ಜಿಲ್ಲೆ : ಮಂಡ್ಯ
ತಾಲೂಕು : ನಾಗಮಂಗಲ
ರಾಜ್ಯ : ಕರ್ನಾಟಕ
ಸ್ಥಳ : ಆದಿಚುಂನಗಿರಿ
ವಿಶೇಷತೆ : ಮಹಾಸಂಸ್ಥಾನ ಮಠ ಎಂದೂ ಕರೆಯಲ್ಪಡುವ ಆದಿಚುಂಚನಗಿರಿಯು ಬೆಟ್ಟದ ಮೇಲಿರುವ ಚಿಕ್ಕ ಧಾರ್ಮಿಕ ಪಟ್ಟಣವಾಗಿದ್ದು ಕರ್ನಾಟಕದಲ್ಲಿರುವ ಒಕ್ಕಲಿಗ ಸಮುದಾಯದವರ ಆಧ್ಯಾತ್ಮಿಕ ಕೇಂದ್ರವಾಗಿ ಗಮನಸೆಳೆಯುತ್ತದೆ.
ಚಿತ್ರಕೃಪೆ: Prof tpms
ಆದಿಚುಂನಗಿರಿ ಕುರಿತು
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವಿರುವ ಆದಿಚುಂಚನಗಿರಿಯು ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನೆಲೆಸಿದೆ. ಇಲ್ಲಿ ಗಂಗಾಧರೇಶ್ವರನ ದೇವಾಲಯವು ಪ್ರಮುಖವಾಗಿದ್ದು ಕ್ಷೇತ್ರಪಾಲಕನಾಗಿ ಭೈರವೇಶ್ವರನ ಸನ್ನಿಧಿಯಿದೆ.
ಪಂಚಲಿಂಗಗಳು, ಜ್ವಾಲಾಪೀಠ, ಸ್ಥಂಬಾಂಬ ಇಲ್ಲಿ ಪ್ರಮುಖವಾಗಿದ್ದು ಭಕ್ತರಿಂದ ಪೂಜಿಸಲ್ಪಡುತ್ತವೆ. ಅಲ್ಲದೆ ಇಲ್ಲಿನ ಗುಡ್ಡದ ಅತಿ ಎತ್ತರದ ಸ್ಥಳವನ್ನು ಆಕಾಶ ಭೈರವ ಎಂದು ಕರೆಯಲಾಗಿದ್ದು ದೇವಾಲಯದ ಬಳಿಯಿರುವ ಚಿಕ್ಕ ಕೊಳವೊಂದು ಬಿಂದು ಸರೋವರ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಚಿತ್ರಕೃಪೆ: Prof tpms
ಇನ್ನುಳಿದಂತೆ ಇತ್ತೀಚಿನ ಕೆಲ ಸಮಯದಲ್ಲಿ ಇನ್ನೆರಡು ಕೊಳಗಳನ್ನು ಇಲ್ಲಿ ನಿರ್ಮಿಸಲಾಗಿದ್ದು ತೆಪ್ಪೋತ್ಸವಗಳಿಗೆಂದು ಅವುಗಳನ್ನು ಬಳಸಲಾಗುತ್ತದೆ. ಬಿಂದು ಸರೋವರವನ್ನೂ ಸಹ ಇತ್ತೀಚಿಗಷ್ಟೆ ನವೀಕರಿಸಲಾಗಿದೆ. ಅದೂ ಸಹ ಆಗಮ ಶಾಸ್ತ್ರದ ಪ್ರಕಾರವಾಗಿ!
ದಂತಕಥೆ!
ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತಕಥೆಗಳಿವೆ ಹಾಗೂ ಸ್ಥಳ ಪುರಾಣವೂ ಇದೆ. ಶಿವಪುರಾಣದಲ್ಲಿ ಈ ಕ್ಷೇತ್ರದ ಕುರಿತು ಉಲ್ಲೇಖಗಳಿವೆ ಎಂದು ತಿಳಿದುಬರುತ್ತದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಆದಿ ರುದ್ರನು ಸಿದ್ಧ ಯೋಗಿಯೊಬ್ಬರ ತಪಸ್ಸಿಗೆ ಮೆಚ್ಚಿ ಈ ಕ್ಷೇತ್ರವನ್ನು ಆ ಯೋಗಿಗೆ ಕಾಣಿಕೆಯಾಗಿ ನೀಡಿದನಂತೆ. ಶಿವನಿಂದ ಬಂದ ಕಾಣಿಕೆ ಇದಾಗಿದ್ದುದರಿಂದ ಆ ಯೋಗಿ ಈ ಕ್ಷೇತ್ರವನ್ನು ಅತ್ಯಂತ ಭಕ್ತಿಯಿಂದ ನೋಡಿಕೊಂಡಿದ್ದನಂತೆ.
ಚಿತ್ರಕೃಪೆ: Prof tpms
ಹಾಗಾಗಿ ಇಂದಿಗೂ ಇದು ಶಿವನ ಭಕ್ತರ ನೆಚಿನ ಕ್ಷೇತ್ರವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಧಾರ್ಮಿಕಾಸಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಇದು ಗುಡ್ಡದ ಮೇಲೆ ನೆಲೆಸಿದ್ದು ಆ ಗುಡ್ಡವನ್ನು ಪಶ್ಚಿಮ ಮುಖವಾಗಿ ಪ್ರವೇಶಿಸಬೇಕು. ಈ ಸಂದರ್ಭದಲ್ಲಿ ಗುಡ್ಡವು ಗೋಕರ್ಣದ ಆತ್ಮಲಿಂಗವಿರುವ ರೀತಿಯಲ್ಲೆ ಭಾಸವಾದಂತೆ ಗೋಚರಿಸುತ್ತದೆ.
ತಲುಪುವ ಬಗೆ
ಇದು ಬೆಂಗಳೂರಿನಿಂದ 110 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಬೆಂಗಳೂರಿನಿಂದ ಬೆಂಗಳೂರು-ಮಂಗಳೂರು ರಾ.ಹೆ. 47 ಅನ್ನು ಬಳಸಿಕೊಂಡು ಸಾಗಿ ಬೆಳ್ಳೂರು ಕ್ರಾಸ್ಗೆ ತಲುಪಿದರೆ ಸಾಕು. ಅಲ್ಲಿಂದ ಸುಮಾರು ಎಂಟು ಕಿ.ಮಿ ಗಳಷ್ಟು ದೂರದಲ್ಲಿ ಆದಿಚುಂಚನಗಿರಿಯ ಬೆಟ್ಟ ಸಿಗುತ್ತದೆ.
ಸಕ್ಕರೆನಾಡು ಮಂಡ್ಯದ ಬೆಲ್ಲದಂತಹ ಆಕರ್ಷಣೆಗಳು!