ಶೋಲೆ ಎಂಬ ಅತಿ ಯಶಸ್ಸು ಸಾಧಿಸಿದ ಹಳೆಯ ಹಿಂದಿ ಚಿತ್ರದ ಪ್ರಮುಖ ಪಾತ್ರಧಾರಿಯಲ್ಲೊಂದಾದ ಹಾಗೂ ಖಳನಾಯಕನಾಗಿ ಉತ್ತುಂಗಕ್ಕೇರಿದ ಗಬ್ಬರ್ ಸಿಂಗ್ ಎಂಬ ಡಕಾಯಿತನು ತಾನು ಅಡಗಿರುವ ಪ್ರದೇಶವನ್ನು ನೋಡಿದಾಗ ಎಲ್ಲರಿಗೂ ಒಂದು ರೀತಿಯಲ್ಲಿ ಮೈಜುಮ್ಮೆಂದಿತ್ತು. ಏಕೆಂದರೆ ಆ ಪ್ರದೇಶವು ಒಂದು ರೀತಿಯ ಚಂಬಲ್ ಕಣಿವೆ ನೋಡಿದ ಹಾಗೆ ಇತ್ತು.
ಬಹಳಷ್ಟು ಜನರಿಗೆ ಗೊತ್ತಿಲ್ಲ, ವಿಷಯ ಏನಪ್ಪಾ ಅಂದರೆ ಎತ್ತರೆತ್ತರದ ಬಂಡೆ ಬೆಟ್ಟಗಳಿಂದ ಭಯಾನಕತೆ ಮೂಡಿಸಿದ್ದ ಆ ಸ್ಥಳವಿರುವುದು ಕರ್ನಾಟಕದಲ್ಲೆ! ಹೌದು ಕರ್ನಾಟಕದ ರಾಮನಗರವು ಶೋಲೆ ಚಿತ್ರೀಕರಣಕ್ಕೆ ಆಶ್ರಯ ಒದಗಿಸಿಕೊಟ್ಟಿತ್ತು. ಇಂದಿಗೂ ರಾಮನಗರದ ಬೆಟ್ಟ ತಾಣಗಳಿಗೆ ಭೇಟಿ ನೀಡಿದಾಗ ಆ ಚಿತ್ರದ ಸನ್ನಿವೇಷಗಳನ್ನು ನೀವು ನೋಡಿದ್ದೆ ಆದಲ್ಲಿ ಮೆಲುಕು ಹಾಕಬಹುದು.
ಚಿತ್ರಕೃಪೆ: Navaneeth KN
ಹೀಗೆ ಹಲವು ವಿಶೇಷತೆಗಳಿಂದ ಕೂಡಿರುವ ರಾಮನಗರವು ಒಂದು ಆಕರ್ಷಕ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ. ಹೆಚ್ಚು ರೇಷ್ಮೆ ಉತ್ಪಾದಿಸಲಾಗುವುದರಿಂದ ಕರ್ನಾಟಕದ ರೇಷ್ಮೆ ನಗರ ಎಂತಲೂ ಇದನ್ನು ಕರೆಯಲಾಗುತ್ತದೆ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.
ರಾಮನಗರವು, ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಣ ಸಿದ್ದೇಶ್ವರ, ಸಿಡಿಲಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯ ಬೆಟ್ಟಗಳಿಂದ ಸುತ್ತುವರಿದಿದೆ. ಪ್ರಕೃತಿ ಪ್ರೇಮಿಗಳಿಗೆ ಖುಷಿ ಕೊಡುವ ವಿಚಾರವೆಂದರೆ ಇಲ್ಲಿರುವ ಬೆಟ್ಟಗಳು ಈಗ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳಿಗೆ ಮನೆಯಾಗಿರುವುದು.
ಉದ್ದ ಕುತ್ತಿಗೆಯ ರಣಹದ್ದು, ಚಿತ್ರಕೃಪೆ: Vaibhavcho
ಇಲ್ಲಿನ ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಜಾನಪದ ಲೋಕ. ಜನಪದ ಸಂಸ್ಕೃತಿಯ ಭವ್ಯತೆಯನ್ನು ಅನಾವರಣಗೊಳಿಸುವ ವಿಶಿಷ್ಟ ಕೇಂದ್ರ ಇದಾಗಿದ್ದು ಪ್ರವಾಸಿಗರ ಸಾಕಷ್ಟು ಗಮನಸೆಳೆಯುತ್ತದೆ. ಕರ್ನಾಟಕದ ಜಾನಪದ ಕಲೆ ಹಾಗು ಸಂಸೃತಿಗೆ ಸಂಬಂದ್ದಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನು ಇಲ್ಲಿ ನೋಡಬಹುದು.
ರಾಮನಗರವು ಪ್ರಮುಖವಾಗಿ ಬೆಟ್ಟ-ಗುಡ್ಡಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಅಥವಾ ರ್ಯಾಪೆಲಿಂಗ್ ಮಾಡಬಯಸುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗೂ ಇದು ಪ್ರವಾಸೋದ್ಯಮಕ್ಕೂ ಸಹ ತನ್ನದೆ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.
ಚಿತ್ರಕೃಪೆ: Abhijith Bhat
ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ಸುಮಾರು 50 ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ ಹಾಗು ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಬೆಂಗಳೂರಿನಿಂದ ರಾಮನಗರಕ್ಕೆ ತೆರಳಲು ಸಾಕಷ್ಟು ಬಸ್ಸುಗಳು ಸದಾ ದೊರೆಯುತ್ತವೆ.
ಬೆಂಗಳೂರಿನಿಂದ 150 ಕಿ.ಮೀ ಒಳಗಿರುವ ಸ್ಥಳಗಳು