ಗಜರಾಜ ಎಂದರೆ ಸಾಕು ಆ ಎತ್ತರವಾದ ನಿಲುವು, ಬೃಹದಾಕಾರದ ದೇಹ ಕಣ್ಮುಂದೆ ಹಾಗೆ ಬಂದು ಕಟ್ಟಿದಂತಾಗುತ್ತದೆ. ಇದರ ವಿಚಾರ ಹಾಗೂ ವಿಹಾರದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸಕ್ರೆಬೈಲಿಗೆ ಹೋಗಬೇಕು. ಏಕೆಂದರೆ ಅದೊಂದು ಆನೆಗಳ ಬಿಡಾರ. ಇದು ರಾಜ್ಯದಲ್ಲೇ ಅತಿದೊಡ್ಡ ಬಿಡಾರ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.
ಶತಮಾನದ ಇತಿಹಾಸ ಹೊಂದಿರುವ ಈ ಸಕ್ರೆಬೈಲಿಗೆ ಒಮ್ಮೆ ಮಕ್ಕಳೊಂದಿಗೆ ಹೋಗಬೇಕು. ಅಲ್ಲಿಯ ಆನೆಗಳ ಹಿಂಡು ತಮ್ಮ ಪುಟ್ಟ ಪುಟ್ಟ ಮರಿಗಳೊಂದಿಗೆ ಹೆಜ್ಜೆ ಹಾಕುವುದು ಹಾಗೂ ನೀರಿನಲ್ಲಿ ಸ್ನಾನ ಮಾಡುವುದನ್ನು ನೋಡುವುದೇ ಒಂದು ಚೆಂದ.
ದೊಡ್ಡ ದೇಹವಾದರೂ ಸಸ್ಯಹಾರಿಯಾದ ಈ ಆನೆಗಳ ಸ್ವಚ್ಛಂದವಾದ ಓಡಾಟ ಅವುಗಳ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳಲು ಇದೊಂದು ಉತ್ತಮವಾದ ಪ್ರದೇಶ.
ಸಕ್ರೆಬೈಲು
ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ಸಕ್ರೆಬೈಲು ತೀರ್ಥಹಳ್ಳಿ ರಸ್ತೆಯಲ್ಲಿ ಸಿಗುತ್ತದೆ. ಶಿವಮೊಗ್ಗದಿಂದ 14 ಕಿ.ಮೀ. ದೂರದಲ್ಲಿದೆ. ಇಲ್ಲಿ ನೂರಾರು ಆನೆಗಳ ದಂಡೇ ಇರುತ್ತವೆ. ಇವುಗಳನ್ನು ನುರಿತ ಮಾವುತರು ನಿಯಂತ್ರಿಸುತ್ತಿರುತ್ತಾರೆ.
ಆನೆಗಳಿಗೆ ಉಪಚಾರ
ಇಲ್ಲಿಯ ಆನೆಗಳಿಗೆ ಪ್ರತಿದಿನ 10 ಕೆ.ಜಿ. ಹುಲ್ಲು, 6ರಿಂದ 7 ಕೆ.ಜಿ. ಭತ್ತ, ಕಾಯಿ, ಬೆಲ್ಲ, ಅಕ್ಕಿಯನ್ನು ಸೇರಿಸಿ ಮಾಡಿರುವ ಉಂಡೆಗಳನ್ನು ನೀಡಲಾಗುತ್ತದೆ. ಇವೆಲ್ಲವನ್ನು ತಿನ್ನಿಸಿ ನಂತರ ಕಾಡಿನಲ್ಲಿ ಸುತ್ತಾಡಲು ಬಿಡಲಾಗುತ್ತದೆ. ಇವು ಕಾಡಿಗೆ ಹೋದ ಮೇಲೆ ಮರು ದಿನ ಬೆಳಗ್ಗೆಯೇ ಪುನಃ ಇಲ್ಲಿಗೆ ಬರುವುದು.
ನಾವೇನು ಮಾಡಬಹುದು?
ನೀರಿನಲ್ಲಿ ಬಿದ್ದು ಹೊರಳಾಡುವ ಆನೆಗಳು ತಮ್ಮ ಮರಿಗಳಿಗೆ ಸ್ನಾನ ಮಾಡಿಸುವುದು ನೋಡಬಹುದು. ಇದರೊಟ್ಟಿಗೆ ಸ್ವಲ್ಪ ಉಪಹಾರ ಕೊಂಡೊಯ್ದರೆ ಅವುಗಳನ್ನು ಸವಿಯುತ್ತಾ ಹಿನ್ನೀರಿನಲ್ಲಿ ನೀವು ಸ್ವಲ್ಪ ಸಮಯ ಕಳೆಯಬಹುದು.
ಹತ್ತಿರದಲ್ಲಿ ಏನಿದೆ?
ತುಂಗಾ ಸೇತುವೆ, ಜೋಗ ಜಲಪಾತ, ಕುಂದಾದ್ರಿ ಬೆಟ್ಟಗಳನ್ನು ನೋಡಬಹುದು.
ನೋಡುವ ಸಮಯ
ಇಲ್ಲಿಯ ಆನೆಗಳು ಮುಂಜಾನೆ ಕಾಡಿನಿಂದ ಬಂದು ಮತ್ತೆ ಪುನಃ ಕಾಡಿಗೆ ಹೋಗುವುದರಿಂದ ಬೆಳಗ್ಗೆ 8.30 ರಿಂದ 11 ಗಂಟೆಯವರೆಗೆ ಮಾತ್ರ ನೋಡಲು ಅವಕಾಶ ಇರುತ್ತದೆ.
ದೂರವೆಷ್ಟು?
ಬೆಂಗಳೂರಿನಿಂದ 228 ಕಿ.ಮೀ. ದೂರದಲ್ಲಿದೆ ಸಕ್ರೆಬೈಲು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬಂದು ನಂತರ ಅಲ್ಲಿಯ ಖಾಸಗಿ ವಾಹನದ ಮೂಲಕ ಸಕ್ರೆಬೈಲು ಹಾಗೂ ಇನ್ನಿತರ ಪ್ರದೇಶಗಳನ್ನು ನೋಡಬಹುದು.