ಇತ್ತೀಚಿಗಷ್ಟೆ ದೇಶದಲ್ಲಿ ಮಹಿಳೆಯರಿಗೆ ಪ್ರವೇಶಿಸಲು ನಿರ್ಬಂಧವಿರುವ ಕೆಲವು ಪ್ರಮುಖ ದೇವಾಲಯಗಳ ಕುರಿತು ಸಾಕಷ್ಟು ವಿವಾದವೆದ್ದು ತಣ್ಣಗಾಗಿರುವುದು ಗೊತ್ತೆ ಇದೆ. ಪುರುಷರಿಗೆ ಸರಿ ಸಮಾನವಾಗಿರುವ ಮಹಿಳೆಯರಿಗೂ ಸಹ ಮೂಲಭೂತ ಹಕ್ಕಿದ್ದು ಯಾಕೆ ಕೆಲವು ದೇವಾಲಯಗಳನ್ನು ಪ್ರವೇಶಿಸಲು ನಿರ್ಬಂಧವಿದೆ ಎಂಬುದೆ ಈ ವಿವಾದದ ಮೂಲ ತಿರುಳು.
ಆದರೆ, ಆ ವಿಚಾರ ಹಾಗಿರಲಿ, ಚಿತ್ರ ವಿಚಿತ್ರ ಆಚರಣೆಗಳನ್ನು ಹೊಂದಿರುವ ಭಾರತದಲ್ಲಿ ಕೇಲವು ದೇವಾಲಯಗಳು, ಆಚರಣೆಗಳು ಹೇಗಿವೆ ಎಂದರೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶಿಸಲು ಅನುಮತಿಯಿದ್ದು ಕೆಲವು ಆಚರಣೆಗಳಲ್ಲಿ ಮಹಿಳೆಯರು ಮಾತ್ರವೆ ಭಾಗವಹಿಸಬೇಕೆಂಬ ನಿಯಮವಿದೆ ಎಂದರೆ ಖಂಡಿತವಾಗಿಯು ಅಚ್ಚರಿಯಾಗದೆ ಇರಲಾರದು.
ಚಿತ್ರಕೃಪೆ: Maheshsudhakar
ಏನಿದು ಎಂದು ಆಶ್ಚರ್ಯವಾಗುತ್ತಿರಬೇಕಲ್ಲವೆ? ಹೌದು ಇದು ಸತ್ಯ. ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ಒಂದು ದೇವಾಲಯವು ಉತ್ಸವವೊಂದಕ್ಕೆ ಹೆಸರುವಾಸಿಯಾಗಿದೆ. ಇನ್ನೂ ವಿಶೇಷವೆಂದರೆ ಈ ಉತ್ಸವದಲ್ಲಿ ಕೇವಲ ಮಹಿಳೆಯರು ಮಾತ್ರವೆ ಪಾಲ್ಗೊಳ್ಳುವ ನಿಯಮವಿದೆ. ಈ ಆಚರಣೆಯಲ್ಲಿ ಪುರುಷರಿಗೆ ಆಹ್ವಾನವೆ ಇಲ್ಲ. ಈ ದೇವಾಲಯವಿರುವುದು ಕೇರಳ ರಾಜ್ಯದಲ್ಲಿ.
ಮನದಲ್ಲಿ ನಿರಂತರವಾಗಿ ನೆಲೆಯೂರುವ ತಿರುವನಂತಪುರಂ
ಕೇರಳದ ರಾಜಧಾನಿ ನಗರವಾದ ತಿರುವನಂತಪುರಂನಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಅಟ್ಟುಕಲ್ ನಲ್ಲಿ ಈ ದೇವಾಲಯವಿದ್ದು ಇದನ್ನು ಅಟ್ಟುಕಲ್ ಭಗವತಿ ದೇವಾಲಯ ಎಂದು ಕರೆಯುತ್ತಾರೆ. ಪ್ರಖ್ಯಾತ ಪದ್ಮನಾಭಸ್ವಾಮಿ ದೇವಾಲಯದಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿರುವ ಈ ಭಗವತಿ ದೇವಾಲಯವು ಪೊಂಗಲ ಉತ್ಸವಕ್ಕೆ ಅತ್ಯಂತ ಹೆಸರುವಾಸಿ.
ವಿಶೇಷವೆಂದರೆ ಈ ಪೊಂಗಲ ಉತ್ಸವದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುತ್ತಾರೆ ಹಾಗೂ ಸಿಹಿ ಖಾದ್ಯವಾದ ಪೊಂಗಲ್ ಅನ್ನು ದೇವಾಲಯದಾವರಣದಲ್ಲಿ ತಯಾರಿಸಿ ಭಗವತಿ ದೇವಿಗೆ ಅರ್ಪಿಸುತ್ತಾರೆ. ಇದು ಎಷ್ಟೊಂದು ಪ್ರಸಿದ್ಧವಾಗಿದೆ ಎಂದರೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ ನಲ್ಲಿ ಇದು ದಾಖಲೆಗೊಂಡಿದೆ. ಅಂದರೆ ಯಾವುದೆ ಧಾರ್ಮಿಕ ಆಚರಣೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವ ಮಹಿಳೆಯರು ವಿಭಾಗದಲ್ಲಿ ಈ ಉತ್ಸವವು ದಾಖಲೆ ನಿರ್ಮಿಸಿರುವುದು ವಿಶೇಷ.
ಚಿತ್ರಕೃಪೆ: Maheshsudhakar
ದಂತಕಥೆಯಂತೆ, ಕಣ್ಣಕಿ ಎಂಬ ಕನ್ಯೆಯನ್ನು ಕೋವಲನ್ ಎಂಬ ಶ್ರೀಮಂತನೊಂದಿಗೆ ಮದುವೆ ಮಾಡಿಕೊಡಲಾಗುತ್ತದೆ. ಆದರೆ ಮಾಧವಿ ಎಂಬ ನೃತ್ಯಗಾರ್ತಿಯ ಸಂಗ ಮಾಡಿದ ಕೋವಲನ್ ತನ್ನ ಪತ್ನಿಯನ್ನು ಮರೆತು ಅವಳೊಂದಿಗೆ ಕಾಲ ಕಳೆಯತೊಡಗುತ್ತ ಕ್ರಮೇಣವಾಗಿ ತನ್ನಲ್ಲಿದ್ದ ಎಲ್ಲ ಹಣವನ್ನು ಕಳೆದುಕೊಳ್ಳುತ್ತಾನೆ. ಹೀಗೆ ದಿವಾಳಿಯಾದ ಕೋವಲನ್ ಕೊನೆಗೆ ತನ್ನ ಪತ್ನಿಯ ಹತ್ತಿರ ಬರುತ್ತಾನೆ.
ಪತ್ನಿಯು ತನ್ನಲ್ಲಿದ್ದ ಒಡವೆಗಳನ್ನು ಕೊಟ್ಟು ಜೀವನ ಸಾಗಿಸುವ ವಿಚಾರ ಹೇಳಿದಾಗ ಕೋವಲನ್ ಅದನ್ನು ಮಾರಲು ಮದುರೈಗೆ ತೆರಳುತ್ತಾನೆ ಹಾಗೂ ಅಲ್ಲಿ ಆಭರಣ ಮಾರುತ್ತಿರುವ ಸಂದರ್ಭದಲ್ಲಿ ಸೈನಿಕರ ತಪ್ಪು ಗ್ರಹಿಕೆಯಿಂದ ರಾಣಿಯ ಕಳೆದುಹೋಗಿದ್ದ ಆಭರಣಗಳ ಕಳ್ಳ ಇವನೆ ಇರಬೇಕೆಂದು ತಿಳಿದು ಆತನನ್ನು ಕೊಂದು ಬಿಡುತ್ತಾರೆ. ಇದರಿಂದ ದುಖ ಹಾಗೂ ಕೋಪಗೊಂಡ ಕಣ್ಣಕಿ ಮದುರೈಗೆ ಶಾಪ ನೀಡುತ್ತಾಳೆ.
ಚಿತ್ರಕೃಪೆ: Raji.srinivas
ಆ ಸಮಯದಲ್ಲಿ ದೇವಿ ಪ್ರತ್ಯಕ್ಷಳಾಗಿ ಅವಳನ್ನು ಆಶೀರ್ವದಿಸಿ ಮೋಕ್ಷ ಕೊಡುತ್ತಾಳೆ. ನಂತರ ಕಣ್ಣಕಿ ಒಬ್ಬ ಹುಡುಗಿಯ ರೂಪ ತಳೆದು ನದಿಯ ದಂಡೆಯ ಮೇಲೆ ಕುಳಿತಿರುವ ಒಬ್ಬ ಹಿರಿಯನನ್ನು ಸಮೀಪಿಸಿ ತನ್ನನ್ನು ನದಿ ದಾಟಿಸಲು ಸಹಾಯ ಮಾಡಬೇಕೆಂದು ಕೇಳುತ್ತಾಳೆ. ಆ ಪುಟ್ಟ ಹುಡುಗಿಯನ್ನು ಕಂಡ ಹಿರಿಯ ಅವಳನ್ನು ತಾನೆ ಬೆಳೆಸುವುದಾಗಿ ನಿರ್ಧರಿಸಿದಾಗ ಹುಡುಗಿ ಮಾಯವಾಗುತ್ತಾಳೆ.
ಚಿತ್ರಕೃಪೆ: Maheshsudhakar
ಆ ದಿನ ರಾತ್ರಿಯಲ್ಲಿ ಆ ಹುಡುಗಿ ಹಿರಿಯನ ಕನಸಿನಲ್ಲಿ ಬಂದು ಅವನ ತೋಟದಲ್ಲಿ ಎಲ್ಲಿ ಮೂರು ಸುವರ್ಣ ರೇಖೆಗಳು ಕಂಡುಬರುತ್ತವೊ ಅಲ್ಲಿ ತನಗೊಂದು ದೇವಾಲಯ ನಿರ್ಮಿಸಬೇಕೆಂದು ಹೇಳುತ್ತಾಳೆ. ಅದರಂತೆ ಆ ಹಿರಿಯ ತನ್ನ ತೋಪಿನಲ್ಲಿದ್ದ ಒಂದು ಸ್ಥಳದಲ್ಲಿ ದೇವಾಲಯ ನಿರ್ಮಿಸುತ್ತಾನೆ. ಇಂದು ಆ ದೇವಾಲಯವೆ ಅಟ್ಟುಕಲ್ ಭಗವತಿ ದೇವಾಲಯ ಎಂದು ಹೇಳಲಾಗುತ್ತದೆ ಹಾಗೂ ಆ ಹುಡುಗಿ ಕಣ್ಣಕಿ ಮತ್ತಿನ್ಯಾರೂ ಅಲ್ಲ ಸಾಕ್ಷಾತ್ ಪಾರ್ವತಿಯ ಅವತಾರವೆನ್ನಲಾಗಿದೆ.
ಈ ದೇವಾಲಯ ಉತ್ಸವದಲ್ಲಿ ಮಂಗಳಮುಖಿಯರು ಮದುವೆಯಾಗಿ ವಿಧವೆಯಾಗುತ್ತಾರೆ!
ತಿರುವನಂತಪುರಂ ಕೇರಳದ ದೊಡ್ಡ ನಗರ ಪ್ರದೇಶವಾಗಿದ್ದು ಭಾರತದ ಹಲವು ಪ್ರಮುಖ ನಗರಗಳಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ. ಪ್ರತಿ ವರ್ಷ ಫೆಬ್ರುವರಿ-ಮಾರ್ಚ್ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ನಡೆಯುಆ ಪೊಂಗಲ ಉತ್ಸವಕ್ಕೆ ಹೆಸರುವಾಸಿಯಾದ ಈ ದೇವಾಲಯಕ್ಕೆ ತೆರಳಲು ತಿರುವನಂತಪುರಂ ಬಸ್ಸು ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಂದ ಬಾಡಿಗೆ ರಿಕ್ಷಾಗಳು ದೊರೆಯುತ್ತವೆ.
ತಿರುವನಂತಪುರಂಗಿರುವ ರೈಲುಗಳು