ಪ್ಯಾರಡೈಸ್ ಎಂದಾಕ್ಷಣ ನಿಮಗೆ ಪ್ಯಾರಡೈಸ್ ಬಿರಿಯಾನಿ ನೆನಪಾಗಬಹುದು. ಆದರೆ ಇಂದು ನಾವು ಪ್ಯಾರಡೈಡ್ ಬಿರಿಯಾನಿ ಬಗ್ಗೆಯಲ್ಲ ಪ್ಯಾರಡೈಸ್ ಬೀಚ್ ಬಗ್ಗೆ ತಿಳಿಸಲಿದ್ದೇವೆ. ಪ್ಯಾರಡೈಸ್ ಬೀಚ್ ಪಾಂಡಿಚೇರಿಗೆ ಸಮೀಪವಿರುವ ಚುನ್ನಂಬರ್ನಲ್ಲಿದೆ. ಈ ಪ್ರಸಿದ್ಧ ಮತ್ತು ಹೆಚ್ಚು ಬೇಡಿಕೆಯ ಕಡಲತೀರವು ಯಾವಾಗಲೂ ಸಮುದ್ರದ ತಂಗಾಳಿಯಲ್ಲಿ ತೇಲುತ್ತಿರುತ್ತದೆ. ಇದು ಸ್ವಲ್ಪ-ಪ್ರತ್ಯೇಕಿತ ಕಡಲತೀರವಾಗಿದೆ ಮತ್ತು ಇಲ್ಲಿಗೆ ತಲುಪಲು ಹಿನ್ನೀರಿನಲ್ಲಿ20-30 ನಿಮಿಷಗಳ ಕಾಲ ದೋಣಿ ಸವಾರಿಯನ್ನು ಮಾಡಬೇಕು. ಮರಳು ಬಹಳ ಸ್ವಚ್ಛವಾಗಿರುವುದರಿಂದ ಮತ್ತು ನೀರಿನ ಸ್ಫಟಿಕದಂತಿದ್ದು ಬೀಚ್ ತುಂಬಾ ಆಕರ್ಷಕವಾಗಿದೆ. ಕಡಲೂರು ಮುಖ್ಯ ರಸ್ತೆಯ ಸಮೀಪದಲ್ಲಿ ಪ್ಯಾರಡೈಸ್ ಬೀಚ್ ಬಳಿ ಪ್ರಸಿದ್ಧ ಚುನ್ನಂಬರ್ ರೆಸಾರ್ಟ್ ಕೂಡಾ ಇದೆ.
ಬೋಟ್ ಹೌಸ್
ಬೀಚ್ ತಲುಪುವ ನಿಜವಾದ ಮಜಾ ಸಿಗೋದೇ ಹಿನ್ನೀರು ಮತ್ತು ಹಚ್ಚಹಸಿರಿನ ದಟ್ಟ ಮ್ಯಾಂಗ್ರೋವ್ ಕಾಡುಗಳ ನಡುವೆ ನೀವು ಬೋಟ್ ಹೌಸ್ನ ಬೋಟ್ನಲ್ಲಿ ದೋಣಿ ಸವಾರಿ ಮಾಡಿದಾಗ, ಮಳೆಗಾಲದ ನಂತರ, ಹಿನ್ನೀರುಗಳು ತಾಜಾ ಮತ್ತು ಹಸಿರು ಬಣ್ಣದಲ್ಲಿರುತ್ತವೆ. ಬೋಟ್ ರೈಡ್ನಲ್ಲಿ ನೀವು ಸಾಕಷ್ಟು ಪಕ್ಷಿಗಳನ್ನು ಗುರುತಿಸಬಹುದು. ಫೋಟೋ ಕ್ಲಿಕ್ ಮಾಡುವ ಆಸಕ್ತಿ ಇರುವವರು ಬೋಟ್ ರೈಡ್ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು.
ಕಡಲ ತೀರದಲ್ಲಿ ನಡೆದಾಡಿ
ಪ್ಯಾರಡೈಸ್ ಕಡಲತೀರದ ಮರಳು ಬಹಳ ಮೃದುವಾಗಿದೆ. ಈ ಮೃದು ಮರಳಿನಲ್ಲಿ ಇಡೀ ಕಡಲತೀರದ ಉದ್ದಕ್ಕೂ ನಡೆದಾಡುವುದು ನಿಜಕ್ಕೂ ಅದ್ಭುತವಾಗಿದೆ. ನೀರಿನ ಪ್ರವಾಹ ಹೆಚ್ಚುಇರುವುದರಿಂದ ನೀರಿನಲ್ಲಿ ಆಳಕ್ಕೆ ಇಳಿಯುವುದು ಅಪಾಯಕಾರಿಯಾಗಿದೆ. ಕಡಲತೀರದ ಮುಖ್ಯ ಪ್ರವೇಶದ ಉದ್ದಕ್ಕೂ ನೀವು ತಾಜಾ ಎಳನೀರು ಮತ್ತು ಕೆಲವು ತಿಂಡಿ ತಿನಿಸುಗಳನ್ನು ಪಡೆಯಬಹುದು.
ಬೀಚ್ ಫುಟ್ಬಾಲ್ ಆನಂದಿಸಿ
ಬೆಳಗ್ಗಿನ ಸೂರ್ಯೋದಯ ಹಾಗೂ ಸಂಜೆಯ ಸೂರ್ಯಾಸ್ತವನ್ನು ನೋಡಲು ಸೂಕ್ತವಾದ ತಾಣ ಇದಾಗಿದೆ. ಈ ಬೀಚ್ನಲ್ಲಿ ನೀವು ಸಂಜೆಯ ಹೊತ್ತಿನಲ್ಲಿ ಸಮುದ್ರದ ಅಲೆಗಳ ಏರಿಳಿತವನ್ನು ನೋಡುತ್ತಾ ಸಮುದ್ರದ ದಡದಲ್ಲಿ ಕಾಲಕಳೆಯಬಹದು. ಸ್ನೇಹಿತರೊಂದಿಗೆ ಬೀಚ್ನಲ್ಲಿ ಫುಟ್ಭಾಲ್, ಕ್ರಿಕೆಟ್, ವಾಲಿಬಾಲ್ ಆಡಬಹುದು.
ಜಲ ಕ್ರೀಡೆಗಳನ್ನು ಆನಂದಿಸಿ
ಕೆಲವು ಜಲ ಕ್ರೀಡೆಗಳನ್ನು ಸಹ ಆನಂದಿಸಬಹುದು. ಪ್ಯಾರಡೈಸ್ ಬೀಚ್ನಿಂದ ಜೆಟ್ ಸ್ಕೀಯಿಂಗ್, ಕ್ಯಾನೋಯಿಂಗ್ ಅಥವಾ ಕಯಾಕಿಂಗ್ ಅನ್ನು ನೀವು ಆನಂದಿಸಬಹುದು. ಆದರೆ ಈ ಚಟುವಟಿಕೆಗಳು ಯಾವಾಗಲೂ ಲಭ್ಯವಿರುವುದಿಲ್ಲ. ಈ ಬೀಚ್ ಬಹಳ ಆಳವಿರುವುದಿಂದ ನೀವು ಯಾವುದೇ ಜಲ ಕ್ರೀಡೆಯಾಗಲಿ ಅಥವಾ ಬೋಟ್ನಲ್ಲಿ ಪ್ರಯಾಣಿಸುವಾಗ ಸುರಕ್ಷತೆಯ ಕಡೆಗೆ ಗಮನ ನೀಡುವುದು ಒಳಿತು.
ಯಾವಾಗ ಭೇಟಿ ನೀಡುವುದು ಸೂಕ್ತ
ಪ್ಯಾರಡೈಸ್ ಬೀಚ್ಗೆ ಹೋಗಲು ಉತ್ತಮ ಸಮಯವೆಂದರೆ ನವಂಬರ್ ನಿಂದ ಮಾರ್ಚ್ ತಿಂಗಳು ಅಂದರೆ ಚಳಿಗಾಲದಲ್ಲಿ. ಮಳೆಗಾಲದಲ್ಲಿ ಇಲ್ಲಿ ಹೆಚ್ಚು ಮಳೆ ಬರುವುದರಿಂದ ಪಾಂಡಿಚೇರಿಗೆ ಭೇಟಿ ನೀಡದೇ ಇರುವುದು ಇಳ್ಳೆಯದು.
ಇವುಗಳನ್ನು ಕೊಂಡೊಯ್ಯಿರಿ
ನೀರು ಕಂಡಾಕ್ಷಣ ಬಹಳಷ್ಟು ಜನರಿಗೆ ಈಜಾಡಬೇಕೆಂದು ಆಸೆಯಾಗುತ್ತದೆ. ನೀವು ಈಜುವ ಯೋಜನೆ ಹೊಂದಿದ್ದರೆ ಬದಲಾಯಿಸಲೆಂದು ಹೆಚ್ಚುವರಿ ಬಟ್ಟೆಗಳನ್ನು ಕೊಂಡೊಯ್ಯಿರಿ. ನಿಮಗೆ ಬೇಕಾದಂತಹ ಮನೆಯ ಆಹಾರ ಈ ಕಡಲತೀರದಲ್ಲಿ ದೊರೆಯುವುದು ಕಷ್ಟಕರ. ಹಾಗಾಗಿ ನೀವು ನಿಮ್ಮ ಆಹಾರವನ್ನು ಮನೆಯಿಂದಲೇ ತಯಾರಿಸಿ ಕೊಂಡೊಯ್ಯುವುದು ಸೂಕ್ತ. ಜೊತೆಗೆ ಕುಡಿಯುವ ನೀರನ್ನೂ ಕೊಂಡೊಯ್ಯಿರಿ.
ತಲುಪುವುದು ಹೇಗೆ?
ನೀವು ಮುಖ್ಯ ನಗರದಿಂದ ಚುನ್ನಂಬರ್ ದೋಣಿ ಮನೆಗೆ ಆಟೋದ ಮೂಲಕ ಹೋಗ ಬಹುದು, ಇದು ಮುಖ್ಯ ಪಟ್ಟಣಕ್ಕೆ ದಕ್ಷಿಣಕ್ಕೆ 7 ಕಿಮೀ ದೂರದಲ್ಲಿದೆ. ಅಲ್ಲಿಂದ ನೀವು 75 ರೂ.ಗಳಿಗೆ ದೋಣಿ ಸವಾರಿ ಮಾಡಬಹುದು. ಮತ್ತು ದೋಣಿಯ ಮೂಲಕ ಬೀಚ್ ತಲುಪಲು ಸುಮಾರು 20-30 ನಿಮಿಷಗಳು ತೆಗೆದುಕೊಳ್ಳುತ್ತದೆ. ಈ ದೋಣಿಗಳು ಪ್ರತಿ 20 ನಿಮಿಷಗಳವರೆಗೆ ಚಲಿಸುತ್ತವೆ ಮತ್ತು ಬಹಳ ಅನುಕೂಲಕರವಾಗಿವೆ.
ದೋಣಿಯ ಸಮಯ ನೆನಪಿಟ್ಟುಕೊಳ್ಳಿ
ಕೊನೆಯ ದೋಣಿಗಳ ಸಮಯವನ್ನು ದಯವಿಟ್ಟು ನೆನಪಿನಲ್ಲಿಡಿ - ಸೂರ್ಯಾಸ್ತದ ಮೊದಲು ಬೀಚ್ನಿಂದ ನೀವು ಮರಳಬೇಕಾಗುತ್ತದೆ. ದೋಣಿ ಮನೆಗಳಲ್ಲಿನ ದೋಣಿಗಳ ಪ್ರಸ್ತುತ ಸಮಯವನ್ನು ಸೂಚಿಸಲಾಗುತ್ತದೆ, ಮತ್ತು ಕಡಲತೀರಕ್ಕೆ ಹೋಗುತ್ತಿರುವಾಗ ನಿಮ್ಮ ಫೋನ್ನಲ್ಲಿ ದೋಣಿಗಳ ಸಮಯದ ಫೋಟೋವನ್ನು ನೀವು ತೆಗೆದಿಟ್ಟುಕೊಂಡಲ್ಲಿ ಯಾವ ಸಮಯಕ್ಕೆ ನೀವು ಬೀಚ್ನಿಂದ ತೆರಳಬೇಕು ಎನ್ನುವುದನ್ನು ನಿರ್ಧರಿಸಬಹುದು.
ಮನಕುಲ ವಿನಾಯಕ ದೇವಸ್ಥಾನ
ಪಾಂಡಿಚೇರಿಯಿಂದ ಮೂರು ಕಿ.ಮೀ ದೂರದಲ್ಲಿ ಗಣೇಶನಿಗೆ ಸಮರ್ಪಿತವಾದ ಮನಕುಲ ವಿನಾಯಕ ದೇವಸ್ಥಾನವಿದೆ. ಇದನ್ನು ಸ್ಥಳೀಯವಾಗಿ ವೆಲ್ಲಕಾರನ್ ಪಿಲ್ಲೈ ಎಂದೂ ಕರೆಯಲಾಗುತ್ತದೆ. ಈ ದೇವಸ್ಥಾನವು ಫ್ರೆಂಚರು ಬಂದು ಪಾಂಡಿಚೇರಿಯಲ್ಲಿ ನೆಲೆಸುವುದಕ್ಕೂ ಮೊದಲೇ ಅಸ್ಥಿತ್ವದಲ್ಲಿತ್ತು. ತೊಲ್ಲೈಕಟ್ಟ್ ಸಿದ್ಧಾರ ಎನ್ನುವ ಸಂತರು ಈ ದೇವಸ್ಥಾನದ ಆವರಣದಲ್ಲೇ 300 ವರ್ಷಗಳ ಹಿಂದೆ ಸಮಾಧಿ ಹೊಂದಿದ್ದರಂತೆ. ಗಣೇಶ ಚತುರ್ಥಿಯನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮಹಾತ್ಮ ಗಾಂಧಿ ಪ್ರತಿಮೆ
ಪಾಂಡಿಚೇರಿ ಬಸ್ ನಿಲ್ದಾಣದಿಂದ 2.5 ಕಿ.ಮೀ ದೂರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಇದೆ. ಇದು ಪಾಂಡಿಚೆರಿಯ ಕಡಲತೀರದ ಮುಂಭಾಗದಲ್ಲಿದೆ. ಮದ್ರಾಸ್ ಸ್ಕೂಲ್ ಆಫ್ ಆರ್ಟ್ ಮತ್ತು ಕ್ರಾಫ್ಟ್ನಿಂದ ಪ್ರಸಿದ್ಧ ಶಿಲ್ಪಿ ರಾಯ್ ಚೌಧರಿ ನಿರ್ಮಿಸಿದ ಈ ಪ್ರತಿಮೆಯು ಪಾಂಡಿಚೇರಿಯ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಜಿಂಗೀ ಕೋಟೆಯಿಂದ ತಂದ ಎಂಟು ಮನೋಹರ ಕೆತ್ತಿದ ಏಕಶಿಲೆಯ ಗ್ರಾನೈಟ್ ಸ್ತಂಭಗಳಿಂದ ಇದು ಆವೃತವಾಗಿದೆ. ಈ ಮೂರ್ತಿಯು 4 ಮೀಟರ್ ಎತ್ತರವಾಗಿದೆ, ಇದು 3 ನೇ ಅತಿದೊಡ್ಡ ಮಹಾತ್ಮ ಗಾಂಧಿ ಪ್ರತಿಮೆಯಾಗಿದೆ. ಜನವರಿ 26, 1965 ರಂದು ಇದನ್ನು ಉದ್ಘಾಟಿಸಲಾಯಿತು. ಗಾಂಧಿ ಥಿಡಾಲ್ ಎಂದು ಕರೆಯಲ್ಪಡುವ ಪ್ರತಿಮೆಯ ಮುಂದೆ ಇರುವ ಚೌಕವು ವಿವಿಧ ಸಾಂಸ್ಕೃತಿಕ ಮತ್ತು ಸಂಗೀತ ಚಟುವಟಿಕೆಗೆ ವೇದಿಕೆಯಾಗಿದೆ.