ಬೆಂಗಳೂರಿನಲ್ಲಿರುವ ಪ್ರಸಿದ್ದ ದೆವಾಲಯಗಳಲ್ಲಿ ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು. ಈ ವರ್ಷ ಡಿ. 12 ರಿಂದ ಡಿ. 23 ರ ವರೆಗೆ 50 ನೇ ವರ್ಷದ ಹನುಮಜಯಂತಿ ಉತ್ಸವವನ್ನು ಈ ದೇವಾಲಯದಲ್ಲಿ ನಡೆಸಲಾಗುತ್ತಿದೆ. ರಾಗಿ ಗುಡ್ಡ ಬರೀ ದೇವಸ್ಥಾನ ಮಾತ್ರವಲ್ಲ ಅಲ್ಲಿ ಇನ್ನೇನಿದೆ ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ.
ಎಲ್ಲಿದೆ ಈ ದೇವಾಲಯ?
ರಾಗಿಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿರುವ ರಾಗಿಗುಡ್ಡ ಪ್ರಸನ್ನಾಂಜನೇಯ ದೇವಾಲಯವು ಬೆಂಗಳೂರಿನ ಜಯನಗರ 9 ನೇಯ ಬ್ಲಾಕಿನಲ್ಲಿರುವ ಪುಟ್ಟ ಬೆಟ್ಟದ ಮೇಲೆ ನೆಲೆಸಿದೆ. ದೇವಾಲಯ ಸಂಕೀರ್ಣವು ಐದು ಎಕರೆಯಷ್ಟು ವಿಸ್ತಾರವಾಗಿ ಹರಡಿದೆ.
ರಾಗಿದಿಬ್ಬದಿಂದ ಉದ್ಭವವಾಗಿದ್ದು
ರಾಗಿದಿಬ್ಬದಿಂದ ಉದ್ಭವವಾದದ್ದು ಮತ್ತು ಬೆಟ್ಟದ ಮೇಲೆ ಇದ್ದಿದ್ದರಿಂದ ಇಲ್ಲಿಗೆ ರಾಗಿ ಗುಡ್ಡ ಎನ್ನಲಾಗುತ್ತದೆ. ಶನಿವಾರ ಆಂಜನೇಯನಿಗೆ ವಿಶೇಷವಾದ ದಿನ ಹಾಗಾಗಿ ರಾಗಿಗುಡ್ಡದಲ್ಲಿ ವಿಶೇಷವಾದ ಪೂಜೆ ನಡೆಯುತ್ತೆ.
ಇತರ ಗುಡಿಗಳು
ಗುಡ್ಡದ ಮೇಲೆ ನೆಲೆಸಿರುವ ಆಂಜನೇಯನ ಜೊತೆಗೆ ಇಲ್ಲಿನ ದೇವಾಲಯ ಆವರಣದಲ್ಲಿ ರಾಮ, ಲಕ್ಷಣ ಸೀತೆ, ರಾಜರಾಜೇಶ್ವರಿ, ದಕ್ಷಿಣಮೂರ್ತಿ, ಗಣೇಶ ಹಾಗೂ ನವಗ್ರಹಗಳ ಗುಡಿಗಳನ್ನೂ ಕಾಣಬಹುದು.
ದಂತಕಥೆ
ರಾಗಿ ಬೆಳೆಯುತ್ತಿದ್ದ ಹೊಲವೊಂದಕ್ಕೆ ಬೈರಾಗಿಯೊಬ್ಬ ಭಿಕ್ಷೆ ಕೇಳಲು ಹೋಗಿದ್ದನಂತೆ. ಸಾಮಾನ್ಯವಾಗಿ ಕೈಹಿಡಿತವಿದ್ದ ಅತ್ತೆಯೊಬ್ಬಳು ಇಂಥ ಬೈರಾಗಿಗಳಿಗೆ ಒಂದೆರಡು ಮುಷ್ಟಿ ಮಾತ್ರರಾಗಿ ಕೊಡುತ್ತಿದ್ದಳಂತೆ. ಅತ್ತೆ ಇಲ್ಲದ ದಿನ ಬಂದ ಬೈರಾಗಿಗೆ, ಸೊಸೆ ಮೊರದ ತುಂಬ ರಾಗಿ ದಾನವಾಗಿ ನೀಡಿದ ಸಂದರ್ಭದಲ್ಲಿ ಅತ್ತೆಯ ಕಣ್ಣಿಗೆ ಬಿದ್ದು, ಅದನ್ನು ಆಕೆ ಮರು ಕಸಿದಳಂತೆ.
ರಾಗಿಯ ಬಣವೆ ಕಲ್ಲಾಗಿದ್ದು
ಇದರಿಂದ ಕೋಪಗೊಂಡ ಸೊಸೆಯು ತಾನು ಪತಿವೃತೆಯಾಗಿದ್ದರೆ ಇಡೀ ರಾಗಿಯ ಬಣವೆ ಕಲ್ಲಾಗಲಿ ಎಂದು ಶಾಪ ನೀಡಿದಳಂತೆ. ಅದರಂತೆಯೆ ರಾಗಿಯ ಬಣ ಗುಡ್ಡವಾಯಿತಂತೆ. ಹಾಗಾಗಿ ಆ ಗುಡ್ಡ ಹಾಗೂ ಸುತ್ತಲ ಶಿಲಾ ಪ್ರದೇಶಕ್ಕೆ ರಾಗಿಗುಡ್ಡ ಎಂಬ ಹೆಸರು ಬಂತು ಎನ್ನುವ ನಂಬಿಕೆಯಿದೆ.
ಅಕ್ಕಿಸೇವೆ
ದೇವಸ್ಥಾನದ ಒಳಗೆ ಬರುವ ಭಕ್ತರು ಲೋಟದಲ್ಲಿಟ್ಟಿರುವ ಅಕ್ಕಿಯನ್ನು ಐದು ರೂಪಾಯಿಗೆ ಕೊಂಡು ಅದನ್ನು ಅನ್ನಪೂರ್ಣೇಯ ಮೇಲೆ ಅಭೀಷೇಕ ಮಾಡುತ್ತಾರೆ. ಇದನ್ನು ಅಕ್ಕಿ ಸೇವೆ ಎನ್ನುತ್ತಾರೆ.
ಅಶ್ವಥ ಮರ
ಇನ್ನು ಇಲ್ಲಿ ಹಲವಾರು ವರ್ಷಗಳಿಂದ ಇರುವ ಅಶ್ವಥ ಮರವನ್ನು ಇಲ್ಲಿ ಕಾಣಬಹುದು. ಅಶ್ವಥ ಮರ ಸುತ್ತಿದ್ರೆ ಬೇಡಿಕೆ ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರದ್ದು.
ಪ್ರಸಾದ
ಆಂಜನೇಯ ದರ್ಶನ ಪಡೆದು ಪ್ರಸಾದ ತೆಗೆದುಕೊಳ್ಳದೇ ಹೋಗುವುದಿಲ್ಲ. ಪ್ರಸಾದದ ರೂಪದಲ್ಲಿ ನೀಡಲಾಗುವ ಪುಳಿಯೋಗರೆ ಎಲ್ಲರಿಗೂ ಅಚ್ಚುಮೆಚ್ಚು. ಪ್ರತಿಶನಿವಾರ ಅನ್ನದಾನ ನಡೆಯುತ್ತದೆ. ಭಕ್ತರಿಗೆ ಕುಳಿತುಕೊಳ್ಳಲು ಡೈನಿಂಗ್ ಹಾಲ್ ಕೂಡಾ ಇದೆ.
ಪೂಜೆಗಳು
ಬೆಳಗ್ಗೆ 8: 30ಕ್ಕೆ ಗೋಪೂಜೆಯಿಂದ ಪ್ರಾರಂಭವಾಗುತ್ತದೆ. ಪ್ರತಿ ತಿಂಗಳು ಸಂಕಷ್ಟಿ ದಿನ ಮಹಾಗಣಪತಿ ಹೋಮ, ಸೃಷ್ಠಿಯ ದಿನ ಸುಬ್ರಹ್ಮಣ್ಯ ಹೋಮ ಹಾಗು ಪೌರ್ಣೀಮೆಯಂದು ಧನ್ವಂತಿ ಹೋಮ, ಸತ್ಯನಾರಾಯಣ ಹೋಮ ನಡೆಯುತ್ತದೆ.
ಹನುಮಜಯಂತಿ ಉತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ.
ದರ್ಶನ ಸಮಯ
ಈ ದೇವಾಲಯವು 08: 00-11 ರಿಂದ 30 ರವರೆಗೆ ಮತ್ತು 05: 00-08: 30 ಕ್ಕೆ ತೆರೆದಿರುತ್ತದೆ, ಆದರೆ ಶನಿವಾರದಂದು ಮತ್ತು ಭಾನುವಾರದಂದು ಕ್ರಮವಾಗಿ 12:30 ಮತ್ತು 09:00 ತನಕ ತೆರೆದಿರುತ್ತದೆ.
ಸಮಾಜಿಕ ಕಾರ್ಯಗಳು
ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಈ ದೇವಾಲಯವು ಬಡ ಮಕ್ಕಳಿಗೆ ಪ್ರೌಢಶಾಲೆಯ ತನಕ ಶಿಕ್ಷಣವನ್ನು ನೀಡುತ್ತಿದೆ. ಸಂಜೆಯಲ್ಲಿ ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಸಂಜೆ ತರಗತಿಗಳು ನಡೆಯುತ್ತಿವೆ.
1200 ವಿದ್ಯಾರ್ಥೀಗಳು ಶಿಕ್ಷಣ ಪಡೆಯುತ್ತಿದ್ದಾರೆ
ಮುಂಜಾನೆ ಹಾಗೂ ಮಧ್ಯಾಹ್ನ ಯೋಗ ತರಗತಿಗಳು, ಉಚಿತ ಚಿಕಿತ್ಸಾಲಯಗಳು ತೆರೆಯಲಾಗಿದೆ. ಭಕ್ತಾದಿಗಳ ನೆರವಿನಿಂದ ಕಲ್ಯಾಣ ಮಂಟಪ, ಪ್ರವಚನ ಮಂದಿರಗಳು ನಿರ್ಮಾಣವಾದವು. ನಿತ್ಯ ಅನ್ನ ದಾಸೋಹ ಕಾರ್ಯಕ್ರಮವೂ ಚಾಲ್ತಿಗೆ ಬಂದಿದೆ. ಸುಮಾರು 1200 ವಿದ್ಯಾರ್ಥೀಗಳು ಶಿಕ್ಷಣ ಪಡೆಯುತ್ತಿದ್ದಾರೆ.
ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದ ಚಿತ್ರಗಳು
ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದ ಚಿತ್ರಗಳು
ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದ ಚಿತ್ರಗಳು
ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದ ಚಿತ್ರಗಳು