ಭಾರತದಲ್ಲಿ ಅದೆಷ್ಟೊ ರಹಸ್ಯಗಳು ಇನ್ನೂ ಭೂಗರ್ಭದಲ್ಲಿ ಅಡಗಿ ಕುಳಿತಿವೆಯೆನೋ! ಕಾಲ ಕಾಲಕ್ಕೆ ಅನ್ವೇಷಕರ ತಂಡಗಳಿಂದ ಹಾಗೂ ಅವರು ನಡೆಸುವ ಅನ್ವೇಷಣೆಗಳಿಂದ ಸಾಕಷ್ಟು ಕುತೂಹಲಕಾರಿ ಸ್ಥಳಗಳು ಇಂದು ನಮಗೆ ಪರಿಚಿತವಾಗಿವೆ.
ಅಲ್ಲದೆ ಪುರಾತತ್ವ ಶಾಸ್ತ್ರಜ್ಞರು ನಡೆಸಿರುವ ಅದೆಷ್ಟೊ ಉತ್ಖನನಗಳಿಂದ ಚಿತ್ರ ವಿಚಿತ್ರ ಹಿನ್ನಿಲೆಯಿರುವ ಸ್ಥಳಗಳು, ವಸ್ತುಗಳು ದೊರಕಿರುವುದೂ ಸತ್ಯ. ಅದರಂತೆ ಪುರಾತನ ಭಾರತದಲ್ಲಿ ಬಂಡೆಗಳಲ್ಲೆ ಕಡೆದಿರುವ ಕುತೂಹಲಕಾರಿ ಹಾಗೂ ರಹಸ್ಯಮಯ ಗುಹೆಗಳು ಪರಿಚಿತವಾದದ್ದು ಒಂದು ರೀತಿಯ ವಿಚಿತ್ರ ಅಲೌಕಿಕ ಅನುಭವವನ್ನು ಜನರಲ್ಲಿ ಮೂಡಿಸದೆ ಇರಲಾರದು.
ಇನ್ನೂ ಅಂತಹ ಸ್ಥಳಗಳಿಗೆ ಭೇಟಿ ನೀಡುವುದೆಂದರೆ ಇತಿಹಾಸಕಾರರಿರಲಿ, ಸಾಮಾನ್ಯ ಜನರಿಗೂ ಸಹ ಸಾಕಷ್ಟು ಕುತೂಹಲ ಕೆರಳಿಸುತ್ತದೆ. ಅಂತಹ ಒಂದು ಗುಹಾ ರಚನೆಗಳ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನು ಬರಾಬರ್ ಗುಹೆಗಳು ಎಂದು ಕರೆಯುತ್ತಾರೆ.
ರಹಸ್ಯಮಯ!
ಬರಾಬರ್ ಗುಹೆಗಳು ಇತಿಹಾಸಕರ ಹಾಗೂ ಅನ್ವೇಷಿಕ ಪ್ರವಾಸಿಗರ ಸಾಕಷ್ಟು ಗಮನ ಸೆಳೆದಿದೆ. ಕೆಲವು ತಜ್ಞರ ಪ್ರಕಾರ ಈ ಗುಹೆಗಳು ಪ್ರಾಯಶಃ ಭಾರತದ ಅತ್ಯಂತ ಪ್ರಾಚೀನೆ ಗುಹೆಗಳಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರಕೃಪೆ: Photo Dharma
ಅಧ್ಯನಕಾರರ ನೆಚ್ಚಿನ
ಇಲ್ಲಿ ಅಧ್ಯಯನ ನಡೆಸಿದಾಗ ಸಾಕಷ್ಟು ಆಸಕ್ತಿಕರ ವಿಷಯಗಳು, ಶಾಸನಗಳು ಕಂಡುಬಂದಿದ್ದು ಇತಿಹಾಸ ಪ್ರಿಯ ಪ್ರವಾಸಿಗರ ನೆಚ್ಚಿನ ತಾಣವಾಗಿ ಬರಾಬರ್ ಗುಹೆಗಳು ಗಮನ ಸೆಳೆಯುತ್ತವೆ ಎಂತಲೆ ಹೇಳಬಹುದು.
ಚಿತ್ರಕೃಪೆ: Photo Dharma
ತಿಳಿದಿರುವ ವಿಷಯ
ಈ ಗುಹೆಗಳಲ್ಲಿ ವೈಜ್ಞಾನಿಕ ಅಧ್ಯಯನ ಕೈಗೊಂಡ ಬಳಿಕ ತಿಳಿದು ಬಂದಿರುವ ವಿಷಯವೆಂದರೆ ಈ ಬಂಡೆಯಲ್ಲಿ ಕೆತ್ತಲಾದ ಗುಹೆಗಳು ಏನಿಲ್ಲವೆಂದರೂ ಕ್ರಿ.ಪೂ ಮೂರನೇಯ ಶತಮಾನಕ್ಕೆ ಸಂಬಂಧಿಸಿದ್ದವೆಂದು ಹೇಳಲಾಗಿದೆ. ಅಷ್ಟೊಂದು ಪ್ರಾಚೀನತೆಯನ್ನ ಈ ಗುಹೆಗಳು ಹೊಂದಿವೆ.
ಚಿತ್ರಕೃಪೆ: Photo Dharma
ಇನ್ನೊಂದೂ ಇದೆ!
ಇನ್ನೊಂದು ವಿಚಾರವೆಂದರೆ ಬರಾಬರ್ ಗುಹೆಗಳು ಎಂದಾಗ ಇಲ್ಲಿ ಕೇವಲ ಬರಾಬರ್ ಹೆಸರಿನ ಗುಹೆಗಳೆಂದೆ ಇಲ್ಲ. ಬದಲಿಗೆ ಇವು ಅವಳಿ ಗುಹೆಗಳಾಗಿದ್ದು ಎರಡು ಅವಳಿ ಬೆಟ್ಟಗಳಲ್ಲಿ ನೆಲೆಸಿವೆ ಹಾಗೂ ಒಂದಕ್ಕೊಂದು ಕೇವಲ ಒಂದುವರೆ ಕಿ.ಮೀ ಅಂತರದಲ್ಲಿ ಸ್ಥಿತವಿದೆ.
ಚಿತ್ರಕೃಪೆ: Photo Dharma
ಬೇರೆ ಬೇರೆ
ಒಂದು ಗುಡ್ಡದ ಮೇಲಿರುವ ಗುಹೆಗಳು ಬರಾಬರ್ ಗುಹೆಗಳೆಂತಲೂ ಇನ್ನೊಂದು ಗುಡ್ಡದ ಮೇಲಿರುವ ಗುಹೆಗಳನ್ನು ನಾಗಾರ್ಜುನಿ ಗುಹೆಗಳೆಂತಲೂ ಕರೆಯಲಾಗುತ್ತದೆಯಾದರೂ ಇವೆರಡನ್ನು ಸಾಮಾನ್ಯವಾಗಿ ಬರಾಬರ್ ಗುಹೆಗಳು ಎಂಬ ಹೆಸರಿನಿಂದಲೆ ಕರೆಯುತ್ತಾರೆ.
ಚಿತ್ರಕೃಪೆ: Photo Dharma
ಪ್ರತ್ಯೇಕವಾಗಿ
ಆದಾಗ್ಯೂ ನಾಗಾರ್ಜುನಿ ಗುಹೆಗಳು ಎಂಬ ಪ್ರತ್ಯೇಕ ನಾಮದಿಂದಲೂ ಸಹ ನಾಗಾರ್ಜುನಿ ಗುಹೆಗಳು ಒಮ್ಮೊಮ್ಮೆ ಕರೆಸಿಕೊಳ್ಳುತ್ತವೆ. ಬರಾಬರ್ ಗುಡ್ಡದಲ್ಲಿ ನಾಲ್ಕು ಗುಹೆಗಳಿದ್ದು, ನಾಗಾರ್ಜುನಿ ಗುಡ್ಡದಲ್ಲಿ ಮೂರು ಗುಹೆಗಳಿವೆ.
ಚಿತ್ರಕೃಪೆ: Photo Dharma
ಇತರೆ ರಚನೆಗಳು
ಹೀಗಾಗಿ ಇಲ್ಲಿ ಒಟ್ಟಾರೆಯಾಗಿ ಏಳು ಕಡೆಯಲಾದ ಗುಹೆಗಳಿರುವುದನ್ನು ಕಾಣಬಹುದು ಹಾಗೂ ಅವುಗಳ ಜೊತೆ ಅನೇಕ ಇತರೆ ಚಿತ್ರ ವಿಚಿತ್ರ ರಚನೆಗಳು, ಸ್ಮಾರಕಗಳು ಹಾಗೂ ಶಾಸನಗಳಿರುವುದನ್ನು ಕಾಣಬಹುದು.
ಚಿತ್ರಕೃಪೆ: Photo Dharma
ಘೋರತಗಿರಿ
ಈ ಗುಹಾ ಸಮೂಹಗಳನ್ನು ಸಾತ್ಘರ್ವಾ, ಘೋರತಗಿರಿ, ಹಾಫ್ತ್ ಖಾನ್ ಎಂಬ ಇತರೆ ಹೆಸರುಗಳಿಂದಲೂ ಸಹ ಕರೆಯುತ್ತಾರೆ. ಒಟ್ಟಾರೆಯಾಗಿ ಇಲ್ಲಿ ಏಳು ಗುಹೆಗಳಿರುವುದರಿಂದ ಇದನ್ನು ಸಾತ್ ಅಂದರೆ ಏಳು ಹಾಗೂ ಘರ್ ಅಂದರೆ ಮನೆ ಎಂಬರ್ಥ ಬರುವಂತೆ ಸಾತ್ಘರ್ವಾ ಎಂದು ಕರೆಯುತ್ತಾರೆ.
ಚಿತ್ರಕೃಪೆ: Photo Dharma
ಹೆಸರುವಾಸಿ
ವಿಶೇಷವೆಂದರೆ ಪ್ರಾಚೀನ ಮಹಾಭಾರತದಲ್ಲೂ ಸಹ ಈ ಸ್ಥಳದ ಕುರಿತು ಉಲ್ಲೇಖವಿರುವುದನ್ನು ಕಾಣಬಹುದು. ಅದರಲ್ಲಿ ಈ ಅವಳಿ ಬೆಟ್ಟಗಳನ್ನು ಘೋರತಗಿರಿ ಎಂಬ ಹೆಸರಿನಿಂದ ಕರೆಯಲಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಇಲ್ಲಿನ ಗುಹೆಗಳಲ್ಲಿ ಕಡೆದು ಬರೆಯಲಾಗಿರುವ ಬ್ರಾಹ್ಮಿ ಲಿಪಿಯಲ್ಲಿ ಘೋರತಗಿರಿ ಎಂಬ ಹೆಸರನ್ನು ಕಾಣಬಹುದಾಗಿದೆಯಂತೆ.
ಚಿತ್ರಕೃಪೆ: Photo Dharma
ಯಾರಿಗೆ ದೇಣಿಗೆ?
ಇಲ್ಲಿರುವ ಶಾಸನಗಳನ್ನು ಗಮನಿಸಿದಾಗ ಮುಖ್ಯವಾಗಿ ತಿಳಿದುಬರುವ ವಿಚಾರವೆಂದರೆ ಮೌರ್ಯರ ಆಡಳಿತವಿದ್ದ ಸಂದರ್ಭದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಈ ಗುಹೆಗಳು ಅಜೀವಿಕ ಪಂಥದವರಿಗೆ ದೇಣಿಗೆಯಾಗಿ ನೀಡಲಾಗಿದ್ದ ರಚನೆಗಳೆಂದು ತಿಳಿದುಬರುತ್ತದೆ.
ಚಿತ್ರಕೃಪೆ: Photo Dharma
ಕುತೂಹಲಕರ
ಹೌದು, ಅನೇಕ ಧರ್ಮ, ಪಂಥಗಳಿಗೆ ಜನ್ಮಭೂಮಿಯಾಗಿರುವ ಪುರಾತನ ಭಾರತವೂ ಅಜೀವಿಕ ಎಂಬ ಪಂಥಕ್ಕೂ ತವರಾಗಿದೆ. ಆದರೆ ಇಂದು ಆ ಪಂಥ ಹೆಚ್ಚು ಕಡಿಮೆ ನಶಿಸಿ ಹೋಗಿದ್ದು ಬಹುತೇಕರಿಗೆ ಅದರ ಕುರಿತು ಪರಿಚಯವಿರಲಿ ಹೆಸರೂ ಸಹ ಗೊತ್ತಿಲ್ಲ.
ಚಿತ್ರಕೃಪೆ: Photo Dharma
ರಹಸ್ಯಮಯ
ಈ ಪಂಥದವರಿಗೆ ಮೀಸಲಾಗಿದ್ದ ಕಾರಣಕ್ಕೆ ಈ ಗುಹೆಗಳು ಒಂದು ರೀತಿಯ ವಿಚಿತ್ರ ಮನೋಭಾವನೆ ಮೂಡಿಸುವ ರಹಸ್ಯಮಯ ರಚನೆಗಳಾಗಿ ಭೇಟಿ ನಿಡುವವರ ಮನದಲ್ಲಿ ಕೂಡುತ್ತದೆ. ಏಕೆಂದರೆ ಅಜೀವಿಕರು ಮೂಲತಃ ನಾಸ್ತಿಕರು ಹಾಗೂ ಅತಿ ವಿಚಿತ್ರ ಸಂಪ್ರದಾಯಗಳನ್ನು ಪಾಲಿಸುತ್ತಿದ್ದವರು.
ಚಿತ್ರಕೃಪೆ: Photo Dharma
ಅಜೀವಿಕ ಧರ್ಮ
ಬೌದ್ಧ, ಜೈನ ಧರ್ಮ ಆಗ ತಾನೆ ಹುಟ್ಟಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಅದಕ್ಕೆ ತೊಡಕಾಗಿ ನಿಂತಿದ್ದು ಇದೆ ಅಜೀವಿಕ ಧರ್ಮ. ಇವರು ವೇದ-ಶಾಸ್ತ್ರಗಳನ್ನು ಅಲ್ಲೆಗೆಳೆದಿದ್ದರು ಆದರೆ ಪ್ರತಿಯೊಂದು ಜೀವಿಯಲ್ಲಿ ಆತ್ಮವಿದೆಯೆಂದೂ ಹಾಗೂ ಆ ಜೀವಿಯ ಪ್ರತಿಯೊಂದು ನಡೆಗಳು ಸೌರಮಂಡಲದ ಅಗೋಚರ ಶಕ್ತಿ ತತ್ವಗಳಿಂದ ಪೂರ್ವನಿರ್ಧರಿಸಲ್ಪಟ್ಟಿವೆಯೆಂದು ನಂಬುತ್ತಿದ್ದರು.
ಚಿತ್ರಕೃಪೆ: Photo Dharma
ಬಿಂದುಸಾರನ ಸಮಯದಲ್ಲಿ
ಮೌರ್ಯರ ಕಾಲದಲ್ಲಿ ಅದರಲ್ಲೂ ವಿಶೇಷವಾಗಿ ಬಿಂದುಸಾರನ ಸಮಯದಲ್ಲಿ ಅಜೀವಿಕ ಧರ್ಮವು ಉನ್ನತ ಸ್ಥಿತಿಯಲ್ಲಿತ್ತು ಕಾರಣ, ಬಿಂದುಸಾರ ಹಾಗೂ ಆತನ ಮಡದಿ ಈ ಧರ್ಮವನ್ನು ಅನುಸರಿಸುತ್ತಿದ್ದರು. ಈ ಪಂಥದ ಕುರಿತು ಹೆಚ್ಚಿನ ವಿವರಗಳಿಲ್ಲವಾದರೂ ಇದರ ಆಚರಣೆ ವಿಚಾರಗಳಿಗೆ ಸಂಬಂಧಿಸಿದಂತೆ ಜೈನ ಹಾಗೂ ಬೌದ್ಧ ಸಾಹಿತ್ಯದಲ್ಲಿ ಉಲ್ಲೇಖವಿರುವುದನ್ನು ಗಮನಿಸಬಹುದು.
ಚಿತ್ರಕೃಪೆ: Photo Dharma
ಮತಾಂತರಗೊಂಡ
ಮುಂದೆ ಬೌದ್ಧ ಧರ್ಮ ತನ್ನ ಪ್ರಭಾವ ಹೆಚ್ಚಿಸಿಕೊಂಡು ಬಿಂದುಸಾರನ ಮಗ ಅಶೋಕ ಚಕ್ರವರ್ತಿಯನ್ನು ಸಾಕಷ್ಟು ಪ್ರಭಾವಿಸಿತು. ಬೌದ್ಧ ಧರ್ಮಕ್ಕೆ ಮಾರು ಹೋದ ಅಶೋಕನು ಬೌದ್ಧ ಧರ್ಮವನ್ನು ಮನಸ್ಸಿನಿಂದ ಒಪ್ಪಿಕೊಂಡನು.
ಚಿತ್ರಕೃಪೆ: Photo Dharma
ವಿನಾಶಕಾಲ
ಹೀಗೆ ಅಜೀವಿಕರು ತಮ್ಮ ಸ್ಥಾನಮಾನ ಕಳೆದುಕೊಂಡರು ಒಂದೊಮ್ಮೆ ಬುದ್ಧನನ್ನು ನಕಾರಾತ್ಮಕ ಭಾವಚಿತ್ರದಲ್ಲಿ ತೋರಿಸಿದರೆಂಬ ಅರೋಪದ ಮೇಲೆ ಅಶೋಕನಿಂದ ಸಾವಿರಾರು ಸಂಖ್ಯೆಯಲ್ಲಿ ಹತರಾಗಿ ಹೋದರು. ಇವರ ಇರುವಿಕೆ ಹಾಗೂ ಆಚಾರ-ವಿಚಾರಗಳು ಕುರಿತು ಇನ್ನೂ ಸಾಕಷ್ಟು ರಹಸ್ಯಗಳಿವೆ ಎಂದು ಹೆಳಲಾಗುತ್ತದೆ.
ಚಿತ್ರಕೃಪೆ: Photo Dharma
ಆಕರ್ಷಿಸುತ್ತವೆ
ಅಲ್ಲದೆ ಈ ಗುಹೆಗಳು, ಅಜೀವಿಕರ ಕುರಿತು ಕೆಲವು ಊಹೆಗಳನ್ನು ಮಾಡಲು ಸಾಕಷ್ಟು ಪ್ರೋತ್ಸಾಹಿಸುತ್ತವೆ ಹಾಗಾಗಿ ಇತಿಹಾಸಕಾರರ ಹೆಚ್ಚಿನ ಗಮನ ಸೆಳೆದಿವೆ.
ಚಿತ್ರಕೃಪೆ: Photo Dharma
ಬಿಹಾರದಲ್ಲಿ
ಇಷ್ಟೊಂದು ಅಚ್ಚರಿಗಳನ್ನು ಹೊಂದಿರುವ ಈ ಗುಹೆಗಳು ಇರುವುದಾದರೂ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ, ಈ ಗುಹೆಗಳು ಪ್ರಸ್ತುತ ಬಿಹಾರ ರಾಜ್ಯದಲ್ಲಿವೆ.
ಚಿತ್ರಕೃಪೆ: Photo Dharma
ಸಾರಿಗೆ ಲಭ್ಯವಿದೆ
ಬಿಹಾರ ರಾಜ್ಯದ ಜೆಹನಾಬಾದ್ ಜಿಲ್ಲೆಯಲ್ಲಿದೆಯಾದರೂ ಗಯಾ ಜಿಲ್ಲೆಯ ಗಯಾ ಪಟ್ಟಣದಿಂದ ಕೇವಲ 24 ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದೆ. ತೆರಳಲು ಬಸ್ಸುಗಳು, ರಿಕ್ಷಾಗಳು ದೊರೆಯುತ್ತವೆ.
ಚಿತ್ರಕೃಪೆ: Photo Dharma