ಸುಲ್ಲಮಲೆ ತೀರ್ಥದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಿನ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಿದರೆ ರೋಗರುಜಿನಗಳು ವಾಸಿಯಾಗುತ್ತವಂತೆ. ಇಲ್ಲಿನ ದಾರಿಯೂ ಅಷ್ಟೇ ದುರ್ಗಮವಾಗಿದೆ. ಹರಸಾಹಸ ಮಾಡಿ ಈ ತೀರ್ಥವನ್ನು ತಲುಪಬೇಕಾಗುತ್ತದೆ.
ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !
ಎಲ್ಲಿದೆ ಈ ಸುಲ್ಲಮಲೆ ತೀರ್ಥ?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪ ಸುಲ್ಲಮಲೆ -ಬಲ್ಲಮಲೆ ಎನ್ನುವ ಅರಣ್ಯದ ಕಾಲುದಾರಿಯಲ್ಲಿ ಸ್ವಲ್ಪ ದೂರ ನಡೆದಾಗ ಗುಹೆಯ ಒಳಗೆ ಪವಿತ್ರ ತೀರ್ಥ ಹರಿಯುವ ಕ್ಷೇತ್ರ ಸಿಗುತ್ತದೆ. ಅದುವೇ ಸುಲ್ಲಮಲೆ ಪುಣ್ಯ ತೀರ್ಥ . ಈ ತೀರ್ಥಸ್ನಾನ ಮಾಡುವುದೆಂದರೆ ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೆ ನೀವು ತುಸು ಧೈರ್ಯವಂತರೂ ಆಗಿರಬೇಕು.
ಗುಹೆಯ ಒಳಗೆ ಹೋಗಬೇಕು
ಈ ತೀರ್ಥವು ಗುಹೆಯ ಒಳಗೆ ಇರುವುದರಿಂದ ಅದರೊಳಗೆ ಬಗ್ಗಿಕೊಂಡೇ ಹೋಗಬೇಕು. ಗುಹೆಯು ಕತ್ತಲೆಯಿಂದ ಕೂಡಿರುತ್ತದೆ. ಬಿದಿರಿನ ಏಣಿಯಲ್ಲಿ 10ಫೀಟ್ ಕೆಳಕ್ಕೆ ಇಳಿದು 10ಮೀಟರ್ ಉದ್ದದ ಕಿರಿದಾದ ಗುಹೆಯೊಳಗೆ ಕತ್ತಲೆಯಲ್ಲೇ ಸಾಗಬೇಕು . ಎರಡು ಬಂಡೆಗಳ ಮದ್ಯೆ ಇರುವ ಕಿರಿದಾದ ಜಾಗದಲ್ಲಿ ನಡೆಯುವಾಗ ಎದೆ ಹಾಗೂ ಹೊಟ್ಟೆಗೆ ಬಂಡೆ ಸ್ಪರ್ಶಿಸುತ್ತದೆ. ಅಷ್ಟೊಂದು ಕಿರಿದಾದ ಜಾಗ ಇದಾಗಿದೆ. ಮುಂದುಗಡೆ ಹಿಂದುಗಡೆ ಬಂಡೆಗಳಿಂದಲೇ ಆವೃತ್ತವಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹೀಗೆ ಆ ಬಂಡೆಗಳ ನಡುವೆ ಸಾಗುವಾಗ ಬಂಡೆಗಳ ಮೇಲಿನಿಂದ ನೀರು ರಭಸದಿಂದ ಹರಿಯುತ್ತದೆ. ಅದುವೇ ಪುಣ್ಯ ತೀರ್ಥ. ಈ ತೀರ್ಥ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಈ ತೀರ್ಥಸ್ನಾನವು ವರ್ಷದ ಎಲ್ಲಾ ದಿನ ಲಭ್ಯವಿರುವುದಿಲ್ಲ.
ವರ್ಷದಲ್ಲಿ ನಾಲ್ಕು ದಿನ ಮಾತ್ರ ಪ್ರವೇಶ
ವರ್ಷದಲ್ಲಿ ನಾಲ್ಕು ದಿನ ಮಾತ್ರ ಈ ಗುಹಾಲಯವಿರುವ ಪ್ರದೇಶಕ್ಕೆ ಪ್ರವೇಶ . ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ಇತಿಹಾಸವೂ ಇದೆ. ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗಿನ ಸಮಯದಲ್ಲಿ ಇಲ್ಲಿ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎನ್ನುವ ನಂಬಿಕೆ ಇದೆ.