ಅಭಯಾರಣ್ಯಕ್ಕೆ ಹೆಸರಾದ ದಾಂಡೇಲಿ ತನ್ನ ಸುತ್ತಲು ಅನೇಕ ಪ್ರವಾಸ ತಾಣಗಳನ್ನು ಹೊಂದಿದೆ. ಅದರಲ್ಲಿ ಸಿಂಥೇರಿ ಬಂಡೆಯೂ ಒಂದು. ಸುತ್ತಲೂ ದಟ್ಟ ಅರಣ್ಯ, ನಡುವೆ ಹರಿಯುವ ಕಾನೇರಿ ನದಿ, ಅಲ್ಲಲ್ಲಿ ಕೇಳುವ ಪಕ್ಷಿಗಳ ನಾದಗಳನ್ನು ಆಲಿಸುತ್ತಾ ನಡೆದರೆ ಅದೊಂದು ಹೊಸ ಪ್ರಪಂಚಕ್ಕೆ ಕಾಲಿಟ್ಟಂತಾಗುತ್ತದೆ.
ಬೆಂಗಳೂರಿನಿಂದ 490 ಕಿ.ಮೀ. ದೂರದಲ್ಲಿರುವ ಈ ತಾಣ ಪ್ರಕೃತಿಯ ಒಂದು ವಿಸ್ಮಯ. ಇಲ್ಲಿರುವ ಸಿಂಥೇರಿ ಬಂಡೆಯು 300 ಅಡಿ ಎತ್ತರವನ್ನು ಹೊಂದಿದೆ. ಒಂದೇ ಕಲ್ಲಿನಿಂದ ರಚಿತವಾದ ಇದು ಪ್ರವಾಸಿಗರಿಗೊಂದು ವಿಶೇಷ ತಾಣ. ಇಲ್ಲಿಯ ಇನ್ನೊಂದು ಆಕರ್ಷಣೆ ಎಂದರೆ ಬಂಡೆಯ ಸುತ್ತ ಹರಿಯುವ ಕಾನೇರಿ ನದಿ.
PC: wikimedia.org
ಕಾನೇರಿ ಸೊಬಗು
ಕಾನೇರಿ ನದಿಯು ಇಲ್ಲಿರುವ ಚಿಕ್ಕ ಪುಟ್ಟ ಬಂಡೆಯ ಮಧ್ಯದಲ್ಲಿ ಸಾಗುತ್ತಾ ಅಲ್ಲಲ್ಲಿ ಜಲಪಾತವನ್ನು ಸೃಷ್ಟಿಸುತ್ತದೆ. ಸದಾಕಾಲವೂ ನೀರಿನಿಂದ ತುಂಬಿ ಹರಿಯುವ ಈ ನದಿ ಮಳೆಗಾಲದಲ್ಲಿ ಹೆಚ್ಚು ಸದ್ದನ್ನು ಮಾಡುತ್ತದೆ. ಇಲ್ಲಿರುವ ವನ್ಯ ಜೀವಿಗಳಿಗೂ ಇದು ಜೀವಧಾರೆಯಾಗಿದೆ. ಪಾರಿವಾಳ ಹಾಗೂ ಜೇನಿನವಾಸ ಹೆಚ್ಚಾಗಿರುವದರಿಂದ ಇಲ್ಲಿಗೆ ಬರುವವರು ಸ್ವಲ್ಪ ಜಾಗರೂಕರಾಗಿ ಇರಬೇಕು.
ದಾಂಡೇಲಿಯ ಬಗ್ಗೆ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಯಾತ್ರಿಕರಿಗೆ ಇಲ್ಲಿಯ ಸೊಬಗನ್ನು ಸವಿಯಲು ಅನುಕೂಲವಾಗುವಂತೆ ಕೆಲವು ಸೌಲಭ್ಯಗಳನ್ನು ಅರಣ್ಯ ಇಲಾಖೆ ಕಲ್ಪಿಸಿಕೊಟ್ಟಿದೆ. ನದಿ ಪ್ರದೇಶಕ್ಕೆ ಸಾಗಲು 250 ಮೆಟ್ಟಿಲುಗಳ ಸಾಲು, ದಣಿವಾರಿಸಿಕೊಳ್ಳಲು ಅಲ್ಲಲ್ಲಿ ಕಲ್ಲಿನ ಮಂಚಗಳು ಹಾಗೂ ಮೂರು ಕಡೆ ಎತ್ತರವಾದ ವೀಕ್ಷಣಾ ಗೋಪುರಗಳಿವೆ. ಇಲ್ಲಿ ನಿಂತು ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯಬಹುದು.
PC: wikimedia.org
ಹತ್ತಿರದಲ್ಲಿ ಯಾವುದೇ ಹೋಟೆಲ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಕುಡಿಯುವ ನೀರು ಹಾಗೂ ಹಣ್ಣುಗಳನ್ನು ಕೊಂಡೊಯ್ಯುವುದು ಸೂಕ್ತ. ದಾಂಡೇಲಿಯಿಂದ 30 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಉತ್ತಮ ಸಾರಿಗೆ ವ್ಯವಸ್ಥೆಯಿದೆ. ಅಲ್ಲದೆ ಹೆದ್ದಾರಿಯಲ್ಲೇ ಸಿಂಥೇರಿ ತಾಣಕ್ಕೆ ಸ್ವಾಗತ ಎನ್ನುವ ಫಲಕವನ್ನು ಹಾಕಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಪ್ರವೇಶಕ್ಕೆ ಅವಕಾಶವಿದೆ. ಹತ್ತಿರದಲ್ಲಿ ಇರುವ ತಾಣವೆಂದರೆ ದಾಂಡೇಲಿ ವನ್ಯಧಾಮ, ಕಾಳಿ ನದಿ ಹಾಗೂ ಕವಲ ಗುಹೆ.