ಎಲ್ಲಾದರೂ ದೂರದ ಪ್ರವಾಸ ಹೋಗಬೇಕು, ಸ್ವಲ್ಪ ಆಯಾಸವಾದರೂ ತೊಂದರೆಯಿಲ್ಲ, ಸಾಹಸ ಮಾಡಿದಂತಾಗಬೇಕು ಎಂಬ ಹುಮ್ಮಸ್ಸಿನ ಮನಸ್ಸಿಗೆ ವಿಧ್ಯಗಿರಿ ಬೆಟ್ಟ ಸೂಕ್ತ ಸ್ಥಳ. ಹಾಸನ ಜಿಲ್ಲೆಯ ಐತಿಹಾಸಿಕ ನೆಲೆಯಾದ ವಿಧ್ಯಗಿರಿ ಚಾರಣ ಹಾಗೂ ತೀರ್ಥ ಯಾತ್ರೆಗೆ ಶ್ರೇಷ್ಠ ಕ್ಷೇತ್ರ. ಬೆಂಗಳೂರಿನಿಂದ 160 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ವಾರದ ರಜೆಯಲ್ಲಿ ಬರಬಹುದು.
ಹಾಸನದ ಬಗ್ಗೆ ಹೆಚ್ಚು ಓದಲು ಆಸಕ್ತಿಯೇ?
ಎತ್ತರವಾದ ಗುಡ್ಡ, ಗುಡ್ಡದ ಮೇಲೊಂದು ಪವಿತ್ರ ಕ್ಷೇತ್ರ, ಸುತ್ತಲೂ ಹಸಿರು ಸಿರಿ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ಬೆಟ್ಟದ ಮೇಲೆ ಗೊಮ್ಮಟನ ಏಕಶಿಲಾ ಮೂರ್ತಿಯಿದೆ. ಇದು ಸುಮಾರು 58 ಅಡಿಗಳಷ್ಟು ಎತ್ತರವನ್ನು ಹೊಂದಿದೆ. ಶ್ರವಣ ಬೆಳಗೊಳದ ಗೊಮ್ಮಟ ಎಂದು ಜಗತ್ಪ್ರಸಿದ್ಧಿ ಪಡೆದ ಈ ಕ್ಷೇತ್ರ ಜೈನರ ಪವಿತ್ರ ಸ್ಥಳ. ಕ್ರಿ.ಶ. 973ರಲ್ಲಿ ಚಾವುಂಡರಾಯನು ಅರಿಷ್ಟ ನೇಮಿ ಎಂಬ ಶಿಲ್ಪಿಯಿಂದ ಈ ಮೂರ್ತಿಯನ್ನು ಕೆತ್ತಿಸಿದ್ದನು ಎನ್ನಲಾಗುತ್ತದೆ.
ಈ ಬೆಟ್ಟವನ್ನು ಹತ್ತಿ ಬರಲು 700 ಮೆಟ್ಟಿಲುಗಳಿವೆ. ಪ್ರವಾಸಿಗರ ಅನುಕೂಲಕ್ಕಾಗಿ ಡೋಲಿ ಹಾಗೂ ಪಲ್ಲಕ್ಕಿಯ ವ್ಯವಸ್ಥೆಯಿದೆ. ಜೈನರ ಪವಿತ್ರ ಕ್ಷೇತ್ರವಾದ ಇಲ್ಲಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ಲಕ್ಷಾಂತರ ಜೈನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಎನ್ನಲಾಗುತ್ತದೆ. ಮನೋಹರ ಕೆತ್ತನೆಯನ್ನು ಹೊಂದಿರುವ ಈ ದೇಗುಲ ಈ ಪವಿತ್ರ ವಾಸ್ತುಶಿಲ್ಪವನ್ನು ಹೊಂದಿದೆ. ಮೆಟ್ಟಿಲೇರಿ ಒಮ್ಮೆ ಬಂದರೆ ವಿಷ್ಮಯವಾದ ಪ್ರಕೃತಿ ಸಿರಿಯನ್ನು ಕಣ್ತುಂಬಿಕೊಳ್ಳಬಹುದು.
ಹತ್ತಿರದ ಆಕರ್ಷಣೆಯಾಗಿ 25 ಕಿ.ಮೀ. ದೂರದಲ್ಲಿರುವ ಆದಿಚುಂಚನಗಿರಿ, 60 ಕಿ.ಮೀ. ದೂರದಲ್ಲಿ ಹಳೆಬೀಡು, 80 ಕಿ.ಮೀ. ದೂರದಲ್ಲಿ ಬೇಲೂರು, 50 ಕಿ.ಮೀ. ದೂರದಲ್ಲಿ ಮೇಲುಕೋಟೆಯನ್ನು ನೋಡಬಹುದು.