ಗುರು ಪೂರ್ಣಿಮೆ ಹಿಂದುಗಳ ಪಾಲಿಗೆ ಅತಿ ಪವಿತ್ರವಾದ ದಿನ. ಕೇವಲ ಹಿಂದುಗಳು ಮಾತ್ರವಲ್ಲ, ನೇಪಾಳಿಗರು, ಜೈನರು ಹಾಗೂ ಬೌದ್ಧರಿಗೂ ಸಹ ಇದು ಅಷ್ಟೆ ಪವಿತ್ರವಾದ ದಿನ. ಆಷಾಢ ಮಾಸದ ಅಂದರೆ ಜೂನ್-ಜುಲೈ ಸಂದರ್ಭದಲ್ಲಿ ಬರುವ ಪೂರ್ಣ ಹುಣ್ಣಿಮೆಯ ದಿನವನ್ನು ಸಾಮಾನ್ಯವಾಗಿ ಗುರು ಪೂರ್ನಿಮೆಯ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತದ ಮಹಾಗುರುಗಳ ಪರಮ ಪುಣ್ಯ ಕ್ಷೇತ್ರಗಳು
ಹಿಂದು ಆಧ್ಯಾತ್ಮದಲ್ಲಿ ಗುರುವಿಗೆ ಅತಿ ಪ್ರಮುಖವಾದ ಸ್ಥಾನ ನೀಡಲಾಗಿದೆ. ಸಂಸ್ಕೃತದಲ್ಲಿ "ಗು" ಎಂದರೆ ಅಜ್ಞಾನ, ಅಂಧಕಾರ ಎಂದಾಗುತ್ತದೆ ಹಾಗೂ "ರು" ಎಂದರೆ ಓಡಿಸುವವನು, ತೊಲಗಿಸುವವನು ಎಂದಾಗುತ್ತದೆ. ಹೀಗಾಗಿ "ಗುರು" ಎಂದರೆ ನಮ್ಮ ಅಜ್ಞಾನವನ್ನು ತೊಲಗಿಸಿ ನಮ್ಮನ್ನು ಜ್ಞಾನದ ಕಡೆಗೆ ಕರೆದೊಯ್ಯುವವನು. ಆ ಗುರುವಿನ ಕುರಿತು ಆದರ, ಗೌರವ ವ್ಯಕ್ತಪಡಿಸುವ ದಿನವೆ ಗುರು ಪೂರ್ಣಿಮೆ.
ವ್ಯಾಸ ಮಹರ್ಷಿಗಳು
ಅಲ್ಲದೆ, ಉತ್ತರ ಪ್ರದೇಶದ ಸಾರನಾಥದಲ್ಲಿ ಈ ದಿನದಂದು ಬುದ್ಧನು ತನ್ನ ಪ್ರಥಮೋಪದೇಶ ನೀಡಿರುವುದರಿಂದ ಬೌದ್ಧರಿಗೆ ಇದೊಂದು ಪವಿತ್ರವಾದ ದಿನವಗಿದೆ. ಪ್ರಮುಖವಾಗಿ ಮಹಾಭಾರತದ ನಿರ್ಮಾತೃ, ವೇದಗಳನ್ನು ವಿಂಗಡಿಸಿದವನು, ಬ್ರಹ್ಮ ಸೂತ್ರಗಳನ್ನು ಬರೆದವನು ಎಂಬ ಖ್ಯಾತಿಯ ವೇದ ವ್ಯಾಸರ ಜನಿಸಿದ ದಿನ ಇದಾಗಿದ್ದು ಹಿಂದುಗಳು ವ್ಯಾಸರನ್ನು ಪ್ರಮುಖವಾದ ಗುರುವಿನ ಸ್ಥಾನದಲ್ಲಿರಿಸಿದ್ದಾರೆ.
ಹಾಗಾಗಿ ಅವರಿಗೆ ಮುಡಿಪಾದ ಈ ದಿನವನ್ನು ವ್ಯಾಸ ಪೂರ್ಣಿಮೆ ದಿನವನ್ನಾಗಿಯೂ ಬಹುತೇಕ ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಪ್ರಸ್ತುತ ಲೇಖನದಲ್ಲಿ ವ್ಯಾಸರಿಗೆ ಮುಡಿಪಾದ ಕೆಲವು ಸ್ಥಳಗಳಿದ್ದು ಅವುಗಳ ಕುರಿತು ತಿಳಿಸಲಾಗಿದೆ. ನಿಮಗೇನಾದರೂ ಈ ಸ್ಥಳಗಳಿಗೆ ತೆರಳಲು ಅವಕಾಶ ದೊರೆತರೆ ಮಹಾನ್ ಗುರುವಾದ ವ್ಯಾಸರ ಈ ಆಕರ್ಷಣೆಗಳಿಗೆ ಖಂಡಿತವಾಗಿಯೂ ಭೇಟಿ ನೀಡಿ.
ವ್ಯಾಸ ಮಂದಿರ, ಚಿತ್ರಕೃಪೆ: NBDhande
ಮೊದಲನೆಯದಾಗಿ ವೇದವ್ಯಾಸ ಮಂದಿರ ಅಥವಾ ವೇದವ್ಯಾಸ ದೇವಾಲಯ. ಒಡಿಶಾ ರಾಜ್ಯದ ಸುಂದರಗಡ್ ಜಿಲ್ಲೆಯಲ್ಲಿರುವ ರೌರ್ಕೆಲಾ ಪಟ್ಟಣದಲ್ಲಿ ವ್ಯಾಸ ಮಹರ್ಷಿಗಳಿಗೆ ಮುಡಿಪಾದ ಈ ವಿಶೇಷ ದೇವಾಲಯವಿದೆ. ಗುರು ಪೂರ್ಣಿಮೆಯ ಸಂದರ್ಭದಲ್ಲಿ ಬಹು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ರೌರ್ಕೆಲಾದ ಬಳಿ ಮೂರು ನದಿಗಳಾದ ಶಂಖ, ಕೋಯಲ್ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮವು ಬ್ರಾಹ್ಮನಿ ನದಿಯಾಗಿ ಹರಿಯುತ್ತದೆ. ಈ ಬ್ರಾಹ್ಮನಿ ನದಿ ತಟದಲ್ಲಿ ಸ್ಥಿತವಿರುವ ವೇದವ್ಯಾಸ ದೇವಾಲಯವು ಒಂದು ಪ್ರಮುಖ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದ್ದು ಒಡಿಶಾ ಮಾತ್ರವಲ್ಲದೆ ಜಾರ್ಖಂಡ್, ಛತ್ತೀಸ್ಗಡ್ ರಾಜ್ಯಗಳಿಂದಲೂ ಸಹ ಸಾಕಷ್ಟು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಬ್ರಾಹ್ಮನಿ ನದಿ, ಚಿತ್ರಕೃಪೆ: Sadasiv Swain
ಇನ್ನೊಂದು ದೇವಾಲಯವೆಂದರೆ ಕೇರಳದಲ್ಲಿರುವ ಶ್ರೀ ವೇದ ವ್ಯಾಸ ದೇವಾಲಯ. ಅಲ್ಲೆಪ್ಪಿ ಅಥವಾ ಅಲಪುಳ ಜಿಲ್ಲೆಯ ಕುಟ್ಟನಾಡ್ ಪ್ರದೇಶದ ನೀರಾಟ್ಟಪುರಂ ಎಂಬ ಗ್ರಾಮದಲ್ಲಿ ಈ ದೇವಾಲಯವಿದ್ದು ಮುಖ್ಯ ಪ್ರತಿಷ್ಠಾಪನೆಯಾಗಿ ವೇದ ವ್ಯಾಸರನ್ನು ನಂತರದಲ್ಲಿ ಆಂಜನೇಯಸ್ವಾಮಿಯನ್ನು ಆರಾಧಿಸಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಸಾಕಷ್ಟು ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ವ್ಯಾಸ ಗುಹೆ, ಚಿತ್ರಕೃಪೆ: Venkats278
ಇನ್ನೂ ಮೂರನೇಯದಾಗಿ ವ್ಯಾಸ ಗುಹೆ. ಇದು ಹಿಮಾಚಲ ಪ್ರದೇಶ ರಾಜ್ಯದ ಬಿಲಾಸಪುರ್ ಪಟ್ಟಣದಿಂದ ಎರಡು ಕಿ.ಮೀ ದೂರದಲ್ಲಿರುವ ಮಾನಾ ಎಂಬ ಗ್ರಾಮದ ಬಳಿ ಸ್ಥಿತವಿದೆ. 5000 ಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾದ ಇದೊಂದು ದೊಡ್ಡದಾದ ಗುಹೆಗಳ ಸಂಕೀರ್ಣವಾಗಿದ್ದು ಪ್ರತೀತಿಯಂತೆ ಈ ಗುಹೆಗಳಲ್ಲಿ ವ್ಯಾಸ ಮಹರ್ಷಿಗಳು ತಪಗೈಯುತ್ತ ಮಹಾಭಾರತ, 18 ಪುರಾಣಗಳು, ಬ್ರಹ್ಮಸೂತ್ರಗಳನ್ನು ಬರೆದಿರುವುದಲ್ಲದೆ ವೇದಗಳನ್ನು ವಿಂಗಡಿಸಿದರೆನ್ನಲಾಗಿದೆ. ಇನ್ನೊಂದು ವಿಷಯವೆಂದರೆ ಗುಹೆಯಲ್ಲಿ ವ್ಯಾಸರು ಮಹಾಭಾರತವನ್ನು ಬೋಧಿಸುತ್ತಿದ್ದಾಗ ಗುಹೆಯ ಕೆಳ ಭಾಗದಲ್ಲಿದ್ದ ಗಣೇಶನು ಅದನ್ನು ಬರೆದನೆನ್ನಲಾಗಿದೆ.