ಮಲಯಾಳಂ ಭಾಷೆಯಲ್ಲಿ ಪಡ ಎಂದರೆ ಯುದ್ಧ ಹಾಗೂ ನೀಲಂ ಎಂದರೆ ಭೂಮಿ ಎಂಬರ್ಥ ಬರುತ್ತದೆ. ಹೀಗಾಗಿ ಇದೊಂದು ಯುದ್ಧಭೂಮಿಯ ಪಟ್ಟಣವಾಗಿದೆ. ಇದೆ ಪಡನೀಲಂ. ಕೇರಳ ರಾಜ್ಯದ ಅಲಪುಳ ಅಥವಾ ಜನಪ್ರೀಯವಾಗಿ ಗುರುತಿಸಲಾಗುವ ಅಲ್ಲೆಪ್ಪಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ ಪಡನೀಲಂ.
ನಿಮಗಿಷ್ಟವಾಗಬಹುದಾದ : ಅಲ್ಲೆಪ್ಪಿ ಪ್ರವಾಸ, ಏಕೆ ಇಷ್ಟೊಂದು ಜನಪ್ರೀಯ?
ಪಡನೀಲಂ ಮುಖ್ಯವಾಗಿ ಇಲ್ಲಿ ಹಿಂದೊಂದು ಸಮಯದಲ್ಲಿ ಘೋರವಾಗಿ ನಡೆದ ಯುದ್ಧ ಹಾಗೂ ಇಲ್ಲಿ ಸ್ವಯಂಭು ಆಗಿ ಪ್ರಕಟವಾಗಿರುವ ಓಂ ಅಥವಾ ಪರಬ್ರಹ್ಮನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಓಂಕಾರ ನಾದವನ್ನು ಇಲ್ಲಿ ಪರಬ್ರಹ್ಮನಾಗಿ ಆರಾಧಿಸಲಾಗುವುದು ವಿಶೇಷ.
ಚಿತ್ರಕೃಪೆ: Vaishni
ಇನ್ನೊಂದು ವಿಷಯವೆಂದರೆ ಈ ದೇವಾಲಯವು ಹಲವು ವಿಶೇಷತೆಗಳನ್ನು ಹೊಂದಿದೆ. ಮುಖ್ಯ ದೈವವಾಗಿ ಕಲ್ಲಿನಲ್ಲಿ ಒಡಮೂಡಿದ ಓಂಕಾರವನ್ನು ಕಾಣಬಹುದು. ಕೆಲವರು ಇದು ಬ್ರಹ್ಮನ ದೇವಾಲಯವಾಗಿಯೂ ಪರಬ್ರಹ್ಮನನ್ನು ಪೂಜಿಸುತ್ತಾರೆ. ಈ ದೇವಾಲಯಕ್ಕೆ ಯಾವುದೆ ಗೋಡೆಗಳಾಗಲಿ, ಛಾವಣಿಯಾಗಲಿ ಇಲ್ಲ. ಗಿಡಗಳ ಟೊಂಗೆಗಳೆ ಇಲ್ಲಿನ ಮುಖ್ಯ ವಿಗ್ರಹಕ್ಕೆ ಗೋಪುರ ಹಾಗೂ ಛಾವಣಿ.
ಪ್ರವೇಶ ದ್ವಾರ, ಚಿತ್ರಕೃಪೆ: Vaishni
ಅರ್ಚಕರು ಬ್ರಾಹ್ಮಣೇತರರು. ಯಾವುದೆ ಜಾತಿ ಧರ್ಮಗಳ ಭೇದವಿಲ್ಲದೆ ಯಾರು ಬೇಕಾದರೂ ದೇವಸ್ಥಾನಕ್ಕೆ ಪ್ರವೇಶಿಸಿ ದೇವರನ್ನು ಪೂಜಿಸಬಹುದು. ದೇವಸ್ಥಾನವನ್ನು ಮುಂಜಾವಿನಲ್ಲಿ ತೆರೆಯುವುದಾಗಲಿ, ರಾತ್ರಿಯಲ್ಲಿ ಮುಚ್ಚುವುದಾಗಲಿ ಪದ್ದತಿಗಳಿಲ್ಲ. ಸದಾಕಾಲ ನಿರಂತರವಾಗಿ ಇದು ಪ್ರವೇಶ ಮುಕ್ತವಾಗಿರುತ್ತದೆ.
ವೃಶ್ಚಿಕ ಮಾಸದ ಸಂದರ್ಭದಲ್ಲಿ, ಚಿತ್ರಕೃಪೆ: Vaishni
ಶಿವರಾತ್ರಿ ಹಾಗೂ ಸುಬ್ರಹ್ಮಣ್ಯ ದೇವರಿಗೆಂದು ನಡೆಸಲಾಗುವ ಕಾವಡಿಯಟ್ಟಂ ಇಲ್ಲಿ ವಿಶೇಷವಾಗಿರುತ್ತದೆ. ಯಾವ ಧರ್ಮದವರಾದರೂ ಇದರಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿರುವುದರಿಂದ ನಿಜ ಅರ್ಥದಲ್ಲಿ ಇದು ಧಾರ್ಮಿಕ ಏಕತೆಯನ್ನು ಎತ್ತಿ ತೋರಿಸುತ್ತದೆ. ಭಕ್ತರಿಗೆ ಇಲ್ಲಿ ಭಸ್ಮವನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಚಿತ್ರಕೃಪೆ: Akhilpadanilam
ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಕೆಟ್ಟುಕಳಚಾ ಉತ್ಸವ ಅತ್ಯದ್ಭುತವಾಗಿರುತ್ತದೆ. ದೇವಾಲಯದ ಅಧೀನದಲ್ಲಿ ಬರುವ ವಿವಿಧ ಪ್ರಾಂತಗಳು ತಮ್ಮ ತಮ್ಮ ಅದ್ಭುತವಾಗಿ ರಚಿಸಲಾದ ಎತ್ತಿನ ಬೊಂಬೆಗಳನ್ನು ಸುಂದರವಾಗಿ ಪ್ರದರ್ಶಿಸುತ್ತಾರೆ. ಬೊಂಬೆಗಳ ಮುಖಗಳನ್ನು ಕಟ್ಟಿಗೆಗಳಿಂದ ಮಾಡಿ ನಂತರ ಅದನ್ನು ಟ್ರಕ್ಕು, ಟ್ರ್ಯಾಕ್ಟರುಗಳಲ್ಲಿ ನೆಟ್ಟು ಪ್ರದರ್ಶಿಸುತ್ತಾರೆ.
ಲಕ್ಷ ದೀಪೋತ್ಸವ, ಚಿತ್ರಕೃಪೆ: Vaishni
ಯಾವುದೆ ಇತರೆ ದೇವ ದೇವತೆಯರ ವಿಗ್ರಹಗಳು ಇಲ್ಲಿಲ್ಲ. ವೃಶ್ಚಿಕ ಮಾಸದ ಮೊದಲ 12 ದಿನಗಳ ಕಾಲ ಭಕ್ತಾದಿಗಳು ಇಲ್ಲಿನ ದೇವಾಲಯ ಆವರಣದಲ್ಲಿ ತಂಗಿ ಪರಬ್ರಹನನ್ನು ಪೂಜಿಸುತ್ತ, ಆರಾಧಿಸುತ್ತ ಭಜನೆಗಳನ್ನು ಮಾಡಬಹುದು. ಈ ಸಂದರ್ಭದಲ್ಲಿ ಅವರು ತಂಗಲು ಕೃತಕವಾಗಿ ಗುಡಿಸಲುಗಳನ್ನು ನಿರ್ಮಿಸಲಾಗುತ್ತದೆ. ವಿಶೇಷವೆಂದರೆ ವರ್ಷದಿಂದ ವರ್ಷಕ್ಕೆ ಗುಡಿಸಲುಗಳ ಸಂಖ್ಯೆ ಹೆಚ್ಚಾಗುತ್ತಿರುವುದು.
ಕಟ್ಟಿಗೆಯಿಂದ ರಚಿಸಲಾಗುವ ಬೊಂಬೆ, ಚಿತ್ರಕೃಪೆ: spisharam
ಈ ದೇವಾಲಯ ಒಂದು ಇಡತಾವಳಂ ಸ್ಥಾನ. ಅಂದರೆ ತೀರ್ಥ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಉಳಿದುಕೊಳ್ಳಬಹುದಾದ ಆಶ್ರಯ ಸ್ಥಳ. ಪ್ರಖ್ಯಾತ ಶಬರಿ ಮಲೆಗೆ ಹೋಗುವ ಭಕ್ತಾದಿಗಳು ಮಾರ್ಗ ಮಧ್ಯೆ ಇಲ್ಲಿ ಆಶ್ರಯ ಪಡೆಯುತ್ತಾರೆ. ಇವರಿಗೆ ದೇವಾಲಯ ವತಿಯಿಂದ ಶುಂಠಿ ಕಾಫಿ ಹಾಗೂ ಹಗುರವಾದ ಉಪಹಾರವನ್ನು ಸೇವೆಯ ಅಂಗವಾಗಿ ನೀಡಲಾಗುತ್ತದೆ.
ನಿಮಗಿಷ್ಟವಾಗಬಹುದಾದ : ಅಬ್ಬಾ ಎಷ್ಟೊಂದು ಸುಂದರ, ಕೇರಳದ ಹಿನ್ನೀರು
ತಿರುವಾಂಕೂರು ರಾಜ್ಯಭಾರವಿದ್ದ ಸಂದರ್ಭದಲ್ಲಿ ರಾಜ್ಯದ ಮೊದಲ ನಾಲ್ಕು ಪ್ರಭಾವಿ ದೇವಾಲಯಗಳ ಪೈಕಿ ಒಂದಾಗಿದ್ದ ಪಡನೀಲಂನ ಪರಬ್ರಹ್ಮನ ದೇವಾಲಯವು ಕಾಯಂಕುಲಂ ಪಟ್ಟಣದಿಂದ 17 ಕಿ.ಮೀ ದೂರವಿದೆ. ಅಲ್ಲೆಪ್ಪಿಯಿಂದ ಕಾಯಂಕುಲಂಗೆ ರೈಲು ಹಾಗೂ ಬಸ್ಸುಗಳು ದೊರೆಯುತ್ತವೆ. ಅಚ್ಚನ್ಕೋವಿಲ್ ನದಿಯ ತಟದಲ್ಲಿರುವ ಪಡನೀಲಂ ನೂರ್ನಾಡು-ಪಂದಲಂ ಮಾರ್ಗದಲ್ಲಿ ಬರುತ್ತದೆ.