ತೋರಣಮಲ್ ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುವ ಒಂದು ಚಿಕ್ಕ ಹಾಗೂ ಸುಂದರ ಗಿರಿಧಾಮವಾಗಿದೆ. ರಾಜ್ಯದ ನಂದುರ್ಬಾರ್ ಜಿಲ್ಲೆಯಲ್ಲಿರುವ ಈ ಸಣ್ಣ ಗಿರಿಧಾಮ ಸಮುದ್ರ ಮಟ್ಟದಿಂದ ಅಗಾಧ 1,150 ಮೀಟರ್ ಗಳಷ್ಟು ಎತ್ತರದಲ್ಲಿರುವ ಗಿರಿ ಪ್ರದೇಶವಾಗಿದ್ದು ಪ್ರಖ್ಯಾತ ಸಾತ್ಪುರ ಪರ್ವತ ಶ್ರೇಣಿಯಲ್ಲಿ ಬರುತ್ತದೆ.
ತೋರಣಮಲ್ ಮೂಲತಃ ಎಲೆಯ ಆಕಾರದಲ್ಲಿದ್ದು ಕೇವಲ 44 ಚ.ಕಿ.ಮೀ ವಿಸ್ತೀರ್ಣವನ್ನು ಮಾತ್ರವೆ ಹೊಂದಿದೆ. ಈ ಗಿರಿಧಾಮದ ಹೆಸರಿನ ಹಿನ್ನೆಲೆಯನ್ನು ಹುಡುಕ ಹೊರಟಾಗ ತಿಳಿಯುವ ವಿಷಯವೆಂದರೆ ಈ ಪ್ರದೇಶವು ತೋರಣ ಮರಗಳಿಂದ ತನ್ನ ಹೆಸರನ್ನು ಪಡೆಯಿತಂತೆ.
ಖಡಕಿ ವೀಕ್ಷಣಾ ಕೇಂದ್ರ, ಚಿತ್ರಕೃಪೆ: Angelo Correia
ದಂತಕಥೆಗಳ ಪ್ರಕಾರ, ತೋರಣಮಲ್ ನಲ್ಲಿ ಈ ಮರಗಳು ಯಥೇಚ್ಛವಾಗಿದ್ದಿದ್ದರಿಂದ, ಇಲ್ಲಿನ ಬುಡಕಟ್ಟು ಜನರು ಈ ಮರಗಳನ್ನು ಆರಾಧಿಸುತ್ತಿದ್ದರು ಹಾಗೂ ಈ ಮರಗಳು ಸಂತಾನದ ದೇವಿಯಾದ ತೋರಣ ದೇವಿಯ ಪ್ರತಿರೂಪವೆಂದೆ ಭಾವಿಸಿ ಶೃದ್ಧೆಯಿಂದ ಪೂಜಿಸತೊಡಗಿದರು.
ಇಲ್ಲಿರುವ ಆಕರ್ಷಣೆಗಳಲ್ಲಿ ಯಶವಂತ್ ಕೆರೆಯು ಪ್ರಮುಖ ಯಾತ್ರಾ ಸ್ಥಳವಾಗಿದೆ. ಇದಲ್ಲದೆ ಗೋರಕನಾಥ್ ಮತ್ತು ನಾಗಾರ್ಜುನ ದೇವಾಲಯಗಳು ಸೇರಿದಂತೆ ಹಲವಾರು ದೇವಾಲಯಗಳಿವೆ. ಮಾರ್ಚ್ ಅಥವಾ ಎಪ್ರಿಲ್ ಸಂದರ್ಭದಲ್ಲಿ ಬರುವ ಮಹಾಶಿವರಾತ್ರಿಯ ಸಂದರ್ಭದಲ್ಲಿ ಗೋರಕನಾಥ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಿರುತ್ತದೆ.
ಸೀತಾ ಖಾಯಿ, ಚಿತ್ರಕೃಪೆ: cool_spark
ದಿಗಂತದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸೀತಾ ಖಾಯಿ ಪಾಯಿಂಟ್ ಮತ್ತು ಕಡಕಿ ವೀಕ್ಷಣಾ ಕೇಂದ್ರಗಳು ಸಾಕಷ್ಟು ಅದ್ಭುತವಾಗಿದ್ದು ರೋಮಾಂಚನ ಉಂಟಾಗುವಂತೆ ಮಾಡುತ್ತವೆ. ಅಲ್ಲದೆ ಮಚೀಂದ್ರನಾಥ ಗುಹೆ ಇಲ್ಲಿ ನೋಡಲೇಬೇಕಾದ ಇನ್ನೊಂದು ಸುಂದರ ಪುರಾತನ ಆಕರ್ಷಣೆಯಾಗಿದೆ.
ತೋರಣಮಲ್ ಬೆಟ್ಟದ ತುದಿಯಲ್ಲಿ ನೆಲೆಸಿರುವ ಕಾರಣವಾಗಿ ವರ್ಷಪೂರ್ತಿ ಅತ್ಯಂತ ಅಹ್ಲಾದಕರವಾದ ಹವಾಗುಣದ ವರವನ್ನು ಪಡೆದಿದೆ. ಈ ಗಿರಿಧಾಮವು ಮಹಾರಾಷ್ಟ್ರದ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಯಾತ್ರಾ ಸ್ಥಳವು ದಿಢೀರ್ ಎಂದು ರಜೆ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.
ಮಹಾರಾಷ್ಟ್ರದ ಮೈನವಿರೇಳಿಸುವ ಗಿರಿಧಾಮಗಳು!
ತೋರಣಮಲ್ ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳಿಂದ ಸುತ್ತುವರೆದಿದ್ದು, ಇಡೀ ಮಹಾರಾಷ್ಟ್ರದಲ್ಲಿ ಎರಡನೆ 'ತಂಪಾದ' ಗಿರಿಧಾಮವೆಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ. ಈ ಯಾತ್ರಾಸ್ಥಳವು ಬಣ್ಣಿಸಲಸಾಧ್ಯವಾದ ಸುಂದರ ಕೆರೆಗಳನ್ನು, ವೀಕ್ಷಣಾ ಸ್ಥಳಗಳನ್ನು ಮತ್ತು ಯಾವುದೇ ಚಾರಣಿಗರು ಸವಾಲಾಗಿ ಸ್ವೀಕರಿಸುವ ಮತ್ತು ಸಂತಸ ಪಡಬಹುದಾದ ಅದ್ಭುತ ಸ್ಥಳಗಳು ಇಲ್ಲಿವೆ.
ಯಶವಂತ ಕೆರೆ, ಚಿತ್ರಕೃಪೆ: cool_spark
ತೋರಣಮಲ್ ಗೆ ಏಕೆ ಹೋಗಬೇಕು?
ತೋರಣಮಲ್ ನಂದರ್ಬಾರ್ ನಗರದಿಂದ 76 ಕಿ.ಮೀ ಶಹದ್ ನಗರದಿಂದ 55 ಕಿ.ಮೀ ಧುಳೆಯಿಂದ 90 ಕಿ.ಮೀ ಹಾಗೂ ಮುಂಬೈ ನಗರದಿಂದ 510 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಔರಂಗಾಬಾದ್ ನಲ್ಲಿರುವ ವಿಮಾನ ನಿಲ್ದಾಣ. ಇದು ಸುಮಾರು 290 ಕಿ.ಮೀ ಗಳಷ್ಟು ದೂರದಲ್ಲಿದೆ. ತಂಗಲು ಇಲ್ಲಿ ರಿಸಾರ್ಟುಗಳು, ಸರ್ಕಾರಿ ವಸತಿಗೃಹಗಳು ದೊರೆಯುತ್ತವೆ.