"ಏನ್ರಿ ನಮ್ಮ ಉತ್ತರ ಕರ್ನಾಟಕಕ್ಕೂ ಬರ್ರ್ಯಲಾ ಒಂದ್ಸಲಾ...ಇಲ್ಲೂ ಭಾಳಷ್ಟು ನೋಡಾಕ...ಪ್ರವಾಸ ಮಾಡಾಕ ಜಾಗಾ ಅದಾವು" ಈ ವಾಕ್ಯವನ್ನು ಓದಿದಾಗ ಗೊತ್ತಾಗಿ ಬಿಡುತ್ತದೆ ಇದು ಅಪ್ಪಟ ಉತ್ತರ ಕರ್ನಾಟಕದ ಬಯಲು ಸೀಮೆ ಭಾಷೆಯೆಂದು. ಅಖಂಡ ಕರ್ನಾಟಕವನ್ನು ಭೌಗೋಳಿಕ, ಸಾಂಸ್ಕೃತಿಕ ಹಾಗು ಸಂಪ್ರದಾಯಗಳ ವೈವಿಧ್ಯತೆಯ ಅಡಿಯಲ್ಲಿ ಮೂಲವಾಗಿ ಉತ್ತರ ಹಾಗು ದಕ್ಷಿಣ ಕರ್ನಾಟಕಗಳೆಂದು ವಿಂಗಡಿಸಬಹುದು. ಗಂಡು ಮೆಟ್ಟಿದ ನಾಡು, ಬಯಲು ಸೀಮೆ ಪ್ರದೇಶ ಎಂದು ಜನಪ್ರಿಯವಾಗಿ ಕರೆಸಿಕೊಳ್ಳುವ ಉತ್ತರ ಕರ್ನಾಟಕವು ನಿಜವಾಗಿಯೂ ಒಂದು ಸುಂದರ ಪ್ರದೇಶವಾಗಿದ್ದು ವಿಶೀಷ್ಟವಾದ ನಡೆ ನುಡಿಗಳು, ಆಹಾರ ಹಾಗು ಆಚರಣೆಗಳನ್ನು ಈ ನಾಡಿನಲ್ಲಿ ನಾವು ಕಾಣಬಹುದಾಗಿದೆ.
ಸಾಮಾನ್ಯವಾಗಿ ಉತ್ತರ ಕರ್ನಾಟಕ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಿಗೆ ಬರುವುದು ಅಲ್ಲಿನ ಮಾತಿನ ವೈಖರಿ ಹಾಗು ತಿನ್ನುವ ಆಹಾರ ಖಾದ್ಯಗಳು. ಅವರು ಮಾತನಾಡುವ ಕನ್ನಡ ಕೊಂಚ ಬಿರುಸಾಗಿದೆ ಅನಿಸಿದರೂ ಅಲ್ಲಿನ ಜನರ ಹೃದಯವಂತಿಕೆ, ಅತಿಥಿ ಸತ್ಕಾರ ಗುಣಗಳು ಸಮುದ್ರದಷ್ಟೆ ಆಳ. ಭೌಗೋಳಿಕವಾಗಿ ಈ ಪ್ರದೇಶವು ಉಷ್ಣ ಒಣ ಹವೆ ವಾತಾವರಣಕ್ಕೆ ಒಳಪಡುವುದರಿಂದ ಇಲ್ಲಿ ಸ್ವಲ್ಪ ಬಿಸಿಲು ಜಾಸ್ತಿಯೆ. ಹಾಗಂತ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ...ಏಕೆಂದರೆ ಇಲ್ಲಿನ ಸೊಬಗು, ಕಂಡುಬರುವ ಆಕರ್ಷಕ ಸ್ಮಾರಕಗಳು, ಕೈಬಿಸಿ ಕರೆಯುತ್ತಿರುವ ಪ್ರವಾಸಿ ಆಕರ್ಷಣೆಗಳು, ಸಂಸ್ಕೃತಿ-ಸಂಪ್ರದಾಯಗಳು ತಮ್ಮದೆ ಆದ ವಿಶೀಷ್ಟತೆಯಿಂದು ಕಂಗೊಳಿಸುತ್ತಿದ್ದು ಭೇಟಿ ನೀಡುವವರ, ಪ್ರವಾಸಿಗರ ಮನ ಗೆಲ್ಲದೆ ಇರಲಾರದು. ಹಾಗಾದರೆ ಬನ್ನಿ ಈ ಲೇಖನದ ಮೂಲಕ ಉತ್ತರ ಕರ್ನಾಟಕದ ವಿವಿಧ ಸ್ಥಳಗಳ ಪರಿಚಯವನ್ನು ಅದರ ಅಂದವಾದ ಭಾಷೆಯಲ್ಲೆ ತಿಳಿದುಕೊಳ್ಳೊಣ.
ಹುಬ್ಬಳ್ಳಿ:
ನೋಡ್ರ್ಯಪ್ಪಾ ನಮ್ಕಡೆ ಹುಬ್ಳಿಗಂತು "ಛೋಟಾ ಬಾಂಬೆ" ಅಂತಾರ. ಮುಂಬೈದಾಗ ಹೆಂಗ ಟ್ರಾಫಿಕ್, ರಷ್, ಜನಾ ಅಡ್ಯಾಡತಿರ್ತಾರೊ ಥೇಟ್ ಹಂಗೆ ಈ ಊರ್ದಾಗು ಇರ್ತದ, ಆದ್ರ ಸ್ವಲ್ಪ ಕಮ್ಮಿ ಅಷ್ಟೆ. ಈಗಿಗಂತ್ರು ಈ ಊರು ಮತ್ತಷ್ಟು ಬೆಳಿಲಿಕತ್ತದ್ರಿ ಮತ್ತ ಪ್ರವಾಸ್ ಮಾಡಾಕಂತ ಜನಾನೂ ಭಾಳ ಬರ್ಲಿಕತ್ತಾರ್ರಿ! ಉನಕಲ್ ಕೆರೆ, ಬುಂದ್ ಗಾರ್ಡನ್, ಗಾಯತ್ರಿ ತಪೋವನ, ಸಿದ್ಧಾರೂಢ ಮಠ, ಗ್ಲಾಸ್ ಹೌಸ್ ಗಾರ್ಡನ್, ವಾಟರ್ ಪಾರ್ಕ್ ಹಿಂಗ ಎಷ್ಟೆಷ್ಟೊ ಛೊಲೊ ಛೊಲೊ ಜಾಗಾ ಅದಾವ್ರಿ ಇಲ್ಲಿ ನೋಡಾಕ. ಮತ್ತೊಂದು ವಿಷಯ ಅಂದ್ರ ಹುಬ್ಳಿಗ ಬೆಂಗಳೂರಿಂದ ಅಥವಾ ಬಾಜುಕೆ ಇರೊ ಬೆಳಗಾವಿ ದಿಂದ ಆರಾಮಾಗಿ ಬರ್ಬೊಹುದು ನೋಡ್ರಿ.
ಚಿತ್ರಕೃಪೆ: GuruAngadi
ಧಾರವಾಡ:
ಹುಬ್ಳಿಯಿಂದ ಧಾರವಾಡ ಊರು ಬರೀ 20 ಕಿ.ಮೀ ದೂರ ಐತ್ರಿ. ಹುಬ್ಳಿ-ಧಾರವಾಡ ಎರಡೂ ಉರ್ನ ಸೇರಿಸಿ ಅವಳಿ ನಗರ ಅಂತಾರ್ರಿ. ಧಾರವಾಡ ಫೇಮಸ್ ಆಗಿದ್ದೆ ಇಲ್ಲಿ ಸಿಗು ಫೇಡಾದಿಂದ್ರಿ. ಧಾರವಾಡ ಫೇಡಾ ಅಂದ್ರ ಇಡೀ ಕರ್ನಾಟಕದಾಗೆ ಫೇಮಸ್ ರಿ. ಬೆಂಗಳೂರು ದಿಂದ 425 ಕಿ.ಮೀ ದೂರ ಐತ್ರಿ ಮತ್ತ ನೀವೆನಾದ್ರೂ ಇತ್ಲಾಗ ಬಂದಾಗ ಈ ಫೇಡೆನ ತಿನ್ನೊದು ಮರಿ ಬ್ಯಾಡ್ರಿ.
ಬೆಳಗಾವಿ:
ಮೊದ್ಲಿಗ ಈ ಊರನ್ನ ವೇಣುಗ್ರಾಮ ಅಥವಾ ಬಾಂಬೂ(ಬಿದಿರು) ಹಳ್ಳಿ ಅಂತ ಕರಿತಿದ್ರಿ. ಈ ಊರ ವಿಶೇಷ ಅಂದ್ರ ಇದು ಉತ್ತರ ಕರ್ನಾಟಕದ ಭಾಗ ಆದ್ರೂ ಮಲೆನಾಡು ಪ್ರದೇಶೊಳಗ ಬರುದ್ರಿಂದ ಇಲ್ಲಿ ಸ್ವಲ್ಪ ತಂಪು ಭಾಳ್ರಿ. ಮಳೆಗಾಲದಾಗಂತೂ ಜಿಟಿ ಜಿಟಿ ಮಳಿ ಯಾವಾಗ್ಲೂ ಬಿಳ್ತಿರ್ತದ್ರಿ. ಇನ್ನೆನ್ಬೇಕ್ರಿ ಮೊದ್ಲೆ ಕರ್ನಾಟಕದ್ದು ಎರಡನೆಯ ರಾಜಧಾನಿ ಅಂತಾರ, ಹಿಂಗಾಗಿ ಈ ಊರು ಫಾಸ್ಟ್ ಆಗಿ ಬೆಳ್ಯಾಕತ್ತದ್ರಿ ಮತ್ತ ಇದರ ಆಜೂ ಬಾಜೂನು ಬೇಕಾದಷ್ಟು ನೋಡುವಂಥ ಜಾಗಾ ಅದಾವ್ರಿ. ಒಮ್ಮೆ ಬೆಳಗಾವಿಗೆ ಬರ್ಯಲಾ...ಇಲ್ಲಿ ಏನೇನು ಐತ್ಯಂತ ನೋಡಾಕ ಇಲ್ಲಿ ಕ್ಲಿಕ್ ಮಾಡ್ರಿ.
ಚಿತ್ರಕೃಪೆ: Nisarg Vyas
ಬಿಜಾಪುರ:
ಬೆಂಗಳೂರಿಂದ 520 ಕಿ.ಮೀ ದೂರಿರೊ ಬಿಜಾಪುರ ಇತಿಹಾಸದ ದೃಷ್ಟಿಯಿಂದ್ಲು ಭಾಳ ಮುಖ್ಯ ಅದರಿ. ಏನ್ ಹೇಳ್ಬೇಕ್ರಿ ಇಲ್ಲಿರು ಆ ಗೋಲಗುಮ್ಮಟ್ನ ಎಷ್ಟು ಸಲಾ ನೋಡಿದ್ರೂ ಮತ್ತ ನೋಡ್ಬೇಕು ನೋಡ್ಬೇಕು ಅನಸ್ತದ್ರಿ..ಅಷ್ಟು ಭಾರಿ ಅದರಿ ಆ ಸ್ಮಾರಕ. ಹೆಂಗ ಉತ್ತರ ಭಾರತದಾಗ ತಾಜ್ ಮಹಲ್ ಅಂತ ಬಡ್ಕೊತಾರೊ, ಹಂಗ ದಕ್ಷಿಣ ಭಾರತದಾಗ ಗೋಲಗುಮ್ಮಟ ಅಂತ ಹೇಳ್ಬೇಕು ನೋಡ್ರಿ. ಏನಿಲ್ಲಂದ್ರೂ ಬರೀ ಈ ಗುಮ್ಮಟಾ ನೋಡಾಕಾದ್ರೂ ಬಿಜಾಪುರ್ಕ ಬರ್ಬೇಕು ನೋಡ್ರಿ ಮತ್ತ ಬಂದಾಗ ಜೋಳದ ರೊಟ್ಟಿ, ಖಾರಾ ಮತ್ತ ಎಣ್ಗಾಯಿ (ತುಮ್ಗಾಯಿ "ಬದನೆಕಾಯಿ") ಪಲ್ಯಾ ತಿನ್ಲಿಕ್ಕ ಮಾತ್ರ ಮರಿಬ್ಯಾಡ್ರಿ.
ಬಾಗಲಕೋಟೆ:
ಒಂದೊಮ್ಮೆ ಬಿಜಾಪುರ್ದಾಗ ಸೇರಿತ್ರಿ ಈ ಊರು. ಆಮೇಲೆ 1997 ದಾಗ ಇದನ್ನ ಬ್ಯಾರೆ ಜಿಲ್ಲಾ ಅಂತ ಮಾಡಿದ್ರರಿ. ನೀವು ಕೇಳಿರ್ಬೇಕಲಾ ಕೂಡಲ ಸಂಗಮ, ಬಾದಾಮಿ, ಪಟ್ಟದಕಲ್ಲುಗಳನ್ನ. ಅವೆಲ್ಲಾ ಈ ಊರಿಂದ ಭಾಳ ಸಮೀಪವರಿ. ಬೆಂಗಳೂರು ಮತ್ತ ಬ್ಯಾರೆ ಕಡೆಯಿಂದ ಈ ಐತಿಹಾಸಿಕ ಜಾಗಾಗಳಿಗೆ ಸೀದಾ ಬರ್ಲಿಕ್ಕೆ ಕಷ್ಟಾ ಆಗುದ್ರಿಂದ ಬಾಗಲಕೋಟೆಗೆ ಬಂದು ಬಿಡ್ರಿ. ಹೋಟೆಲ್, ಲಾಡ್ಜ್ ಸಾಕಷ್ಟ ಈ ಊರ್ನಾಗ ಇರುದ್ರಿಂದ ಇಲ್ಲೆ ವಸತಿ ಮಾಡಿ ಎಲ್ಲಾ ಜಾಗಾನ್ನ ಆರಾಮಾಗಿ ನೋಡ್ಕೊಂಬರ್ರಿ.
ಬೀದರ್:
ಕರ್ನಾಟಕದ ಈಶಾನ್ಯ ದಿಕ್ಕಿನಾಗಿರೊ ಈ ನಮ್ಮ ಬೀದರ್ ಬಿದ್ರಿ ಕಲೆಗೆ ಭಾಳ ಫೇಮಸ್ ರಿ. ಬಲಕ್ಕ ಮಹಾರಾಷ್ಟ್ರ, ಎಡಕ್ಕ ಆಂಧ್ರ ಇಟ್ಕೊಂಡು ಕರ್ನಾಟಕದ್ದ ಕಿರೀಟ ಎಂಬ ಹೊಗಳಿಕೆನು ಪಡ್ಕೊಂಡದ್ರಿ. ಅಷ್ಟೆ ಅಲ್ಲ, ಐತಿಹಾಸಿಕವಾಗಿ ಮುಖ್ಯ ಮುಖ್ಯ ಸ್ಮಾರಕಗಳು ಇಲ್ಲವರಿ. ನಾನಕ ಝಿರಾ, ಝರಣಿ ನರಸಿಂಹಸ್ವಾಮಿ ದೇವಾಲಯ ಹಂತಾ ಪ್ರವಾಸ ಮಾಡೊ ಜಾಗಾಗಳು ಇಲ್ಲವರಿ.
ಚಿತ್ರಕೃಪೆ: Santosh3397
ಗುಲ್ಬರ್ಗಾ:
ಬೆಂಗಳೂರಿಂದ 623 ಕಿ.ಮೀ ದೂರೈತ್ರಿ ಈ ಊರು. ಒಂದೊಮ್ಮೆ ಹೈದರಾಬಾದ ನಿಜಾಮನ ಪ್ರಾಂತ್ಯದೊಳಗಿತ್ರಿ ಈ ಪಟ್ಟಣ. ಇಲ್ಲಿನೂ ಭಾಳಷ್ಟು ಹಳೆ ರಾಜರ ಕಾಲದ್ದು ಸ್ಮಾರಕಗಳಾದವ್ರಿ. ಇತ್ತೀಚಿಗಷ್ಟೆ ರಿ ಇದಕ್ಕ ಕಲಬುರ್ಗಿ ಅಂತ ಮರುನಾಮಕರಣ ಮಾಡ್ಯಾರಿ. ದುರದೃಷ್ಟಂದ್ರ ಇಲ್ಲಿ ಅಭಿವೃದ್ಧಿ ಮಾತ್ರ ಬೇಕಾದಷ್ಟ ಪ್ರಮಾಣದಾಗ ಮಾತ್ರ ಆಗಿಲ್ರಿ. ಇನ್ನ ಇಲ್ಲಿ ಏನೇನು ನೋಡ್ಬಹುದಪ್ಪಾ ಅಂದ್ರ ಶರಣಬಸವೇಶ್ವರ ಗುಡಿ, ಶ್ರೀಕ್ಷೇತ್ರ ಗಾಣಗಾಪುರ, ಹೆರೂರ್ ನ ಹುಲಕಂಟೇಶ್ವರ ಗುಡಿ. ಆದ್ರ ಎಲ್ಲೆ ಹೊರಗ ಹೋದ್ರೂ ನೀರು ಮತ್ತ ಛತ್ರಿ ತುಗೊಂಡ ಹೋಗೊದು ಮಾತ್ರ ಮರಿ ಬ್ಯಾಡ್ರಿ.
ಚಿತ್ರಕೃಪೆ: SridharSaraf
ರಾಯಚೂರು:
ಕರ್ನಾಟಕದ ಈಶಾನ್ಯ ದಿಕ್ನಾಗ ಆಂಧ್ರ ಗಡಿ ಬಾಜುಕ ರಾಯಚೂರು ಊರ ಅದರಿ. ಬೆಂಗಳೂರಿಂದ 413 ಕಿ.ಮೀ ದೂರದರಿ ಮತ್ತ ಇಲ್ಲಿ ನೋಡಾಕ ಹೋಗ್ಬಹುದಾದ ಜಾಗಾಗಳಂದ್ರ ರೈಚೂರು ಕೋಟೆ, ಆನೆಗುಂದಿ ಮತ್ತ ರೈಚೂರು ಉಷ್ಣ ಸ್ಥಾವರ. ಆದ್ರ ಉಷ್ಣ ಸ್ಥಾವರನ್ನ ನೋಡ್ಲಿಕ್ಕೆ ಅನುಮತಿ ತುಗೊಬೇಕಾಗಿರೊದು ಕಡ್ಡಾಯ ಐತ್ರಿ. ಅಲ್ದ ನಮ್ಮ ಕರ್ನಾಟಕಕ್ಕ ಎಷ್ಟೊ ಪ್ರಮಾಣದಾಗ ವಿದ್ಯುತ್ ಶಕ್ತಿ ಇಲ್ಲಿಂದ್ಲ ಸಿಗ್ತದ್ರಿ.ಕರ್ನಾಟಕದ ಈಶಾನ್ಯ ದಿಕ್ನಾಗ ಆಂಧ್ರ ಗಡಿ ಬಾಜುಕ ರಾಯಚೂರು ಊರ ಅದರಿ. ಬೆಂಗಳೂರಿಂದ 413 ಕಿ.ಮೀ ದೂರದರಿ ಮತ್ತ ಇಲ್ಲಿ ನೋಡಾಕ ಹೋಗ್ಬಹುದಾದ ಜಾಗಾಗಳಂದ್ರ ರೈಚೂರು ಕೋಟೆ, ಆನೆಗುಂದಿ ಮತ್ತ ರಾಯಚೂರು ಉಷ್ಣ ಸ್ಥಾವರ. ಆದ್ರ ಉಷ್ಣ ಸ್ಥಾವರನ್ನ ನೋಡ್ಲಿಕ್ಕೆ ಅನುಮತಿ ತುಗೊಬೇಕಾಗಿರೊದು ಕಡ್ಡಾಯ ಐತ್ರಿ. ಅಲ್ದ ನಮ್ಮ ಕರ್ನಾಟಕಕ್ಕ ಎಷ್ಟೊ ಪ್ರಮಾಣದಾಗ ವಿದ್ಯುತ್ ಶಕ್ತಿ ಇಲ್ಲಿಂದ್ಲ ಸಿಗ್ತದ್ರಿ.
ಚಿತ್ರಕೃಪೆ: Tanzeel Ahad