ಸೋಂದಾ, ಸ್ವಾದಿ, ಸೋದೆ ಎಂದೆಲ್ಲ ಕರೆಯಲ್ಪಡುವ ಸೋದೆಯು ದ್ವೈತ ಪರಿಪಾಲಕರಾದ ಶ್ರೀ ವಾದಿರಾಜತೀರ್ಥರ ಬೃಂದಾವನವನ್ನು ಹೊಂದಿರುವ ಪವಿತ್ರ ಕ್ಷೇತ್ರ. ದ್ವೈತ ಅನುಯಾಯಿಗಳಲ್ಲಿ ಸೋದೆ ಮಠವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದು ಸಾಕಷ್ಟು ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಮಧ್ವಾಚಾರ್ಯರು ಜನಿಸಿದ ಪಾಜಕ ಕ್ಷೇತ್ರ!
ಮೂಲತಃ ಶಿವಳ್ಳಿ ತುಳು ಬ್ರಾಹ್ಮಣ ಕುಲಕ್ಕೆ ಸೇರಿದ್ದ ವಾದಿರಾಜತೀರ್ಥರು ಒಬ್ಬ ಹರಿದಾಸರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಶಿ ಬಳಿಯಿರುವ ಹೂವಿನಕೆರೆ ಗ್ರಾಮದವರು. ರಾಮಾಚಾರ್ಯ ಹಾಗೂ ಗೌರಿ ದಂಪತಿಗಳ ಪುತ್ರರಾಗಿದ್ದ ವಾದಿರಾಜತೀರ್ಥರನ್ನು ಮಾಧ್ವ ಸಮುದಾಯದ ಶ್ರೀಮದ್ ಅನಂತತೀರ್ಥ ಹಾಗೂ ಶ್ರೀ ಜಯತೀರ್ಥರವರ ನಂತರದಲ್ಲೆ ಬರುವ ಮಹಾನ್ ಸಂತರಾಗಿ ಪರಿಗಣಿಸಲಾಗಿದೆ.
ಚಿತ್ರಕೃಪೆ: Ravi Aparanji
ಸನ್ಯಾಸತ್ವದ ಮುಂಚೆ ಇವರ ಹೆಸರು ಭೂವರಾಹ ಎಂದಿತ್ತು. ತಮ್ಮ ಎಂಟನೇಯ ವಯಸ್ಸಿನಲ್ಲಿ ಇವರು ಸನ್ಯಾಸ ದೀಕ್ಷೆ ಸ್ವೀಕರಿಸಿ ವಾದಿರಾಜತೀರ್ಥರೆಂದೆನಿಸಿಕೊಂಡರು. ಇವರು ವಿಷ್ಣುವಿನ ಹಯಗ್ರೀವ ಅವತಾರದ ಪರಮ ಆರಾಧಕರು. ಹಾಗಾಗಿ ಇಂದು ಸೋದೆ ಮಠದಲ್ಲಿ ಹಯಗ್ರೀವಸ್ವಾಮಿಯನ್ನು ಮುಖ್ಯವಾಗಿ ಪೂಜಿಸಲಾಗುತ್ತದೆ.
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಪ್ರಧಾನ ಶಾಖೆಯು ಸೋದೆಯಲ್ಲಿದ್ದು ಇಲ್ಲಿ ವಾದಿರಾಜತೀರ್ಥರ ಬೃಂದಾವನವಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸೋದೆ ಗ್ರಾಮವು ತನ್ನಲ್ಲಿರುವ ಸೋದೆ ಮಠ, ಭೂತರಾಜರ ಸನ್ನಿಧಿ ಹಾಗೂ ಜೈನ ಮಠಗಳಿಂದಾಗಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Ravi Aparanji
ಸೋದೆಯಲ್ಲಿರುವ ಮಠವು ಸಾಕಷ್ಟು ನಯನಮನೋಹರವಾದ ಪರಿಸರದ ಹಿನ್ನೆಲೆಯಲ್ಲಿ ನೆಲೆಸಿದ್ದು ಪ್ರಶಾಂತ ವಾತಾವರಣದಿಂದ ಕೂಡಿದೆ. ಬೆಂಗಳೂರಿನಿಂದ 450 ಕಿ.ಮೀ ಗಳಷ್ಟು ದೂರದಲ್ಲಿರುವ ಸೋದೆಯನ್ನು ಶಿರಸಿ ಮೂಲಕವಾಗಿ ಸುಲಭವಾಗಿ ತಲುಪಬಹುದಾಗಿದೆ. ಶಿರಸಿಯಿಂದ ಕೇವಲ 25 ಕಿ.ಮೀ ದೂರವಿದ್ದು ತೆರಳಲು ರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ದೊರೆಯುತ್ತವೆ.