ಶ್ರೀಮಂತ ಇತಿಹಾಸ, ಕುತೂಹಲಕರ ಹಿನ್ನೆಲೆ, ರೋಮಾಂಚಕ ಪೌರಾಣಿಕತೆ ಹೊಂದಿರುವ ಭಾರತ ದೇಶವನ್ನು ಸುತ್ತುತ್ತಿರುವಾಗ ಅನೇಕ ಕೌತುಕಮಯ ಸಂಗತಿಗಳು, ವಿಷಯಗಳು, ಘಟನೆಗಳು ನಮ್ಮ ಅನುಭವಕ್ಕೆ ಬರುತ್ತಲೆ ಇರುತ್ತವೆ. ಇಂತಹ ಅಚ್ಚರಿಗಳಿಗೆ ಭಾರತದಲ್ಲೇನೂ ಕಮ್ಮಿ ಇಲ್ಲ.
ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ವಿಚಿತ್ರ ಅಚ್ಚರಿಯ ಕುರಿತು ತಿಳಿಸಲಾಗಿದೆ. ಬಹುತೇಕರಿಗೆ ಗೊತ್ತಿರುವಂತೆ ಕಲ್ಪವೃಕ್ಷವು ಹಿಂದುಗಳಲ್ಲಿ ಅಪಾರ ಪಾವಿತ್ರ್ಯತೆ ಪಡೆದಿರುವ ಮರವಾಗಿದೆ. ಬೇಡಿದ ಎಲ್ಲವನ್ನು ನೀಡುವುದು ಕಲ್ಪವೃಕ್ಷವಾಗಿದೆ. ಅಂದರೆ ಬದುಕಲು ಬೇಕಾದ ಮೂಲಭೂತ ಅನಿವಾರ್ಯತೆಗಳನ್ನು ನೀಡುವುದು ಕಲ್ಪವೃಕ್ಷದ ಸಿದ್ಧಾಂತ ಎಂದರೂ ತಪ್ಪಾಗಲಾರದು.
ಚಿತ್ರಕೃಪೆ: Faizhaider
ಅಂತಹ ಒಂದು ಕಲ್ಪವೃಕ್ಷವಾಗಿ ಕಿಂತೂರಿನ ಪಾರಿಜಾತ ವೃಕ್ಷವು ಸಾಕಷ್ಟು ಗಮನ ಸೆಳೆಯುತ್ತದೆ. ಮೂಲತಃ ಇದೊಂದು ಬಾವೋಬಾಬ್ ಮರವಾಗಿದೆ. ಬಾವೋಬಾಬ್ ಮರಗಳು ಅತ್ಯಂತ ವಿಶಾಲ ಹಾಗೂ ಅಗಲವಾದ ಕಾಂಡ ಹೊಂದಿರುವ ಮೇಲ್ಭಾಗದಲ್ಲಿ ಮೊನಚಾಗಿ ಬಾಟಲಿಯಂತಹ ಆಕಾರ ಹೊಂದಿರುವ ಮರಗಳಾಗಿವೆ.
ಇವು ಮೂಲತಃ ಆಫ್ರಿಕಾ ಖಂಡದಲ್ಲಿ ಕಂಡುಬರುತ್ತವೆ. ಆಹಾರ, ನೀರು ಹಾಗೂ ನೆರಳುಗಳಿಗೆ ಮೊದಲಿನಿಂದಲೂ ಆಫ್ರಿಕಾದ ಬುಡಕಟ್ಟು ಜನಾಂಗದವರ ನೆಚ್ಚಿನ ಮರವಾಗಿರುವುದರಿಂದ ಇದೊಂದು ಕಲ್ಪವೃಕ್ಷವೆ ಅನ್ನಬಹುದು. ಇಂತಹ ಒಂದು ಕಲ್ಪವೃಕ್ಷ ಮರ ಕಿಂತನೂರಿನಲ್ಲಿದೆ.
ಚಿತ್ರಕೃಪೆ: Faizhaider
ಅಲ್ಲದೆ ಅತ್ಯಂತ ಪುರಾತನವಾದ ಮರ ಇದಾಗಿದೆ ಎಂತಲೂ ಹೇಳಲಾಗಿದೆ. ಇದೆಷ್ಟು ಪುರಾತನವೆಂದರೆ ಕುಂತಿ ದೇವಿಯು ಈ ಪಾರಿಜಾತ ವೃಕ್ಷದಿಂದ ಕೀಳುತ್ತಿದ್ದ ಹೂವುಗಳಿಂದ ಶಿವನನ್ನು ಪೂಜಿಸುತ್ತಿದ್ದಳೆನ್ನಾಲಾಗಿದೆ. ಇದನ್ನು ಅರ್ಜುನನು ದೇವಲೋಕದಿಂದ ತಂದು ತನ್ನ ತಾಯಿ ಕುಂತಿ ದೇವಿಗೆ ನೀಡಿದ್ದನೆನ್ನಲಾಗುತ್ತದೆ.
ಇನ್ನೂ ಕೆಲವು ಕಥೆಗಳ ಪ್ರಕಾರ, ಕೃಷ್ಣನು ತನ್ನ ಪತ್ನಿಗೆ ಕಾಣಿಕೆಯಾಗಿ ಈ ವೃಕ್ಷವನ್ನು ಆಫ್ರಿಕಾ ಖಂಡದಿಂದ ತಂದಿದ್ದನೆನ್ನಲಾಗಿದೆ. ಕಥೆ ಏನೆ ಇರಲಿ, ಆದರೆ ಈ ರೀತಿಯ ವೃಕ್ಷಗಳು ಭಾರತದ ಮಟ್ಟಿಗೆ ಅಪರೂಪದಲ್ಲಿ ಅಪರೂಪ ಎಂತಲೆ ಹೇಳಬಹುದು. ಕೇವಲ ಬೆರಳೆಣಿಕಯಷ್ಟು ಮಾತ್ರ ಈ ರೀತಿಯ ವಿಶೇಷ ಬಾವೋಬಾಬ್ ಮರಗಳನ್ನು ಭಾರತದಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Faizhaider
ಕಿಂತೂರು, ಉತ್ತರ ಪ್ರದೇಶ ರಾಜ್ಯದ ಬಾರಾಬಂಕಿ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿಯಾಗಿದೆ. ಬಾರಾಬಂಕಿ ನಗರದಿಂದ 38 ಕಿ.ಮೀ ಗಳಷ್ಟು ದೂರದಲ್ಲಿರುವ ಕಿಂತೂರು ಕುಂತಿಯೊಂದಿಗೆ ನಂಟನ್ನು ಹೊಂದಿರುವ ವಿಶೇಷ ಸ್ಥಳವಾಗಿದೆ. ಸ್ಥಳೀಯವಾಗಿ ಹೇಳಲಗುವಂತೆ ಕುಂತಿಯು ಕಟ್ಟಿಸಿದ ದೇವಾಲಯವೊಂದರ ಬಳಿ ಈ ವೃಕ್ಷವನ್ನು ಕಾಣಬಹುದಾಗಿದೆ. ಕುಂತಿಯ ಅಸ್ಥಿಗಳಿಂದ ಈ ಮರ ಸಾವಿರಾರು ವರ್ಷಗಳಿಂದ ಹಾಗೆಯೆ ಇದೆ ಎನ್ನಲಾಗುತ್ತದೆ.
ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!
ಹರಿವಂಶ ಪುರಾಣದ ಪ್ರಕಾರ, ಪಾರಿಜಾತ ಗಿಡವನ್ನು ಕಲ್ಪವೃಕ್ಷ ಎಂದು ವಿವರಿಸಲಾಗಿದೆ. ಹಾಗಾಗಿ ಇದೂ ಸಹ ಪಾರಿಜಾತ ಗಿಡವಾಗಿರುವುದರಿಂದ ಇದನ್ನು ಕಲ್ಪವೃಕ್ಷ ಎಂದೆ ಪೂಜಿಸಲಾಗುತ್ತದೆ. ವಿಶೇಷವಾಗಿ ಮದುವೆಯಾದ ನವದಂಪತಿಗಳು ಈ ವೃಕ್ಷವನ್ನು ಹೆಚ್ಚು ಆರಾಧಿಸುತ್ತರೆ. ಅಲ್ಲದೆ ಪ್ರತಿ ಮಂಗಳವಾರ ವೃಕ್ಷದ ಗೌರವಾರ್ಥವಾಗಿ ಇಲ್ಲಿ ಜಾತ್ರೆ ಏರ್ಪಡಿಸಲಾಗುತ್ತದೆ.