ಪೂರ್ವದಲ್ಲಿರುವ ಆಂಧ್ರದ ವಿಶ್ವಪ್ರಖ್ಯಾತ ತಿರುಪತಿ-ತಿರುಮಲದ ಕುರಿತು ಗೊತ್ತು, ಆದರೆ ಏನಿದು ಪಶ್ಚಿಮದ ತಿರುಪತಿ? ಹೀಗೂ ಒಂದು ಸ್ಥಳವಿದೆಯಾ? ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿರಬೇಕಲ್ಲವೆ...ಹೌದು ಇಂತಹ ಒಂದು ಧಾರ್ಮಿಕ ಸ್ಥಳ ಕರ್ನಾಟಕದಲ್ಲೆ ನೆಲೆಸಿದೆ. ಇದೂ ಸಹ ವೆಂಕಟರಮಣ ಸ್ವಾಮಿಗೆ ಮುಡಿಪಾದ ದೇವಾಲಯ ಹೊಂದಿದೆ.
ಆಕರ್ಷಕ ಕಾರ್ಕಳ ಪಟ್ಟಣಕ್ಕೊಂದು ಪವಿತ್ರ ಯಾತ್ರೆ
ಕೆಲವು ಪ್ರದೇಶಗಳು ತಮ್ಮಲ್ಲಿರುವ ಏನೊ ಕೆಲವು ವಿಶೆಷಗಳಿಂದಾಗಿ ಜಗತ್ಪ್ರಸಿದ್ಧವಾಗಿರುತ್ತವೆ. ಅಂತಹ ಪ್ರದೇಶಗಳ ವಿಶೇಷತೆಗಳ ಸಾಮ್ಯತೆ ಇತರೆ ಯಾವುದಾದರೂ ಚಿಕ್ಕ ಪುಟ್ಟ ಪ್ರದೇಶಗಳಲ್ಲಿ ಕಂಡುಬಂದರೆ ಸಾಮಾನ್ಯವಾಗಿ ಅವುಗಳನ್ನು ಆ ಪ್ರಖ್ಯಾತ ಸ್ಥಳಗಳೊಂದಿಗೆ ಹೋಲಿಸಿ ನೋಡುತ್ತಾರೆ. ಅದರ ಚಿಕ್ಕ ಸ್ವರೂಪ, ನಕಲು ಎಂದೆಲ್ಲ ಬಣ್ಣಿಸುತ್ತಾರೆ.
ಚಿತ್ರಕೃಪೆ: Dvellakat
ಉದಾಹರಣೆಗೆ ನಮ್ಮ ಕರ್ನಾಟಕದ ಅದ್ಭುತ ಪ್ರಕೃತಿಯ ಸೊಬಗನ್ನು ಹೊತ್ತ ಕೊಡಗನ್ನು "ಭಾರತದ ಸ್ಕಾಟ್ ಲ್ಯಾಂಡ್" ಎಂದು ಕರೆದರೆ, ಛತ್ತೀಸಗಡ್ ರಾಜ್ಯದ ಬಸ್ತಾರ್ ಜಿಲ್ಲೆಯ ಜಗದಲ್ಪುರದಲ್ಲಿರುವ ಇಂದ್ರಾವತಿ ನದಿಯಿಂದ ರೂಪಗೊಂಡ ಚಿತ್ರಕೋಟ ಜಲಪಾತವನ್ನು "ಭಾರತದ ನಯಾಗ್ರಾ" ಎಂದು ಕರೆಯುತ್ತಾರೆ.
ಅದೆ ರೀತಿಯಾಗಿ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ಕ್ಷೇತ್ರವನ್ನು ಪಡುತಿರುಪತಿ ಅಂದರೆ ಪಶ್ಚಿಮದ ತಿರುಪತಿ ಎಂದೆ ಕರೆಯುತ್ತಾರೆ. ಏಕೆಂದರೆ ಇಲ್ಲಿಯೂ ಸಹ ಶ್ರೀಮದ್ ವೆಂಕಟರಮಣನು ನೆಲೆಸಿದ್ದು ಇಲ್ಲಿ ನಡೆಯುವ ಪೂಜಾ ವಿಧಿ ವಿಧಾನಗಳು ತಿರುಮಲ ಕ್ಷೇತ್ರದಲ್ಲಿ ಜರುಗುವ ರೀತಿಗಳಲ್ಲಿಯೆ ಶಾಸ್ತ್ರಬದ್ಧವಾಗಿ ನಡೆಯುತ್ತವೆ.
ಚಿತ್ರಕೃಪೆ: Dvellakat
ಅಲ್ಲದೆ ಸೌಮ್ಯ ಸ್ವಭಾವದ, ಪ್ರಶಾಂತವಾಗಿ ನೆಲೆಸಿರುವ ಈ ಶ್ರೀನಿವಾಸನು ಇಲ್ಲಿಗೆ ಬರುವ ಭಕ್ತಾದಿಗಳ ಸಕಲ ಸಂಕಟಗಳನ್ನು ಶೀಘ್ರದಲ್ಲಿಯೆ ಪರಿಹರಿಸುತ್ತಾನೆಂಬ ನಂಬಿಕೆ ಇಲ್ಲಿಗೆ ಭೇಟಿ ನೀಡುವ ಹಲವು ಭಕ್ತಾದಿಗಳದ್ದು ಹಾಗೂ ಒಳಿತನ್ನು ಕಂಡವರದ್ದು. ಅಲ್ಲದೆ ಈ ದೇವಾಲಯ ಸಾಕಷ್ಟು ಪುರಾತನವಾಗಿದ್ದು ಪಟ್ಟಣದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾಗಿದೆ.
ಮೂಲತಃ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ದೇವಾಲಯವು ನೂರು ವರ್ಷಗಳಷ್ಟು ಅದ್ಭುತವಾದ ಇತಿಹಾಸವನ್ನು ಹೊಂದಿದ್ದು ಇದರ ಆಡಳಿತ ಮಂಡಳಿಯಿಂದ ಈ ಸಮಯದಲ್ಲಿ ಸಾಕಷ್ಟು ಸಾಮಾಜಿಕ ಸೇವೆಗಳು ಮಾಡಲ್ಪಟ್ಟಿವೆ. ದೇವಾಲಯ ಕ್ಷೇತ್ರವು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪಡುತಿರುಪತಿ ಕ್ಷೇತ್ರವೆಂದೆ ಜನಪ್ರೀಯವಾಗಿದ್ದು ಸಾಕಷ್ಟು ಜನ ಭಕ್ತಾದಿಗಳನ್ನು ಪಡೆಯುತ್ತದೆ.
ದೇವಾಲಯದಲ್ಲಿರುವ ದೀಪ ಬೆಳಗುವ ವಿಶಿಷ್ಟ ಸಮಯ, ಚಿತ್ರಕೃಪೆ: Dvellakat
ಶ್ರೀ ವೆಂಕಟರಮಣನು ನೆಲೆಸಿರುವ ಈ ಪಡುತಿರುಪತಿ ಇರುವುದು ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ಪಟ್ಟಣದಲ್ಲಿ. ಹೌದು, ಜೈನ ಧರ್ಮದ ವೈಭವವನ್ನೂ ಸಾರುವ ಕಾರ್ಕಳ ಪಟ್ಟಣದಲ್ಲಿ ನೋಡಬಹುದಾದ ಹಿಂದು ದೇವಾಲಯಗಳ ಪೈಕಿ ಶ್ರೀ ವೆಂಕಟರಮಣನ ಈ ದೇವಾಲಯವೂ ಸಹ ಸಾಕಷ್ಟು ಪ್ರಾಮುಖ್ಯತೆಗಳಿಸಿದೆ.
ಕರ್ನಾಟಕದಲ್ಲಿರುವ ಐದು ಏಕಶಿಲಾ ಗೊಮ್ಮಟ ಪ್ರತಿಮೆಗಳು
ಕಾರ್ಕಳವು ಒಂದು ತಾಲೂಕು ಕೇಂದ್ರವಾಗಿದ್ದು ಉಡುಪಿಯಿಂದ 45 ಕಿ.ಮೀ, ಮಂಗಳೂರಿನಿಂದ 51 ಕಿ.ಮೀ ಹಾಗೂ ಬೆಂಗಳೂರಿನಿಂದ 370 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿಗೆ ತೆರಳಲು ಮೂರು ನಗರಗಳಿಂದ ಸಾಕಷ್ಟು ಬಸ್ಸುಗಳು ಲಭ್ಯವಿದೆ.