ಏನಪ್ಪಾ ಇದು ವಿಚಿತ್ರ! ಶೃಂಗೇರಿಗೂ ಮಲಯಾಳ ಬ್ರಹ್ಮನಿಗೂ ಎಲ್ಲಿಯ ಸಂಬಂಧ? ಅಷ್ಟಕ್ಕೂ ಈ ಮಲಯಾಳ ಬ್ರಹ್ಮನಾರು? ಇವನಿಗೇಕೆ ಈ ದೇವಾಲಯ? ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿರಬೇಕಲ್ಲವೆ? ಹಾಗಾದರೆ ಈ ಲೇಖನ ಓದಿ. ಈ ಮಲಯಾಳ ಬ್ರಹ್ಮನ ದೇಗುಲವು ಶೃಂಗೇರಿಯಲ್ಲೆ ಇದೆ, ಅದೂ ಸಹ ಶಾರಂದಾಂಬೆ ಸನ್ನಿಧಿಯ ಎಡ ಭಾಗದಲ್ಲಿ.
ಮೂಲತಃ ಶೃಂಗೇರಿಯಲ್ಲಿರುವುದು ಬ್ರಹ್ಮರಾಕ್ಷಸನ ಸನ್ನಿಧಿ. ಪುರಾಣ ಗ್ರಂಥಾದಿಗಳನ್ನು ಅವಲೋಕಿಸಿದಾಗ ಸಾಮಾನ್ಯವಾಗಿ ಬ್ರಹ್ಮರಾಕ್ಷಸನ ಕುರಿತು ಸಾಕಷ್ಟು ವಿಚಾರಗಳು ತಿಳಿದುಬರುತ್ತದೆ. ಮಧ್ಯ ಮಹಾರಾಷ್ಟ್ರ ಹಾಗೂ ಕೇರಳದ ಕೆಲವು ದೇವಾಲಯಗಳ ಸಂಕೀರ್ಣದಲ್ಲಿ ಬ್ರಹ್ಮರಾಕ್ಷಸನಿಗೆ ಮುಡಿಪಾದ ಸನ್ನಿಧಿಗಳಿರುವುದನ್ನು ಗಮನಿಸಬಹುದು.
ಸಾಂದರ್ಭಕಿ ಚಿತ್ರ, ಬ್ರಹ್ಮರಾಕ್ಷಸ, ಚಿತ್ರಕೃಪೆ: Chaitnyags
ಬ್ರಹ್ಮನ್ ಅಂದರೆ ಜ್ಞಾನವನ್ನು ಪಡೆದಿರುವ, ಬ್ರಾಹ್ಮಣ ಕುಲದಲ್ಲಿ ಜನಿಸಿ ಸಕಲ ವೇದ-ಶಾಸ್ತ್ರಗಳನ್ನು ತಿಳಿದು ಗಳಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಅಥವಾ ಇತರರಿಗೆ ಹಂಚದೆ, ಕೆಟ್ಟ ಹಾಗೂ ಅಪ್ರ್ಇಯ ಕೆಲಸಗಳನ್ನು ಮಾಡಿ ತೀರಿ ಹೋಗುವ ವ್ಯಕ್ತಿಯ ಆತ್ಮವೆ ಬ್ರಹ್ಮ ರಾಕ್ಷಸವಾಗುವುದೆಂದು ಗ್ರಂಥಗಳಲ್ಲಿ ವಿವರಿಸಲಾಗಿದೆ.
ಪುರಾಣ ಗ್ರಂಥಗಳಲ್ಲಿ ವಿವರಿಸಿರುವಂತೆ ರಾಕ್ಷಸರುಗಳಲ್ಲಿ ಬ್ರಹ್ಮ ರಾಕ್ಷಸ ಅತ್ಯಂತ ಭಯಂಕರ ಹಾಗೂ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಇತ್ತ ಬ್ರಹ್ಮ ಜ್ಞಾನವೂ ಅತ್ತ ರಾಕ್ಷಸ ಗುಣವೂ ಇರುವುದರಿಂದ ಬ್ರಹ್ಮ ರಾಕ್ಷಸನನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಕಷ್ಟ ಎಮಂದು ನಂಬಲಾಗುತ್ತದೆ.
ಮಲಯಾಳಿ ಬ್ರಹ್ಮರಾಕ್ಷಸನ ದೇಗುಲ, ಚಿತ್ರಕೃಪೆ: sringeri.net
ಇನ್ನೂ ಕೆಲ ಬ್ರಹ್ಮ ರಾಕ್ಷಸಗಳು ತಮ್ಮ ಕುಕೃತ್ಯಗಳನ್ನು ನೆನೆಸಿಕೊಂಡು ಮೋಕ್ಷ ಹೊಂದುವ ನಿಟ್ಟಿನಿಂದ ಪ್ರಭಾವಿ ಸಾಧು ಸಂತರಲ್ಲಿ ತಮ್ಮನ್ನು ಕುರಿತು ಪ್ರಾರ್ಥಿಸಿ, ತಮ್ಮ ಸಾಮರ್ಥ್ಯಕ್ಕನುಗುಣವಾಗಿ ದೇವರ ಸೇವೆ ಸಲ್ಲಿಸುತ್ತ ಮೋಕ್ಷ ಪಡೆಯುತ್ತವೆ. ಹೀಗಾಗಿ ಅಂತಹ ಕೆಲವು ಬ್ರಹ್ಮ ರಾಕ್ಷಸರ ದೇಗುಲಗಳನ್ನು ಕೆಲ ದೇವಾಲಯಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ಇವು ಕ್ಷೇತ್ರ ಪಾಲಕರಾಗಿ ಸೇವೆ ಸಲ್ಲಿಸುತ್ತವೆ.
ಇಂತಹ ಒಂದು ಕ್ಷೇತ್ರ ಪಾಲಕನ ಸನ್ನಿಧಿಯೆ ಶೃಂಗೇರಿಯಲ್ಲಿರುವುದು. ಅದೆ ಮಲಯಾಳಿ ಬ್ರಹ್ಮ ಅಥವಾ ಮಲಯಾಳಿ ಬ್ರಹ್ಮರಾಕ್ಷಸನ ದೇಗುಲ. ಸ್ಥಳ ಪುರಾಣದಂತೆ ಹಿಂದೆ ಮಲಯಾಳಿ ಬ್ರಾಹ್ಮಣನೊಬ್ಬ ಸಕಲ ವೇದ ಶಾಸ್ತ್ರಗಳಲ್ಲಿ ಪಾರಂಗತನಾಗಿ ನಂತರ ಅದನ್ನು ತನ್ನಲ್ಲಿಯೆ ಇಟ್ಟುಕೊಂಡು ಯಾರೊಬ್ಬರಿಗೂ ಗುರುವಾಗಲಿಲ್ಲ. ಬೋಧನೆ ಮಾಡಲಿಲ್ಲ. ತನ್ನ ಧರ್ಮದಿಂದ ವಿಮುಖಗೊಂಡ. ಸ್ವಾರ್ಥ ಬೆಳೆಸಿಕೊಂಡ.
ಶೃಂಗೇರಿಯಿಂದ ಸಿರಿಮನೆ ಜಲಪಾತ
ಇದರಿಂದ ಅವನಿಗೆ ಶಾಪ ಉಂಟಾಗಿ ಅವನು ತೀರಿದ ನಂತರ ಬ್ರಹ್ಮ ರಾಕ್ಷಸನಾಗಿ ಪರಿತಪಿಸ ತೊಡಗಿದ. ಪ್ರಾಯಶ್ಚಿತಕ್ಕಾಗಿ ಕಾಯುತ್ತಿದ್ದ. ಒಂದೊಮ್ಮೆ ಋಷಿ ವಿದ್ಯಾರಣ್ಯರು ಧರ್ಮ ಪ್ರಸಾರಕ್ಕಾಗಿ ಸಂಚರಿಸುತ್ತಿದ್ದಾಗ ಅವರನ್ನು ಕಂಡು ಆ ಮಲಯಾಳಿ ಬ್ರಹ್ಮರಾಕ್ಷಸ ತನ್ನನ್ನು ಈ ಶಾಪದಿಂದ ಮುಕ್ತಗೊಳಿಸುವಂತೆ ಅಂಗಲಾಚಿತು.
ವಿದ್ಯಾರಣ್ಯರು ತಮ್ಮ ದಿವ್ಯ ದೃಷ್ಟಿಯಿಂದ ಆ ಬ್ರಹ್ಮರಾಕ್ಷಸನ ಪೂರ್ವಾಪರಗಳನ್ನು ಅರಿತು ಅದಕ್ಕೆ ಶೃಂಗೇರಿಯ ಶಾರದಾಂಬೆಯ ದೇವಾಲಯಕ್ಕೆ ಕ್ಷೇತ್ರ ಪಾಲಕನಾಗಿ ಸೇವೆ ಸಲ್ಲಿಸುವಂತೆ ಆಜ್ಞಾಪಿಸಿದರು. ಇದರಿಂದ ಸಂತಸಗೊಂಡ ಆ ರಾಕ್ಷಸ ಶಾರಂದಾಂಬೆಗೆ ಕಾವಲುಗಾರನಾಗಿ ಇಂದಿಗೂ ನಿಂತಿದೆ. ಮಲಯಾಳಿ ಬ್ರಾಹ್ಮಣನಾಗಿರುವುದರಿಂದ ಆ ದೇಗುಲವು ಮಲಯಾಳಿ ಬ್ರಹ್ಮ ದೇಗುಲವೆಂದೆ ಪ್ರಸಿದ್ಧಿ ಪಡೆದಿದೆ.
ಶೃಂಗೇರಿ ಹಾಗೂ ಸುತ್ತಮುತ್ತಲು
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿಯು ಕರ್ನಾಟಕದ ಪ್ರಖ್ಯಾತ ಪ್ರವಾಸಿ ತಾಣಗಳಲ್ಲೊಂದಾಗಿದೆ. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಮೊದಲ ಜಗತ್ಪೀಠವಾದ ತಾಯಿ ಶಾರದಾಮ್ನೆಯ ಸನ್ನಿಧಿಯು ಇಲ್ಲಿದ್ದು ಅದರ ಜೊತೆ ಜೊತೆಯಲ್ಲಿ ಅತಿ ಪ್ರಾಚೀನ ಹಾಗೂ ಅದ್ಭುತವಾದ ವಿದ್ಯಾಶಂಕರ ದೇವಾಲಯವೂ ಸಹ ಇಲ್ಲಿದೆ.
ಶೃಂಗೇರಿ ಬೆಂಗಳೂರಿನಿಂದ 330 ಕಿ.ಮೀ, ಮಂಗಳೂರಿನಿಂದ 105 ಕಿ.ಮೀ ಹಾಗೂ ಶಿವಮೊಗ್ಗ ನಗರದಿಂದ 95 ಕಿ.ಮೀ ಗಳಷ್ಟು ದೂರದಲ್ಲಿದ್ದು ಈ ಮೂರು ನಗರಗಳಿಂದ ಶೃಂಗೇರಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಧಾರ್ಮಿಕವಾಗಿ ಬಹಳ ಹೆಸರುವಾಸಿಯಾಗಿರುವುದರಿಂದ ಶೃಂಗೇರಿಯಲ್ಲಿ ಉಳಿಯಲು ವಸತಿಗೃಹಗಳು ದೊರೆಯುತ್ತವಾದರೂ ಮೊದಲೆ ವಿಚಾರಿಸಿಡುವುದು ಉತ್ತಮ.