ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಶ್ರೀ ಮಲ್ಲಿಕಾರ್ಜುನ ಹಾಗೂ ರಾಮೇಶ್ವರ ದೇವಾಲಯವೂ ಒಂದು. ಸಾಗರದಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿ ನಾಡಕಲಸಿ ಅಥವಾ ಕಲಸಿಯಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನದ ವಿಶೇಷ ಒಂದು ವಿಶೇಷತೆ ಎಂದರೆ ಇಲ್ಲಿರುವ ಜಿರಳೆ ಕಲ್ಲು ಕಂಬ. ಈ ಜಿರಲೆ ಕಲ್ಲು ಕಂಬ ಏನು ಹಾಗೂ ಈ ದೇವಾಲಯದ ಮಹಿಮೆ ಏನು ಅನ್ನೋದನ್ನು ಈ ಲೇಖನದ ಮೂಲಕ ತಿಳಿಸಿದ್ದೇವೆ.
ಜೋಡಿ ದೇವಾಲಯಗಳು
ಸಾಗರದ ನಾಡಕಲಸಿಯಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ದೇವಸ್ಥಾನಗಳಿವೆ. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಹೇಳಲಾಗುತ್ತದೆ.
ಹೊಯ್ಸಳ ಕಾಲದ ಕೆತ್ತನೆಗಳು
ಈ ದೇಗುಲಕ್ಕೆ ಪ್ರವೇಶಿಸುತ್ತಿದ್ದಂತೆ ಎದುರು ಬಲಗಡೆಗೆ ಕಾಣುವುದೇ ನಾಗ ಬನ. ಈ ದೇವಸ್ಥಾನದಲ್ಲಿ ಹೊಯ್ಸಳ ಕಾಲದ ಕೆತ್ತನೆಗಳು ನಯನಮನೋಹರವಾಗಿದೆ. ಈ ದೇಗುಲಕ್ಕೆ ಗರ್ಭಗೃಹ, ಸುಖನಾಸಿ, ಮುಖಮಂಟಪವಿದೆ. ಇದು ಒಂದು ಸಂರಕ್ಷಿತ ಸ್ಮಾರಕ ವಾಗಿದ್ದರೂ ಇದಕ್ಕೆ ಬೇಕಾದ ಸಂರಕ್ಷಣೆ ಸಿಕ್ಕಿಲ್ಲ ಎನ್ನುವುದು ವಿಷಾಧಕರ ಸಂಗತಿ.
ಕತ್ತಲಲ್ಲೇ ದೇವರ ದರ್ಶನ
ಶ್ರೀ ಮಲ್ಲಿಕಾರ್ಜುನ ದೇವರನ್ನು ನೋಡಲು ಬೆಳಕಿನ ವ್ಯವಸ್ಥೆ ಮಾಡಲಾಗಿಲ್ಲ. ಹಾಗಾಗಿ ಕತ್ತಲಲ್ಲೇ ಭಕ್ತರು ದೇವರನ್ನು ನೋಡಬೇಕಾಗುತ್ತದೆ. ಅದನ್ನು ಹೊರತುಪಡಿಸಿದರೆ ದೇಗುಲದ ಸೌಂದರ್ಯ ನಿಜಕ್ಕೂ ನಯನ ಮನೋಹರವಾಗಿದೆ.
ವರದ ಹಳ್ಳಿ ಸ್ವಾಮಿ ತಪಸ್ಸು ಮಾಡಿದ್ದರು
ಹೊರಗಿನ ಗೋಡೆಗಳಲ್ಲಿ ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ. ದೇಗುಲದ ಚಾವಣಿಯಲ್ಲಿ ಕೆತ್ತಲಾಗಿರುವ ಕಲ್ಲಿನ ಹಿಡಿಗಳಂತಹ ರಚನೆ ನಿಜಕ್ಕೂ ಆಶ್ಚರ್ಯದಾಯಕವಾಗಿದೆ. ವರದ ಹಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳು ಇಲ್ಲಿ ಬಂದು ತಪಸ್ಸು ಮಾಡಿ ಹಲವುವರ್ಷ ತಂಗಿದ್ದರಂತೆ. ಅವರು ಕುಳಿತು ಆಶೀರ್ವಚನ ನೀಡುತ್ತಿದ್ದ ಪೀಠ, ಪೂಜಾ ಮಂದಿರಗಳನ್ನು ಈಗಲೂ ನೀವು ಇಲ್ಲಿ ಕಾಣಬಹುದು.
ಜಿರಲೆಕಲ್ಲು ಕಂಬ
ಇಲ್ಲಿನ ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಜಿರಳೆಕಲ್ಲು ಎಂಬ ಕಂಬ. ಇಲ್ಲಿನ ಅರ್ಚಕರು ಮಣ್ಣನ್ನು ಇದಕ್ಕೆ ತೇಯ್ದು , ಮಂತ್ರಿಸಿ ನೀಡುತ್ತಾರಂತೆ. ಅದರಿಂದ ಕಾಲು ನೋವು ಸರಿಯಾಗಿದೆಯಂತೆ. ಬುದ್ದಿ ಭ್ರಮಣೆಯಾದವರು, ಮಕ್ಕಳಾಗದವರು ಹೀಗೆ ಅನೇಕರು ಇಲ್ಲಿಗೆ ಬಂದು ಈ ಜಿರಲೆಕಲ್ಲಿನ ಮಹಿಮೆಗೆ ಪಾತ್ರರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ರಾಮೇಶ್ವರನ ದರ್ಶನ
ಸುತ್ತಲೂ ಇರುವ ಪ್ರದಕ್ಷಿಣಾಪಥವು ನವರಂಗಕ್ಕೆ ಸೇರಿಕೊಳ್ಳುವ ವಿನ್ಯಾಸ ಸಾಮಾನ್ಯವಾಗಿ ದ್ರಾವಿಡ ಶೈಲಿಯಲ್ಲಿ ಕಂಡು ಬರುತ್ತದೆ. ಅದು ಹೊಯ್ಸಳ ಶೈಲಿಯಲ್ಲಿ ಅತೀ ವಿರಳವಾಗಿದ್ದು ಅದನ್ನು ಇಲ್ಲಿ ಕಾಣಬಹುದು ಎಂಬುವುದನ್ನು ಮಾಹಿತಿ ಫಲಕ ಹೇಳುತ್ತದೆ. ಇದರ ಎದುರೊಂದು ನಂದಿಯಿದೆ. ಗರ್ಭಗುಡಿಯೊಳಗೆ ಬೆಳಕಿಲ್ಲದಿರುವುದರಿಂದ ಮಂಗಳಾರತಿಯ ಬೆಳಕಿನಲ್ಲಿ ಶ್ರೀ ರಾಮೇಶ್ವರನನ್ನು ನೋಡುವುದೇ ಒಂದು ಪುಣ್ಯ.
ತಲುಪುವುದು ಹೇಗೆ?
ಸಾಗರದಿಂದ ೮ ಕಿ.ಮೀ ಸೊರಬ ಮಾರ್ಗದಲ್ಲಿ ಪ್ರಯಾಣಿಸಿದರೆ ಕಲಸಿ ಎನ್ನುವ ಊರು ಸಿಗುತ್ತದೆ. ಅಲ್ಲೇ ಸ್ವಲ್ಪ ದೂರದಲ್ಲಿ ಈ ದೇವಾಲವಿದೆ. ಸೊರಬದಿಂದ ಇಲ್ಲಿಗೆ ಸಾಕಷ್ಟು ಬಸ್ ವ್ಯವಸ್ಥೆ ಇದೆ.
ಸಾಗರ್ ಜಂಬಾಗು ರೈಲ್ ವೇ ಸ್ಟೇಷನ್, ಆಡೆರೆ ರೈಲು ನಿಲ್ದಾಣವು ನಾಡಕಾಲಸಿಗೆ ಸಮೀಪದ ರೈಲು ನಿಲ್ದಾಣವಾಗಿದೆ.