ಹೌದು, ಮಾಹಾಭಾರತ ಗ್ರಂಥದಲ್ಲಿ ಬರುವ ಕೌರವರ ಮುಖ್ಯಸ್ಥ ಹಾಗೂ ಅಗ್ರಜನಾದ ದುರ್ಯೋಧನಿಗೆ ಮುಡಿಪಾದ ದೇವಾಲಯವೊಂದು ದಕ್ಷಿನ ಭಾರತದಲ್ಲಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ಕೌರವರಿಗೆ ಮುಡಿಪಾದ, ದುರ್ಯೋಧನನ ದೇವಾಲಯವಿದೆಯಾದರೂ ದಕ್ಷಿಣ ಭಾರತದಲ್ಲಿ ದುರ್ಯೋಧನನ ಏಕೈಕ ದೇವಾಲಯ ಇದಾಗಿದೆ.
ಚಿತ್ರ, ವಿಚಿತ್ರ ಹಿನ್ನಿಲೆಯ ದೇವಾಲಯಗಳು
ದುರ್ಯೋಧನನ ಈ ಸನ್ನಿಧಿಯನ್ನು ಪೋರುವಳಿ ಪೆರುವಿರುತಿ ಮಲನಾಡ ದೇವಾಲಯ ಎಂದು ಕರೆಯಲಾಗುತ್ತದೆ ಹಾಗೂ ಈ ದೇವಾಲಯವಿರುವುದು ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ. ಕೊಲ್ಲಂ ಜಿಲ್ಲೆಯ ಕುನ್ನತೂರು ತಾಲೂಕಿನಲ್ಲಿರುವ ಪೋರುವಳಿ ಎಂಬ ಗ್ರಾಮದಲ್ಲಿ ದುರ್ಯೋಧನನಿಗೆ ಮುಡಿಪಾದ ಈ ವಿಶಿಷ್ಟ ದೇವಾಲಯವಿದೆ.
ಪೋರುವಳಿಯಲ್ಲಿರುವ ಗುಡ್ಡವೊಂದರ ಮೇಲೆ ಈ ದೇವಾಲಯ ಸ್ಥಿತವಿದೆ. ಮಲಯಾಳಿ ಭಾಷೆಯಲ್ಲಿ ಮಲ ಎಂದರೆ ಗುಡ್ಡ ಎಂತಲೂ, ನಾಡ ಎಂದರೆ ದೇವಾಲಯ ಅಥವಾ ಸನ್ನಿಧಿ ಎಂತಲೂ ಅರ್ಥವಿರುವುದರಿಂದ ಇದನ್ನು ಮಲನಾಡ ದೇವಾಲಯ ಎಂತಲೆ ಕರೆಯಲಾಗುತ್ತದೆ ಹಾಗೂ ವಿಶೇಷವೆಂದರೆ ಈ ದೇವಾಲಯದಲ್ಲಿ ಯಾವುದೆ ಮುಖ್ಯ ವಿಗ್ರಹವಾಗಲಿ ಅಥವಾ ಗೋಪುರವಾಗಲಿ ಇಲ್ಲ.
ಕೇವಲ ಮಂಟಪದ ರೀತಿಯಲ್ಲಿ ರಚನೆಯೊಂದಿದ್ದು ಇಲಿಗೆ ಭೇಟಿ ನೀಡುವ ಭಕ್ತರು ತಮ್ಮ ತಮ್ಮ ಇಷ್ಟ ದೈವವನ್ನು ಧ್ಯಾನಿಸಬಹುದಾದರೂ ಸಂಕಲ್ಪ ಮೂರ್ತಿಯಾಗಿ ದುರ್ಯೋಧನನನ್ನು ಆರಾಧಿಸಲಾಗುತ್ತದೆ. ದುರ್ಯೋಧನ ತಮೋಗುಣದ ರಾಯಭಾರಿಯಾಗಿದ್ದು ತನಗೆ ಬೇಕಾದ ವಸ್ತುಗಳನ್ನು ಪಡೆಯುವಂತಹ ಛಲಗಾರಿಕೆಯ ಗುಣಕ್ಕೆ ಸಂದ ಗೌರವದಂತಿದೆ ಇಲ್ಲಿನ ದೇವಾಲಯ.
ಸ್ಥಳ ಪುರಾಣದಂತೆ, ಹಿಂದೆ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ಅವರನ್ನು ಹುಡುಕುವ ನಿಟ್ಟಿನಲ್ಲಿ ದುರ್ಯೋಧನನು ಕಾಡಲ್ಲೆಲ್ಲ ಅಲೆದು ಕೊನೆಗೆ ಈ ಸ್ಥಳಕ್ಕೆ ಬಂದನು. ಆಗ ಅವನಿಗೆ ದಣಿವಾಗಿದ್ದರಿಂದ ಪ್ರದೇಶದ ಅಪ್ಪೊಪ್ಪನ್ ಎಂಬ ಅರ್ಚಕನ ಮನೆಗೆ ತೆರಳಿ ಕುಡಿಯಲು ನೀರು ಕೇಳಿದನು. ಮನೆಯೊಡತಿ ದಣಿವಾರಿಸಿಕೊಳ್ಳಲು ಹೇಳಿ ದುರ್ಯೋಧನನಿಗೆ ಕುಡಿಯಲು ಸಂಪ್ರದಾಯದಂತೆ ಈಚಲ ಮರದ ಹೆಂಡ ಕೊಟ್ಟಳು.
ಕೇರಳದ ಏಳು ಆಶ್ಚರ್ಯಕರ ದೇವಾಲಯಗಳು
ಇದರಿಂದ ಪ್ರಸನ್ನನಾದ ದುರ್ಯೋಧನ ಗುಡ್ಡದ ಮೇಲೆ ಕುಳಿತು ತನ್ನ ಈ ಗ್ರಾಮದ ಪ್ರಜೆಗಳಿಗೆಲ್ಲ ಒಳಿತಾಗಲಿ ಎಂದು ಶಿವನ ಕುರಿತು ಪ್ರಾರ್ಥಿಸಿದುದಲ್ಲದೆ ನೂರಾರು ಎಕರೆಗಳಷ್ಟು ಭೂಮಿಯನ್ನು ದಾನವಾಗಿ ನೀಡಿದನಂತೆ. ಹೀಗಾಗಿ ಇಲ್ಲಿನ ಜನರಿಗೆ ದುರ್ಯೋಧನನ ಮೇಲೆ ಎಲ್ಲಿಲ್ಲದ ಆದರ ಹಾಗೂ ಪ್ರೀತಿ. ಇದು ಏಷ್ಟಿದೆ ಅಂದರೆ ದೇವಾಲಯದ ಭೂಮಿಯ ತೆರಿಗೆಯನ್ನೂ ಸಹ ಇಂದಿಗೂ ದುರ್ಯೋಧನನ ಹೆಸರಿನಲ್ಲಿ ತುಂಬಲಾಗುತ್ತದಂತೆ!