿಸರದ ಸೌಂದರ್ಯದಲ್ಲಿ ಕಾಲ ಕಳೆಯಬೇಕೆಂದರೆ ಇಲ್ಲಿಗೆ ಬರಬಹುದು. ಬೆಂಗಳೂರಿಗೆ ಹತ್ತಿರವೇ ಇರುವ ಈ ತಾಣಕ್ಕೆ ಬರುವುದೇನು ಕಷ್ಟವಲ್ಲ.
1000 ಮೀ. ಎತ್ತರ ಹೊಂದಿರುವ ಈ ಬೆಟ್ಟ ಸಮುದ್ರಮಟ್ಟಕ್ಕಿಂತ 1200 ಅಡಿಗಿಂತಲೂ ಎತ್ತರದಲ್ಲಿದೆ. ಇಲ್ಲಿಯ ಬೆಟ್ಟ ಹತ್ತುತ್ತಿದ್ದಂತೆಯೇ ಕಣ್ಣಿಗೆ ಕಾಣುವ ಕೋಟೆ ಮನಸ್ಸಿನ ದಣಿವನ್ನು ನಿವಾರಿಸುತ್ತದೆ. ಅದ್ಭುತ ಮಧುಗಿರಿಯ ಕೋಟೆಯನ್ನು ಚಿತ್ರದ ಮೂಲಕ ಪರಿಚಯ ಮಾಡಿಕೊಳ್ಳೂಣ ಬನ್ನಿ...
ಕೋಟೆಯ ವಿಶೇಷ
ವಿಶಾಲವಾಗಿರುವ ಬಂಡೆಗಳ ರಾಶಿ, ಅಲ್ಲಲ್ಲಿ ಚಿಕ್ಕಪುಟ್ಟ ಗಿಡಗಳ ಪೊದೆ. ಕೋಟೆ ಏರಲು ಮೆಟ್ಟಿಲುಗಳ ಸಾಲು, ಕೋಟೆಯ ಮಧ್ಯದಲ್ಲಿಯೇ ಒಂದು ದಂಡಿನ ಮಾರಮ್ಮ ದೇವಿಯ ಗುಡಿಯಿದೆ. ದೇವರ ದರ್ಶನ ಪಡೆಯಲು ಅನೇಕ ಭಕ್ತಾಧಿಗಳು ಬರುತ್ತಾರೆ. ಸಾಮಾನ್ಯವಾಗಿ ಕೋಟೆಯೆಂದರೆ ರಕ್ಷಣೆಯ ವಿಚಾರದಿಂದ ಒಂದೇ ಬಾಗಿಲಿರುವುದನ್ನು ನೋಡಿರುತ್ತೇವೆ. ಆದರೆ ಈ ಅದ್ಭುತ ಕೋಟೆಗೆ ಎರಡು ಬಾಗಿಲಿರುವುದನ್ನು ಕಾಣಬಹುದು. ಕೋಟೆಯ ಎಡಭಾಗಕ್ಕೆ ಹೋದರೆ ಸಿದ್ದರ ಕಟ್ಟೆ ಎಂಬ ಒಂದು ಸಣ್ಣಕೆರೆ ಇದೆ. ಇದನ್ನು ಕೋಟೆಯ ಮೇಲೆ ನಿಂತು ನೋಡಿದರೂ ಕಾಣಬಹುದು.
ಕೋಟೆಯ ಸ್ಥಿತಿ
ಈ ಕೋಟೆ ಬಹಳ ಪುರಾತನ ಕಾಲದ್ದಾಗಿರುವುದರಿಂದ ಅಲ್ಲಲ್ಲಿ ಕಲ್ಲುಗಳು ಉದುರಿ ಬಿದ್ದಿರುವುದನ್ನು ಕಾಣಬಹುದು. ಕಿಡಿಗೇಡಿಗಳು ಕಲ್ಲಿನ ಮೇಲೆ ಮತ್ತು ಕೋಟೆಯ ಮೇಲೆ ಹೆಸರುಗಳನ್ನು ಕೊರೆದಿರುವುದು, ಇದರೊಟ್ಟಿಗೆ ನೈಸರ್ಗಿಕವಾಗಿಯೂ (ಮಳೆ-ಬಿಸಿಲು) ಸವೆದು ಹಾಳಾಗಿರುವುದನ್ನು ಅಲ್ಲಲ್ಲಿ ಕಾಣಬಹುದು.
ಮಧುಗಿರಿಯ ಸೌಂದರ್ಯ
ಮಧುಗಿರಿ ಬೆಟ್ಟದಲ್ಲಿ ವಿಶಾಲವಾದ ಬಂಡೆಗಳು ವಿಸ್ತಾರವಾಗಿ ಹರಡಿದೆ. ಅದರ ಮೇಲೆ ಏರುವುದು, ಸುತ್ತಲೂ ಇರುವ ಪರಿಸರದ ಛಾಯಾಚಿತ್ರಗಳನ್ನು ಸೆರೆ ಹಿಡಿಯಬಹುದು, ಏಕಾಂತದಲ್ಲಿ ಕುಳಿತುಕೊಂಡು ಕಲಾವಿದನಾಗಿ ಚಿತ್ರವನ್ನೂ ಬಿಡಿಸಬಹುದು. ಅಲ್ಲದೆ ಸ್ನೇಹಿತರೊಂದಿಗೆ ಬಂದು ಕಾಲಕಳೆಯಲೂ ಸಹ ಇದು ಸೂಕ್ತ ಜಾಗ.
ಹತ್ತಿರದ ಆಕರ್ಷಣೆ
ಕೋಟೆಯ ಹತ್ತಿರದಲ್ಲೇ ಆಯುರ್ವೇದ ಸಸ್ಯಗಳಿಗೆ ಪ್ರಸಿದ್ಧಿ ಪಡೆದ ಸಿದ್ಧರ ಬೆಟ್ಟವೂ ಇದೆ. ಅಲ್ಲದೆ ಮಧು ಗಿರಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಮೈದನ ಹಳ್ಳಿಯಲ್ಲಿ ಕೃಷ್ಣಮೃಗಗಳ ವನ್ಯಧಾಮಗಳಿವೆ. ಇದು ಕರ್ನಾಟಕದ ಅರಣ್ಯ ಇಲಾಖೆಯ ಅಧೀನದಲ್ಲಿದೆ.
ಹೀಗೆ ಬನ್ನಿ
ಬೆಂಗಳೂರಿನಿಂದ ತುಮಕೂರಿಗೆ 104 ಕಿ. ಮೀ. ದೂರ ಇದೆ. (ಬೆಂಗಳೂರು-ತುಮಕೂರು-ಮಧುಗಿರಿ) ಉತ್ತಮ ರಸ್ತೆಮಾರ್ಗ ಇರುವುದರಿಂದ 1-2 ತಾಸುಗಳಲ್ಲಿ ಕೋಟೆಗೆ ತಲುಪಬಹುದು.