ಜಿಲ್ಲೆ : ಉಡುಪಿ
ಸ್ಥಳ : ಕುಂಜಿಬೆಟ್ಟು
ರಾಜ್ಯ : ಕರ್ನಾಟಕ
ವಿಶೇಷತೆ : ಉಡುಪಿಯ ನವಶಕ್ತಿಪೀಠಗಳಲ್ಲೊಂದಾದ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ಶಕ್ತಿಪೀಠ
ಚಿತ್ರಕೃಪೆ: Vaikoovery
ಉಡುಪಿ ಕುರಿತು
ಕರ್ನಾಟಕದ ಕರಾವಳಿ ತೀರದಲ್ಲಿ ನೆಲೆಸಿರುವ ಒಂದು ಪ್ರಖ್ಯಾತ ಪ್ರವಾಸಿ ತಾಣ ಉಡುಪಿ. ಉಡುಪಿಯು ಕೇವಲ ಕಡಲ ತೀರಗಳಿಂದಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲೊಂದು. ಉಡುಪಿಯು ಮೂಲತಃ ಶ್ರೀಕೃಷ್ಣ ಮಠದಿಂದಾಗೆ ದೇಶದಲ್ಲೆ ಸಾಕಷ್ಟು ಪ್ರಸಿದ್ಧಿಗಳಿಸಿದ ಧಾರ್ಮಿಕ ಕೇಂದ್ರವಾಗಿದೆ.
ಉಡುಪಿಯಲ್ಲಿ ಸಾಕಷ್ಟು ಇತರೆ ದೇವಾಲಯಗಳಿದ್ದು ಎಲ್ಲವೂ ವಿಶೇಷ ಹಾಗೂ ಮಹತ್ವವುಳ್ಳ ದೇವಾಲಯಗಳೆ ಆಗಿವೆ. ಅಂತೆಯೆ ಕರ್ನಾಟಕದಲ್ಲಿ ಉಡುಪಿಯನ್ನು ದೇವಾಲಯಗಳ ಪಟ್ಟಣ ಎಂದೆ ಕರೆಯುತ್ತಾರೆ. ಅಲ್ಲದೆ ಉಡುಪಿಯು ತನ್ನದೆ ಆದ ಕೆಲವು ವಿಶೇಷ ಶಕ್ತಿಪೀಠಗಳಿಂದಾಗಿ ಪ್ರವಾಸಿಗರ ಗಮನಸೆಳೆಯುತ್ತದೆ. ಅವುಗಳಲ್ಲೊಂದಾಗಿದೆ ಇಂದ್ರಾಣಿ ಶಕ್ತಿಪೀಠ.
ಚಿತ್ರಕೃಪೆ: Brunda Nagaraj
ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯ
ಉಡುಪಿ ನಗರ ಕೇಂದ್ರದಿಂದ ಪೂರ್ವಕ್ಕೆ ಎರಡು ಕಿ.ಮೀ ಸಾಗಿದರೆ ಕುಂಜಿಬೆಟ್ಟು ಎಂಬ ಸ್ಥಳವು ದೊರೆಯುತ್ತದೆ. ವೇದಾಚಲ ಅಂದರೆ ಇಂದಿನ ಮಣಿಪಾಲದ ಪಶ್ಚಿಮಕ್ಕೆ ಈ ಪ್ರದೇಶವಿದೆ. ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯನ್ನು ಪಡೆದ ಸ್ಥಳ ಇದಾಗಿದ್ದು ಇಲ್ಲಿರುವ ಶಕ್ತಿ ದೇವಿಯ ದೇವಾಲಯವನ್ನೆ ಇಂದ್ರಾಣಿ ಶಕ್ತಿಪೀಠ ಎಂದು ಕರೆಯುತ್ತಾರೆ.
ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯ ಎಂದು ಕರೆಯಲಾಗುವ ಈ ದೇವಾಲಯವು ಸಾಕಷ್ಟು ಪುರಾತನವಾದ ದೇವಾಲಯಲವೆ ಆಗಿದೆ. ಸುಮಾರು ಹನ್ನೊಂದನೇಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಇದಾಗಿದೆ ಎಂದು ಹೇಳಲಾಗುತ್ತದೆ. ಆದರೆ ಪ್ರಸ್ತುತ ದೇವಾಲಯವು ನವೀಕರಣಗೊಂಡ ರಚನೆಯಾಗಿದೆ.
ಚಿತ್ರಕೃಪೆ: Brunda Nagaraj
ಈ ದೇವಾಲಯವನ್ನು 1993 ರಲ್ಲಿ ಪುನಃ ನಿರ್ಮಾಣ ಮಾಡಲಾಗಿದೆ. ನೇಪಾಳದ ಪ್ರಖ್ಯಾತ ಪಶುಪತಿನಾಥ ದೇವಾಲಯ ಮಾಜಿ ಮುಖ್ಯ ಅರ್ಚಕರಾದ ರಾವಲ್ ಪದ್ಮನಾಭ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಈ ದೇವಾಲಯದ ನವೀನ ಮಾದರಿಯನ್ನು ನಿರ್ಮಿಸಲಾಗಿದೆ.
ಇಂದ್ರಾಣಿಯನ್ನು ವೇದ-ಪುರಾಣಗಳಲ್ಲಿ ಅವಲೋಕಿಸಿದಾಗ ಇವಳೊಬ್ಬ ಸಪ್ತ ಮಾತೃಕೆಯರಲ್ಲೊಬ್ಬಳಾದ ದೇವಿಯಾಗಿ ಕಂಡುಬರುತ್ತಾಳೆ. ತದನಂತರ ಮುಂದಿನ ಗ್ರಂಥಾದಿಗಳಲ್ಲಿ ಇಂದ್ರಾಣಿಯನ್ನು ಶಕ್ತಿಯ ದ್ಯೋತಕವಾಗಿ ವಿವರಿಸಲಾಗಿದೆ. ಪ್ರಬುದ್ಧ ಶಕ್ತಿ ಮಾತೆಯಾಗಿಯೂ ಕೆಲವು ಕಡೆ ದುರ್ಗಾ ದೇವಿಯ ಅವತಾರವಾಗಿಯೂ ಇಂದ್ರಾಣಿಯನ್ನು ವರ್ಣಿಸಲಾಗಿದೆ.
ಚಿತ್ರಕೃಪೆ: Brunda Nagaraj
ಪ್ರಸ್ತುತ ಇಂದ್ರಾಣಿ ದೇವಾಲಯದಲ್ಲಿ ಐದು ಶಿವಲಿಂಗಗಳಿದ್ದು ಪಂಚದುರ್ಗೆಯರನ್ನು ಅದು ಪ್ರತಿನಿಧಿಸುತ್ತದೆ. ಅಲ್ಲದೆ ಈ ಶಿವಲಿಂಗಗಳ ಹಿಂಭಾಗದಲ್ಲಿ ವನದುರ್ಗೆಯ ವಿಗ್ರಹವಿರುವುದನ್ನು ಕಾಣಬಹುದು. ಸಾಕಷ್ಟು ವಿಶೇಷತೆಯ ದೇವಾಲಯ ಇದಾಗಿದ್ದು ನವರಾತ್ರಿಯ ಸಂದರ್ಭದಲ್ಲಿ ಭಕ್ತ ಸಾಗರವೆ ಇಲ್ಲಿಗೆ ಹರಿದುಬರುತ್ತದೆ.
ತಲುಪುವ ಬಗೆ
ಉಡುಪಿಯು ಒಂದು ಪ್ರಮುಖ ಪ್ರವಾಸಿ ಕೆಂದ್ರವಾಗಿರುವುದರಿಂದ ಕರ್ನಾಟಕದ ಪ್ರಮುಖ ನಗರಗಳಿಂದ ಸುಲಭವಾಗಿ ತಲುಪಬಹುದು. ಬೆಂಗಳೂರು, ಮಂಗಳೂರು ಮುಂತಾದ ನಗರಗಳಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಉಡುಪಿಗೆ ತೆರಳಲು ದೊರೆಯುತ್ತವೆ. ಉಡುಪಿಯ ಬಸುನಿಲ್ದಾಣದಿಂದ ಈ ದೇವಿಯ ದೇವಾಲಯಕ್ಕೆ ತೆರಳಲು ರಿಕ್ಷಾಗಳು ಸುಲಭವಾಗಿ ದೊರೆಯುತ್ತವೆ.
ಎಲ್ಲೆ ಇಲ್ಲದ ಆಕರ್ಷಣೆಗಳ ಉಡುಪಿ ಜಿಲ್ಲೆ