ಅರಬ್ಬೀ ಸಮುದ್ರ ತೀರದಲ್ಲಿ ನೆಲೆ ನಿಂತಿರುವ ಪುಟ್ಟ ಊರು ಗೋಕರ್ಣ. ದಕ್ಷಿಣ ಕಾಶಿ, ಭೂ ಕೈಲಾಸ ಹಾಗೂ ಪರಶುರಾಮ ಭೂಮಿ ಎಂದೆಲ್ಲಾ ಕರೆಯಲ್ಪಡುವ ಈ ತಾಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಗೋವಿನ ಕಿವಿಯ ಆಕಾರದಲ್ಲಿಯೇ ಈ ತಾಣ ಇರುವುದರಿಂದ ಗೋಕರ್ಣ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಈ ಕ್ಷೇತ್ರಕ್ಕೆ ಪುರಾಣಗಳ ಇತಿಹಾಸವಿದೆ. ಗೋಕರ್ಣ ಮಹಾತ್ಮೆ ಎನ್ನುವ ಗ್ರಂಥವನ್ನು ಓದಿದರೆ ಅಥವಾ ಕೇಳಿಸಿಕೊಂಡರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.
ಬೆಂಗಳೂರಿನಿಂದ 483 ಕಿ.ಮೀ ದೂರದಲ್ಲಿರುವ ಈ ತಾಣ ಪವಿತ್ರ ಪುಣ್ಯ ಕ್ಷೇತ್ರ. ಇಲ್ಲಿರುವ ಕಡಲ ತೀರಗಳು ಪ್ರವಾಸದ ಖುಷಿಯನ್ನು ಹೆಚ್ಚಿಸಬಲ್ಲವು. ಇಲ್ಲಿಗೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಹರಿದುಬರುತ್ತಾರೆ. ಉತ್ತಮ ಗುಣಮಟ್ಟದ ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇಗಳು ದೊರೆಯುತ್ತವೆ. ನೋಡುವಂತಹ ದೇವಾಲಯ ಹಾಗೂ ಸಮುದ್ರ ತೀರಗಳು ಬಹಳ ಸಮೀಪದಲ್ಲೇ ಇರುವುದರಿಂದ ಹೆಚ್ಚು ದೂರ ಓಡಾಡುವ ಅಗತ್ಯ ಇರುವುದಿಲ್ಲ. ಎರಡು ದಿನದ ಪ್ರವಾಸಕ್ಕೆ ಇದು ಸೂಕ್ತ ತಾಣ.
ಮಹಾಬಲೇಶ್ವರ ದೇವಸ್ಥಾನ
ಗೋಕರ್ಣದ ಹೃದಯ ಭಾಗದಲ್ಲೇ ಇರುವ ಈ ದೇಗುಲದಲ್ಲಿ ಶಿವಲಿಂಗವನ್ನು ಪೂಜಿಸಲಾಗುತ್ತದೆ. ಗ್ರಾನೈಟ್ ಕಲ್ಲಿನಲ್ಲಿ ನಿರ್ಮಿಸಲಾದ ಈ ದೇಗುಲ, ಸುಂದರ ವಾಸ್ತು ಶಿಲ್ಪವನ್ನು ಒಳಗೊಂಡಿದೆ. ಆತ್ಮ ಲಿಂಗವನ್ನು ಧರೆಗಿಟ್ಟ ಸ್ಥಳ ಇದು ಎನ್ನುವ ಇತಿಹಾಸವನ್ನು ಹೊಂದಿದೆ. ಜೀವನದಲ್ಲೊಮ್ಮೆ ಆತ್ಮ ಲಿಂಗವನ್ನು ಧರೆಗಿಟ್ಟ ಕಥೆಯನ್ನು ಕೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದೇವಾಲಯ 1500 ವರ್ಷದ ಇತಿಹಾಸವನ್ನು ಹೊಂದಿದೆ.
PC: flickr.com
ಓಂ ಸಮುದ್ರ
ಇದೊಂದು ಸುಂದರ ಸಮುದ್ರ ತೀರ. ಇದರ ಆಕಾರ ನೈಸರ್ಗಿಕವಾಗಿಯೇ ಓಂ ಆಕೃತಿಯಲ್ಲಿದೆ. ಹಾಗಾಗಿ ಓಂ ಸಮುದ್ರ ಎಂದು ಕರೆಯುತ್ತಾರೆ. ಧಾರ್ಮಿಕವಾಗಿ ಹಾಗೂ ನೈಸರ್ಗಿಕವಾಗಿ ಹೆಚ್ಚು ಮಹತ್ವ ಪಡೆದಿದೆ. ಇಲ್ಲಿ ಅನೇಕ ಜಲ ಕ್ರೀಡೆಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ.
PC: wikipedia.org
ಭದ್ರಕಾಳಿ ದೇವಸ್ಥಾನ
ಗೋಕರ್ಣದ ನಗರ ಪ್ರದೇಶದಿಂದ 1 ಕಿ.ಮೀ ದೂರದಲ್ಲಿರುವ ದೇಗುಲ ಭದ್ರಕಾಳಿ. ಉಮಾ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ರಾಮಾಯಣ ಇತಿಹಾಸವನ್ನು ಹೊಂದಿರುವ ಈ ದೇಗುಲ ಹೆಚ್ಚು ಜನರಿಂದ ಆಕರ್ಷಿತಗೊಂಡಿದೆ.
ಗೋಕರ್ಣ ಸಮುದ್ರ
ಗೋಕರ್ಣದ ರಸ್ತೆ ಮಾರ್ಗದಲ್ಲೇ ಸಿಗುವ ಈ ಕಡಲ ತೀರ ಒಂದೆಡೆ ತೆಂಗಿನ ಮರದ ಸಾಲು, ಇನ್ನೊಂದೆಡೆ ಬಂಡೆಗಳಿಂದ ಸುತ್ತುವರಿದಿದೆ. ವಿಶಾಲ ಹಾಗೂ ಸ್ವಚ್ಛವಾಗಿರುವ ಈ ತಾಣ ಪ್ರವಾಸಿಗರಿಗೊಂದಿಷ್ಟು ಖುಷಿಯನ್ನು ನೀಡುತ್ತದೆ. ಇಲ್ಲಿಯ ಸೂರ್ಯಾಸ್ತದ ಸೌಂದರ್ಯ ಮನಸೂರೆಗೊಳಿಸುವಂತಿರುತ್ತದೆ.
PC: wikipedia.org
ಗಣಪತಿ ದೇವಸ್ಥಾನ
ಮಹಾಬಲೇಶ್ವರ ದೇಗುಲಕ್ಕೆ ಸಮೀಪದಲ್ಲಿಯೇ ಗಣಪತಿ ದೇವಸ್ಥಾನವಿದೆ. ಇಲ್ಲಿಯ ಗಣಪತಿ ವಿಗ್ರಹ 1.3 ಮೀ. ಎತ್ತರವಿದೆ. ರಾವಣನು ಕೈಲಾಸದಿಂದ ತಂದಆತ್ಮಲಿಂಗವನ್ನು ಪುನಃ ಕೈಲಾಸ ಸೇರುವಂತೆ ಮಾಡುವಲ್ಲಿ ಗಣಪತಿ ಯಶಸ್ವಿಯಾಗುತ್ತಾನೆ. ಈ ಕಥೆಯ ಹಿನ್ನೆಲೆಯಲ್ಲಿಯೇ ಈ ದೇಗುಲದ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಗೋಕರ್ಣದ ಆರಂಭದಲ್ಲಿರುವ ಈ ದೇಗುಲದ ದರ್ಶನ ಪಡೆದು ಸುತ್ತಲ ಕ್ಷೇತ್ರ ದರ್ಶನ ಪಡೆಯಬಹುದು.
PC: flickr.com
ಅರ್ಧ ಚಂದ್ರ ಸಮುದ್ರ
ಇದೊಂದು ಚಿಕ್ಕದಾದ ಕಡಲ ತೀರ. ಇದು ಅಷ್ಟಾಗಿ ಜನರಿಗೆ ಪರಿಚಯವಾಗಿಲ್ಲ. ಊರಿನ ಮಧ್ಯೆ ಇರುವ ಈ ಸಮುದ್ರ ತೀರದಲ್ಲಿ ಜನ ಸಂದಣಿ ಕಡಿಮೆ ಎಂದೇ ಹೇಳಬಹುದು. ಪ್ರವಾಸಿಗರು ಯಾವುದೇ ತೊಂದರೆ ಇಲ್ಲದೆ ಇಲ್ಲಿ ಹೆಚ್ಚು ಸಮಯ ಕಳೆಯಬಹುದು. ಇಲ್ಲಿ ಈಜಲು ಹಾಗೂ ಕೆಲವು ಜಲಕ್ರೀಡೆ ಆಡಲು ಅವಕಾಶವಿದೆ.
PC: flickr.com
ಸ್ವರ್ಗ ಸಮುದ್ರ
ಸಣ್ಣ ಹಾಗೂ ಹೆಚ್ಚು ಜನ ಪರಿಚಯವಿಲ್ಲದ ಈ ತೀರಕ್ಕೆ ಪೂರ್ಣ ಚಂದ್ರ ಸಮುದ್ರ ಎಂತಲೂ ಕರೆಯುತ್ತಾರೆ. ಪ್ರಶಾಂತವಾಗಿರುವ ಈ ಕಡಲ ತೀರದಲ್ಲಿ ಈಜುವುದನ್ನು ಬಿಟ್ಟರೆ ಬೇರಾವ ಆಟಗಳನ್ನು ಆಡುವಂತಿಲ್ಲ. ಇಲ್ಲಿ ಮೀನುಗಾರಿಕೆಯ ಜನಗಳು ಮಾತ್ರ ಹೆಚ್ಚನ ಸಂಖ್ಯೆಯಲ್ಲಿ ಓಡಾಡುತ್ತಾರೆ ಅಷ್ಟೆ.
PC: flickr.com