ಸಂಸ್ಕೃತದಲ್ಲಿ ಪಾರ್ಥ ಅಂದರೆ ಅರ್ಜುನ. ಹೀಗೆ ಪಾರ್ಥನಿಗೆ ರಥದಲ್ಲಿ ಸಾರಥಿಯಾಗಿರುವವನೆ ಪಾರ್ಥಸಾರಥಿ. ಅಂದರೆ ವಿಷ್ಣುವಿನ ಅವತಾರವಾದ ಕೃಷ್ಣದೇವರನ್ನೆ ಪಾರ್ಥಸಾರಥಿ ಎಂದು ಕರೆಯುತ್ತಾರೆ. ಇದು ಕೃಷ್ಣನ ವಿಶೇಷ ಹೆಸರಾಗಿದ್ದು ಮಹಾಭಾರತದ ಧರ್ಮಯುದ್ಧದ ಸಂದರ್ಭದಲ್ಲಿ ಅರ್ಜುನನ ರಥಕ್ಕೆ ಸ್ವತಃ ಕೃಷ್ಣನೆ ಸಾರಥಿಯಾಗಿರುವುದರಿಂದ ಬಂದಿದೆ.
ಪಾರ್ಥಸಾರಥಿಗೆಂದೆ ಮುಡಿಪಾದ ಒಂದು ಅದ್ಭುತ ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನ ಟ್ರಿಪ್ಲಿಕೇನ್ ಎಂಬ ಪ್ರದೇಶದಲ್ಲಿ ಪಾರ್ಥಸಾರಥಿಗೆ ಮುಡಿಪಾದ ಈ ದೇವಾಲಯವಿರುವುದನ್ನು ಕಾಣಬಹುದು. ಇದೊಂದು ಗುರುತರ ದೇವಾಲಯವಾಗಿರುವುದರಿಂದ ಸರಳವಾಗಿಯೂ ಈ ದೇವಾಲಯಕ್ಕೆ ರಿಕ್ಷಾಗಳ ಮೂಲಕ ತಲುಪಬಹುದು.
ಚಿತ್ರಕೃಪೆ: Mohan Krishnan
ಪಲ್ಲವ ದೊರೆ ಒಂದನೆಯ ನರಸಿಂಹವರ್ಮನಿಂದ ನಿರ್ಮಿತವಾದ ದೇವಾಲಯ ಇದಾಗಿದೆ. ಅಂದರೆ ಏನಿಲ್ಲವೆಂದರೂ ಸುಮಾರು ಎಂಟನೇಯ ಶತಮಾನದ ಸಂದರ್ಭದಲ್ಲಿ ನಿರ್ಮಾಣಗೊಂಡ ದೇವಾಲಯ ರಚನೆ ಇದಾಗಿದೆ. ನಂತರ ಕಾಲಕ್ರಮೇಣ ಸಾಕಷ್ಟು ನವೀಕರಣಗೊಂಡು ಪ್ರಸ್ತುತ ದೇವಾಲಯ ರಚನೆಯನ್ನು ಇಂದು ಕಾಣಬಹುದು.
ಈ ದೇವಾಲಯದ ವಿಶೇಷತೆ ಎಂದರೆ ಇಲ್ಲಿ ವಿಷ್ಣುವಿನ ಐದು ರೂಪಗಳನ್ನು ಕಾಣಬಹುದು. ಅವುಗಳೆಂದರೆ ನರಸಿಂಹ, ರಾಮ, ರಂಗನಾಥ, ಗಜೇಂದ್ರ ವರದರಾಜ ಹಾಗೂ ಕೃಷ್ಣ. ಇವುಗಳಲ್ಲದೆ ದೇವಾಲಯದ ಆವರಣದಲ್ಲಿ ಅಂಡಾಲ್, ಆಂಜನೇಯ ಹೀಗೆ ಇತರೆ ದೇವತೆಗಳ ಸನ್ನಿಧಿಗಳಿರುವುದನ್ನೂ ಸಹ ನೋಡಬಹುದು.
ಚಿತ್ರಕೃಪೆ: Salemjones
ಪ್ರಸ್ತುತ ಚೆನ್ನೈ ನಗರದಲ್ಲಿ ಕಂಡುಬರುವ ಬಲು ಪ್ರಮುಖ ಹಾಗೂ ಅತಿ ಪುರಾತನವಾದ ದೇವಾಲಯಗಳಲ್ಲಿ ಇದೂ ಸಹ ಒಂದಾಗಿದೆ. ಹಾಗಾಗಿ ಸಾಕಷ್ಟು ಉತ್ಸವಗಳು, ಹಬ್ಬಾಚರಣೆಗಳು ಇಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಶಿಸ್ತುಬದ್ಧವಾಗಿ ಜರುಗುತ್ತವೆ. ಅಂತೆಯೆ ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಅಪಾರ.
ತಮಿಳುನಾಡು ಸರ್ಕಾರದ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಡುವ ಈ ದೇವಾಲಯದಲ್ಲಿ ವೈಷ್ಣವ ಸಂಪ್ರದಾಯದ ತೆಂಕಲೈ ಪದ್ಧತಿಯನ್ನು ಆಚರಿಸಲಾಗುತ್ತದೆ. ತಮಿಳು ಮಾಸವಾದ ಚಿತ್ತಿರೈ (ಎಪ್ರಿಲ್-ಮೇ) ನಲ್ಲಿ ಪಾರ್ಥಸಾರಥಿ ಸ್ವಾಮಿಗೆ ಬ್ರಹ್ಮೋತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Sankar.s
ಚೆನ್ನೈ ನಗರಕ್ಕೆ ಭೇಟಿ ನೀಡುವವರು ಎರಡು ವಿಶೇಷ ಕಾರಣಗಳಿಗಾಗಿ ಒಮ್ಮೆಯಾದರೂ ಈ ಸುಂದರ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಒಂದು, ಒಂದೆ ದೇವಾಲಯದಲ್ಲೆ ರಾಮ, ನರಸಿಂಹ ಹಾಗೂ ಕೃಷ್ಣರಿರುವುದು ಅತಿ ಅಪರೂಪ. ಎರಡನೇಯದಾಗಿ ಕೃಷ್ಣನು ಪಾರ್ಥಸಾರಥಿಯಾಗಿ ನೆಲೆಗೊಂಡಿರುವ ದೇವಾಲಯಗಳು ದೇಶದಲ್ಲೆ ಅಪರೂಪ.
ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ
ಹೀಗೆ ಈ ದೇವಾಲಯವು ಕೃಷ್ಣನೊಂದಿಗೆ ನಂಟು ಹೊಂದಿರುವುದರಿಂದ ತಿರುವಲ್ಲಿಕೇನಿ (ಇಂದಿನ ಟ್ರಿಪ್ಲಿಕೇನ್) ಯ ಈ ದೇವಾಲಯವನ್ನು ದಕ್ಷಿಣದ ಬೃಂದಾವನ ಎಂಬ ಇನ್ನೊಂದು ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.