ಹಿಂದೆ ಭರತ ಖಂಡದಲ್ಲಿದ್ದ ಋಷಿ-ಮುನಿಗಳು ನಿರಂತರ ಧ್ಯಾನ ಹಾಗೂ ತಪಸ್ಸುಗಳಿಂದ ಸಾಕಷ್ಟು ಸಿದ್ಧಿಗಳನ್ನು ಸಂಪಾದಿಸಿದ್ದರು. ಕಣ್ಣಿಗೆ ಕಾಣದ ಶಕ್ತಿಯನ್ನು ನಿಖರವಾಗಿ ಬಲ್ಲವರಾಗಿದ್ದರು. ಈ ಶಕ್ತಿಗಳು ಸಾಮಾನ್ಯ ಮನುಷ್ಯನ ದೃಷ್ಟಿಗೆ ಎಂದೂ ಕಾಣಲಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ಇಂತಹ ಶಕ್ತಿಗಳಿಂದ ಅವರು ಲೋಕ ಕಲ್ಯಾಣ ಮಾಡಬಯಸವರಾಗಿದ್ದರು.
ಅಂತೆಯೆ ದೈವವನ್ನು ಒಲಿಸಿಕೊಳ್ಳುವ ಅದೆಷ್ಟೊ ಮೂಲ ಮಂತ್ರಗಳಾಗಲಿ ಅಥವಾ ಬೀಜ ಮಂತ್ರಗಳನ್ನಾಗಲಿ ಇಂದು ಅವರು ಮನುಷ್ಯ ಜಾತಿಗೆ ಬಿಟ್ಟು ಹೋಗಿದ್ದಾರೆ. ದೈವದಲ್ಲಿ ನಂಬಿಕೆಯುಳ್ಳವರ ಪ್ರಕಾರ ಇಂತಹ ಬೀಜ ಮಂತ್ರಗಳು ಸಾಮಾನ್ಯವಾದುದಲ್ಲ. ನಂಬಿಕೆ ಹಾಗೂ ಅಚಲ ವಿಶ್ವಾಸದಿಂದ ಪಠಿಸುವವರಿಗೆ ಅತಿ ಶೀಘ್ರದಲ್ಲಿ ಫಲಿತಾಂಶಗಳನ್ನು ನೀಡುತ್ತದೆ.
ಶಕ್ತಿಶಾಲಿ
ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಮೂಲ ಮಂತ್ರವನ್ನು ಹೊಂದಿರುವ ನದಿಯ ತಟದಲ್ಲಿ ನೆಲೆಸಿರುವ ಶಕ್ತಿಶಾಲಿ ದೇವಾಲಯವೊಂದರ ಕುರಿತು ತಿಳಿಸಲಾಗಿದೆ. ಈ ದೇವಾಲಯವು ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ವರ್ಷಗಳಷ್ಟು ಪ್ರಾಚೀನವಾದುದೆಂದು ಹೇಳಲಾಗುತ್ತದೆ. ಆದಾಗ್ಯೂ ಪ್ರಸ್ತುತ ರಚನೆಯನ್ನು ನೋಡಿದಾಗ ಸುಮಾರು 200-300 ವರ್ಷಗಳ ಹಿಂದೆ ಇದನ್ನು ನವೀಕರಣಗೊಳಿಸಲಾಗಿದೆ ಎಂದು ಹೇಳಬಹುದು.
ಕಷ್ಟಗಳು ಮಾಯ
ಈ ದೇವಾಲಯಕ್ಕೆ ಬಂದು ಮೂಲಮಂತ್ರವನ್ನು ಜಪಿಸಿ ಭಕ್ತಿಯಿಂದ ಸ್ವಾಮಿಯನ್ನು ಬೇಡಿದವರ ಸಕಲ ಕಷ್ಟಗಳು ನಿವಾರಣೆಯಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇಂದಿಗೂ ಈ ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿ ಒಳಿತು ಕಂಡಿದ್ದಾರೆ ಹಾಗೂ ಕಾಣುತ್ತಲೂ ಇದ್ದಾರೆ.
ಹೊಲಗದ್ದೆಗಳು
ಈ ದೇವಾಲಯದ ಸುತ್ತಲೂ ಹೊಲಗದ್ದೆಗಳು ಆವರಿಸಿದ್ದು ಪ್ರವೇಶದ್ವಾರದ ಎದುರುಬದಿಯಲ್ಲಿ ನೀರಿನ ಹರಿವೊಂದು ಇರುವುದನ್ನು ಕಾಣಬಹುದು. ಆ ನದಿಯೆ ಕಣ್ವ ನದಿ ಎಂದು ಹೇಳಲಾಗುತ್ತದೆ. ಪ್ರಸ್ತುತ ಇಲ್ಲಿ ನೀರು ಇಲ್ಲವಾದರೂ ಹಿಂದೆ ಇಲ್ಲಿ ನದಿ ಹರಿದಿದ್ದರ ಸಂಕೇತವನ್ನು ನೋಡಬಹುದು.
ಲಕ್ಷ್ಮಿ ಸಮೇತನಾಗಿ
ಈ ಶಕ್ತಿಶಾಲಿ ದೇವಾಲಯವನ್ನು ನದಿ ನರಸಿಂಹಸ್ವಾಮಿ ದೇವಾಲಯ ಎಂದು ಕರೆಯುತ್ತಾರೆ. ಲಕ್ಷ್ಮಿ ಸಮೇತನಾಗಿ ಇಲ್ಲಿ ನರಸಿಂಹಸ್ವಾಮಿ ನೆಲೆಸಿರುವುದರಿಂದ ಲಕ್ಷ್ಮೀನರಸಿಂಹ ದೇವಾಲಯ ಎಂತಲೂ ಇದು ಕರೆಯಲ್ಪಡುತ್ತದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ನರಸಿಂಹ ಸ್ವಾಮಿಯ ಮೂಲ ಮಂತ್ರವೊಂದಿದ್ದು ಅದನ್ನು ಭಕ್ತಿಯಿಂದ ಪಠಿಸಿದರೆ ಸಕಲ ಕಾರ್ಯಗಳಲ್ಲಿ ಯಶಸ್ಸು ಶತಸಿದ್ಧ ಎಂದು ಹೇಳಲಾಗುತ್ತದೆ.
ಪಾರ್ಥಿಸಿ
ನದಿ ನರಸಿಂಹಸ್ವಾಮಿಯ ದೇವಾಲಯದ ಮೂಲ ಮಂತ್ರವು ಈ ಕೆಳಗಿನಂತಿದೆ. ಇದನ್ನು ಸಾಮಾನ್ಯವಾಗಿ 48 ಇಲ್ಲವೆ 108 ಬಾರಿ ಜಪಿಸುತ್ತ ದೇವಾಲಯದ ಪ್ರದಕ್ಷಿಣೆ ಹಾಕಿದರೆ ಮನಸ್ಸಿನ ಎಲ್ಲ ಗಾಯಗಳು ನಿವಾರಣೆಯಾಗುವುದಲ್ಲದೆ ಹೊಸ ಜೀವನ ನಡೆಸಲು ಶಕ್ತಿ, ಸಾಮರ್ಥ್ಯ ಹಾಗೂ ಹೊಸ ದಾರಿಗಳು ಸಿಗುತ್ತವೆ ಎಂಬ ಅಚಲವಾದ ನಂಬಿಕೆಯಿದೆ.
ಉಗ್ರಂ ವೀರಂ ಮಹಾವಿಷ್ಣುಂ
ಜ್ವಲಂತಂ ಸರ್ವತೋಮುಖಂ ನರಸಿಂಹಂ
ಭೀಷಣ ಭದ್ರಂ ಮೃತ್ಯೋಃ ಮೃತ್ಯು ನಮಾಮ್ಯಹಂ
ರಾಮನಗರ
ನದಿ ನರಸಿಂಹಸ್ವಾಮಿಯ ದೇವಾಲಯವು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡ ಮಳೂರು ಗ್ರಾಮದಲ್ಲಿದೆ. ದೊಡ್ಡ ಮಳೂರು, ಮೊದಲೆ ಅಪ್ರಮೇಯಸ್ವಾಮಿ ಹಾಗೂ ನವನೀತ ಅಂಬೆಗಾಲು ಕೃಷ್ಣನ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಈ ಕೃಷ್ಣನ ದೇವಾಲಯಕ್ಕೆ ತೆರಳಲು ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಮೈಸೂರಿನೆಡೆಗೆ ಸಾಗುವಾಗ ಚೆನ್ನಪಟ್ಟಣದ ನಂತರ ಎರಡು ಕಿ.ಮೀ ದೂರದಲ್ಲಿ ಎಡಕ್ಕೆ ಸ್ವಾಗತ ಕಮಾನುವೊಂದು ಕಾಣಸಿಗುತ್ತದೆ.
ಸ್ವಾಗತ ಕಮಾನು
ಆ ಸ್ವಾಗತ ಕಮಾನಿನ ಎದುರಿಗೆ ಇನ್ನೊಂದು ಮಣ್ಣಿನ ರಸ್ತೆಯಿದ್ದು (ಅಂದರೆ ಬೆಂಗಳೂರು-ಮೈಸೂರು ರಸ್ತೆಯ ಬಲಭಾಗಕ್ಕೆ) ಅದರ ಮೂಲಕ ನೇರವಾಗಿ ಸಾಗುತ್ತ ಸುಮಾರು ಎರಡು ಕಿ.ಮೀ ಮತ್ತೆ ಸಾಗಿದರೆ ನಿಮಗೆ ನದಿ ನರಸಿಂಹಸ್ವಾಮಿಯೆ ದೇವಾಲಯ ಸಿಗುತ್ತದೆ. ಅಷ್ಟಕ್ಕೂ ಸಾಗುವಾಗ ಬಲಬದಿಗೆ ತಿರುಗಿ ದೇವಾಲಯದ ಮಾರ್ಗ ಸೂಚಿಸುವ ನಾಮ ಫಲಕವೂ ಕಂಡುಬರುತ್ತದೆ. ಇಲ್ಲಿಂದ ನೇರ ಸಾಗಬೇಕು.
ದೊಡ್ಡ ಮಳೂರಿನ ಅಂಬೆಗಾಲು ಕೃಷ್ಣ!
ರೈಲ್ವೆ ಕ್ರಾಸ್
ಈ ಮಣ್ಣಿನ ರಸ್ತೆಯಲ್ಲಿ ಸಾಗುವಾಗ ಪ್ರಾಚೀನ ಕಲ್ಯಾಣಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಒಂದು ಚಿಕ್ಕ ದೇವಾಲಯ ಕಾಣುತ್ತದೆ ಹಾಗೂ ನಂತರದಲ್ಲಿ ರೈಲ್ವೇ ಕ್ರಾಸಿಂಗ್ ಇದ್ದು ಅದನ್ನು ದಾಟಿ ಮುಂದೆ ಸಾಗಿದಲ್ಲಿ ನಿಮ್ಮ ಎಡಕ್ಕೆ ಗದ್ದೆ ಚೆಲ್ಲಮ್ಮ ಎಂಬ ದೇವಿಯ ಒಂದು ವಿಶೇಷ ದೇವಾಲಯವು ಸಿಗುತ್ತದೆ. ಸುತ್ತಲಿನ ಪರಿಸರವು ಹೊಲ ಗದ್ದೆಗಳ ಹಸಿರಿನಿಂದ ಕಂಗೊಳಿಸುವುದನ್ನು ಕಾಣಬಹುದು.
ಸಿಗುತ್ತದೆ
ಹೀಗೆ ಸ್ವಲ್ಪ ಮುಂದೆ ಸಾಗಿ ನದಿ ನರಸಿಂಹಸ್ವಾಮಿ ದೇವಾಲಯಕ್ಕೆ ದಾರಿ, ಇರುವ ನಾಮ ಫಲಕದ ಬಳಿ ಬಲಕ್ಕೆ ತಿರುಗಿ ಇನ್ನೂ ಸ್ವಲ್ಪ ದೂರ ಕ್ರಮಿಸಿದರೆ ಸಾಕು, ನಿಮಗೆ ದೇವಾಲಯದ ದರ್ಶನವಾಗಿಯೆ ಬಿಡುತ್ತದೆ. ನೀವೇನಾದರೂ ಅಂಬೆಗಾಲು ಕೃಷ್ಣನ ದೇವಾಲಯಕ್ಕೆ ಭೇಟಿ ನೀಡುವ ಯೋಚನೆಯಲ್ಲಿದ್ದರೆ ಈ ದೇವಾಲಯಕ್ಕೂ ಭೇಟಿ ನೀಡಿ. ನಿಮ್ಮ ಪ್ರವಾಸ ಸಾಕಷ್ಟು ಅರ್ಥಪೂರ್ಣವಾಗಬಹುದು.