ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿಯ ಒಡಲಿನಲ್ಲಿ ಕಂಗೊಳಿಸುವ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಾಕೃತಿಕ ಸೌಂದರ್ಯದಿಂದ ಆಕರ್ಷಿಸುವ ಒಂದು ಸುಂದರ ಪಟ್ಟಣವಾಗಿದೆ ಸಾಗರ. ಕೇವಲ ಪ್ರಾಕೃತಿಕವಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿದೆ, ಕಾರಣ ಇಲ್ಲಿರುವ ಮಾರಿಕಾಂಬೆಯುನೆಲೆಗೊಂಡಿರುವ ಮಾರಿಕಾಂಬಾ ದೇವಾಲಯ.
ಇದರ ಮೂಲವನ್ನು ಗಮನಿಸಿದಾಗ ತಿಳಿದುಬರುವ ವಿಷಯವೆಂದರೆ ಮೊದಲು ಚಿಕ್ಕ ಗೂಡಿನಂತಿದ್ದ ಪೂಜಾ ಸ್ಥಳವೊಂದರಲ್ಲಿ ಅದ್ವೈತ ಪ್ರತಿಪಾದಕರಾದ ಶ್ರೀ ಆದಿ ಗುರು ಶಂಕರಾಚಾರ್ಯರು ಮೊದಲ ಬಾರಿಗೆ ಈ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಅಂದಿನಿಂದ ಈ ಅಂಬೆಯು ನಿರಂತರವಾಗಿ ಪೂಜಿಸಲ್ಪಡುತ್ತಿದ್ದಾಳೆ.
ಚಿತ್ರಕೃಪೆ: Vmjmalali
ಇನ್ನೊಂದು ವಿಶೇಷವೆಂದರೆ ಇಲ್ಲಿ ನಡೆಯುವ ಮಾರಿಕಾಂಬೆಯ ಜಾತ್ರೆ. ಹೌದು ಇದು ವಿಶೇಷವಾಗಿ ಮೂರು ವರ್ಷಗಳಿಗೊಮ್ಮೆ ಬಲು ಅದ್ದೂರಿಯಿಂದ ಜರುಗುತ್ತದೆ. ಇತಿಹಾಸ ಕೆದಕಿದಾಗ ತಿಳಿಯುವ ವಿಷಯವೆಂದರೆ ಈ ಪ್ರಾಂತ್ಯವನ್ನು ಹಿಂದೆ ಆಳುತ್ತಿದ್ದ ಕೆಳದಿ ಅರಸರು ಕ್ರಿ.ಶ 1500 ರಿಂದ 1763 ರ ಮಧ್ಯದ ಅವಧಿಯಲ್ಲಿ ಶ್ರೀ ಮಾರಿಕಾಂಬಾ ದೇವಾಲಯವನ್ನು ಸ್ಥಾಪಿಸಿದ್ದಾರೆ ಎಂದು ತಿಳಿದು ಬರುತ್ತದೆ.
ಈ ವರ್ಷ ಅಂದರೆ 2017 ರಲ್ಲಿ ಫೆಬ್ರುವರಿ 14 ರಿಂದ ಫೆಬ್ರುವರಿ 22 ರವರೆಗೆ ಒಂಭತ್ತು ದಿನಗಳ ಕಾಲ ಈ ಜಾತ್ರೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಪ್ರತಿ ಬಾರಿ ಈ ಜಾತ್ರೆಯು ಮಂಗಳವಾರದಂದು ಪ್ರಾರಂಭವಾಗಿ ಮುಂದಿನ ವಾರದ ಬುಧವಾರದವರೆಗೆ ಅದ್ಭುತವಾಗಿ ನಡೆಯುತ್ತದೆ.
ಚಿತ್ರಕೃಪೆ: Vmjmalali
ಶಿವಮೊಗ್ಗ ಸೇರಿದಂತೆ ಸಾಗರದ ಸುತ್ತಮುತ್ತಲ ಪ್ರದೇಶಗಳಿಂದ ಜನಸಾಗರವೆ ಈ ಜಾತ್ರೆಗೆ ಹರಿದುಬಂದಿರುತ್ತದೆ. ಮೇಲು ಕೀಳುಗಳೆಂಬ ಬೇಧಭಾವವಿಲ್ಲದೇ ಕೆಲಸ ಕಾರ್ಯಗಳು ಸಾಂಗವಾಗಿ ನಡೆಯುತ್ತವೆ. ತಳಿರು ತೋರಣಗಳಿಂದ, ದೀಪಾಲಂಕಾರಗಳಿಂದ ಈ ಸಾಗರ ನಗರ ಕಂಗೊಳಿಸುತ್ತದೆ ಈ ಸಂದರ್ಭದಲ್ಲಿ. ಜಾತ್ರೆ ಆರಂಭಕ್ಕೆ 8 ದಿನಗಳ ಮೊದಲೇ "ಅಂಕೆ ಹಾಕುತ್ತಾರೆ." ನಂತರ ಜಾತ್ರೆಯ ಕೆಲಸ ಸುಗಮ.
ಜಾತ್ರೆ ಮುಗಿಯುವವರೆಗೆ ಈ ಊರಿನವರು ಪರ ಊರಿಗೆ ಹೋಗಬಾರದೆಂಬ ಪ್ರತೀತಿ ಮೊದಲಿನಿಂದಲೂ ಪ್ರಚಲಿತದಲ್ಲಿರುವ ಕಾರಣ ಸಾಮಾನ್ಯವಾಗಿ ಈ ಊರಿನವರು ಬೇರೆಡೆ ಈ ಸಂದರ್ಭದಲ್ಲಿ ಹೋಗುವುದಿಲ್ಲ. ಬದಲಾಗಿ ಬೇರೆಡೆಗಳಿಂದ ಈ ಜಾತ್ರೆಗೆ ಲಕ್ಷಗಟ್ಟಲೆ ಜನ ಬಂದು ಸೇರುತ್ತಾರೆ. ಹೊರಗಡೆಯಿಂದ ಬರುವ ಜನರಿಗೆ ಸ್ಥಳಿಯ ಸಂಘ ಸಂಸ್ಥೆಗಳಿಂದ ಉಚಿತವಾಗಿ ಪಾನೀಯಗಳ, ಭೋಜನದ ವ್ಯವಸ್ಥೆ ಇರುವುದನ್ನೂ ಸಹ ಕಾಣಬಹುದು.
ಚಿತ್ರಕೃಪೆ: Vmjmalali
ಸಾಂಕ್ರಾಮಿಕ ರೋಗಗಳು ಬಾರದಂತೆ ಸಾಕಷ್ಟು ಮೊದಲೇ ಮುನ್ನೆಚ್ಚರಿಕ ತೆಗೆದುಕೊಂಡಿರುತ್ತಾರೆ. ಜಾತ್ರೆಯಲ್ಲಿ ಮಾಯಾಲೋಕ, ವಿಸ್ಮಯ ಲೋಕಗಳ ಸೃಷ್ಟಿಯಾಗಿರುತ್ತದೆ. ಜಾಯಿಂಟ್ ವೀಲ್, ಬಾವಿಯಲ್ಲಿ ಮೋಟಾರ್ ಸೈಕಲ್ ಹೊಡೆಯುವುದು, ಜಾದೂ ಪ್ರದರ್ಶನಗಳು, ವಿವಿಧ ಆಟದ ಸ್ಪರ್ಧೆಗಳು, ಸಿಹಿ ತಿಂಡಿಯ ವಿವಿಧ ಸಾಮಾಗ್ರಿಗಳ, ಅಂಗಡಿಗಳ ಸಾಲುಸಾಲೇ ಸಾಗರದ ಗಾಂಧಿ ಮೈದಾನದಲ್ಲಿ ನಿರ್ಮಾಣವಾಗಿರುತ್ತವೆ.
ಜೊತೆಗೆ ವಿವಿಧ ಇಲಾಖೆಗಳ ವಸ್ತುಪ್ರದರ್ಶನಗಳ ವ್ಯವಸ್ಥೆಗಳಿರುತ್ತವೆ. ಇದೇ ಸಂದರ್ಭದಲ್ಲಿ ನೆಗರೂ ಮೈದಾನದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗಳಿರುತ್ತವೆ. ರಾಜ್ಯದ ನಾನಾ ಭಾಗಗಳಿಂದ ಹೆಸರಾಂತ ಕುಸ್ತಿ ಮಲ್ಲರು ಬಂದಿರುತ್ತಾರೆ. ಎಲ್ಲವೂ ಆಕರ್ಷಣೀಯವಾಗಿರುತ್ತವೆ. ಸಾಗರ ನಗರದ ಸಾಗರ ವೃತ್ತದ ಬಳಿ ಶ್ರೀ ಮಾರಿಕಾಂಬಾ ದೇವಿಯ ಎರಡು ದೇವಾಲಯಗಳಿವೆ.
ಚಿತ್ರಕೃಪೆ: Vmjmalali
ಅವುಗಳಲ್ಲೊಂದು ತವರುಮನೆ. ಬಹಳ ಕಾಲದಿಂದ ಇರುವ ಗುಡಿ. ಎರಡನೇಯದು ಗಂಡನ ಮನೆ. ಸುಂದರ ಹೊರನೋಟವನ್ನು ಹೊಂದಿದೆ. ಮೊದಲ ದಿನವಾದ ಮಂಗಳವಾರ ತವರುಮನೆಯಲ್ಲಿ ಶ್ರೀ ದೇವಿಯನ್ನು ಸ್ಥಾಪಿಸಿ ಎಲ್ಲರೂ ಪೂಜಿಸುತ್ತಾರೆ ಹಾಗೂ ಅದೆ ದಿನ ರಾತ್ರಿ 10 ಗಂಟೆಗೆ ರಾಜಬೀದಿಯಲ್ಲಿ ಮೆರವಣಿಗೆಯು ಅತಿ ವೈಭವ-ಸಡಗರಗಳಿಂದ ನಡೆಯುತ್ತದೆ.
ಒಂಭತ್ತನೆ ದಿನ ರಾತ್ರಿ ಪುನಃ ಅದೆ ರಾಜಬೀದಿಯಲ್ಲಿ ನಡೆಯುವ ಉತ್ಸವದಲ್ಲಿ ಭವ್ಯವಾಗಿ ಅಲಮ್ಕರಿಸಲಾದ ರಥದಲ್ಲಿ ಶ್ರೀ ದೇವಿಯನ್ನು ಕುಳ್ಳಿರಿಸಿ ಮೆರವಣಿಗೆ ಮಾಡುತ್ತ ಜೈಕಾರಗಳನ್ನು ಕೂಗುತ್ತ ಸಾಗರದ ಹೊರ ವಲಯದಲ್ಲಿರುವ ವನದಲ್ಲಿ ಬಿಡಲಾಗುತ್ತದೆ. ಅಂದಿಗೆ ವಿಧ್ಯುಕ್ತವಾಗಿ ಈ ಜಾತ್ರೆಯು ಮುಕ್ತಾಯವಾದಂತೆ.
ಚಿತ್ರಕೃಪೆ: Vmjmalali
ಬಹಳ ಕಾಲದ ಹಿಂದೆ ಸಾಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾರಕ ರೋಗಗಳಾದ ಪ್ಲೇಗ್ ಮತ್ತು ಕಾಲರಾ ಜ್ವರಗಳಂತಹ ಸಾಂಕ್ರಾಮಿಕ ರೋಗಗಳು ಎಲ್ಲೆಡೆ ಹರಡಿ ನೂರಾರು ಜನರನ್ನು ಬಲಿತೆಗೆದುಕೊಂಡಿದ್ದುವು. ಇದರಿಂದ ಚಿಂತಿತರಾಗಿದ್ದ ಊರ್ಇನ ಹಿರಿಯರೆಲ್ಲರೂ ಸೇರಿ ಇದರಿಂದ ಮುಕ್ತಿ ಕೊಡಿಸುವಂತೆ ಈ ದೇವಿಗೆ ಹರಕೆ ಕಟ್ಟಿಕೊಂಡಿದ್ದರು.
ಅದರಂತೆ ಆ ರೋಗಗಳು ಪತ್ತೆಯಿಲ್ಲದಂತೆ ಇಲ್ಲಿಂದ ಮಾಯವಾದವು ಹಾಗೂ ಮತ್ತಿನೆಂದೂ ಇಲ್ಲಿ ಹಿಂತಿರುಗಿ ಸುಳಿಯಲಿಲ್ಲ. ಆ ಕಾರಣ ಎಲರೂ ಮೊದ ಮೊದಲು ಚಿಕ್ಕದಾಗಿ ದೇವಿಯ ಪೂಜಾದಿ ಕಾರ್ಯಗಳನ್ನು ಕೈಗೊಂಡರು. ಇದು ಬರ ಬರುತ್ತ ದೊಡ್ಡ ಪ್ರಮಾಣದಲ್ಲಿ ನೆರವೇರತೊಡಗಿತು. ಮುಂದೆ ಕಾಲಕ್ರಮೇಣ ಮೂರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜಾತ್ರೆ ಮಾಡಲು ನಿರ್ಧರಿಸಲಾಯಿತು.
ಸಾಗರದಷ್ಟು ಆನಂದ ಕರುಣಿಸುವ ಸಾಗರ!
ಸಾಗರವು ಶಿವಮೊಗ್ಗದಿಂದ 70 ಕಿ.ಮೀ ಹಾಗೂ ಬೆಂಗಳೂರಿನಿಂದ 395 ಕಿ.ಮಿ ಗಳಷ್ಟು ದೂರದಲ್ಲಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಬೆಂಗಳೂರಿನಿಂದ ನಿತ್ಯವೂ ಸಾಗರಕ್ಕೆ ತೆರಳಲು ಖಾಸಗಿ ಹಾಗೂ ಸರಕಾರಿ ಬಸ್ಸುಗಳೆರಡರ ಸೌಲಭ್ಯವೂ ಇದೆ.