ತಮಿಳುನಾಡು ರಾಜ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾನಬಹುದು. ಅಲ್ಲದೆ ನೂರಾರು ಧಾರ್ಮಿಕ ಕ್ಷೇತ್ರಗಳು ರಾಜ್ಯಾದ್ಯಂತ ಪಸರಿಸಿದ್ದು ಇದನ್ನು ದೇವಾಲಯಗಳ ರಾಜ್ಯ ಎಂತಲೂ ಸಹ ಜನಪ್ರೀಯವಾಗಿ ಕರೆಯುತ್ತಾರೆ.
ಈ ದೇವಾಲಯಗಳ ರಾಜ್ಯದಲ್ಲಿ ದೇವಾಲಯಗಳ ಪಟ್ಟಣವಿರುವುದು ಸಹ ಒಂದು ವಿಶೇಷ. ಅಂತಹ ಒಂದು ಪಟ್ಟಣವಾಗಿದೆ ಕುಂಭಕೋಣಂ. ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿರುವ ಕುಂಭಕೋಣಂನಲ್ಲಿ ಹಲವಾರು ದೇವಾಲಯಗಳಿವೆ.
ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ
ಪ್ರಸ್ತುತ ಲೇಖನದಲ್ಲಿ ಕುಂಭಕೋಣಂನಲ್ಲಿರುವ ವಿಷ್ಣುವಿಗೆ ಮುಡಿಪಾದ ದೇವಾಲಯವೊಂದರ ಕುರಿತು ತಿಳಿಸಲಾಗಿದೆ. ಇದು ಕುಂಭಕೋಣಂನಲ್ಲಿಯೆ ಅತಿ ದೊಡ್ಡದಾದ ವಿಷ್ಣುವಿನ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ವಿಷ್ಣುವಿನನ್ನು ಇಲ್ಲಿ ವಿಶೇಷವಾದ ಅವತಾರದ ಹೆಸರಿನಲ್ಲಿ ಪೂಜಿಸಲಾಗುತ್ತದೆ.
ವಿಷ್ಣುವಿಗೆ ಮುಡಿಪಾದ
ತಮಿಳಿನ ಪ್ರಖ್ಯಾತ ಅಳ್ವಾರ್ ಸಂತರು ಪಟ್ಟಿ ಮಾಡಿರುವ ದಿವ್ಯ ದೇಸಂನ 108 ವಿಷ್ಣು ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಾಲಯವೆ ಸಾರಂಗಪಾಣಿ ದೇವಾಲಯ.
ಚಿತ್ರಕೃಪೆ: Adam63
ಗೋಪುರ
ಕುಂಭಕೋಣಂ ಪಟ್ಟಣದಲ್ಲೆ ವಿಷ್ಣುವಿನ ಅತಿ ದೊಡ್ಡದಾದ ಹಾಗೂ ಎತ್ತರದ ಗೋಪುರವುಳ್ಳ ಅದ್ಭುತ ದೇವಾಲಯ ಇದಾಗಿದ್ದು ಸಾಕಷ್ಟು ಭಕ್ತಾದಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.
ಚಿತ್ರಕೃಪೆ: பா.ஜம்புலிங்கம்
173 ಅಡಿಗಳಷ್ಟು!
ಈ ದೇವಾಲಯದ ರಾಜಗೋಪುರವು 173 ಅಡಿಗಳಷ್ಟು ಎತ್ತರವನ್ನು ಹೊಂದಿದ್ದು ಇದರ ಪಶ್ಚಿಮದ ಪ್ರವೇಶ ದ್ವಾರಕ್ಕೆ ಪೊಟ್ರಮರೈ ಎಂಬ ಬಲು ಪವಿತ್ರವಾದ ವಿಶಾಲವಾದ ಕಲ್ಯಾಣಿಯಿದೆ.
ಚಿತ್ರಕೃಪೆ: Ssriram mt
ನವೀಕರಣ
ಸಾಕಷ್ಟು ಪುರಾತನವಾದ ದೇವಾಲಯ ಇದಾಗಿದ್ದು ಮಧ್ಯಯುಗದ ಚೋಳರು, ವಿಜಯನಗರ ಅರಸರು ಹಾಗೂ ಮದುರೈ ನಾಯಕರಿಂದ ಕಾಲಕ್ಕೆ ತಕ್ಕಂತೆ ನಿರಂತರವಾಗಿ ನವೀಕರಣ ಹೊಂದುತ್ತ ಬಂದಿದೆ.
ಚಿತ್ರಕೃಪೆ: Ssriram mt
ಆರು ಬಾರಿ
ವೈಷ್ಣವ ಸಂಪ್ರದಾಯವನ್ನು ಹೊಂದಿರುವ ಈ ದೇವಾಲಯದಲ್ಲಿ ಪ್ರತಿನಿತ್ಯ ಆರು ಬಾರಿ ವಿವಿಧ ಪೂಜೆಗಳನ್ನೂ ಹಾಗೂ ವರ್ಷಕ್ಕೆ 12 ಉತ್ಸವಗಳನ್ನೂ ಮಾಡಲಾಗುತ್ತದೆ. ಅದರಲ್ಲೂ ಚೈತ್ತಿರಿ ಮಾಸದಲ್ಲಿ ಜರುಗುವ ರಥೋತ್ಸವ ಅತ್ಯಂತ ಆಕರ್ಷಣೀಯವಾಗಿರುತ್ತದೆ.
ಚಿತ್ರಕೃಪೆ: Rsmn
ಸಾಕಷ್ಟು ಭಾರ
ಜೋಡಿ ರಥಗಳು ಈ ದೇವಾಲಯದ ವಿಶೇಷ. ಅಲ್ಲದೆ ಈ ರಥಗಳು ತಮಿಳು ನಾಡಿನಲ್ಲೆ ಮುರನೆಯ ದೊಡ್ಡ ರಥಗಳಾಗಿವೆ. ಪ್ರತಿ ರಥಗಳು ಬರೋಬ್ಬರಿ 300 ಟನ್ ಗಳಷ್ಟು ಭಾರ ತೂಗುತ್ತವೆ.
ಚಿತ್ರಕೃಪೆ: பா.ஜம்புலிங்கம்
ರೋಚಕ ಕಥೆ
ಹೇಮಋಷಿ ಎಂಬ ಮುನಿಯೊಂದಿಗೆ ಈ ದೇವಾಲಯದ ಇತಿಹಾಸ ತಳುಕು ಹಾಕಿಕೊಂಡಿರುವುದನ್ನು ಗಮನಿಸಬಹುದು. ಹೇಮರಿಷಿ ಮುನಿಗಳು ಇಲ್ಲಿರುವ ಪೊಟ್ರಮರೈ ಕಲ್ಯಾಣಿಯ ಬಳಿ ವಿಷ್ಣುವಿನನ್ನು ಕುರಿತು ಅತಿ ಕಠಿಣ ತಪಸ್ಸನ್ನಾಚರಿಸಿದ್ದರು.
ಚಿತ್ರಕೃಪೆ: பா.ஜம்புலிங்கம்
ವರ ಬೇಡು
ವಿಷ್ಣು ಋಷಿಗೆ ಪ್ರತ್ಯಕ್ಷನಾಗಿ ವರ ಬೇಡಲು ಕೇಳಿದಾಗ ಹೇಮ ಋಷಿ ತಮಗೆ ಜಗನ್ಮಾತೆಯಾದ ಲಕ್ಷ್ಮಿ ದೇವಿಯು ಮಗಳ ರೂಪದಲ್ಲಿ ದೊರೆಯಬೇಕೆಂಬ ಬಯಕೆ ಹೊರಹಾಕಿದರು. ಅವರ ತಪಸ್ಸಿಗಾಗಲೆ ಮೆಚ್ಚಿದ್ದ ವಿಷ್ಣು ವರದಾನ ಕರುಣಿಸಿದರು.
ಚಿತ್ರಕೃಪೆ: பா.ஜம்புலிங்கம்
ತಾವರೆ ಹೂವುಗಳು
ತಕ್ಷಣ ಲಕ್ಷ್ಮಿ ದೇವಿಯು ಕಲ್ಯಾಣಿಯ ನೀರಿನಲ್ಲಿ ತಾವರೆ ಹೂವುಗಳ ಸಮೆತಳಾಗಿ ಹೇಮ ಋಷಿಗಳಿಗೆ ಮಗಳ ರೂಪದಲ್ಲಿ ದೊರೆತಳು. ಇನ್ನು ಇವಳು ಋಷಿಯ ಮಗಳಾಗಿದ್ದರಿಂದ ಮದುವೆಯ ಕಾರ್ಯ ಮಾಡಬೆಕಾದ ಸ್ಥಿತಿ ಎದುರಾಯಿತು.
ಚಿತ್ರಕೃಪೆ: பா.ஜம்புலிங்கம்
ವಿಷ್ಣು ಬಂದ
ವಿಧಿ ಲಿಖಿತದಂತೆ ವಿಷ್ಣು ಧನಸ್ಸನ್ನು ಕೈಯಲ್ಲಿ ಹಿಡಿದಿರುವ ವರ ಮಹಾ ಪುರುಷನಾಗಿ ಲಕ್ಷ್ಮಿ ಇದ್ದೆಡೆ ಬಂದು ಅವಳನ್ನು ಸಮ್ಮೋಹನಗೊಳಿಸಿ ಅವಳಲ್ಲಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡು ಇಬ್ಬರು ಮದುವೆ ಮಾಡಿಕೊಳ್ಳಲು ಸಜ್ಜಾದರು.
ಚಿತ್ರಕೃಪೆ: பா.ஜம்புலிங்கம்
ಏನಿದರ ಅರ್ಥ?
ಹೀಗೆ ಲಕ್ಷ್ಮಿಯು ಮಗಳಾಗಿ ಮತ್ತೆ ವಿಷ್ಣುವಿನನ್ನು ಕೈಹಿಡಿದ ಅಪರೂಪದ ಕಥೆಯನ್ನು ಸಾರುವ ಅದ್ಭುತ ದೇವಾಲಯ ಇದಾಗಿದೆ. ಸಂಸ್ಕೃತದಲ್ಲಿ ಸಾರಂಗ ಎಂದರೆ ಧನಸ್ಸು ಎಂತಲೂ ಪಾಣಿ ಎಮ್ದರೆ ಹಿಡಿದವನೆಂತಲೂ ಅರ್ಥವಿದೆ. ಹಾಗಾಗಿ ಇಲ್ಲಿ ವಿಷ್ಣು ಸಾರಂಗಪಾಣಿಯಾಗಿ ಭಕ್ತರನ್ನು ಹರಸುತ್ತಿದ್ದಾನೆ.
ಚಿತ್ರಕೃಪೆ: Milei.vencel
ಚಿಕ್ಕ ಗೋಪುರಗಳು
ಕುಂಭಕೋಣಂ ಪಟ್ಟಣದಲ್ಲೆ ಅತಿ ಎತ್ತರದ ರಾಜ ಗೋಪುರ ಹೊಂದಿರುವ ದೇವಾಲಯ ಇದಾಗಿದ್ದು ಇದರ ಆವರಣದಲ್ಲಿ ನಾಲ್ಕು ಚಿಕ್ಕ ಗೋಪುರಗಳೂ ಸಹ ಇರುವುದನ್ನು ಕಾಣಬಹುದು. ಅಲ್ಲದೆ ಕೆಲವು ಕಲ್ಯಾಣಿಗಳು ದೇವಾಲಯದಾವರಣದಲ್ಲಿದ್ದು ಪವಿತ್ರಮಯ ಪೊಟ್ರಮರೈ ಕಲ್ಯಾಣಿಯು ಮಾತ್ರವೆ ಪ್ರತ್ಯೇಕವಾಗಿದೆ.
ಚಿತ್ರಕೃಪೆ: பா.ஜம்புலிங்கம்
ಭವ್ಯ ರಥ
ವಿಷ್ಣು ಸಾರಂಗಪಾಣಿಯಾಗಿ ಕುದುರೆ ಹಾಗೂ ಆನೆಗಳು ಸಾರಥಿಯಾಗಿ ಓಡಿಸುತ್ತಿರುವ ಭವ್ಯ ರಥದ ಮೂಲಕ ಸ್ವರ್ಗದಿಂದ ಭೂಮಿಗೆ ಬರುತ್ತಾನೆ. ಇದನ್ನೆ ಪ್ರತಿಬಿಂಬಿಸುವಂತಿದೆ ಮುಖ್ಯ ದೇವಾಲಯದಲ್ಲಿರುವ ಕೇಂದ್ರ ರಚನೆ.
ಚಿತ್ರಕೃಪೆ: பா.ஜம்புலிங்கம்
ತಂಜಾವೂರು
ಶ್ರೀರಂಗಂ, ತಿರುಪತಿಯ ನಂತರ ಮೂರನೇಯ ಸ್ಥಾನದಲ್ಲಿದೆ ಸಾರಂಗಪಾಣಿ ದೇವಾಲಯದ ಮಹತ್ವ. ಹಾಗಾಗಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಅಪಾರ. ತಂಜಾವೂರು ಜಿಲ್ಲೆಯಲ್ಲಿರುವ ಕುಂಭಕೋಣಂ ಅನ್ನು ಸುಲಭವಾಗಿ ತಲುಪಬಹುದಾಗಿದೆ. ತಂಜಾವೂರಿನಿಂದ ಸಾಕಷ್ಟು ಬಸ್ಸುಗಳು ಕುಂಭಕೋಣಂಗೆ ತೆರಳಲು ದೊರೆಯುತ್ತವೆ.
ಚಿತ್ರಕೃಪೆ: Ilya Mauter