ಕಪ್ಪು ಮಣ್ಣಿನ ನಾಡು ಎಂದು ಕರೆಯಲ್ಪಡುವ ಕರ್ನಾಟಕ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದು. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಪ್ರವಾಸೋದ್ಯಮದ ಜೊತೆಗೆ ಕೃಷಿ-ಹಾಗೂ ಹೈನುಗಾರಿಕೆಯಲ್ಲೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ವಾಣಿಜ್ಯ ಬೆಳೆಗಳಿಂದಾಗಿ ದೇಶ ವಿದೇಶಗಳಲ್ಲೂ ತನ್ನನ್ನು ಗುರುತಿಸಿಕೊಂಡಿರುವುದು ವಿಶೇಷ.
ಕರ್ನಾಟಕದ ಪ್ರತಿಯೊಂದು ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೆಸರಾದ ಹಾಗೇ ವಿಭಿನ್ನ ಬೆಳೆ ಬೆಳೆಯುವುದರಲ್ಲೂ ಪ್ರಖ್ಯಾತಿ ಪಡೆದಿದೆ. ಇಲ್ಲಿರುವ ವಿಭಿನ್ನ ಬಗೆಯ ಮಣ್ಣು, ವಾತಾವರಣ ಹಾಗೂ ನೀರಾವರಿಯ ಆಧಾರದ ಮೇಲೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿ ಉತ್ಪಾದಿಸುವ ಕಾಫಿ, ಚಹಾ, ರಬ್ಬರ್, ಕಾಳು ಮೆಣಸು, ಏಲಕ್ಕಿ, ತೆಂಗಿನ ಕಾಯಿ, ಅಡಿಕೆ ಹಾಗೂ ಗೋಡಂಬಿ ಬೆಳೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಕರ್ನಾಟಕದ ಪ್ರವಾಸ ತಾಣಗಳಲ್ಲಿ ಬೆಳೆಯುವ ಈ ಬೆಳೆಯ ಸೊಬಗು ಸಹ ಪ್ರವಾಸಿಗರ ಆಕರ್ಷಣೆಗೆ ಒಂದು ಕಾರಣ.
ಬೆಂಗಳೂರಿಗೆ ಹತ್ತಿರ ಇರುವ ಸುಂದರ ತಾಣಗಳಲ್ಲಿ ಬೆಳೆಯುವ ಬೆಲೆಬಾಳುವ ಬೆಳೆಯ ಫೋಟೋ ಪ್ರವಾಸ ಮಾಡೋಣ ಬನ್ನಿ...
ಕಾಫಿ ಬೆಳೆ
ಸುಂದರವಾದ ಗಿರಿಧಾಮಗಳಿಗೆ ಹೆಸರಾದ ಚಿಕ್ಕಮಗಳೂರು ಹಾಗೂ ಕೊಡಗು ಕಾಫಿ ಬೆಳೆಗೆ ಹೆಸರಾಗಿದೆ. ಇಲ್ಲಿರುವ ವಾತಾವರಣ ಹಾಗೂ ಮಣ್ಣಿನ ವಿಶಿಷ್ಟ ಗುಣದಿಂದ ಕಾಫಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಭಾರತಕ್ಕೆ ಶೇ.70 ರಷ್ಟು ಕಾಫಿಯನ್ನು ಕರ್ನಾಟಕವೇ ಪೂರೈಸುತ್ತದೆ. ಶಿವಮೊಗ್ಗ ಹಾಗೂ ಮೈಸೂರಿನಲ್ಲೂ ಸ್ವಲ್ಪ ಪ್ರಮಾಣದಲ್ಲಿ ಈ ಬೆಳೆ ಬೆಳೆಯುತ್ತಾರೆ. ಈ ಪ್ರದೇಶಗಳಿಗೆ ಪ್ರವಾಸ ಬಂದಾಗ ಬೆಳೆಯ ಪರಿಚಯ ಮಾಡಿಕೊಳ್ಳಲು ಮರೆಯಬೇಡಿ.
PC: flickr.com
ಚಹಾ ಬೆಳೆ
ಭಾರತದ ಚಹಾ ಪುಡಿಯ ಉತ್ಪಾದನೆಯಲ್ಲಿ ಕರ್ನಾಟಕದ ಪಾತ್ರವೂ ಇದೆ. ಕೊಡಗು, ಬಾಬಾ ಬುಡನ್ ಗಿರಿ ಹಾಗೂ ಸಹ್ಯಾದ್ರಿ ಗಿರಿಗಳಲ್ಲಿ ಚಹಾ ಬೆಳೆಯನ್ನು ಮುಖ್ಯ ಬೆಳೆಯನ್ನಾಗಿಯೇ ಬೆಳೆಯಲಾಗುತ್ತದೆ.
PC: flickr.com
ಗೋಡಂಬಿ
ಗೋಡಂಬಿ ಬೆಳೆಯ ಉತ್ಪಾದನೆಯಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿ ನಿಲ್ಲುತ್ತದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ ಹಾಗೂ ಕೋಲಾರದಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ವರ್ಷಕ್ಕೊಮ್ಮೆ ಬೆಳೆಯುವ ಬೆಳೆಯಾದರೂ ಇದರ ಉತ್ಪಾದನೆ ಹೆಚ್ಚಾಗಿಯೇ ಇದೆ. ನಗರ ವಾಸಿಗಳಿಗೆ ಗೋಡಂಬಿ ಮರದ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಇತ್ತಕಡೆ ಪ್ರಯಾಣ ಬೆಳೆಸಿದರೆ ತಪ್ಪದೆ ಈ ಬೆಳೆಯ ಬಗ್ಗೆ ತಿಳಿಯಿರಿ.
PC: flickr.com
ಏಲಕ್ಕಿ ಬೆಳೆ
ಮಸಾಲೆಗಳ ರಾಣಿ ಏಲಕ್ಕಿ ಉತ್ಪಾದನೆಯಲ್ಲೂ ಕರ್ನಾಟಕ ಹಿಂದುಳಿದಿಲ್ಲ. ರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿಯೇ ಪೂರೈಸುತ್ತದೆ. ಸುಂದರ ಪ್ರವಾಸ ತಾಣವಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗಿನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
PC: flickr.com
ಕಾಳು ಮೆಣಸು
ಕರ್ನಾಟಕ ಕಾಳು ಮೆಣಸು ಉತ್ಪಾದನೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಸರಿ ಸುಮಾರು ಶೇ. 50 ರಷ್ಟು ಬೆಳೆಯನ್ನು ಬರೇ ಕರ್ನಾಟಕವೇ ಉತ್ಪಾದಿಸುತ್ತದೆ. ಕಡಲ ತೀರದ ಜಿಲ್ಲೆಯಾದ ಉತ್ತರ ಕನ್ನಡ ಹಾಗೂ ಕೊಡಗು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಚಿಕ್ಕಮಗಳೂರಿನಲ್ಲೂ ಈ ಬೆಳೆ ಬೆಳೆಯುತ್ತಾರೆ.
PC: wikipedia.org
ತೆಂಗಿನ ಕಾಯಿ
ಕಡಲ ತೀರದ ತಾಣಗಳನ್ನು ಹೆಚ್ಚಾಗಿ ಹೊಂದಿರುವ ಕರ್ನಾಟಕ ತೆಂಗಿನ ಬೆಳೆಯ ಉತ್ಪಾದನೆಯಲ್ಲೂ ಪ್ರಮುಖ ಸ್ಥಾನ ಪಡೆದಿದೆ. ದೇಶಕ್ಕೆ ಶೇ. 12ರಷ್ಟು ತೆಂಗಿನ ಉತ್ಪಾದನೆಯನ್ನು ಒದಗಿಸುತ್ತದೆ. ಅದರಲ್ಲಿ ಉತ್ತರಕನ್ನಡ, ದಕ್ಷಿಣ ಕನ್ನಡ, ಹಾಸನ, ಚಿತ್ರದುರ್ಗ, ತುಮಕೂರು ಹಾಗೂ ಚಿಕ್ಕಮಗಳೂರಿನ ಪಾತ್ರ ಮಹತ್ತರವಾದದ್ದು.
PC: wikipedia.org
ಅಡಿಕೆ ಬೆಳೆ
ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ. ದೇಶ-ವಿದೇಶಗಳಿಗೂ ಇಲ್ಲಿಂದಲೇ ರಫ್ತಾಗುತ್ತದೆ. ಪ್ರಮುಖ ಪ್ರವಾಸ ತಾಣಗಳಿಗೆ ಹೆಸರಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ತುಮಕೂರಿನ ಪ್ರಮುಖ ಬೆಳೆ ಇದು.
PC: wikipedia.org
ರಬ್ಬರ್ ಬೆಳೆ
ನೈಸರ್ಗಿಕವಾಗಿ ರಬ್ಬರ್ ಉತ್ಪಾದನೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮಂಗಳೂರು, ಕೊಡಗು, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಪ್ರವಾಸಕ್ಕೆ ಹೋದಾಗ ಇಂತಹ ಬೆಳೆಗಳ ಬಗ್ಗೆ ಅರಿತು ಬಂದರೆ ಪ್ರವಾಸದ ಜೊತೆಗೆ ಜ್ಞಾನವೂ ವೃದ್ಧಿಯಾಗುತ್ತದೆ.
PC: wikimedia.org