ಇದು ನಾಗರಾಜ ಸ್ವಾಮಿಗೆ ಮುಡಿಪಾದ ಸುಂದರ ದೇವಾಲಯ. ಕೇವಲ ನಾಗರಾಜನಷ್ಟೆ ಅಲ್ಲ, ದಂತಕಥೆಯ ಪ್ರಕಾರವಾಗಿ ಇಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನೆಲೆಸಿದ್ದಾರೆ. ಹೀಗೆ ತ್ರಿಮೂರ್ತಿಗಳ ನೆಲೆಯಿಂದ ಪಾವಿತ್ರ್ಯತೆ ಪಡೆದಿರುವ ಹಾಗೂ ನಾಗ ದೇವತೆ ಅನಂತನ ಪ್ರಭಾವದಿಂದಾಗಿ ಈ ದೇವಾಲಯ ಸಾಕಷ್ಟು ಜಾಗೃತವಾಗಿದೆ ಎನ್ನಲಾಗುತ್ತದೆ.
ದೇಶದಲ್ಲಿರುವ ಪ್ರಖ್ಯಾತ ಸರ್ಪದೋಷ ಪರಿಹಾರ ಕ್ಷೇತ್ರಗಳು
ಸರ್ಪಬಲಿ, ನಾಗಪ್ರತಿಷ್ಠಾ, ರಾಹು ದೋಷ ಹಾಗೂ ಸರ್ಪ ದೋಷಗಳಿಗೆ ಪರಿಹಾರಾರ್ಥವಾಗಿ ಇಲ್ಲಿ ನಡೆಯುವ ಪೂಜೆಗಳು ಸಾಕಷ್ಟು ಹೆಸರುವಾಸಿಯಾಗಿದ್ದು ಅಪಾರ ಪ್ರಮಾಣದಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇನ್ನೊಂದು ವಿಚಾರವೆಂದರೆ ಈ ದೇವಾಲಯವು ದಟ್ಟವಾದ ಹಸಿರಿನಿಂದ ಕೂಡಿದ ವನರಾಶಿಯ ವ್ಯಾಪ್ತಿಯಲ್ಲಿ ಹರಡಿದ್ದು ಈ ಸ್ಥಳವು ಸಾಕಷ್ಟು ಸಂಖ್ಯೆಯಲ್ಲಿರುವ ಸರ್ಪಗಳಿಗೆ ಆಶ್ರಯ ತಾಣವಾಗಿದೆ.
ಚಿತ್ರಕೃಪೆ: Bharanikavubhagavatytemple
ದೇವಾಲಯಕ್ಕಿರುವ ಹಿನ್ನಿಲೆಯಂತೆ ಹಿಂದೆ ಪರಶುರಾಮರು ಕ್ಷತ್ರೀಯ ರಾಜರುಗಳನ್ನು ಸಂಹರಿಸಿ ಅವರಿಂದ ವಶಪಡಿಸಿಕೊಂಡ ಭೂಮಿಯನ್ನು ಕಶ್ಯಪ ಮುನಿಗಳಿಗೆಂದು ನೀಡಿದರು. ಆದರೆ ಆ ಭೂಮಿಯು ಯೋಗ್ಯವಾಗಿಲ್ಲದ ಕಾರಣ ನಿಷ್ಪ್ರಯೋಜಕವಾಯಿತು. ಹೀಗಿರುವಾಗ ಪರಶುರಾಮರು ಸಮುದ್ರ ದೇವತೆಗೆ ಪ್ರಾರ್ಥಿಸಿ ಸಮುದ್ರದಲ್ಲಿ ಬೀಸಿದ ತಮ್ಮ ಕೊಡಲಿ ಬೀಳುವ ಸ್ಥಳದಷ್ಟು ಭೂಮಿಯನ್ನು ಪಡೆದರು.
ಇಂದು ಆ ಭೂಮಿಯೆ ಕೇರಳ ರಾಜ್ಯವೆಂದು ಹೇಳಲಾಗುತ್ತದೆ ಹಾಗೂ ಈ ರೀತಿಯಾಗಿ ಪಡೆದ ಭೂಮಿಯು ಲವಣಯುಕ್ತವಾಗಿದ್ದರಿಂದ ಫಲವತ್ತತೆಯಿರಲಿಲ್ಲ. ಇದರಿಂದ ಮತ್ತೆ ಬೇಸರಗೊಂಡ ಪರಶುರಾಮರು ಗಂಧಮದನ ಪರ್ವತದಲ್ಲಿ ಮತ್ತೆ ತಪಸ್ಸಿಗೆ ಕುಳಿತರು. ಅವರ ತಪಸ್ಸಿನಿಂದ ಸಂತಸಗೊಂಡ ಸರ್ಪ ದೇವತೆ ಅನಂತವು ಪ್ರತ್ಯಕ್ಷನಾಗಿ ಬೇಕಾದ ವರ ಕೇಳಲು ಹೇಳಿತು.
ಚಿತ್ರಕೃಪೆ: Dvellakat
ವಸ್ತುಸ್ಥಿತಿಯನ್ನು ವಿವರಿಸಿದ ಪರಶುರಾಮರು ಭೂಮಿ ಮತ್ತೆ ಫಲವತ್ತಾಗುವಂತೆ ಹರಸು ಎಂದರು. ಆ ವರವನ್ನು ಕರುಣಿಸಿದ ಅನಂತ ಎಲ್ಲ ಸರ್ಪಗಳಿಗೆ ಭೂಮಿಯ ಒಳಗಿರುವ ವಿಷಯುಕ್ತ ಪದಾರ್ಥಗಳನ್ನು ಹೀರಿಕೊಳ್ಳುವಂತೆ ಆದೇಶಿಸಿತು. ಅಂತೆಯೆ ಎಲ್ಲ ಸರ್ಪಗಳು ಹಾಗೆಯೆ ಮಾಡಿ ಭೂಮಿ ಫಲವತ್ತಾಗುವಂತೆ ಮಾಡಿದವು.
ಇದರಿಂದ ಸಂತಸಗೊಂಡ ಪರಶುರಾಮರು ಅನಂತನಿಗೆ ಮುಡಿಪಾಗಿ ಸ್ವಲ್ಪ ಸ್ಥಳವನ್ನು ಕಾಯ್ದಿರಿಸಿ ದೇವಾಲಯವೊಂದನ್ನು ನಿರ್ಮಿಸಿದರು. ಈ ಸಂದರ್ಭದಲ್ಲಿ ವಿಷ್ಣು ಈ ಪ್ರಸಂಗ ಅನುಗ್ರಹಿಸಿದರೆ, ಬ್ರಹ್ಮನು ಮುಹೂರ್ತ ಅವಧಿಯನ್ನು ದಾಖಲಿಸಿದನು ಹಾಗೂ ಶಿವನು ದಕ್ಷಿಣೆಯನ್ನು ಸ್ವೀಕರಿಸಿದನು. ಹೀಗಾಗಿ ಇಲ್ಲಿ ತ್ರಿಮೂರ್ತಿಗಳ ವಾಸವಿದ್ದು ನಾಗರಾಜನ ಅಪಾರ ಶಕ್ತಿಯಿದೆ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Manoj K
ಇದಕ್ಕೆ ಪೂರಕವೆಂಬಂತೆ ಈ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿರುವ ಹಾವುಗಳನ್ನು ಕಾಣಬಹುದು. ಆ ಪ್ರಕಾರವಾಗಿ ಈ ನೆಲದಲ್ಲಿ ನಾಗರಾಜನ ಮೊದಲ ಸ್ಥಳ ಇದಾಗಿದ್ದರಿಂದ ಇದನ್ನು ಆದಿಮೂಲ ಎಂತಲೂ ಸಹ ಕರೆಯುತ್ತಾರೆ. ನಿಸರ್ಗಪ್ರಿಯರಿಗೆ ಇಷ್ಟವಾಗುವ ಪ್ರಕೃತಿ ಸೌಂದರ್ಯ ಇಲ್ಲಿದೆ. ಇನ್ನೂ ಪಕ್ಷಿ ವೀಕ್ಷಕರೂ ಸಹ ಇಷ್ಟ ಪಡುವಂತಹ ಸ್ಥಳ ಇದಾಗಿದ್ದು ಇಲ್ಲಿ ವೈವಿಧ್ಯಮಯ ಪಕ್ಷಿಗಳನ್ನು ವಿಕ್ಷೀಸಬಹುದಾಗಿದೆ.
ಶೇಷನಾಗ್ ಸರೋವರ ನೋಡಿದ್ದೀರಾ?
ಅಷ್ಟಕ್ಕೂ ಈ ದೇವಾಲಯವಿರುವುದು ಕೇರಳ ರಾಜ್ಯದಲ್ಲಿ. ಕೇರಳದ ಅಲಪುಳ (ಅಲ್ಲೆಪ್ಪಿ) ಜಿಲ್ಲೆಯ ಪಲ್ಲಿಕ್ಕಲ್ ವ್ಯಾಪ್ತಿಯಲ್ಲಿರುವ ವೆಟ್ಟಿಕೋಡ್ ಎಂಬ ಸ್ಥಳದಲ್ಲಿ ನಾಗರಾಜನ ಈ ದೇವಾಲಯವಿದೆ. ಕಾಯಂಕುಲಂ, ಮಾವೇಲಿಕ್ಕರ ಇದಕ್ಕೆ ಹತ್ತಿರವಿರುವ ರೈಲು ನಿಲ್ದಾಣವಿರುವ ಪಟ್ಟಣಗಳು. ಪುನಲೂರು-ಕಾಯಂಕುಲಂ ರಸ್ತೆ ಮಾರ್ಗದಲ್ಲಿ ಈ ಸ್ಥಳ ಬರುತ್ತದೆ.