ರೈಲು ಪ್ರಯಾಣವೆಂದರೆ ಬಹುತೇಕ ಎಲ್ಲರಿಗೂ ತುಂಬ ಪ್ರೀತಿ. ಕಡಿದಾದ ಬೆಟ್ಟ ಗುಡ್ಡಗಳ ಮಧ್ಯೆ, ಜಲಪಾತಗಳ ಪಕ್ಕದಲ್ಲಿ, ಆಳವಾದ ಕಣಿವೆಗಳ ಬದಿಯಲ್ಲಿ....ರಸ್ತೆಯ ಅಗಲಕ್ಕಿಂತಲೂ ಚಿಕ್ಕದಾದ ಎರಡು ಉಕ್ಕಿನ ಕಂಬಿಗಳ ಮೇಲೆ, ಬಸ್ಸುಗಳಿಗಿಂತಲೂ ಅಗಲವಾದ ಬೋಗಿಗಳನ್ನು ಹೊತ್ತು ಕೂ ಕೂ ಎಂದು ಕೂಗುತ್ತಾ (ಇಂದು ಮಾಡರ್ನ್ ಸದ್ದು ಮಾತ್ರ) ತನ್ನದೆ ಆದ ತಾಳಬದ್ಧವಾದ ಬೀಟ್ ಸದ್ದುಗಳನ್ನು ಹೊರಹೊಮ್ಮಿಸುತ್ತ ಚಲಿಸುತ್ತಿರುವಾಗ ಆಗುವ ಆನಂದ ಹೇಳತೀರದು. ಭಾರತದಲ್ಲಿ ಅನೇಕ ಕಡೆ ಸಹಜ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾದ ರೈಲು ಮಾರ್ಗಗಳಿವೆ. ಅವುಗಳಲ್ಲೊಂದಾಗಿದೆ ಗ್ರೀನ್ ರೂಟ್ ಅಥವಾ ಹಸಿರುಪಥ.
ಬೆಂಗಳೂರಿನಿಂದ ಮಂಗಳೂರಿನ ವರೆಗಿರುವ ರೈಲು ಮಾರ್ಗವು ಪಶ್ಚಿಮ ಘಟ್ಟದ ಕೆಲ ನಿರ್ದಿಷ್ಟ ಭಾಗದ ಮೂಲಕ ಸಾಗಿ ಹೋಗುತ್ತದೆ. ಈ ಭಾಗದಲ್ಲಿ ಸಂಚರಿಸುವಾಗ ಪ್ರಯಾಣಿಕರು ಆಳವಾದ ಕಣಿವೆ ಪ್ರದೇಶಗಳಲ್ಲದೆ, ಹಸಿರು ಹಾಸಿಗೆ ಹೊತ್ತ ಎತ್ತರದ ಬೆಟ್ಟಗುಡ್ಡಗಳು, ಅಲ್ಲಲ್ಲಿ ಕವಲೊಡೆದು ಹರಿಯುವ ಚಿಕ್ಕ ಪುಟ್ಟ ತೊರೆಗಳ ಜೊತೆಗೆ ಸುಮಾರು 60 ಕ್ಕೂ ಅಧಿಕ ಸುರಂಗಮಾರ್ಗಗಳ ಮೂಲಕ ಪ್ರಯಾಣಿಸಬೇಕಾಗುತ್ತದೆ. ಚಾರಣ ಮಾಡ ಬಯಸುವವರಿಗೂ ಕೂಡ ಇದೊಂದು ಉತ್ಕೃಷ್ಟ ಮಟ್ಟದ ಅನುಭೂತಿಯನ್ನು ನೀಡುವ ಮಾರ್ಗವಾಗಿದೆ. ಹಾಗಾದರೆ ನಾವೂ ಒಮ್ಮೆ ಈ ಸ್ಲೈಡುಗಳ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸೋಣವೆ?
ಯಶವಂತಪುರ:
ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಣ್ಣೂರಿನವರೆಗೆ ಚಲಿಸುವ ಈ ರೈಲು ನಿರ್ಗಮಿಸುವುದು ಯಶವಂತಪುರ ರೈಲು ನಿಲ್ದಾಣದಿಂದ. ಪ್ರಸ್ತುತ, ಕಣ್ಣೂರು ಎಕ್ಸ್ ಪ್ರೆಸ್ ಹೆಸರಿನ(ಸಂಖ್ಯೆ:16517), ವಾರದ ಏಳೂ ದಿನ ಲಭ್ಯವಿರುವ ಈ ರೈಲು ಯಶವಂತಪುರ ನಿಲ್ದಾಣದಿಂದ ರಾತ್ರಿ 8 ಘಂಟೆ 20 ನಿಮಿಷಕ್ಕೆ ಹೊರಡುತ್ತದೆ. ಆದರೆ ಈ ಮಾರ್ಗದಲ್ಲಿ ಸುಂದರ ನಿಸರ್ಗದ ದೃಶ್ಯಗಳು ಎದುರಾಗುವುದರಿಂದ ಬೆಳಗಿನ 7 ಘಂಟೆ 30 ನಿಮಿಷಕ್ಕೆ ಹೊರಡುವ ಯಶವಂತಪುರ ಕಾರವಾರ ಎಕ್ಸ್ ಪ್ರೆಸ್ ರೈಲಿನ ಮೂಲಕ ಹೊರಡುವುದು ಸೂಕ್ತ. ಈ ಮಾರ್ಗವು ತುಮಕೂರು, ಅರಸಿಕೆರೆ, ತಿಪಟೂರಿನ ಮೂಲಕ ಹಾಸನವನ್ನು ತಲುಪುತ್ತದೆ. ಪ್ರಸ್ತುತ, ವಾರದಲ್ಲಿ ಕೇವಲ ಸೋಮ, ಬುಧ ಹಾಗು ಶುಕ್ರವಾರಗಳಂದು ಚಲಿಸುವ ಈ ರೈಲಿನ ಸಂಖ್ಯೆ 16515. ಇದರ ಕೊನೆಯ ನಿಲ್ದಾಣ ಕಾರವಾರ.
ಬೆಂಗಳೂರು ಮುಖ್ಯ ರೈಲು ನಿಲ್ದಾಣ:
ಯಶವಂತಪುರದಿಂದ ಕೆಲವೇ ನಿಮಿಷಗಳಲ್ಲಿ ಇದು ಬೆಂಗಳೂರಿನ ಮುಖ್ಯ ರೈಲು ನಿಲ್ದಾಣಕ್ಕೆ ಬರುತ್ತದೆ (ರಸ್ತೆ ಮುಖಾಂತರ ಘಂಟೆಗಳೆ ಬೇಕು!). ಯಶವಂತಪುರದಿಂದ ಟಿಕೆಟ್ ಕಾಯ್ದಿರಿಸಿದ್ದರೂ ಸಹ ಇಲ್ಲಿಂದ ರೈಲು ಹತ್ತುವುದು ಕೂಡ ಒಂದು ಉತ್ತಮ ಆಯ್ಕೆ.
ಮಂಡ್ಯ:
ಬೆಂಗಳೂರಿನಿಂದ ಹೊರಟ ರೈಲು ನಂತರ ತಲುಪುವ ಮುಖ್ಯ ತಾಣವೆಂದರೆ ಕರ್ನಾಟಕದ ಸಕ್ಕರೆ ಜಿಲ್ಲೆ ಮಂಡ್ಯ. ಹಲವಾರು ಗಮ್ಯ ಪ್ರವಾಸಿ ತಾಣಗಳನ್ನು ಹೊಂದಿರುವ ಮಂಡ್ಯ ಜಿಲ್ಲೆಯು ತನ್ನಲ್ಲಿರುವ ಮೇಲುಕೋಟೆಯ ಯೋಗನರಸಿಂಹ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
ಮೈಸೂರು:
ಸಕ್ಕರೆಯನ್ನು ಸವಿದು ನಂತರ ರೈಲು ತನ್ನ ವೇಗವನ್ನು ವೃದ್ಧಿಸುತ್ತ ತಲುಪುವ ತಾಣ ಕರ್ನಾಟಕದ ಪಾರಂಪರಿಕ ಸಾಂಸ್ಕೃತಿಕ ಕೇಂದ್ರವಾದ ಮೈಸೂರು ನಗರವನ್ನು. ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಮೈಸೂರು ನಗರವು ನೋಡಲು ಒಂದು ಚೆಂದದ ಚಂದನ ನಗರ.
ಕೃಷ್ಣರಾಜನಗರ: ಚುಂಚನಕಟ್ಟೆ ಜಲಪಾತ
ಮೈಸೂರು ಜಿಲ್ಲೆಯ ಕೃಷ್ಣರಾಜ ನಗರವು ಮೈಸೂರಿನ ನಂತರ ಬರುವ ಪಟ್ಟಣ. ಪಟ್ಟಣದಿಂದ 13 ಕಿ.ಮೀ ದೂರದಲ್ಲಿರುವ ಚುಂಚನಕಟ್ಟೆ ಜಲಪಾತವು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳ.
ಹೊಳೇನರಸೀಪುರ: ಅರಕಲ್ಗುಡಿನ ಹೇಮಾವತಿ ಆಣೆಕಟ್ಟು
ಹಾಸನ ಜಿಲ್ಲೆಯ ಹೊಳೇನರಸೀಪುರವು ಕೃಷ್ಣರಾಜನಗರ ಅಥವಾ ಕೆ.ಆರ್ ನಗರದ ನಂತರ ಬರುವ ತಾಣ. ಕಾವೇರಿ ನದಿಯ ಉಪನದಿಯಾದ ಹೇಮಾವತಿ ನದಿ ತಟದಲ್ಲಿರುವ ಈ ಸ್ಥಳವು ಆರಾಧ್ಯ ದೈವ ವಿಷ್ಣುವಿನ ಎಂಟನೇಯ ಅವತಾರ ನರಸಿಂಹನಿಂದಾಗಿ ತನ್ನ ಹೆಸರು ಪಡೆದುಕೊಂಡಿದೆ.
ಹಾಸನ:
ಬಡವರ ಊಟಿ ಎಂಬ ನಾಮಧೇಯವನ್ನು ಪಡೆದಿರುವ ಹಾಸನವು ನಂತರದ ನಿಲ್ದಾಣ. ಈ ಚಿತ್ರದಲ್ಲಿ ಕಾಣುತ್ತಿರುವುದು ಹಾಸನದ ನವ ನಿರ್ಮಿತ ಮುಖ್ಯ ಬಸ್ ನಿಲ್ದಾಣ. ಇದರ ನಂತರದಿಂದ ಪಶ್ಚಿಮ ಘಟ್ಟಗಳ ವಿಹಂಗಮ ಪ್ರಕೃತಿ ದೃಶ್ಯಗಳ ರಸದೌತಣವು ಪ್ರ್ರರಂಭವಾಗುತ್ತದೆ.
ಸಕಲೇಶಪುರ:
ಹಾಸನ ಜಿಲ್ಲೆಯ ಸಕಲೇಶಪುರವು ಪಶ್ಚಿಮ ಘಟ್ಟದಲ್ಲಿ ಬರುವ ಮಲೆನಾಡಿನ ಒಂದು ಭವ್ಯವಾದ ಗಿರಿಧಾಮ ಪ್ರದೇಶವಾಗಿದೆ. ಮೈನೆರೆದು ನಿಂತಿರುವ ಹಸಿರು, ಪ್ರಕೃತಿಯ ಮಾದಕತೆ, ಸುಂದರ ಕಾಫಿ ತೋಟಗಳು ಈ ಪ್ರದೇಶದ ಹೈಲೈಟ್ಸ್. ಈ ತಾಣದಿಂದ ಮುಂದೆ ರೈಲಿನಲ್ಲಿ ಚಲಿಸುತ್ತ ಪ್ರಕೃತಿಯ ವಿಹಂಗಮ ದೃಶ್ಯಗಳನ್ನು ನಿಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲು ಮರೆಯಬೇಡಿ.
ಒಂದು ಸುಂದರ ನೋಟ:
ಸಕಲೇಶಪುರ ಹಾಗು ಕುಕ್ಕೆ ಮಧ್ಯದ ರೈಲು ಮಾರಗದಲ್ಲಿ ಕಾಣಬಹುದಾದ ಒಂದು ಸುಂದರ ದೃಶ್ಯ.
ಇನ್ನೊಂದು ದೃಶ್ಯ:
ಸಕಲೇಶಪುರ ಹಾಗು ಕುಕ್ಕೆ ಮಧ್ಯದ ರೈಲು ಮಾರಗದಲ್ಲಿ ಕಾಣಬಹುದಾದ ಒಂದು ಸುಂದರ ದೃಶ್ಯ.
ರೋಮಾಂಚನ:
ಸಕಲೇಶಪುರ ಹಾಗು ಕುಕ್ಕೆ ಮಧ್ಯದ ರೈಲು ಮಾರಗದಲ್ಲಿ ಕಾಣಬಹುದಾದ ಒಂದು ಸುಂದರ ದೃಶ್ಯ.
ಮೈಮನ ಪುಳಕಿತಗೊಳಿಸುವ ದೃಶ್ಯ:
ಸಕಲೇಶಪುರ ಹಾಗು ಕುಕ್ಕೆ ಮಧ್ಯದ ರೈಲು ಮಾರಗದಲ್ಲಿ ಕಾಣಬಹುದಾದ ಒಂದು ಸುಂದರ ದೃಶ್ಯ.
ಸುಬ್ರಮಣ್ಯ ರಸ್ತೆ:
ಮಾರ್ಗದಲ್ಲಿ ಬರುವ ಎಲ್ಲ ಸೌಂದರ್ಯಮಯ ದೃಶ್ಯಗಳನ್ನು ಸವಿದು ನಂತರ ರೈಲು ತಲುಪುವ ನಿಲ್ದಾಣ ಕರ್ನಾಟಕದ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಮಣ್ಯ. ನಿಲ್ದಾಣದಿಂದ ಈ ಶ್ರೀ ಕ್ಷೇತ್ರ ಇರುವುದು 6 ಕಿ.ಮೀ ದೂರದಲ್ಲಿ ಹಾಗು ಇಲ್ಲಿಂದ ಅನೇಕ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯಲು ಲಭ್ಯವಿರುತ್ತವೆ.
ಮಂಗಳೂರು:
ಕಬಕ ಪುತ್ತೂರು ಹಾಗು ಬಂಟವಾಳದ ಮೂಲಕ ಹಾದು ಹೋಗುವ ರೈಲು ಬಂದರು ನಗರಿ ಮಂಗಳೂರು ಜಂಕ್ಷನ್ ಗೆ ಬಂದು ತಲುಪುತ್ತದೆ.