ನೋಡಿ ನಮ್ಮ ಭವ್ಯ ಭಾರತದಲ್ಲಿ ಜನರು ಎಂತೆಂತಹ ಸವಾಲುಗಳನ್ನು ಎದುರಿಸಿದರೂ ಅದಕ್ಕೆ ತಕ್ಕುದಾದ ಉಪಶಮನಗಳು ಅಥವಾ ಪರಿಹಾರ ಮಾರ್ಗಗಳು ಧಾರ್ಮಿಕವಾಗಿ ಲಭ್ಯವಿದ್ದೆ ಇರುತ್ತದೆ. ಸಾಮಾನ್ಯವಾಗಿ ಪುರುಷ ಅಥವಾ ಸ್ತ್ರೀಯು ಮದುವೆಯ ವಯಸ್ಸಿಗೆ ಬಂದಾಗ ನೂರೆಂಟು ಕನಸುಗಳನ್ನು ಕಾಣುತ್ತಾರೆ.
ಸ್ತ್ರೀ-ಪುರುಷರಿಬ್ಬರೂ ತಮ್ಮದೆ ಆದ ಇಚ್ಛೆಗಳನ್ನು ಹೊಂದಿದ್ದು ಅಂತಹ ವ್ಯಕ್ತಿಗಳನ್ನು ಮದುವೆಯಾಗಬೇಕೆಂದು ಅಂದುಕೊಳ್ಳುವುದು ಸಾಮಾನ್ಯ. ಆದರೆ ಆ ರೀತಿಯಾಗಿ ನಡೆಯುವುದು ಕೇವಲ ಕೇಲವೆ ಕೆಲವು ಜನರಿಗೆ ಮಾತ್ರ ಸಾಧ್ಯವಾಗಬಹುದು. ಹೀಗಂತ ಚಿಂತಿಸಬೇಕಾಗಿಲ್ಲ. ನೀವು ಯಾವ ರೀತಿಯ ವರ ಅಥವಾ ಕನ್ಯೆಯನ್ನು ಬಯಸುತ್ತಿರೋ ಅದೆ ರೀತಿಯ ವರದಾನ ಪಾಲಿಸುವ ಶಿವ ದೇವಾಲಯವೊಂದಿದೆ.
ಇದನ್ನು ಶಕ್ತಿವನೇಶ್ವರ ಕ್ಷೇತ್ರವೆಂದು ಕರೆಯುತ್ತಾರೆ. ಇಲ್ಲಿ ನೀವು ಭೇಟಿ ನೀಡಿ ಶಿವನನ್ನು ಅತ್ಯಂತ ಭಕ್ತಿ ಹಾಗೂ ನಂಬಿಕೆಯಿಂದ ಪ್ರಾರ್ಥಿಸಿದರೆ ನಿಮ್ಮ ಇಷ್ಟಾರ್ಥಕ್ಕೆ ತಕ್ಕುದಾದ ವರ ಅಥವಾ ಕನ್ಯೆಯು ದೊರಕುತ್ತಾಳೆಂಬ ನಂಬಿಕೆಯಿದೆ. ಏಕೆಂದರೆ ಅದೆಷ್ಟೊ ಜನರು ಇಲ್ಲಿಗೆ ಬಂದು ತಾವು ಬಯಸಿದಂತಹ ಜೀವನಸಂಗಾತಿಯನ್ನು ಪಡೆದುದರ ಉದಾಹರಣೆಗಳಿವೆ.
ಚಿತ್ರಕೃಪೆ: Sridharp
ಆದರೆ ಗಮನವಿರಲಿ, ಇದು ನಿಮ್ಮ ಉತ್ಕಟ ಭಕ್ತಿ ಹಾಗೂ ನಂಬಿಕೆಗನುಗುಣವಾಗಿ ಮಾತ್ರವೆ ಫಲ ಸಿಗುವಂತಹ ಸ್ಥಳವಾಗಿದೆ ಎಂದು ಇಲ್ಲಿಗೆ ಭೇಟಿ ನೀಡುವ ಭಕ್ತರು ಹೇಳುವುದನ್ನು ಮರೆಯುವುದಿಲ್ಲ. ಹಾಗಾಗಿ ಈ ಒಂದು ದೇವಾಲಯಕ್ಕೆ ಹಿರಿಯರಿಗಿಂತಲೂ ಮದುವೆಯ ವಯಸ್ಸಿನ ಯುವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆಂದರೆ ತಪ್ಪಾಗಲಿಕ್ಕಿಲ್ಲ.
ಇದನ್ನು ಶಿವಕೊಳುಂದೀಶ್ವರರ್ ದೇವಾಲಯ ಎಂದು ಕರೆಯಲಾಗುತ್ತದೆ ಹಾಗೂ ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ತಿರುಶಕ್ತಿಮುಟ್ರಂ ಎಂಬ ಹಳ್ಳಿಯಲ್ಲಿ ಸ್ಥಿತವಿದೆ. ತಿರುಶಕ್ತಿಮುಟ್ರಂ ಇನ್ನೊಂದು ಪ್ರಸಿದ್ಧ ಹಳ್ಳಿಯಾದ ಪಟ್ಟೀಶ್ವರಂ ಬಳಿಯಿದ್ದು ಕುಂಭಕೋಣಂನಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ.
ಇನ್ನೂ ಈ ದೇವಾಲಯ ಈ ರೀತಿಯಾಗಿ ಜೀವನ ಸಂಗಾತಿಯನ್ನೆ ಕರುಣಿಸಲು ಕಾರಣವಾದರೂ ಏನು? ಇದರ ಹಿಂದಿರುವ ಮರ್ಮವಾದರೂ ಏನು? ಎಂಬೆಲ್ಲ ಪ್ರಶ್ನೆಗಳು ನಿಮಗೀಗಾಲೆ ಮೂಡಿದ್ದಲ್ಲಿ ಆಶ್ಚರ್ಯವೇನಿಲ್ಲ. ಆದರೆ ಆ ರೀತಿ ಈ ಕ್ಷೇತ್ರ ಮಹಿಮೆ ಇರುವುದಕ್ಕೆ ಒಂದು ಸುಂದರವಾದ ಕಾರಣವೂ ಇದೆ.
ಚಿತ್ರಕೃಪೆ: Rsmn
ಪಾರ್ವತಿಯು ಬೆಳೆಯುತ್ತ ದೊಡ್ಡವಳಾದ ನಂತರ ಸದಾ ಶಿವನನ್ನು ಕುರಿತೆ ಯೋಚಿಸುತ್ತಿರುತ್ತಾಳೆ. ಶಿವನ ಪ್ರೀತಿಯಲ್ಲಿ ತನ್ಮಯಳಾಗಿರುತ್ತಾಳೆ ಹಾಗೂ ಶಿವನನ್ನೆ ವರಿಸಬೇಕೆಂಬ ಉತ್ಕಟ ಬಯಕೆಯನ್ನು ಹೊಂದಿರುತ್ತಾಳೆ. ಆದರೆ ಶಿವನು ಸುಲಭವಾಗಿ ಸಿಗುತ್ತಾನೆಯೆ? ಖಂಡಿತ ಇಲ್ಲ. ಅದಕ್ಕಾಗಿ ಶಿವನನ್ನು ಪತಿಯಾಗಿ ಪಡೆಯಬೇಕೆಂಬ ಸದುದ್ದೇಶದಿಂದ ಪಾರ್ವತಿಯು ಪ್ರಸ್ತುತ ದೇವಾಲಯವಿರುವ ಸ್ಥಳದಲ್ಲಿ ಘೋರ ತಪಸ್ಸನ್ನಾಚರಿಸುತ್ತಾಳೆ.
ಕ್ರಮೇಣವಾಗಿ ತಪಸ್ಸಿನ ತೀವ್ರತೆಯನ್ನು ಇನ್ನಷ್ಟು ಉಗ್ರಗೋಳಿಸಿ ಒಂದೆ ಕಾಲಿನಲ್ಲಿ ನಿಂತು ತಪಸ್ಸನ್ನಾಚರಿಸಲು ಪ್ರಾರಂಭಿಸುತ್ತಾಳೆ. ಹೀಗೆ ಕೆಲ ಸಮಯದ ನಂತರ ಅವಳಲ್ಲಿ ಯಾವ ಬದಲಾವಣೆಯೂ ಇಲ್ಲ. ಬದಲಾಗಿ ಶಿವನನ್ನು ಪಡೆದೆ ತಿರುತ್ತೇನೆಂಬ ಇಚ್ಛೆ ಮಾತ್ರ ಸದೃಢವಗಿರುತ್ತದೆ. ಇದನ್ನು ಗಮನಿಸಿದ ಶಿವ ಕೊನೆಗೆ ಅವಳಿಂದ ಪ್ರಸನ್ನನಾಗುತ್ತಾನೆ.
ಆದರೂ ಅವಳನ್ನು ಪರೀಕ್ಷಿಸುವ ದೃಷ್ಟಿಯಿಂದ ಬೇಗನೆ ಪ್ರತ್ಯಕ್ಷನಾಗುವುದಿಲ್ಲ. ಸಮಯ ಕಳೆಯುತ್ತಿದ್ದರೂ ಪಾರ್ವತಿ ಸೋಲನ್ನೊಪ್ಪುವುದಿಲ್ಲ. ಕೊನೆಗೆ ಶಿವನು ತೇಜೋಮಯವಾದ ಅಗ್ನಿಯ ರುಪದಲ್ಲಿ ದರ್ಶನ ಕೊಡುತ್ತಾನೆ. ಶಿವನ ಈ ರೂಪವನ್ನು ನೋಡಿದ ಪಾರ್ವತಿ ಕೊಂಚವೂ ಹೆದರದೆ ಆ ಅಗ್ನಿಯನ್ನೆ ತಬ್ಬಿಕೊಂಡು ಭಾವುಕಳಾಗುತ್ತಾಳೆ.
ಚಿತ್ರಕೃಪೆ: Rsmn
ಆಗ ಶಿವನು ತನ್ನ ನೈಜ ರೂಪದಲ್ಲಿ ಬಂದು ಆಕೆಯನ್ನು ವಿವಾಹವಾಗುತ್ತಾನೆ. ಈ ರೀತಿಯಾಗಿ ಪಾವ್ರತಿಯು ತನಗೆ ಬೇಕಾಗಿದ್ದ ಶಿವನನ್ನೆ ಗಂಡನನ್ನಾಗಿ ಪಡೆಯುತ್ತಾಳೆ. ಆ ಕಾರಣದಿಂದಾಗಿ ಇಲ್ಲಿ ಯಾರೆ ಆಗಲಿ ತಮಗೆ ಬೇಕಾದಂತಹ ಜೀವನಸಂಗಾತಿಯನ್ನು ಬೇಡುತ್ತಾರೋ ಅವರಿ ಅದೆ ರೀತಿಯ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ.
ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!
ಅಲ್ಲದೆ ಈ ಶಿವನ ದೇವಾಲಯದಲ್ಲಿ ಶಿವಲಿಂಗವೂ ಸಹ ಈ ಕಥೆಗೆ ಪೂರಕವಾಗಿರುವಂತೆ ಕಂಡುಬರುತ್ತದೆ. ಅಂದರೆ ಇಲ್ಲಿರುವ ಶಿವಲಿಂಗವನ್ನು ಪಾರ್ವತಿಯು ಗಟ್ಟಿಯಾಗಿ ತಬ್ಬಿಕೊಂಡಿರುವುದನ್ನು ನೋಡಬಹುದು. ಹಾಗಾಗಿ ಈ ದೇವಾಲಯ ಸಾಕಷ್ಟು ಮಹತ್ವ ಪಡೆದಿದೆ ಎಂದು ಹೇಲಬಹುದು.
ಹೆರಿಗೆ ನೋವು ನಿವಾರಿಸುವ ವೈದ್ಯನಾಥೇಶ್ವರ!