ಪ್ರವಾಸಕ್ಕೆ ಹೊರಟಾಗ ಸಾಕಷ್ಟು ಜನರು ಹೆಚ್ಚು ಜನಪ್ರೀಯವಾಗಿರುವ/ಪ್ರಸಿದ್ಧವಾಗಿರುವ ಸ್ಥಳಗಳಿಗೆಂದೆ ಹೊರಡಲು ಬಯಸುತ್ತಾರೆ. ಕಾರಣ ಆ ಸ್ಥಳಗಳನ್ನು ಸುಲಭವಾಗಿ ತಲುಪಬಹುದು, ಏನೆಲ್ಲ ನೋಡಲು ಆಕರ್ಷಣೆಗಳಿವೆ ಎಂಬುದರ ಕುರಿತು ತಿಳಿದುಕೊಳ್ಳಬಹುದು. ಯಾವೆಲ್ಲ ಹೋಟೆಲುಗಳಲ್ಲಿ ತಂಗಬಹುದೆಂಬುದರ ಕುರಿತೂ ಸಹ ಮಾಹಿತಿ ಕಲೆ ಹಾಕಬಹುದು.
ಗಿಐಬಿಬೊ ಕೂಪನ್ನುಗಳು : ಹೋಟೆಲ್ಕ್ ಬುಕ್ಕಿಂಗ್ ಮೇಲೆ 6000 ರೂ. ಕಡಿತ ಪಡೆಯಿರಿ, ತ್ವರೆ ಮಾಡಿ
ಇಂತಹ ಪ್ರವಾಸಗಳು ಕುಟುಂಬದೊಡನೆಯೊ ಅಥವಾ ಹಿರಿಯರೊಡನೆಯೊ ಮಾಡಿದಾಗ ಸಮಂಜಸ. ಆದರೆ ನೀವು ನಿಮ್ಮ ಸಂಗಾತಿಯೊಡನೆಯೊ ಅಥವಾ ಸ್ನೇಹಿತರೊಂದಿಗೊ ಇದ್ದಾಗ ಹೆಚ್ಚಾಗಿ ಅನ್ವೇಷಿಸಲ್ಪಡದ, ಹೆಸರು ಕೇಳಿರದಂತಹ, ಜನಪ್ರೀಯವಲ್ಲದ ಆದರೆ ಅದ್ಭುತವಾದ ಪರಿಸರದಿಂದ ಪ್ರವಾಸಯೋಗ್ಯವಾಗಿರುವ ಸ್ಥಳಗಳಿಗೆ ಭೇಟಿ ನೀಡಿದಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುವುದು ಸಹಜ.
ವಿಶೇಷ ಲೇಖನ : ಕುಟುಂಬ ಸ್ನೇಹಿ ಪ್ರವಾಸಿ ಸ್ಥಳಗಳು
ಪ್ರಸ್ತುತ ಲೇಖನದಲ್ಲಿ ಕೆಲವು ವಿಶಿಷ್ಟವಾದ ಹಾಗೂ ವಿಸ್ಮಯಕರ ಅಂಶಗಳನ್ನೊಳಗೊಂಡ ಭಾರತದ ಕೆಲವು ಆಗುಂತಕ ಸ್ಥಳಗಳ ಕುರಿತು ತಿಳಿಸಲಾಗಿದೆ. ಬಹುತೇಕ ಜನರು ಈ ಸ್ಥಳಗಳ ಕುರಿತು ಕೇಳಿಲ್ಲ. ಭೇಟಿ ನೀಡಿದವರ ಸಂಖ್ಯೆಯಂತೂ ಬಲು ಕಮ್ಮಿ. ಆದರೂ ಈ ಸ್ಥಳಗಳಿಗೆ ಭೇಟಿ ನೀಡಿದಾಗ ನೀವು ಪಟ್ಟ ಪ್ರಯತ್ನ ವ್ಯರ್ಥವಾಗದಿರುವುದು ನಿಮ್ಮ ಅರಿವಿಗೆ ಬಂದೆ ಬರುತ್ತದೆ.
ಅಜ್ಞಾತ ಪ್ರವಾಸಿ ಸ್ಥಳಗಳು:
ಮಜುಲಿ : ಇದೊಂದು ಸುಂದರವಾದ, ನದಿಯಲ್ಲಿ ರೂಪಗೊಂಡಿರುವ ದ್ವೀಪ. ಅಸ್ಸಾಂ ರಾಜ್ಯದಲ್ಲಿ ಹರಿದಿರುವ ಬ್ರಹ್ಮಪುತ್ರ ನದಿಯಲ್ಲಿ ಈ ಸುಂದರ ಚಿಕ್ಕ ಹಾಗೂ ಚೊಕ್ಕವಾದ ಗ್ರಾಮವನ್ನು ಕಾಣಬಹುದು. ಅಸ್ಸಾಂ ರಾಜ್ಯದ ಬಹು ದೊಡ್ಡ ನಗರವಾದ ಗುವಾಹಟಿ ನಗರದಿಂದ ಸುಮಾರು 200 ಕಿ.ಮೀ ಗಳಷ್ಟು ದೂರದಲ್ಲಿದ್ದು ಜೊರಹತ್ ಎಂಬ ಪಟ್ಟಣದ ಬಳಿಯಿದೆ. ಇಲ್ಲಿಗೆ ತಲುಪಲು ಯಾವುದೆ ರೈಲಾಗಲಿ, ಬಸ್ಸಾಗಲಿ ಅಥವಾ ವಾಹನಗಳಿಂದಾಗಲಿ ಸಾಧ್ಯವಿಲ್ಲ. ಬದಲಾಗಿ ಜೊರಹತ್ ಪಟ್ಟಣದಿಂದ ದೋಣಿಯ ಮೂಲಕ ಮಾತ್ರವೆ ತಲುಪಬೇಕು.
ಚಿತ್ರಕೃಪೆ: Kalai Sukanta
ಅಜ್ಞಾತ ಪ್ರವಾಸಿ ಸ್ಥಳಗಳು:
ವಿಶೆಷವೆಂದರೆ ಈ ಚಿಕ್ಕ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಬಗೆಯ ಅಕ್ಕಿಯನ್ನು ಬೆಳೆಯಲಾಗುತ್ತದೆ. ಅದೂ ಕೂಡ ಯಾವುದೆ ರಸಗೊಬ್ಬರ ಹಾಗೂ ಕ್ರಿಮಿ ನಾಶಕಗಳನ್ನು ಬಳಸಲಾರದೆಯೆ. ಹೈನುಗಾರಿಕೆ, ಕರಕುಶಲ ವಸ್ತು ತಯಾರಿಕೆ, ಮೀನುಗಾರಿಕೆ ಇಲ್ಲಿನ ಇತರೆ ಪ್ರಮುಖ ವಾಣಿಜ್ಯ ಚಟುವಟಿಕೆಗಳು. ಸುಂದರ ಹಾಗೂ ಶಾಂತ ಪರಿಸರ, ವಿಶಿಷ್ಟ ಸಂಪ್ರದಾಯ ಹಾಗೂ ಆಚರಣೆ, ಅತಿಥಿಗಳನ್ನು ಸಂತೋಷದಿಂದ ಬರ ಮಾಡಿಕೊಳ್ಳುವ ಜನರು ಇದು ಮಜುಲಿಯ ಸಂಕೇತವಾಗಿದೆ.
ಚಿತ್ರಕೃಪೆ: Suraj Kumar Das
ಅಜ್ಞಾತ ಪ್ರವಾಸಿ ಸ್ಥಳಗಳು:
ಮಾಲವಾನ್ : ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಮಾಲ್ವಾನ್ ಅಷ್ಟೊಂದಾಗಿ ಹೆಸರುವಾಸಿಯಾಗಿರದ ಆದರೆ ಭೇಟಿ ನೀಡಲು ಬಲು ಯೋಗ್ಯವಾದ ಕರಾವಳಿ ಪಟ್ಟಣವಾಗಿದೆ. ಸಾಮಾನ್ಯವಾಗಿ ಎಲ್ಲ ಕಡಲ ತೀರ ಪಟ್ಟಣಗಳು ಪ್ರವಾಸಿ ಆಕರ್ಷಣೆಗಳೆ, ಹಾಗಾದರೆ ಮಾಲ್ವಾನ್ ನ ವಿಶೇಷತೆ ಏನು? ಹೌದು ಇದರ ವಿಶೇಷತೆ ಎಂದರೆ ದೇಶದ ಕೆಲವೆ ಕೆಲವು ಸ್ಕೂಬಾ ಡೈವಿಂಗ್ ಮಾಡಬಹುದಾದ ತಾಣಗಳ ಪೈಕಿ ಇದೂ ಸಹ ಒಂದು. ಸ್ಕೂಬಾ ಡೈವಿಂಗ್ ಒಂದು ರೋಮಾಂಚನಗೊಳಿಸುವ ಚಟುವಟಿಕೆಯಾಗಿದ್ದು ಸಮುದ್ರದಾಳದ ಜೀವನವನ್ನು ನಿಕಟವಾಗಿ ನೋಡುವ ಅವಕಾಶ ಒದಗಿಸುತ್ತದೆ.
ಚಿತ್ರಕೃಪೆ: editor CrazyYatra
ಅಜ್ಞಾತ ಪ್ರವಾಸಿ ಸ್ಥಳಗಳು:
ಕರ್ಲಿ, ಕೊಲಂಬ್ ಹಾಗೂ ಕಲವಲಿ ಎಂಬ ಮೂರು ಖಾರಿ/ಕೊಲ್ಲಿಗಳಿಂದ ಆವೃತವಾಗಿರುವ ಮಾಲವಾನ್ ತನ್ನಲ್ಲಿರುವ ಸುಂದರ ಕಡಲ ತೀರಗಳಿಗೆ ಮೆಚ್ಚುಗೆಗಳಿಸಿಕೊಂಡಿದೆ. ಮುಂಬೈನಿಂದ 514 ಕಿ.ಮೀ ಹಾಗೂ ರತ್ನಾಗಿರಿಯಿಂದ 140 ಕಿ.ಮೀ ಗಳಷ್ಟು ದೂರದಲ್ಲಿರುವ ಮಾಲವಾನ್ ಅನ್ನು ರಸ್ತೆಯ ಮುಖಾಂತರ ತಲುಪಬಹುದಾಗಿದೆ. ಮುಂಬೈ ಅಥವಾ ಗೋವಾದಿಂದ ತೆರಳುವಾಗ ಕಸಾಲ್ ಎಂಬ ಸ್ಥಳದವರೆಗೂ ರಾಷ್ಟ್ರೀಯ ಹೆದ್ದಾರಿ 17 ರ ಮೂಲಕ ಸಾಗಿ ನಂತರ ಕಸಾಲ್ ನಿಂದ 35 ಕಿ.ಮೀ ದೂರವಿರುವ ಮಾಲವಾನ್ ಅನ್ನು ಬಾಡಿಗೆ ರಿಕ್ಷಾ ಅಥವಾ ರಾಜ್ಯ ಸರ್ಕಾರಿ ಬಸ್ಸುಗಳ ಮೂಲಕವಾಗಿ ತಲುಪಬಹುದು.
ಚಿತ್ರಕೃಪೆ: Elroy Serrao
ಅಜ್ಞಾತ ಪ್ರವಾಸಿ ಸ್ಥಳಗಳು:
ಲೆಪ್ಚಾಜಗತ್ : ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ದಾರ್ಜೀಲಿಂಗ್ ಬಹುತೇಕ ಎಲ್ಲರಿಗೂ ಗೊತ್ತಿರುವ ಸುಂದರ ಗಿರಿಧಾಮ ಪ್ರದೇಶ. ಈ ಗಿರಿಧಾಮದಿಂದ ಕೇವಲ 20 ಕಿ.ಮೀ ದೂರದಲ್ಲಿಯೆ ಮತ್ತೊಂದು ಸುಂದರಮಯ, ಮನೋಹರವಾದ ಪರಿಸರವುಳ್ಳ, ಆಕರ್ಷಕ ನೈಸರ್ಗಿಕ ಸಂಪತ್ತಿನಿಂದ ಕಂಗೊಳಿಸುವ ಪುಟ್ಟ ಹಳ್ಳಿಯೊಂದನ್ನು ಕಾಣಬಹುದು. ಅದುವೆ ಲೆಪ್ಚಾಜಗತ್. ಲೆಪ್ಚಾ ಬುಡಕಟ್ಟು ಜನಾಂಗದವರು ಇಲ್ಲಿ ವಾಸವಿದ್ದರಿಂದ, ಅವರ ಪಾಲಿಗೆ ಇದೆ ಜಗತ್ತಾಗಿದ್ದರಿಂದ ಇದರ ಹೆಸರು ಲೆಪ್ಚಾಜಗತ್ ಎಂದು ಬಂದಿದೆ. ಈ ಸ್ಥಳದ ಕುರಿತು ಗೊತ್ತಿರುವ ಅದೆಷ್ಟೊ ಪ್ರವಾಸಿಗರು ದಾರ್ಜೀಲಿಂಗಿಗೆ ಭೇಟಿ ನೀಡಿದಾಗ ಖಂಡಿತವಾಗಿಯೂ ಈ ಪುಟ್ಟ ಗ್ರಾಮಕ್ಕೆ ಎರಳಿ ಕೆಲವು ದಿನಗಳ ಕಾಲ ಹಾಯಾಗಿ ತಂಗಿ, ಪ್ರಕೃತಿಯ ನೈಜಾನಂದವನ್ನು ಅನುಭವಿಸಿ ತೆರಳುತ್ತಾರೆ.
ಚಿತ್ರಕೃಪೆ: H. Grobe
ಅಜ್ಞಾತ ಪ್ರವಾಸಿ ಸ್ಥಳಗಳು:
ಅತಿರಪಳ್ಳಿ ಜಲಪಾತ : ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿರುವ ಅತ್ತಿರಪಲ್ಲಿ ತ್ರಿಶೂರ್ನಿಂದ 60 ಕಿ.ಮೀ. ದೂರದಲ್ಲಿದ್ದು ಮೊದಲ ದರ್ಜೆಯ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಕೊಚ್ಚಿಯಿಂದಲೂ ಸಹ 70 ಕಿ.ಮೀ. ದೂರದಲ್ಲಿರುವ ಈ ತಾಣವು ಬಹುತೇಕವಾಗಿ ತನ್ನಲ್ಲಿರುವ ವಿಹಂಗಮ ಜಲಪಾತದಿಂದಾಗಿ ಮೆಚ್ಚುಗೆಗಳಿಸಿದೆ.
ಚಿತ್ರಕೃಪೆ: Joseph Lazer
ಅಜ್ಞಾತ ಪ್ರವಾಸಿ ಸ್ಥಳಗಳು:
ಲ್ಯಾನ್ಸ್ ಡಾವ್ನ್ : ಉತ್ತರಾಖಂಡ ರಾಜ್ಯದ ಪೌರಿ ಗಡ್ವಾಲ್ ಜಿಲ್ಲೆಯ ಒಂದು ದಂಡ ಪಟ್ಟಣವಾಗಿದೆ ಲ್ಯಾನ್ಸ್ ಡಾವ್ನ್. ಹಿಂದೆ ಕಾಲುಡಂಡಾ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶವು ಬ್ರೀಟೀಷ್ ವಾಇಸ್ ರಾಯ್ ಲ್ಯಾನ್ಸ್ ಡಾವ್ನ್ ನಂತರ ಈ ಹೆಸರು ಪಡೆಯಿತು. ಆಕರ್ಷಕ ವೀಕ್ಷಣೆ ಕೆಂದ್ರಗಳು, ಸುತ್ತಮುತ್ತಲಿನ ಸುಂದರ ಪ್ರಕೃತಿಯ ಸೊಬಗು ಹಾಗೂ ಶಿವಾಲಿಕ್ ಪರ್ವತ ಶ್ರೇಣಿಗಳ ರಮ್ಯ ನೋಟ ಈ ಪುಟ್ಟ ಪಟ್ಟಣದ ವಿಶೇಷತೆಗಳಾಗಿವೆ.
ಚಿತ್ರಕೃಪೆ: Sudhanshusinghs4321
ಅಜ್ಞಾತ ಪ್ರವಾಸಿ ಸ್ಥಳಗಳು:
ಮಂಡು : ಭೇಟಿ ನೀಡಲು ಯೋಗ್ಯವಾದ ಆದರೆ ಅಳಿದು ಹೋದ ನಗರ ಎಂಬ ಖ್ಯಾತಿಗೆ ಪಾತ್ರವಾದ ಮಂಡು/ಮಾಂಡವಗಡ್ ಮಧ್ಯ ಪ್ರದೇಶ ರಾಜ್ಯದ ಧಾರ್ ಜಿಲ್ಲೆಯ ಪ್ರಸ್ತುತ ಮಾಂಡವ ಪ್ರದೇಶವಾಗಿದೆ. ಖಿಲ್ಜಿ ಸಂಸ್ಥಾನದ ಛಾಪನ್ನು ಹೊಂದಿರುವ ಈ ನಗರದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದಾಗಿದೆ. ಇದು ಸಾಕಷ್ಟು ಜನಪ್ರೀಯತೆ ಪಡೆಯದೆ ಇರುವುದರಿಂದ ಇಲ್ಲಿಗೆ ಹೆಚ್ಚಿನ ಜನರು ಭೇಟಿ ನೀಡುವುದಿಲ್ಲ. ಆದರೆ ಭೇಟಿ ನೀಡಿದರೆ ಈ ಸುಂದರ ಸ್ಥಳವು ನಿಮ್ಮ ಮನದಲ್ಲಿ ನೆಲೆಸಬಹುದು. ಇಲ್ಲಿನ ಜಹಾಜ್ ಮಹಲ್ ಹೆಚ್ಚಿನ ಮನ್ನಣೆಗೆ ಪಾತ್ರವಾಗಿದೆ.
ಚಿತ್ರಕೃಪೆ: Abhishek727
ಅಜ್ಞಾತ ಪ್ರವಾಸಿ ಸ್ಥಳಗಳು:
ತರ್ಕಾರ್ಲಿ : ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ತರ್ಕಾರ್ಲಿ ಕಡಲ ತೀರವು ಒಂದು ನಯನ ಮನೋಹರವಾದ ಕಡಲ ಕಿನಾರೆಯಾಗಿದೆ. ಇದು ಈ ಹಿಂದಿನ ಸ್ಲೈಡಿನಲ್ಲಿ ಉಲ್ಲೇಖಿಸಲಾಗಿರುವ ಮಾಲವಾನ್ ತಾಲೂಕಿನಲ್ಲೆ ಇರುವುದು ವಿಶೇಷ. ಶಾಂತಮಯ ಸಮುದ್ರ, ಸದ್ದು ಗದ್ದಲವಿಲ್ಲದ ಪರಿಸರ, ಆಕರ್ಷಕ ಕಡಲ ತೀರ ಇದು ತರ್ಕಾರ್ಲಿಯ ವಿಶೇಷತೆ. ಅಷ್ಟೆ ಅಲ್ಲ, ಇಲ್ಲಿನ ಕಡಲ ತೀರವು ಹೆಚ್ಚು ಅಗಲವಿಲ್ಲದಿದ್ದರೂ ಸಾಕಷ್ಟು ಉದ್ದವಾಗಿದ್ದು ಶುಭ್ರವಾದ ನೀರಿನಿಂದ ಕೂಡಿದೆ.
ಚಿತ್ರಕೃಪೆ: Sballal
ಅಜ್ಞಾತ ಪ್ರವಾಸಿ ಸ್ಥಳಗಳು:
ಬಸವರಾಜದುರ್ಗ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಈ ಗಮ್ಯ ಪ್ರವಾಸಿ ತಾಣವನ್ನು ನೋಡಬಹುದು. ಅರೇಬಿಯನ್ ಸಮುದ್ರದ ಮಧ್ಯದಲ್ಲಿ ರೂಪಗೊಂಡ ದ್ವೀಪ ಇದಾಗಿದೆ. ಈ ದ್ವೀಪದಲ್ಲಿ ಕೋಟೆಯೊಂದನ್ನು ಸಹ ನೋಡಬಹುದು. ಅಲ್ಲದೆ 16 ನೇಯ ಶ್ತಮಾನದಲ್ಲಿ ನಿರ್ಮಾಣವಾದ ದೇವಾಲಯವೊಂದು ಸಹ ಇಲ್ಲಿದ್ದು ಪ್ರತಿ ವರ್ಷ ಜನವರಿ 14 ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗ್ರಾಮದ ಬೆಸ್ತರು ಕುಟುಂಬ ಸಮೇತ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಕೃತಿಯು ವಿಕೋಪಗೊಳ್ಳದೆ ತಮ್ಮನ್ನು ಕಾಪಾಡುವಂತೆ ಪ್ರಾರ್ಥಿಸುತ್ತಾರೆ.
ಚಿತ್ರಕೃಪೆ: Kumarcnaik
ಅಜ್ಞಾತ ಪ್ರವಾಸಿ ಸ್ಥಳಗಳು:
ಉದಯಗಿರಿ ಹಾಗೂ ಖಂಡಗಿರಿ ಗುಹೆಗಳು : ಪುರಾತತ್ವ, ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಉದಯಗಿರಿ ಹಾಗೂ ಖಂಡಗಿರಿ ಗುಹೆಗಳು ಅರ್ಧ ನೈಸರ್ಗಿಕ ಇನ್ನರ್ಧ ಮಾನವ ನಿರ್ಮಿತ ಅದ್ಭುತ ಗುಹಾ ರಚನೆಗಳಾಗಿವೆ. ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಈ ಗುಹಾ ರಚನೆಗಳನ್ನು ಜೈನ ಭಿಕ್ಷುಗಳ ವಾಸಸ್ಥಳವಾಗಿ ಖರವೇಲ ರಾಜನ ಆಡಳಿತವಿದ್ದ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಉದಯಗಿರಿಯಲ್ಲಿ 18 ಗುಹೆಗಳಿದ್ದರೆ, ಖಂಡಗಿರಿಯಲ್ಲಿ 15 ಗುಹೆಗಳಿವೆ. ಇವುಗಳನ್ನು ಪ್ರವೇಶಿಸಲು ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಚಿತ್ರಕೃಪೆ: Xeteli
ಅಜ್ಞಾತ ಪ್ರವಾಸಿ ಸ್ಥಳಗಳು:
ಉದಯಗಿರಿಯಲ್ಲಿರುವ ಹಾಥಿಗುಂಫಾ (ಗುಹಾ ಸಂಖ್ಯೆ 14) ಹಾಗೂ ಗಣೇಶಗುಂಫಾ (ಗುಹಾ ಸಂಖ್ಯೆ 10) ತಮ್ಮ ಅದ್ಭುತವಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಚಿತ್ರದಲ್ಲಿರುವುದು ಉದಯಗಿರಿಯ ಹಾಥಿ ಗುಂಫಾ.
ಚಿತ್ರಕೃಪೆ: Bernard Gagnon
ಅಜ್ಞಾತ ಪ್ರವಾಸಿ ಸ್ಥಳಗಳು:
ಉದಯಗಿರಿಯಲ್ಲಿರುವ ಗಣೇಶಗುಂಫಾದ ರಚನೆ.
ಚಿತ್ರಕೃಪೆ: Bernard Gagnon
ಅಜ್ಞಾತ ಪ್ರವಾಸಿ ಸ್ಥಳಗಳು:
ಉದಯಗಿರಿಯಲ್ಲಿರುವ ಬಾಗ್ ಗುಂಫಾ (ಹುಲಿ ಗುಹೆ).
ಚಿತ್ರಕೃಪೆ: Darwinius
ಅಜ್ಞಾತ ಪ್ರವಾಸಿ ಸ್ಥಳಗಳು:
ಉದಯಗಿರಿಯಲ್ಲಿರುವ ಗುಹಾ ಸಂಖ್ಯೆ ಒಂದು ಸಹ ಮೆಚ್ಚುಗೆಗಳಿಸಿದೆ. ಇದನ್ನು ರಾನಿ ಕಾ ನೌರ್ ಎಂದರೆ ರಾಣಿಯ ಖಾಸಗಿ ನಿಲಯ ಎಂದು ಕರೆಯಲಾಗಿದೆ.
ಚಿತ್ರಕೃಪೆ: Bernard Gagnon
ಅಜ್ಞಾತ ಪ್ರವಾಸಿ ಸ್ಥಳಗಳು:
ಉದಯಗಿರಿ ಪಕ್ಕದಲ್ಲೆ ಇರುವ ಖಂಡಗಿರಿ ಗುಹಾ ರಚನೆಗಳು. ಖಂಡಗಿರಿಯಲ್ಲಿ ಒಟ್ಟಾರೆಯಾಗಿ 15 ಗುಹಾ ರಚನೆಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Darwinius
ಅಜ್ಞಾತ ಪ್ರವಾಸಿ ಸ್ಥಳಗಳು:
ಉದಯಗಿರಿಯಿಂದ ನೋಡಿದಾಗ ಖಂಡಗಿರಿಯು ಕಂಡುಬರುವ ರೀತಿ.
ಚಿತ್ರಕೃಪೆ: Kamalakanta777
ಅಜ್ಞಾತ ಪ್ರವಾಸಿ ಸ್ಥಳಗಳು:
ಭೀಮ್ ಬೆಟ್ಕಾ : ಭಾರತ ಉಪಖಂಡದಲ್ಲೆ ಮೊಟ್ಟ ಮೊದಲ ಬಾರಿಗೆ ಮಾನವ ಜೀವಿಸಿದ್ದರ ಬಗ್ಗೆ ಆಧಾರ ಕೊಡುವ ಭೀಮ್ ಬೇಟ್ಕಾ ಕಲ್ಲಿನ ಆಶ್ರಯಗಳು ಪೇಲಿಯೊಲಿಥಿಕ್ ಅಥವಾ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ತಾಣವಾಗಿದೆ. ಈ ವಿಸ್ಮಯಭರಿತ ಕುತೂಹಲಕಾರಿ ತಾಣವಿರುವುದು ಮಧ್ಯ ಪ್ರದೇಶದ ರಾಯ್ಸನ್ ಜಿಲ್ಲೆಯಲ್ಲಿ. ಶಿಲಾಯುಗಕ್ಕೆ ಸಂಬಂಧಿಸಿದ ಶಿಲಾವರ್ಣಚಿತ್ರಗಳನ್ನು ಸಹ ಇಲ್ಲಿ ಕಾಣಬಹುದು. ಆದರೆ ಇವು ಸುಮಾರು 30000 ವರ್ಷಗಳಷ್ಟು ಪುರಾತನವಾಗಿವೆ. ಅಲ್ಲದೆ ಇಲ್ಲಿ ಕಂಡುಬರುವ ಗುಹೆಗಳು ನೃತ್ಯದ ಪ್ರಪ್ರಥಮ ಸಾಕ್ಷ್ಯಗಳನ್ನು ಒದಗಿಸುತ್ತವೆ. ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭೀಮ್ ಬೇಟ್ಕಾದ ಹೆಸರನ್ನು 2003 ರಲ್ಲಿ ಸೇರ್ಪಡೆ ಮಾಡಲಾಯಿತು. ಇತಿಹಾಸಪ್ರಿಯ ಪ್ರವಾಸಿಗರಿಗೆ ಹಾಗು ಪುರಾತತ್ವ ತಜ್ಞರಿಗೆ ಇದೊಂದು ನೆಚ್ಚಿನ ಪ್ರವಾಸಿ ಪ್ರದೇಶವಾಗಿದೆ.
ಚಿತ್ರಕೃಪೆ: Nagarjun Kandukuru
ಅಜ್ಞಾತ ಪ್ರವಾಸಿ ಸ್ಥಳಗಳು:
ಈ ತಾಣದ ಹೆಸರು ಮಹಾಭಾರತದ ಪೌರಾಣಿಕ ಪಾತ್ರವಾದ ಪಾಂಡವರಲ್ಲಿ ಒಬ್ಬನಾದ ಭೀಮನೊಂದಿಗೆ ನಂಟನ್ನು ಹೊಂದಿದೆ. ಭೀಮ್ ಬೇಟ್ಕಾ ಎಂಬ ಹೆಸರು ಭೀಮ್ ಬೈಟ್ಕಾ ಎಂಬ ಶಬ್ದದಿಂದ ವ್ಯುತ್ಪತ್ತಿಯಾಗಿದ್ದು ಇದರ ಅರ್ಥ ಭೀಮನು ಕೂರುವ ಸ್ಥಳ ಎಂದಾಗುತ್ತದೆ. ರಾಯ್ಸನ್ ಜಿಲ್ಲೆಯಲ್ಲಿರುವ ಈ ತಾಣವು ರಾಜಧಾನಿ ಭೋಪಾಲ್ ನಗರದ ದಕ್ಷಿಣಕ್ಕೆ 45 ಕಿ.ಮೀಗಳ ದೂರದಲ್ಲಿದೆ. ಇದರ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಸಸ್ಯ ಸಂಪತ್ತಿನಿಂದ ಆವರಿಸಿದೆ.
ಚಿತ್ರಕೃಪೆ: Sushil Kumar
ಅಜ್ಞಾತ ಪ್ರವಾಸಿ ಸ್ಥಳಗಳು:
ಮೊದಲನೇಯ ವರ್ಗದ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳಲ್ಲಿ ಹಸಿರು ಹಾಗು ಕಡು ಕೆಂಪು ಬಣ್ಣವನ್ನು ಬಳಸಿ ಹುಲಿ, ಬೈಸನ್, ಘೇಂಡಾಮೃಗಗಳಂತಹ ಪ್ರಾಣಿಗಳನ್ನು ದೊಡ್ಡ ಆಕಾರದಲ್ಲಿ ಬಿಡಿಸಲಾಗಿದೆ. ಎರಡನೇಯ ವರ್ಗದ ಪೂರ್ವಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳು ಚಿಕ್ಕ ಗಾತ್ರದ ಕಲಾಕೃತಿಗಳನ್ನು ಒಳಗೊಂಡಿದ್ದು, ಮನುಷ್ಯರ, ಪ್ರಾಣಿಗಳ, ಉಪಕರಣಗಳು, ಬೇಟೆಯಾಡುವ, ಸನ್ನಿವೇಶಗಳನ್ನು ಒಳಗೊಂಡಿವೆ. ಹೀಗೆ ಪೂರ್ವ ಶಿಲಾಯುಗದಿಂದ ಪ್ರಾರಂಭವಾಗಿ ಮಧ್ಯ ಯುಗದವರೆಗೆ ಒಟ್ಟು ಏಳು ವರ್ಗಗಳಲ್ಲಿ ಚಿತ್ರಗಳನ್ನು ಇಲ್ಲಿ ಕಾಣಬಹುದು.
ಚಿತ್ರಕೃಪೆ: Nagarjun Kandukuru
ಅಜ್ಞಾತ ಪ್ರವಾಸಿ ಸ್ಥಳಗಳು:
ಆಮೆಯಂತೆ ರೂಪಗೊಂಡಿರುವ ಸಾವಿರಾರು ವರ್ಷಗಳಷ್ಟು ಪುರಾತನವಾದ ಶಿಲೆ.
ಚಿತ್ರಕೃಪೆ: Nagarjun Kandukuru
ಅಜ್ಞಾತ ಪ್ರವಾಸಿ ಸ್ಥಳಗಳು:
ಚಿತ್ರಕೋಟ ಜಲಪಾತ : ಛತ್ತೀಸಗಡ್ ರಾಜ್ಯದ ಬಸ್ತಾರ ಜಿಲ್ಲೆಯ ಜಗ್ದಲಪುರ್ ಬಳಿಯಿರುವ ಚಿತ್ರಕೋಟ ಜಲಪಾತವು ಒಂದು ಸುಂದರವಾದ ಅಗಲವಾಗಿ ಧುಮುಕುವ ಜಲಪಾತವಾಗಿದ್ದು ಅಷ್ಟೊಂದಾಗಿ ಹೆಸರುವಾಸಿಯಾಗಿಲ್ಲ. ಆದರೆ ಮಳೆಗಾಲದ ಸಮಯದಲ್ಲಿ ಇಂದ್ರಾವತಿ ನದಿಯಿಂದ ರೂಪಗೊಂಡಿರುವ ಈ ಜಲಪಾತವು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ಚಿತ್ರಕೃಪೆ: Iamg
ಅಜ್ಞಾತ ಪ್ರವಾಸಿ ಸ್ಥಳಗಳು:
ಓರ್ಛಾ : ಮಧ್ಯ ಪ್ರದೇಶದ ಝಾನ್ಸಿ ಪಟ್ಟಣದ ಬಳಿಯಿರುವ ಓರ್ಛಾ ಒಂದು ಐತಿಹಾಸಿಕ ಶ್ರೀಮಂತಿಕೆಯುಳ್ಳ ವಿಶಿಷ್ಟ ಪಟ್ಟಣವಾಗಿದೆ. ಬೇತ್ವಾ ನದಿಯ ತಟದಲ್ಲಿರುವ ಸ್ಮಾಧಿ ಸ್ಮಾರಕಗಳು (ಛತ್ತರಿಗಳು) ಇಲ್ಲಿನ ವಿಶೇಷ. ಅಲ್ಲದೆ ವಿಷ್ಣುವಿಗೆ ಮುಡಿಪಾದ ಚತುರ್ಭುಜ ದೇವಸ್ಥಾನವೂ ಸಹ ಮೆಚ್ಚುಗೆಗಳಿಸಿದೆ.
ಚಿತ್ರಕೃಪೆ: Henry Flower
ಅಜ್ಞಾತ ಪ್ರವಾಸಿ ಸ್ಥಳಗಳು:
ರಜಪೂತ್ ಹಾಗೂ ಮುಘಲ್ ನಂಟನ್ನು ಹೊಂದಿರುವ ಓರ್ಛಾ ಪಟ್ಟಣವನ್ನು ಮೊದಲು ರಜಪೂತ ದೊರೆ ರುದ್ರ ಪ್ರತಾಪ ಸಿಂಗನು 16 ನೇಯ ಶತಮಾನದಲ್ಲಿ ಸ್ಥಾಪಿಸಿದನು. ಅಕ್ಬರ್ ಚಕ್ರವರ್ತಿ ಹಾಗೂ ರಜಪೂತ ರಾಣಿ ಜೋಧಾಗೂ ಸಹ ಮಗನಾಗಿದ್ದ ಜಹಾಂಗೀರನ ನೆನಪಿನಾರ್ಥವಾಗಿ ಇಲ್ಲಿ ಜಹಾಂಗೀರ್ ಅರಮನೆಯನ್ನು ರಜಪೂತ ದೊರೆ ನಿರ್ಮಿಸಿದ್ದನ್ನೂ ಸಹ ಕಾಣಬಹುದು.
ಚಿತ್ರಕೃಪೆ: Doron
ಅಜ್ಞಾತ ಪ್ರವಾಸಿ ಸ್ಥಳಗಳು:
ಓರ್ಛಾ ಝಾನ್ಸಿ ಪಟ್ಟಣಕ್ಕೆ ಹತ್ತಿರವಾಗಿದ್ದು ಸುಲಭವಾಗಿ ತೆರಳಬಹುದು. ಮೊದಲು ಝಾನ್ಸಿಗೆ ಭೇಟಿ ನೀಡಿ ಅಲ್ಲಿಂದ ಬಾಡಿಗೆ ರಿಕ್ಷಾ ಅಥವಾ ಟ್ಯಾಕ್ಸಿ ಮಾಡಿಕೊಂಡು ಅರ್ಧ ಘಂಟೆಗಳಲ್ಲಿ ಓರ್ಛಾವನ್ನು ತಲುಪಬಹುದಾಗಿದೆ. ಓರ್ಛಾದಲ್ಲಿರುವ ಚತುರ್ಭುಜ ದೇವಸ್ಥಾನ.
ಚಿತ್ರಕೃಪೆ: Yann
ಅಜ್ಞಾತ ಪ್ರವಾಸಿ ಸ್ಥಳಗಳು:
ಢೋಲವೀರಾ : ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಭಾಚೌ ತಾಲೂಕಿನಲ್ಲಿರುವ ಢೋಲವೀರಾ ಸಿಂಧು ನದಿ ನಾಗರಿಕತೆಗೆ ಸಂಬಂಧಿಸಿದ ಪ್ರಾಚೀನ ತಾಣವಾಗಿದೆ. ಕ್ರಿ.ಪೂ 2650 ರಲ್ಲಿಯೆ ಇಲ್ಲಿ ಜನವಸತಿಯಿತ್ತೆಂದು ತಿಳಿಯಲಾಗಿದೆ. 1967-68 ರಲ್ಲಿ ಭಾರತದ ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞರಾದ ಜೆ.ಪಿ ಜೋಶಿಯವರಿಂದ ಈ ಪ್ರಾಚೀನ ತಾಣವು ಶೋಧಿಸಲ್ಪಟ್ಟಿತು. ನಿಮಗೆ ಅತ್ಯಂತ ಪ್ರಾಚೀನ ನಾಗರಿಕತೆಯನ್ನು ಹೊಂದಿರುವ ಪುರಾತನ ಸ್ಥಳವನ್ನು ನೋಡಲು ಆಸೆಯಿದ್ದಲ್ಲಿ ಈ ತಾಣಕ್ಕೆ ತೆರಳಬಹುದು. ಇದು ಹರಪ್ಪ ನಾಗರಿಕತೆಯ 8 ಪ್ರಮುಖ ತಾಣಗಳ ಪೈಕಿ ಐದನೇಯ ಪ್ರಮುಖ ತಾಣವಾಗಿದೆ.
ಚಿತ್ರಕೃಪೆ: Nagarjun Kandukuru
ಅಜ್ಞಾತ ಪ್ರವಾಸಿ ಸ್ಥಳಗಳು:
ಸಿಮ್ಲಿಪಾಲ್ : ಒಡಿಶಾ ರಾಜ್ಯದ ಮಯೂರಭಂಜ್ ಜಿಲ್ಲೆಯಲ್ಲಿರುವ ಈ ರಾಷ್ಟ್ರೀಯ ಉದ್ಯಾನವು ಒಂದು ಹುಲಿ ಮೀಸಲು ಪ್ರದೇಶವಾಗಿದ್ದು ಅಷ್ಟೊಂದಾಗಿ ಹೆಸರು ಕೇಳಲ್ಪಡದ ಆದರೆ ಭೇಟಿ ನೀಡಲು ಯೋಗ್ಯವಾದ ರಾಷ್ಟ್ರೀಯ ಉದ್ಯಾನವಾಗಿದೆ. ಅನುಮತಿಯ ಮೆರೆಗೆ ಈ ರಷ್ಟ್ರೀಯ ಉದ್ಯಾನವನ್ನು ಪ್ರವೇಶಿಸಬಹುದಾಗಿದ್ದು ಇದು ಅಕ್ಟೋಬರ್ 1 ರಿಂದ ಮರು ವರ್ಷ ಜೂನ್ 15 ರವರೆಗೆ ಮಾತ್ರ ತೆರೆದಿರುತ್ತದೆ.
ಚಿತ್ರಕೃಪೆ: Byomakesh07
ಅಜ್ಞಾತ ಪ್ರವಾಸಿ ಸ್ಥಳಗಳು:
ಹಾರ್ಸ್ಲಿ ಬೆಟ್ಟಗಳು : ಬೆಂಗಳೂರಿನಿಂದ ಸುಮಾರು 145 ಕಿ.ಮೀ ಗಳಷ್ಟು ದೂರದಲ್ಲಿರುವ ಆಂಧ್ರಪ್ರದೇಶದ ಮದನಪಲ್ಲೆ ಪಟ್ಟಣದ ಬಳಿಯಿರುವ ಹಾರ್ಸ್ಲಿ ಬೆಟ್ಟಗಳು ಒಂದು ಹಿತಕರವಾದ, ಕಲ್ಮಶರಹಿತ ವಾತಾವರಣವುಳ್ಳ ಗಿರಿ ಪ್ರದೇಶವಾಗಿದೆ. ಹಿಂದೆ ಇದನ್ನು ಯೆನುಗು ಮಲ್ಲಮ್ಮ ಕೊಂಡ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬ್ರಿಟೀಷ್ ಆಡಳಿತದ ಸಮಯದಲ್ಲಿ ಕಡಪದ ಕಲೆಕ್ಟರ್ ಆಗಿದ್ದ ಡಬ್ಲ್ಯೂ.ಡಿ ಹಾರ್ಸ್ಲಿ ಎಂಬಾತನು ಈ ಪ್ರದೇಶದ ಸೌಂದರ್ಯಕ್ಕೆ ಮಾರು ಹೋಗಿ ಇದನ್ನು ತನ್ನ ಬೇಸಿಗೆಯ ರಜಾ ತಾಣವನ್ನಾಗಿ ಮಾಡಿಕೊಂಡಿದ್ದ. ನಂತರ ಇದಕ್ಕೆ ಹಾರ್ಸ್ಲಿ ಎಂಬ ಹೆಸರು ಬಂದಿತು. ಇದನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಾರಿಯ ಮೂಲಕವಾಗಿ ಸುಲಭವಾಗಿ ತಲುಪಬಹುದು. ಇಲ್ಲಿಗೆ ಸಾಗುವಾಗ ಅಷ್ಟೊಂದು ಅಗಲವಲ್ಲದ ರಸ್ತೆಯ ಮೇಲೆ ಸಾಗುವುದೆ ಒಂದು ರೋಮಾಂಚನಕಾರಿ ಅನುಭವ. ಸುತ್ತಲಿನ ಬೆಟ್ಟಗಳ ರಮಣೀಯ ನೋಟಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.
ಚಿತ್ರಕೃಪೆ: suffering_socrates
ಅಜ್ಞಾತ ಪ್ರವಾಸಿ ಸ್ಥಳಗಳು:
ಕೀ ಬೌದ್ಧ ಮಠ : ಹಿಮಾಚಲ ಪ್ರದೇಶ ರಾಜ್ಯದ ಸ್ಪಿತಿ ಮತ್ತು ಲಾಹೌಲ್ ಜಿಲ್ಲೆಯ ಸ್ಪಿತಿ ಕಣಿವೆಯಲ್ಲಿ ಅದ್ಭುತವಾಗಿ ಸ್ಥಿತವಿರುವ ಕೀ ಬೌದ್ಧ ಮಠವು ಮನಸೆಳೆಯುವಂತಹ ಪ್ರಕೃತಿಯ ನಡುವೆ ಸೂಜಿಗಲ್ಲಿನಂತೆ ಸೆಳೆಯುವ ಪ್ರವಾಸಿ ತಾಣವಾಗಿದೆ. ಮೂಲತಃ ಟಿಬೆಟನ್ ಬೌದ್ಧರ ಮಠವಾಗಿರುವ ಇದು ಲಾಮಾಗಳ ಧಾರ್ಮಿಕ ತಾಣವಾಗಿಯೂ ಪ್ರಚಲಿತದಲ್ಲಿದೆ.
ಚಿತ್ರಕೃಪೆ: 4ocima
ಅಜ್ಞಾತ ಪ್ರವಾಸಿ ಸ್ಥಳಗಳು:
ತವಾಂಗ್ : ಅರುಣಾಚಲ ಪ್ರದೇಶ ರಾಜ್ಯದಲ್ಲಿರುವ ತವಾಂಗ್ ಸಮುದ್ರ ಮಟ್ಟದಿಂದ 10,000 ಅಡಿಗಳಷ್ಟು ಎತ್ತರದಲ್ಲಿರುವ ಸುಂದರ ಪ್ರದೇಶವಾಗಿದೆ. ತವಾಂಗ್ ಪ್ರಮುಖವಾಗಿ ತನ್ನಲ್ಲಿರುವ ತವಾಂಗ್ ಬೌದ್ಧ ಮಠಕ್ಕಾಗಿ ಹೆಸರುವಾಸಿ. ಟಿಬೆಟ್ ಹೊರತು ಪಡಿಸಿ ಈ ಬೌದ್ಧ ಮಠ ಜಗತ್ತಿನ ಎರಡನೇಯ ದೊಡ್ಡ ಬೌದ್ಧ ಮಠವಾಗಿದೆ. ಅಲ್ಲದೆ ಇಲ್ಲಿ ವರ್ಷದ ಡಿಸೆಂಬರ್-ಜನವರಿ ಸಮಯದಲ್ಲಿ ಹಿಮಪಾತವಿದ್ದು ಆ ಸಮಯದಲ್ಲಿ ಪ್ರದೇಶವು ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುತ್ತದೆ. ತವಾಂಗ್ ಗೆ ಭೇಟಿ ನೀಡಲು ಅನುಮತಿ ಪಡೆಯಬೇಕಾಗಿದ್ದು ಇದನ್ನು ಕೊಲ್ಕತ್ತಾ, ದೆಹಲಿ, ಗುವಾಹಟಿ ಮತ್ತು ತೇಜಪುರ್ ಗಳಲ್ಲಿ ಪಡೆಯಬಹುದು. ಅಸ್ಸಾಂನ ತೇಜಪುರದಿಂದ ತವಾಂಗ್ 320 ಕಿ.ಮೀ ಗಳಷ್ಟು ದೂರವಿದ್ದು ರಸ್ತೆಯ ಸಂಪರ್ಕವನ್ನು ಹೊಂದಿದೆ.
ಚಿತ್ರಕೃಪೆ: Abhimanyu