ಹುಟ್ಟಿದ ಪ್ರತಿಯೊಬ್ಬ ಮನುಷ್ಯ ತನ್ನ ಸಂಪೂರ್ಣ ಜೀವಮಾನಕಾಲದಲ್ಲಿ ಬರುವ ಆಯಾ ವಯಸ್ಸಿನ ಘಟ್ಟಗಳಲ್ಲಿ ಸ್ವಾಭಾವಿಕವಾದ ಅನುಭವಗಳನ್ನು ಅನುಭವಿಸುತ್ತಾನೆ. ಅಂದರೆ ಬಾಲ್ಯದಲ್ಲಿ ಆಟ-ಪಾಠಗಳಲ್ಲಿ ತಲ್ಲೀನನಾದರೆ ಯವ್ವನದಲ್ಲಿ ಕನಸಿನ ಲೋಕದಲ್ಲಿ ವಿಹರಿಸುತ್ತಾನೆ.
ಹಾಗೆಯೆ ಗ್ರಹಸ್ಥ ಬದುಕಿನಲ್ಲೂ ಗ್ರಹಸ್ಥಾಶ್ರಮವನ್ನು ಅನುಭವಿಸಿ ತದನಂತರ ಕ್ರಮೇಣವಾಗಿ ಬುದ್ದಿ, ಮನಸ್ಸು ಹೆಚ್ಚು ಹೆಚ್ಚು ಪಕ್ವಗೊಳ್ಳುತ್ತ ಅಧ್ಯಾತ್ಮಕತೆಯತ್ತ ಹೆಚ್ಚು ವಾಲುತ್ತಾನೆ. ಎಲ್ಲರೂ ಇದೆ ರೀತಿ ಅಂತ ಹೇಳಲಾಗದಾದರೂ ಬಹುತೇಕರು ಹೀಗೆಯೆ ಜೀವನ ಅನುಭವಿಸುತ್ತಾರೆ.
ಪಕ್ವತೆಯ ಜೀವನವನ್ನು ಅನುಭವಿಸುವಾಗ ಸಾಕಷ್ಟು ಆಸ್ಥಿಕ ಅಥವಾ ಧಾರ್ಮಿಕ ಜನರಲ್ಲಿ ಮೋಕ್ಷ ಹೊಂದುವ ಅಥವಾ ದೇವರ ಕೃಪೆಗೆ ಪಾತ್ರವಾಗಬೇಕೆಂಬ ಅಭಿಲಾಷೆಯು ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತದೆ. ಇದನ್ನೆ ಸನಾತನ ವೇದ ಗ್ರಂಥಗಳಲ್ಲೂ ಸಹ ಉಲ್ಲೇಖಿಸಿರುವುದನ್ನು ಕಾಣಬಹುದು. ಇಹ ಲೋಕ ತ್ಯಜಿಸುವ ಮುನ್ನ ಆತ್ಮಸಂತೃಪ್ತಿ ಪಡೆಯಬೇಕೆಂಬ ಉತ್ಕಟವಾದ ಮನೋಭಾವ ಬಹುತೇಕರಲ್ಲಿ ಉಂಟಾಗುತ್ತದೆ.
ಆದರೆ ಇದನ್ನು ಪಡೆಯುವುದು ಹೇಗೆ? ಅದಕ್ಕೆಂದೆ ಹಲವಾರು ಪೌರಾಣಿಕ ಗ್ರಂಥಗಳಲ್ಲಿ ಹೇಳಲಾಗಿರುವಂತೆ ಸಾಕಷ್ಟು ತೀರ್ಥಕ್ಷೇತ್ರ, ಪುಣ್ಯಕ್ಷೇತ್ರಗಳ ದರ್ಶನ ಜನರನ್ನು ಅಪಾರವಾಗಿ ಆಕರ್ಷಿಸುತ್ತದೆ. ಅಂತಹ ಒಂದು ಯಾತ್ರೆಯಾಗಿದೆ ಪಂಚಪ್ರಯಾಗ ಅಥವ ಪಂಚ ಪ್ರಯಾಗ ಯಾತ್ರೆ. ಪ್ರಯಾಗವೆಂದರೆ ಸಂಗಮ ಎಂದರ್ಥ ಬರುತ್ತದೆ.
ಹಾಗಾಗಿ ಪಂಚ ಪ್ರಯಾಗಗಳು ಐದು ನದಿ ಸಂಗಮ ಸ್ಥಳಗಳ ದರ್ಶನ ಮಾಡುವ ಪವಿತ್ರ ಯಾತ್ರೆಯಾಗಿದೆ. ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದ ತೀರ್ಥಯಾತ್ರೆ ಇದಾಗಿದೆ. ಅಂದರೆ ಹಿಂದುಗಳು ಮಾಡುವ ಆ ಪಂಚ ಪ್ರಯಾಗಗಳು ಯಾವುವು? ಎಲ್ಲಿವೆ? ಹೇಗೆ ಮಾಡಬೇಕೆಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ.
ತೀರ್ಥಕ್ಷೇತ್ರಗಳು
ದೇವಭೂಮಿ ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯವು ಧಾರ್ಮಿಕ ಪ್ರವಾಸೋದ್ಯಮಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹಲವಾರು ತೀರ್ಥಯಾತ್ರೆಗಳನ್ನು ಈ ರಾಜ್ಯದಲ್ಲೆ ಮಾಡಬಹುದಾಗಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಪ್ರವಾಸಿಗರು ಸದಾ ಈ ರಾಜ್ಯಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.
ಚಿತ್ರಕೃಪೆ: Ekabhishek
ಉತ್ತರಾಖಂಡ
ಹಿಮಾಲಯ ಪರ್ವತಗಳಿಗೆ ಬಲು ಹತ್ತಿರದಲ್ಲಿರುವುದರಿಂದ ಉತ್ತರಾಖಂಡವು ಸಾಕಷ್ಟು ತಂಪು ತಂಪಾಗಿರುತ್ತದೆ. ಅಲ್ಲದೆ ಹಿಮಚ್ಛಾದಿತ ಪರ್ವತಗಳ ಅದ್ಭುತ ದೃಶ್ಯಗಳು, ನಯನ ಮನೋಹರವಾದ ಸೃಷ್ಟಿ ಸೌಂದರ್ಯ, ಮನಸ್ಸನ್ನು ಪ್ರಫುಲ್ಲಗೊಳಿಸುವ ಶುದ್ಧ ನೀರಿನ ತೊರೆಗಳು, ದಟ್ಟ ಕಾಡುಗಳು, ಸ್ವಚ್ಛ ಪರಿಸರ, ಕಣಿವೆ ಪ್ರದೇಶಗಳು, ಬೆಟ್ಟಗುಡ್ಡಗಳು ನಿಸರಗಪ್ರಿಯ ಪ್ರವಾಸಿಗರನ್ನೂ ಸಹ ಆಕರ್ಷಿಸುತ್ತದೆ.
ಚಿತ್ರಕೃಪೆ: Paul Hamilton
ದೇವಭೂಮಿ
ಈ ರಾಜ್ಯದಲ್ಲಿ ಹಲವು ಗುರುತರವಾದ ತೀರ್ಥ ಯಾತ್ರೆಗಳು ಲಭ್ಯವಿದ್ದು ಅವುಗಳಲ್ಲಿ ಪಂಚ ಪ್ರಯಾಗ ಯಾತ್ರೆಯೂ ಸಹ ಒಂದು. ಹಿಂದುಗಳು ನಂಬುವಂತೆ ಜೀವನ್ಮರಣಗಳ ಚಕ್ರದಿಂದ ಬಿಡುಗಡೆ ಹೊಂದಿ ಶಾಶ್ವತವಾಗಿ ಪರಮಾತ್ಮನಲ್ಲಿ ಒಂದಾಗಲು ಅಥವಾ ಜೀವನ ಮುಕ್ತಿ ಪಡೆಯಲು ಈ ಪಂಚ ಪ್ರಯಾಗ ಯಾತ್ರೆ ಬಲು ಮಹತ್ವದ್ದೆಂದು ನಂಬಲಾಗಿದೆ. ಅದಕ್ಕೆ ರೋಚಕವಾದ ಪೌರಾಣಿಕ ಕಥೆಯೂ ಇದೆ.
ಚಿತ್ರಕೃಪೆ: Atarax42
ಹೀಗಿದೆ
ಪಂಚಪ್ರಯಾಗಕ್ಕೆ ಸಂಬಂಧಿಸಿದಂತೆ ಆ ಕಥೆ ಹೀಗಿದೆ. ಹಿಂದೆ ಸೂರ್ಯ ವಂಶದ ಪೌರಾಣಿಕ ಭಾರತದ ಕೋಶಲ ಸಾಮ್ರಾಜ್ಯದ ಸಾಗರ ದೊರೆಯು ಒಮ್ಮೆ ಅಶ್ವಮೇಧ ಯಾಗವನ್ನು ಮಾಡುತ್ತಾನೆ. ಈ ಸಂದರ್ಭದಲ್ಲಿ ಕುದುರೆಯು ಹೋದ ಹೋದ ಸ್ಥಳಗಳನ್ನೆಲ್ಲ ಜಯಸುತ್ತಿರುತ್ತಾನೆ. ಹೀಗಿರುವಾಗ ಅವನ ಸೈನಿಕರು ಒಮ್ಮೆ ಆ ಯುದ್ಧ ಕುದುರೆಯ ಪಥವನ್ನು ಕಳೆದುಕೊಳ್ಳುತ್ತಾರೆ. ಸಾಂದರ್ಭಿಕ.
ಚಿತ್ರಕೃಪೆ: Sahib Din
ಹುಡುಕಲು ಹೊರಟರು
ಆಗ ಸಾಗರ ರಾಜನು ತನ್ನ 60,000 ಮಕ್ಕಳನ್ನು ಆ ಕುದುರೆ ಹುಡುಕಲು ಆದೇಶಿಸುತ್ತಾನೆ. ಅದರಂತೆ ಆ ಮಕ್ಕಳು ಎಲ್ಲೆಡೆ ಹಾಹಾಕಾರ ಹುಟ್ಟಿಸುತ್ತಾರೆ. ಒಮ್ಮೆ ಕಪಿಲ ಮಹಾಮುನಿಗಳ ಆಶ್ರಮಕ್ಕೆ ಲಗ್ಗೆ ಇಟ್ಟು ಧ್ವಂಸ ಮಾಡುತ್ತಾರೆ. ಇದರಿಂದ ಕಪಿಲ ಮಹಾಮುನಿಗಳು ಕೋಪಗೊಂಡು ಅವರನ್ನು ಶಪಿಸುತ್ತಾನೆ. ಈ ಪ್ರಸಂಗ ಜರುಗಿ ಅನೇಕ ನೂರು ವರ್ಷವೆ ಕಳೆದರೂ ಶಪಿತ ಮಕ್ಕಳು ಅಂತರ್ಪಿಶಾಚಿಗಳಾಗಿ ಮುಕ್ತಿಯಿಲ್ಲದೆ ಪೀಡೆ ಅನುಭವಿಸುತ್ತಿರುತ್ತಾರೆ. ಸಾಂದರ್ಭಿಕ.
ಚಿತ್ರಕೃಪೆ: Fatbuu.
ಧರ್ಮಪಾಲಕ
ಹೀಗೆ ಬಹು ಸಮಯದ ನಂತರ ಅವರ ಕುಲದಲ್ಲೆ ಭಗೀರಥ ಮಹಾರಾಜ ಜನ್ಮ ತಳೆಯುತ್ತಾನೆ ಹಾಗೂ ದೈವ ಪರ ನಂಬಿಕೆಯುಳ್ಳ ಆತ ಧರ್ಮಪರವಾಗಿ ಕಾರ್ಯಾಭಾರ ಮಾಡುತ್ತಾನೆ. ಆದರೆ ಶಪಿತ ಅವನ ಪೂರ್ವಜರು ಅವನ ಕನಸಿನಲ್ಲಿ ಬಂದು ನಡೆದ ಸಂಗತಿ ವಿವರಿಸಿ ತಮಗೆ ಮುಕ್ತಿ ದೊರೆಯಲು ಪ್ರಯತ್ನಿಸಬೇಕೆಂದು ಅಂಗಲಾಚುತ್ತಾರೆ. ಕೊನೆಗೆ ಭಗೀರಥನಿಗೆ ಸ್ವರ್ಗದಲ್ಲಿದ್ದ ಗಂಗೆಯು ಆತ್ಮಶುದ್ಧಿ ಮಾಡುವುದಲ್ಲದೆ ಸಕಲ ಶಾಪಗಳನ್ನು ವಿಮೋಚನೆಗಳಿಸುವ ವಿಷಯ ತಿಳಿದು ಶಿವನನ್ನು ಅತ್ಯಂತ ಘೋರ ತಪಸ್ಸನ್ನಾಚರಿಸುತ್ತಾನೆ.
ಚಿತ್ರಕೃಪೆ: Ramanarayanadatta astri
ಶಿವ ಪ್ರಸನ್ನ
ಇದರಿಂದ ಶಿವನು ಪ್ರಸನ್ನನಾಗಿ ಭಗೀರಥನಿಗೆ ವರ ಕೇಳಲು ಹೇಳಿದಾಗ, ಗಂಗೆಯು ಭೂಲೋಕದಲ್ಲಿ ಲೋಕ ಕಲ್ಯಾಣಕ್ಕಾಗಿ ಹರಿಯಲೆಂದು ಪ್ರಾರ್ಥಿಸುತ್ತಾನೆ. ಅದರಂತೆ ಗಂಗೆಯು ಭುಲೋಕಕ್ಕೆ ಹಿಮಾಲಯದ ಮೂಲಕ ಪ್ರವೇಶಿಸುತ್ತಾಳೆ. ಆದರೆ ಭೊರ್ಗೆರೆವ ಗಂಗೆಯ ರಭಸವು ಅಪಾರವಾಗಿದ್ದುದರಿಂದ ಇದು ಭೂಮಿಯನ್ನೆ ಮುಳುಗಿಸುವ ಸಾಧ್ಯತೆಯಿರುವುದರಿಂದ ಶಿವನು ಗಂಗೆಯನ್ನು ಹಲವು ಭಾಗಗಳಲ್ಲಿ ವಿಂಗಡಿಸಿ ಹರಿಯುವಂತೆ ಮಾಡುತ್ತಾನೆ.
ಚಿತ್ರಕೃಪೆ: wikipedia
ಆಯಾ ಸ್ಥಳಗಳು
ಹೀಗೆ ವಿಂಗಡಿಸಲಾದ ಗಂಗೆಯು ಇತರೆ ನಾಮಗಳೊಂದಿಗೆ ಬೇರೆ ಬೇರೆಯಾಗಿ ಹರಿಯುತ್ತಾಳಾದರೂ ಕೆಲವು ವಿಶೇಷ ಸ್ಥಳಗಳಲ್ಲಿ ಆಯಾ ನದಿಗಳು ಸಂಗಮ ಹೊಂದಿ ಪಂಚ ಪ್ರಯಾಗಗಳಾಗಿ ಪ್ರಸಿದ್ಧಿ ಪಡೆದಿವೆ. ಇದರಲ್ಲಿ ಗಮನಿಸ ಬೇಕಾದ ಒಂದು ಮುಖ್ಯ ಅಂಶವೆಂದರೆ ಅಲಕನಂದಾ ನದಿಯು ತನ್ನ ಪಥದಲ್ಲಿ ಐದು ಇತರೆ ನದಿಗಳೊಂದಿಗೆ ಸಂಗಮ ಹೊಂದುತ್ತಾಳೆ. ಆ ಐದು ಸ್ಥಳಗಳೆ ಪಂಚ ಪ್ರಯಾಗಗಳು. ಅಲಕನಂದಾ ನದಿ.
ಚಿತ್ರಕೃಪೆ: Raji.srinivas
ಐದು ಕ್ಷೇತ್ರಗಳು
ವಿಷ್ಣುಪ್ರಯಾಗ, ನಂದಪ್ರಯಾಗ, ಕರ್ಣಪ್ರಯಾಗ, ರುದ್ರಪ್ರಯಾಗ ಹಾಗೂ ದೇವಪ್ರಯಾಗ ಇವೆ ಆ ಪವಿತ್ರ ಪಂಚ ಪ್ರಯಾಗಗಳು. ವಿಷ್ಣು ಪ್ರಯಾಗದಲ್ಲಿ ಅಲಕನಂದಾ ಧೌಳಿಗಾಂಗಾದೊಂದಿಗೆ, ನಂದಪ್ರಯಾಗದಲ್ಲಿ ಅಲಕನಂದಾ ನಂದಕಿನಿಯೊಂದಿಗೆ, ಕರ್ಣಪ್ರಯಾಗದಲ್ಲಿ ಅಲಕನಂದಾ ಪಿಂಡರ್ ನದಿಯೊಂದಿಗೆ, ರುದ್ರಪ್ರಯಾಗದಲ್ಲಿ ಅಲಕನಂದಾ ಮಂದಾಕಿನಿಯೊಂದಿಗೆ ಹಾಗೂ ದೇವರ್ಪಯಾಗದಲ್ಲಿ ಅಲಕನಂದಾ ಭಾಗೀರಥಿ ನದಿಯೊಂದಿಗೆ ಸಂಗಮ ಹೊಂದುತ್ತಾಳೆ. ರುದ್ರಪ್ರಯಾಗ.
ಚಿತ್ರಕೃಪೆ: Vvnataraj
ದೇವಪ್ರಯಾಗ
ಈ ಐದು ಪ್ರಯಾಗಗಳಲ್ಲಿ ದೇವಪ್ರಯಾಗವನ್ನು ಬಲು ಪವಿತ್ರವಾದ ಪ್ರಯಾಗವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಗೋಮುಖದಲ್ಲಿ ಹುಟ್ಟುವ ಭಾಗೀರಥಿ ನದಿಯು ಈ ಸ್ಥಳದಲ್ಲಿ ಅಲಕನಂದಾ ನದಿಯೊಂದಿಗೆ ಸಂಗಮಗೊಂಡು ಮುಂದೆ ಭಾರತದ ಅಧಿಕೃತ ನದಿಯಾದ ಗಂಗಾ ನದಿಯಾಗಿ ಹರಿಯುತ್ತದೆ.
ಚಿತ್ರಕೃಪೆ: Mark A
ರಾಷ್ಟ್ರೀಯ ಹೆದ್ದಾರಿ
ದೆಹಲಿ -ಬದರಿನಾಥ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 58 ರ ಮೇಲೆ ಸ್ಥಿತವಿದೆ ದೇವಪ್ರಯಾಗ. ರಿಷಿಕೇಶದಿಂದ ಸುಮಾರು 80 ಕಿ.ಮೀ ದೂರವಿದ್ದು ರಿಷಿಕೇಶ ಬಸ್ಸು ನಿಲ್ದಾಣದಿಂದ ಬಸ್ಸು ಹಾಗೂ ಬಾಡಿಗೆ ಕಾರುಗಳು ದೇವಪ್ರಯಾಗಕ್ಕೆ ತೆರಳಲು ದೊರೆಯುತ್ತವೆ.
ಚಿತ್ರಕೃಪೆ: Debabrata Ghosh
ದೇವಪ್ರಯಾಗದಲ್ಲಿ
ದೇವಪ್ರಯಾಗದಲ್ಲಿ ಪವಿತ್ರ ಸ್ನಾನಗಳಾದಿಯಾಗಿ ಶ್ರಾದ್ಧ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಬಹುದು. ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಬಹುದು ಹಾಗೂ ಅದ್ಭುತ ಪ್ರಕೃತಿಯ ನಯನ ಮನೋಹರ ದೃಶ್ಯಾವಳಿಗಳನ್ನು ನೋಡಿ ಆನಂದಿಸಬಹುದಾಗಿದೆ.
ಚಿತ್ರಕೃಪೆ: Ssriram mt
ಏನಿದರ ವಿಶೇಷ?
ಕೇದಾರನಾಥನಿಂದ ಹರಿದು ಬರುವ ಮಂದ ಹಸಿರಿನ ಮಂದಾಕಿನಿ ನದಿಯು ಇತ್ತ ಬದರಿನಾಥದಿಂದ ಹರಿದು ಶುಭ್ರ ಬಿಳಿಯ ಅಲಕನಂದಾ ನದಿಯೊಂದಿಗೆ ಸಂಗಮ ಹೊಂದುವ ಸ್ಥಳವೆ ರುದ್ರಪ್ರಯಾಗ. ಎರಡು ನದಿಗಳ ಅಗಾಧ ಸಂಗಮದ ಅದ್ಭುತ ನೋಟವನ್ನು ಕರುಣಿಸುವ ಈ ಸ್ಥಳ ಪ್ರಾಕೃತಿಕ ಶ್ರೀಮಂತಿಕೆಯಿಂದ ಕೂಡಿದೆ.
ಚಿತ್ರಕೃಪೆ: AjitK332
ಪವಿತ್ರ ಸ್ಥಳ
ರಿಷಿಕೇಶದಿಂದ ಸುಮಾರು 140 ಕಿ.ಮಿ ಗಳಷ್ಟು ದೂರದಲ್ಲಿದೆ ರುದ್ರಪ್ರಯಗ. ದೇವಪ್ರಯಾಗದ ಮೂಲಕವಾಗಿಯೂ ಇಲ್ಲವೆ ರಿಷಿಕೇಶದಿಂದಲೂ ಸಹ ಟ್ಯಾಕ್ಸಿ ಹಾಗೂ ಬಸ್ಸಿನ ಮೂಲಕ ರುದ್ರಪ್ರಯಾಗ ಸ್ಥಳವನ್ನು ತಲುಪಬಹುದಾಗಿದೆ.
ಚಿತ್ರಕೃಪೆ: Vvnataraj
ಕಥೆ
ದಂತಕಥೆಯೊಂದರ ಪ್ರಕಾರ ಇಲ್ಲಿ ಧಾರ್ಮಿಕವಾಗಿ ಮಹತ್ವ ಪಡೆದಿರುವ ಕಪ್ಪು ಶಿಲೆಯೊಂದರ ಮೇಲೆ, ಹಿಂದೆ ನಾರದ ಮುನಿಗಳು ಶಿವನ ಕುರಿತು ಕಠಿಣ ತಪಸ್ಸು ಮಾಡಿ ಅವನನ್ನು ಪ್ರಸನ್ನ ಪಡಿಸಿ ಶಿವನಿಂದ ರುದ್ರ ವೀಣೆಯನ್ನು ನುಡಿಸುವ ವಿದ್ಯೆ ಕಲಿತಿದ್ದರು. ಹಾಗಾಗಿಯೆ ಇದಕ್ಕೆ ರುದ್ರಪ್ರಯಾಗ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Fowler&fowler
ಅಪೂರ್ವ
ಅಪಾರವಾದ ಸೃಷ್ಟಿ ಸೌಂದರ್ಯವನ್ನು ಇಲ್ಲಿ ನೋಡಬಹುದಾಗಿದ್ದುದರಿಂದ ನಿಸರ್ಗಪ್ರಿಯ ಪ್ರವಾಸಿಗರಿಗೂ ಇಷ್ಟವಾಗುವ ಸ್ಥಳ ರುದ್ರಪ್ರಯಾಗ. ಅಲ್ಲದೆ ಇಲ್ಲಿ ಪ್ರತಿನಿತ್ಯ ಸಂಜೆ ಆರು ಘಂಟೆಗೆ ನಡೆಯುವ ಸಂಗಮ ಆರತಿಯನ್ನು ನೋಡಲೇಬೇಕು.
ಚಿತ್ರಕೃಪೆ: Fowler&fowler
ನಾರದಶಿಲಾ
ನಂಬಿಕೆಯಂತೆ ರುದ್ರಪ್ರಯಾಗದಲ್ಲಿ ಶಾಪಗಳನ್ನು ನಾಶಮಾಡುವ ಪವಿತ್ರ ಸ್ನಾನ ಮಾಡಬಹುದಾಗಿದೆಯಲ್ಲದೆ ನಾರದಶಿಲಾ, ರುದ್ರನಾಥರ ದೇವಾಲಯ (ಗಂಗೇಶ್ವರ ಮಾಹದೇವ) ಹಾಗೂ ಶಕ್ತಿ ದೇವಿಗೆ ಸಮರ್ಪಿತವಾದ ಚಾಮುಂಡಾ ದೇವಿಯ ದೇವಾಲಯಗಳಿಗೆ ಭೇಟಿ ನೀದಬಹುದಾಗಿದೆ.
ಚಿತ್ರಕೃಪೆ: Mukerjee
ಕರ್ಣನಸ್ಥಳ
ಹಿಮಾಲಯದಲ್ಲಿ ಸ್ಥಿತವಿರುವ ಹಿಮನದಿಗಳ ಪೈಕಿ ಒಂದಾದ ಪಿಂಡರಿ ಹಿಮನದಿಯಿಂದ ಉಗಮಗೊಳ್ಳುವ ಪಿಂಡರ್ ನದಿಯು ಅಲಕನಂದಾ ನದಿಯೊಂದಿಗೆ ಸಂಗಮ ಹೊಂದುವ ಸ್ಥಳವೆ ಕರ್ಣಪ್ರಯಾಗ. ಸಾಕಷ್ಟು ಅದ್ಭುತವಾದ ಸ್ಥಳ ಇದಾಗಿದೆ.
ಚಿತ್ರಕೃಪೆ: Fowler&fowler
ಕರ್ಣಕವಚ
ಪ್ರತೀತಿಯಂತೆ ಸೂರ್ಯ ದೇವರ ಹಾಗೂ ಕುಂತಿ ದೇವಿಯ ಪುತ್ರನಾಗಿದ್ದ ಕರ್ಣನು ಇದೆ ಸ್ಥಳದಲ್ಲಿ ಕಠಿಣವಾದ ತಪಸ್ಸನ್ನಾಚರಿಸಿ ಸೂರ್ಯನನ್ನು ಪ್ರಸನ್ನಗೋಲಿಸಿ ಅವನಿಂದ ಸೂರ್ಯ ಕವಚವನ್ನು ಪಡೆದಿದ್ದನಂತೆ. ಹಾಗಾಗಿ ಈ ಸ್ಥಳಕ್ಕೆ ಕರ್ಣಪ್ರಯಾಗ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Mkeranat
ಅನುಕೂಲಕರವಾಗಿವೆ
ಬಹುತೇಕ ಎಲ್ಲ ಪ್ರಯಾಗಗಳು ಹೆಚ್ಚು ಕಮ್ಮಿ ಆಸು ಪಾಸುಗಳಲ್ಲಿಯೆ ಸ್ಥಿತವಿರುವುದರಿಂದ ರಿಷಿಕೇಶದಿಂದ ಆಯಾ ಪ್ರಯಾಗಗಳಿಗೆ ಸುಲಭವಾಗಿ ತಲುಪಬಹುದಾಗಿದೆ. ಕರ್ಣಪ್ರಯಾಗವು ರಿಷಿಕೇಶದಿಂದ ಸುಮಾರು 170 ಕಿ.ಮೀ ಗಳಷ್ಟು ದೂರವಿದ್ದು ಟ್ಯಾಕ್ಸಿಗಳ ಮೂಲಕ ತಲುಪಬಹುದಾಗಿದೆ.
ಚಿತ್ರಕೃಪೆ: Keerthi msrit
ಬೇರೆ ದೇಗುಲಗಳು
ಶಿವನನ್ನು ಮದುವೆ ಮಾಡಿಕೊಳ್ಳುವ ಉದ್ದೆಶದಿಂದ ಶೃದ್ಧೆಯಿಂದ ಪೂಜೆ ಮಾಡಿದ ಉಮಾ ದೇವಿಗೆ ಮುಡಿಪಾದ ದೇವಾಲಯ, ಕರ್ಣನ ದೇವಾಲಯ ಹಾಗೂ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಗೆ ಮುಡಿಪಾದ ದೇಗುಲಗಳನ್ನು ಇಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Fowler&fowler
ನಂದಾಕಿನಿ ನದಿ
ನಂದಾ ದೇವಿ ಹಿಮ ಪರ್ವತದ ಪ್ರದೇಶದಿಂದ ಉದ್ಭವಗೊಳ್ಳುವ ನಂದಾಕಿನಿ ನದಿಯು ತನ್ನದೆ ಆದ ಪಥದಲ್ಲಿ ಹರಿಯುತ್ತ ಬಂದು ಕೊನೆಗೆ ಅಲಕನಂದಾ ನದಿಯೊಂದಿಗೆ ಒಂದು ಸ್ಥಳದಲ್ಲಿ ಸಂಗಮಗೊಳ್ಳುತ್ತದೆ. ಆ ಸಂಗಮ ಸ್ಥಳವೆ ನಂದಪ್ರಯಾಗ.
ಚಿತ್ರಕೃಪೆ: Fowler&fowler
191 ಕಿ.ಮೀ
ಇನ್ನೂ ನಂದಪ್ರಯಾಗವನ್ನೂ ಸಹ ರಿಷಿಕೇಶದಿಂದ ಸುಲಭವಾಗಿ ತಲುಪಬಹುದಾಗಿದೆ. ರಿಷಿಕೇಶದಿಂದ ವೊಲ್ವೊ ಬಸ್ಸು ಅಥವಾ ಟ್ಯಾಕ್ಸಿಗಳು ನಂದಪ್ರಯಾಗಕ್ಕೆ ತೆರಳಲು ದೊರೆಯುತ್ತವೆ. ನಂದಪ್ರಯಾಗ ರಿಷಿಕೇಶದಿಂದ ಸುಮಾರು 191 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Fowler&fowler
ನಾಶವಾಯಿತು
ಹಿಂದೆ ನಂದಾ ದೇವಿಗೆ ಮುಡಿಪಾದ ಮುಖ್ಯ ದೇವಾಲಯವೊಂದು ಇಲ್ಲಿನ ಸಂಗಮ ಸ್ಥಳದ ಬಳಿಯ ತಟದಲ್ಲಿತ್ತು. ಆದರೆ ನೆರೆಯುಂಟಾದ ಸಂದರ್ಭವೊಂದರಲ್ಲಿ ಆ ದೇವಾಲಯವು ನಾಶಗೊಂಡಿದ್ದು ಪ್ರಸ್ತುತ ಚಂಡಿಕಾ ದೇವಿ ದೇವಾಲಯ, ಗಂಗೇಶವರ ಮಹಾದೇವ ದೇವಾಲಯ ಹಾಗೂ ಗೋಪಾಲ ಜೀ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Michael Scalet
ಧೌಳಿ ಗಂಗಾ
ವಿಷ್ಣು ಗಂಗಾ ಎಂದೂ ಕರೆಯಲ್ಪಡುವ ಅಲಕನಂದಾ ಈ ಸ್ಥಳದಲ್ಲಿ ಹಠಾತ್ ಆಗಿ ನಿಟಿ ಕಣಿವೆಯಿಂದ ಹರಿಯುವ ಧೌಳಿ ಗಂಗಾ ನದಿಯೊಂದಿಗೆ ಸೇರಿ ಸಂಗಮವನ್ನು ನಿರ್ಮಿಸುತ್ತದೆ. ಇದೆ ವಿಷ್ಣುಪ್ರಯಾಗ ಸ್ಥಳವಾಗಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Shmilyshy
272 ಕಿ.ಮೀ
ಇನ್ನೂ ವಿಷ್ಣುಪ್ರಯಾಗವನ್ನೂ ಸಹ ರಿಷಿಕೇಶದಿಂದ ಸುಲಭವಾಗಿ ತಲುಪಬಹುದಾಗಿದೆ. ರಿಷಿಕೇಶದಿಂದ ವೊಲ್ವೊ ಬಸ್ಸು ಅಥವಾ ಟ್ಯಾಕ್ಸಿಗಳು ನಂದಪ್ರಯಾಗಕ್ಕೆ ತೆರಳಲು ದೊರೆಯುತ್ತವೆ. ನಂದಪ್ರಯಾಗ ರಿಷಿಕೇಶದಿಂದ ಸುಮಾರು 272 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Fowler&fowler