ಹಿಂದು ಸಂಸ್ಕೃತಿಯಲ್ಲಿ ಆಶ್ರಮಗಳು ತಮ್ಮದೆ ಆದ ವಿಶೇಷತೆ ಹೊಂದಿವೆ. ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಆಶ್ರಮಗಳು ಪ್ರಮುಖವಾಗಿ ದೈವತ್ವಕ್ಕೆ ಹತ್ತಿರವಾಗಿರುವ ಪವಿತ್ರ ಸ್ಥಳಗಳಾಗಿಯೂ, ದಿನನಿತ್ಯ ಪ್ರವಚನ ಕೇಳುವ ಸ್ಥಳಗಳಾಗಿಯೂ, ಒತ್ತಡ, ದುಖಗಳಿಂದ ಬಳಲುತ್ತಿರುವ ಮನಸ್ಸುಗಳಿಗೆ ಹಿತಕರ ಅನುಭವ ನೀಡುವ ತಾಣಗಳಾಗಿಯೂ ಆಶ್ರಮಗಳು ಗಮನಸೆಳೆಯುತ್ತವೆ.
ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಶ್ರಮಗಳಿರುವುದನ್ನು ನೋಡಬಹುದು. ಆಶ್ರಮಗಳು ದಿನನಿತ್ಯ ಸದ್ವಿಚಾರ, ಸಾತ್ವಿಕ ಬೋಧೆಗಳನ್ನೆ ಮಾಡುವುದರಿಂದ ನೆಮ್ಮದಿ ಅರಸಿಕೊಂಡು ಹೋಗುವವರು ಆಶ್ರಮಗಳಿಗೆ ಸಾಮಾನ್ಯವಾಗಿ ಹೆಚ್ಚಾಗಿ ಭೇಟಿ ನೀಡುತ್ತಾರೆ. ಭಾರತದ ದೇವ ಭೂಮಿ ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯದಲ್ಲೂ ಸಹ ಕೆಲವು ವಿಶೇಷವಾದ ಆಶ್ರಮಗಳಿವೆ.
ಚಿತ್ರಕೃಪೆ: Daniel Echeverri
ಅಂತಹ ಒಂದು ಆಶ್ರಮದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಇದು ಉತ್ತರಾಖಂಡದ ಪವಿತ್ರ ಸ್ಥಳ ಎಂಬ ಖ್ಯಾತಿಗೆ ಪಾತ್ರವಾದ ರಿಷಿಕೇಶದಲ್ಲಿರುವ ಅತಿ ದೊಡ್ಡ ಆಶ್ರಮ. ಸುಮಾರು ಸಾವಿರಕ್ಕೂ ಅಧಿಕ ಕೊಠಡಿಗಳನ್ನು ಹೊಂದಿರುವ, ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ಜನಪ್ರೀಯ ಆಶ್ರಮ.
ಈ ಆಶ್ರಮಕ್ಕೆ ವರ್ಷಪೂರ್ತಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಈ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಈ ಆಶ್ರಮವೆ ರಿಷಿಕೇಶದಲ್ಲಿರುವ ಪರಮಾರ್ಥ ನಿಕೇತನ ಎಂಬ ಆಶ್ರಮ. ಬಲು ಜನಪ್ರೀಯವಾದ ಆಶ್ರಮ.
ಚಿತ್ರಕೃಪೆ: Ken Wieland
ಪೂಜ್ಯ ಸ್ವಾಮು ಸುಖದೇವಾನಂದ ಜೀ ಮಹಾರಾಜ (1901-1965) ಅವರಿಂದ ಈ ಆಶ್ರಮವು 1942 ರಲ್ಲಿ ಪ್ರಾರಂಭವಾಯಿತು. ತದನಂತರ 1986 ರಿಂದ ಪೂಜ್ಯ ಸ್ವಾಮಿ ಚಿದಾನಂದ ಸರಸ್ವತೀ ಜೀ ಅವರು ಇದರ ಅಧ್ಯಕ್ಷ ಹಾಗೂ ಮುಖ್ಯಸ್ಥರಾಗಿ ಇದನ್ನು ಮುನ್ನಡೆಸುತ್ತಿದ್ದಾರೆ.
ಈ ಆಶ್ರಮದಲ್ಲಿ ಪ್ರತಿ ದಿನವೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿರುತ್ತದೆ. ಪ್ರಮುಖವಾಗಿ ಇಲ್ಲಿ ಬೆಳಿಗ್ಗೆಯ ಸಮಯದಲ್ಲಿ ಯೋಗಾಸನಗಳನ್ನು ಹೇಳಿಕೊಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ವಿನ್ಯಾಸ ಯೋಗ, ಹಟ ಯೋಗ ಹಾಗೂ ಯೋಗೆ ನಿದ್ರೆಗಳ ಕುರಿತು ಇಲ್ಲಿ ಅದ್ಭುತ ತರಬೇತಿ ನೀಡಲಾಗುತ್ತದೆ.
ಚಿತ್ರಕೃಪೆ: רוליג
ಇವುಗಳಲ್ಲದೆ ಬೆಳಗಿನ ಲೋಕಕಲ್ಯಾಣ ಪ್ರಾರ್ಥನೆ, ಸಂಜೆಯಲ್ಲಿ ಗಂಗೆಗೆ ಆರತಿ, ಇನ್ನುಳಿದಂತೆ ಕೀರ್ತನೆಗಳು, ಪ್ರವಚನಗಳು ಮುಂತಾದವುಗಳು ಇಲ್ಲಿ ನಡೆಯುತ್ತವೆ. ಇಲ್ಲಿಗೆ ಭೇಟಿ ನೀಡುವ ಅದೆಷ್ಟೊ ವಿದೇಶಿ ಪ್ರವಾಸಿಗರು ಇಲ್ಲಿ ಬಂದ ನಂತರ ಧನಾತ್ಮಕತೆ ಪಡೆದುದಲ್ಲದೆ ಸಾಕಷ್ಟು ಮಾನಸಿಕ ನೆಮ್ಮದಿ ಪಡೆದುಕೊಂಡಿರುವುದಾಗಿ ಹೇಳುತ್ತಾರೆ.
ಪ್ರಕೃತಿಯ ಮಡಿಲಿನಲ್ಲಿರುವ ಈ ಆಶ್ರಮವು ಸುತ್ತಲೂ ನಿತ್ಯಹರಿದ್ವರ್ಣದ ಸುಂದರ ವನರಾಶಿಗಳಿಂದ ಕಂಗೊಳಿಸುತ್ತದೆ. ಗಂಗಾ ನದಿಯ ತಟದಲ್ಲಿರುವ ಈ ಸುಂದರ ತಾಣ ಭೇಟಿ ನೀಡುವವರು ಭಾವಪರವಶರಾಗುವಂತೆ ಮಾಡಿಬಿಡುತ್ತದೆ. ಅಲ್ಲದೆ ಆಯುರ್ವೇದದ ಚಿಕಿತ್ಸೆಗಳೂ ಸಹ ಇಲ್ಲಿ ಲಭ್ಯ.
ಭಾರತದಲ್ಲಿರುವ ಅತ್ಯುತ್ತಮ ಯೋಗಕೇಂದ್ರಗಳು
ಇದೊಂದು ಗುರುತರ ಕೇಂದ್ರವಾಗಿರುವುದರಿಂದ ರಿಷಿಕೇಶ ಬಸ್ಸು ನಿಲ್ದಾಣ ಅಥವಾ ನಗರ ಪ್ರದೇಶದ ಯಾವುದೆ ಭಾಗದಿಂದ ಈ ಆಶ್ರಮವನ್ನು ಸುಲಭವಾಗಿ ತಲುಪಬಹುದಾಗಿದೆ. ಈ ಆಶ್ರಮದೊಳ ಪ್ರವೇಶಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಇಲ್ಲಿ ಯಾವುದೆ ರೀತಿಯ ದೇಶ, ಜಾತಿ, ಧರ್ಮಗಳ ಬೇಧ-ಭಾವಗಳನ್ನು ಮಾಡಲಾಗುವುದಿಲ್ಲ.