ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ದಿಗ್ಗಜ ಕವಿಗಳ ಪೈಕಿ ಒಂದಾದ ನಮ್ಮ ಅಂಬಿಕಾತನಯದತ್ತ ಅರ್ಥಾತ್ ದ.ರಾ ಬೇಂದ್ರೆಯವರಿಂದ ರಚಿತ "ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ" ಹಾಡು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಪ್ರತಿ ಹೊಸ ವರ್ಷದ ಸ್ವಾಗತಕೆ ಈ ಕವಿತೆಯು ನಿರಂತರವಾಗಿ ಕಳೆಗಟ್ಟುತ್ತಿರುತ್ತದೆ.
ಹೌದು, ಯುಗಾದಿ ಹಬ್ಬದ ವಿಶೇಷತೆಯೆ ಅದು. ಕರ್ನಾಟಕ, ತೆಲ್ಂಗಾಣ, ಮಹಾರಾಷ್ಟ್ರ, ಕೊಂಕಣ ಗೋವಾ ಹಾಗೂ ಆಂಧ್ರಪ್ರದೇಶದಲ್ಲಿ ಯುಗಾದಿ ಹಬ್ಬವು ಹೊಸ ವರ್ಷದ ಸ್ವಾಗತ ಕೋರಿ ಸಂಭ್ರಮಿಸುವ ಸಡಗರದ ಹಬ್ಬವಾಗಿದೆ. ಮಹಾರಾಷ್ಟ್ರದಲ್ಲಿ "ಗುಡಿ ಪಾಡ್ವಾ" ಎಂದು ಆಚರಿಸಲ್ಪಡುವ ಈ ಹಬ್ಬವು ಕಾನಡ, ಕೊಂಕಣ, ಮರಾಠಿ ಹಾಗೂ ತೆಲುಗು ಭಾಷಿಕರ ಹೊಸ ವರ್ಷದ ಮೊದಲ ದಿನವಾಗಿ ಆಚರಿಸಲ್ಪಡುತ್ತದೆ.
ನಿಮಗಿಷ್ಟವಾಗಬಹುದಾದ : ಸಡಗರದ ಬಣ್ಣದ ಹಬ್ಬ ಆಚರಿಸುವ ಸ್ಥಳಗಳು
ಈ ಯುಗಾದಿ ಹಬ್ಬದ ಸಂದರ್ಭದಲ್ಲಿ ಬೇವು, ಬೆಲ್ಲ, ಮಾವು, ಉಪ್ಪು ಮಿಶ್ರಿತ ವಿಶೇಷ ಖಾದ್ಯ ತಯಾರಿಸಿ ತಿಂದು ಜೀವನದಲ್ಲಿ ಕಷ್ಟ, ಸುಖಗಳು ಯಾವಾಗಲೂ ಬರುತ್ತಿರುತ್ತವೆಂದೂ ಅವುಗಳನ್ನು ಸಮವಾಗಿ ಸ್ವೀಕರಿಸಿ ಬದುಕು ಬದುಕಬೇಕೆಂದು ಸಾಂಕೇತಿಕವಾಗಿ ಹೇಳುತ್ತದೆ.
ಅದರಂತೆ, ಯುಗಾದಿ ಹಬ್ಬವು ಕೆಲವು ದೇವಸ್ಥಾನಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ ಹಾಗೂ ಈ ಸಂದರ್ಭದಲ್ಲಿ ಆ ಹಬ್ಬವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲೆಂದು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಪ್ರಸ್ತುತ ಲೇಖನದ ಮೂಲಕ ಯುಗಾದಿ ವಿಶೇಷ ಆ ದೇವಸ್ಥಾಗಳು ಯಾವುವೆಂದು ಹಾಗೂ ಅದರ ಹಿನ್ನಿಲೆ ಕುರಿತು ತಿಳಿಯಿರಿ, ಸಾಧ್ಯವಾದರೆ ಭೇಟಿ ನೀಡಿ.
ಯುಗಾದಿ ವಿಶೇಷ ದೇವಾಲಯಗಳು:
ದೇವುನಿ ಕಡಪ : ಆಂಧ್ರದ ಕಡಪ ನಗರದ ಭಾಗವಾಗಿರುವ ಐತಿಹಾಸಿಕ ದೇವುನಿ ಕಡಪದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥನದಲ್ಲಿ ಯುಗಾದಿಯ ಸಂದರ್ಭದಂದು ವಿಶೇಷವನ್ನೆ ಕಾಣಬಹುದು. ಈ ಒಂದು ದಿನ ನಗರದಲ್ಲಿರುವ ಹಾಗೂ ಪಕ್ಕದ ಚಿತ್ತೂರಿನಿಂದ ನೂರಾರು ಸಂಖ್ಯೆಯಲ್ಲಿ ಮುಸ್ಲಿಮ್ ಬಾಂಧವರು ಈ ದೇವಾಲಯಕ್ಕೆ ಭೇಟಿ ನೀಡಿ ಬಾಲಾಜಿಯ ದರ್ಶನ ಪಡೆಯುತ್ತಾರೆ. ಈ ಒಂದು ದಿನದಂದು ಬಾಲಾಜಿ ದರ್ಶನ ಮಾಡಿ ಆಶೀರ್ವಾದ ಪಡೆದರೆ ವರ್ಷವೆಲ್ಲ ಯಾವುದೆ ರೀತಿಯ ತೊಂದರೆಗಳು ಉಂಟಾಗುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ. ಇನ್ನೊಂದು ನಂಬಿಕೆಯಂತೆ ಈ ದೇವಸ್ಥಾನವು ಮೊದಲ ಮೆಟ್ಟಿಲಾಗಿದ್ದು ತಿರುಮಲಕ್ಕೆ ಹೋಗುವವರು ಇಲ್ಲಿಗೆ ಬಂದು ಮೊದಲ ದರ್ಶನ ಪಡೆದು ನಂತರ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ವಾಡಿಕೆಯಿದೆ.
ಚಿತ್ರಕೃಪೆ: Ritchiesudarshan
ಯುಗಾದಿ ವಿಶೇಷ ದೇವಾಲಯಗಳು:
ಶ್ರೀ ಕಾಳಿಕಾ ದೇವಿ ದೇವಸ್ಥಾನ : ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸೌದತ್ತಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶಿರಸಂಗಿ ಗ್ರಾಮವು ತನ್ನಲ್ಲಿರುವ ಕಾಳಿಕಾ ದೇವಿ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ವಿಶೇಷವಾಗಿ ಈ ದೇವಸ್ಥಾನದಲ್ಲಿ ಯುಗಾದಿ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಬಲು ಸಡಗರದಿಂದ ಆಚರಿಸಲಾಗುತ್ತದೆ. ವಿವಿಧ ಸಾಂಸ್ಕೃತಿಕ ಸಮಾರಂಭಗಳು ಈ ದಿನದಂದು ವಿಶ್ವಕರ್ಮ ಸಮಾಜದಿಂದ ಆಯೋಜಿಸಲಾಗುತ್ತದೆ. ಈ ಹಬ್ಬದ ದಿನದಂದು ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಜನರು ಇಲ್ಲಿಗೆ ಭೆಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Surajsavardekar
ಯುಗಾದಿ ವಿಶೇಷ ದೇವಾಲಯಗಳು:
ಭಗವಾನ್ ಕೋವಿಲ್ : ತಮಿಳುನಾಡಿನ ತಿರುಪುರ ಜಿಲ್ಲೆಯ ಧಾರಾಪುರಂ ಬಳಿಯಿರುವ ಭಗವಾನ್ ಕೋವಿಲ್ ಅಥವಾ ಭಗವಾನ್ ದೇವಾಲಯವು ಯುಗಾದಿ ಹಬ್ಬಕ್ಕೆಂದೆ ಹೆಸರುವಾಸಿಯಾಗಿದೆ. ಹಿಂದೆ ತಿರುಮಲೈಸ್ವಾಮಿ ಎಂಬ ಕೆಲಸಗಾರನು ಈ ದಿನದಂದು ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ನೆರೆದವರಿಗೆ ಶುಭವಾಗಲೆಂದು ಪ್ರಾರ್ಥಿಸಿದನು. ಪವಾಡವೆಂಬಂತೆ ಅವನ ಇಷ್ಟಾರ್ಥ ಪೂರ್ಣಗೊಂಡು ಎಲ್ಲರೂ ಆ ಕೆಲಸಗಾರನಿಗೆ ಗೌರವ, ಭಕ್ತಿ ಸಮರ್ಪಿಸಿದರು. ನಂತರ ತಿರುಮಲೈಸ್ವಾಮಿಯ ನೆಲೆಯಿಂದಾಗಿ ಸಕಲ ಕಷ್ಟ ಕಾರ್ಪಣ್ಯಗಳು ದೂರಾದವು. ಹೀಗೆ ಮನುಷ್ಯನೊಬ್ಬ ದೇವನಾಗಿ ಪರಿವರ್ತಿತನಾದ ಹಿನ್ನಿಲೆ ಹೊಂದಿದೆ ಈ ಸ್ಥಳ.
ಚಿತ್ರಕೃಪೆ: Bolterc
ಯುಗಾದಿ ವಿಶೇಷ ದೇವಾಲಯಗಳು:
ಇದೊಂದು ವಿಶೇಷ ದೇವಾಲಯವೆಂದೆ ಹೇಳಬಹುದು. ಏಕೆಂದರೆ ಇಲ್ಲಿ ಆರಾಧಿಸಲಾಗುವ ಭಗವಾನ್ ತಿರುಮಲೈಸ್ವಾಮಿಯು ಮನುಷ್ಯ ಜನ್ಮದಿಂದ ದೇವರಾದವರು ಎಂದು ನಂಬಲಾಗುತ್ತದೆ ಹಾಗೂ ಯುಗಾದಿಯ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಯುಗಾದಿಯನ್ನು ಆಚರಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ದೇವಸ್ಥಾನದ ಮೂಲ ವಿಗ್ರಹದ ಬಳಿ ತಿರುಮಲೈಸ್ವಾಮಿ ಮಲಗುತ್ತಿದ್ದ ಹಾಸಿಗೆಯನ್ನಿಡಲಾಗಿದೆ.
ಚಿತ್ರಕೃಪೆ: Bolterc
ಯುಗಾದಿ ವಿಶೇಷ ದೇವಾಲಯಗಳು:
ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ : ಆಂಧ್ರದ ಕರ್ನೂಲ್ ಜಿಲ್ಲೆಯ ನಲ್ಲಮಲ್ಲ ಬೆಟ್ಟಗಳಲ್ಲಿರುವ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಶ್ರೀಶೈಲಂನ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದಲ್ಲಿ ಯುಗಾದಿ ಹಬ್ಬವನ್ನು ಐದು ದಿಅಗಳ ಕಾಲ ಸಡಗರದಿಂದ ಆಚರಿಸಲಾಗುತ್ತದೆ. ಉತ್ಸವವು ಯುಗಾದಿ ದಿನದ ಮೂರು ದಿನಗಳ ಹಿಂದಿನಿಂದಲೆ ಪ್ರಾರಂಭವಾಗುತ್ತದೆ. ಪಕ್ಕದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: sai sreekanth mulagaleti
ಯುಗಾದಿ ವಿಶೇಷ ದೇವಾಲಯಗಳು:
ಶ್ರೀ ಕುಕ್ಕುಟೇಶ್ವರಸ್ವಾಮಿ ದೇವಾಲಯ : ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಪೀತಾಂಪುರಂನಲ್ಲಿರುವ ಶ್ರೀ ಕುಕ್ಕುಟೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಕಳಸ್ಥಾಪನೆಯಿಂದ ಹಿಡಿದು ಪಂಚಾಂಗ ಶ್ರವಣಂ ಹಾಗೂ ಚಂಡಿಯಾಗ ಸಹಿತ ವಸಂತ ನವರಾತ್ರಿ ಉತ್ಸವಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಚಿತ್ರಕೃಪೆ: GS Darshan
ಯುಗಾದಿ ವಿಶೇಷ ದೇವಾಲಯಗಳು:
ಶ್ರೀರಂಗನಾಥಸ್ವಾಮಿ ದೇವಾಲಯ : ಕರ್ನಾಟಕದ ಮೈಸೂರು ಬಳಿಯಿರುವ ಪ್ರಸಿದ್ಧ ಪ್ರವಾಸಿ ತಾಣ ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥಸ್ವಾಮಿಯ ದೇವಾಲಯದಲ್ಲಿ ಯುಗಾದಿ ಹಬ್ಬವು ತುಂಬು ಕಳೆಯಿಂದ ಕೂಡಿರುತ್ತದೆ. ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಹೊಸ ವರ್ಷದ ಹೊಸ ದಿನದಂದು ಶ್ರೀರಂಗನಾಥ ಹಾಗೂ ಶ್ರೀ ರಂಗನಾಯಕಿಯರ ವಿಗ್ರಹಗಳಿಗೆ ವಿಶೇಷ ಅಭ್ಯಂಜನ ಮಾಡಿಸಿ ವಿಶೇಷವಾದ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.
ಚಿತ್ರಕೃಪೆ: Knowledge.ecstasy
ಯುಗಾದಿ ವಿಶೇಷ ದೇವಾಲಯಗಳು:
ಕದ್ರಿ ಮಂಜುನಾಥ ದೇವಸ್ಥಾನ : ಮಂಗಳೂರಿನಲ್ಲಿರುವ ಶ್ರಿ ಕದ್ರಿ ಮಂಜುನಾಥಸ್ವಾಮಿಯ ದೇವಾಲಯದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಬೆಳಿಗಿನ ಜಾವದಲ್ಲಿಯೆ ಅರ್ಚಕರು ಶಿವಲಿಂಗಕ್ಕೆ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸುತ್ತಾರೆ.
ಚಿತ್ರಕೃಪೆ: Vaikoovery
ಯುಗಾದಿ ವಿಶೇಷ ದೇವಾಲಯಗಳು:
ಅಲಸೂರು/ಹಲಸೂರು ಸೋಮೇಶ್ವರ ದೇವಸ್ಥಾನ : ಬೆಂಗಳೂರಿನ ಅತ್ಯಂತ ಪುರಾತನ ದೇವಸ್ಥಾನವಾದ ಚೋಳರ ಕಾಲದಲ್ಲಿ ನಿರ್ಮಿತ ಅಲಸೂರಿನ ಸೋಮೇಶ್ವರ ದೇವಾಲಯದಲ್ಲಿಯೂ ಯುಗಾದಿ ಹಬ್ಬವನ್ನು ಅತ್ಯಂತ ಭಕ್ತಿ, ಸಡಗರ ಹಾಗೂ ಉತ್ಸಾಹಗಳಿಂದ ಆಚರಿಸಲಾಗುತ್ತದೆ. ನೂರಾರು ಸಂಖ್ಯೆಯಲ್ಲಿ ಈ ದಿನದಂದು ಭಕ್ತರು ದೇಗುಅಲಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Dineshkannambadi
ಯುಗಾದಿ ವಿಶೇಷ ದೇವಾಲಯಗಳು:
ಶ್ರೀವರದರಾಜ ಪೆರುಮಾಳ ದೇವಸ್ಥಾನ : ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಕಂಚೀಪುರಂನಲ್ಲಿರುವ ಶ್ರೀ ವರದರಾಜ ಪೆರುಮಾಳ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ದಿನದಂದು ವಿಶೇಷವಾದ ಅರ್ಚನೆ, ಪೂಜೆಗಳನ್ನು ಸ್ವಾಮಿಗೆ ಸಲ್ಲಿಸಲಾಗುತ್ತದೆ. ಸಾಕಷ್ಟು ಜನ ಭಕ್ತಾದಿಗಳು ಈ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Ssriram mt