ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡು ಮೈಸೂರಿನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣವಾಗಿದ್ದು ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಇಡೀ ಕರ್ನಾಟಕದಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ.
ಶ್ರೀಕಂಠೇಶ್ವರ ದೇವಾಲಯ
PC:Naveen
ನಂಜನಗೂಡು ಪ್ರಸಿದ್ಧವಾಗಿರುವುದು ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯವು ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ ಸಂಗಮದ ಬಳಿ ಪೂರ್ವಾಭಿಮುಖವಾಗಿದೆ. ನದಿಗಳಲ್ಲಿ ಪ್ರವಾಹ ಬಂದಾಗ ದೇವಾಲಯದಿಂದ ಕೇವಲ ತೊಂಬತ್ತು ಮೀಟರುಗಳಷ್ಟು ದೂರದವರೆಗೆ ಸಂಗಮದಲ್ಲಿ ನೀರು ಬರುತ್ತದೆ. ಶ್ರೀಕಂಠೇಶ್ವರ ದೇವಾಲಯ ದ್ರಾವಿಡ ಶೈಲಿಯ ಕಟ್ಟಡ. ಇದು 117 ಮೀ. ಉದ್ದ, 48 ಮೀ. ಅಗಲ ಇದೆ. ಇದರಲ್ಲಿ 147 ಕಂಬಗಳಿವೆ.ಇದನ್ನು ಕರ್ನಾಟಕದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ ಎನ್ನಲಾಗುತ್ತದೆ.
ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !
ದೇವಾಲಯದ ವಾಸ್ತುಶಿಲ್ಪ
ಇಡೀ ದೇವಾಲಯ ಒಂದು ಕಾಲದ ರಚನೆಯಲ್ಲ. ದೇವಾಲಯದ ಬೆಳವಣಿಗೆಯಲ್ಲಿ ಕನಿಷ್ಠ ನಾಲ್ಕು ಘಟ್ಟಗಳನ್ನು ಗುರುತಿಸಬಹುದು. ಶ್ರೀಕಂಠೇಶ್ವರ ಲಿಂಗ, ಗರ್ಭಗುಡಿ ಪ್ರದಕ್ಷಿಣಾಪಥ ಮತ್ತು ಒಳಮಂಟಪ ಬಹು ಪ್ರಾಚೀನವಾದುವು. ಈ ಭಾಗವನ್ನು ಗಂಗರ ಅಥವಾ ಚೋಳರ ಕಾಲದಲ್ಲಿ 10-11ನೆಯ ಶತಮಾನಗಳಲ್ಲಿ ಕಟ್ಟಿರಬಹುದೆಂಬುದನ್ನು ಇದರ ಲಕ್ಷಣಗಳು ಸೂಚಿಸುತ್ತವೆ. ಇದರ ಮುಂಭಾಗದಲ್ಲಿರುವ ಮಂಟಪದಲ್ಲಿ ವಿವಿಧ ಮಾದರಿಯ ಕಂಬಗಳಿವೆ. ಇದನ್ನು ಹೊಯ್ಸಳರ ಕಾಲದಲ್ಲಿ ಸು. 13ನೆಯ ಶತಮಾನದಲ್ಲಿ ರಚಿಸಿರಬಹುದೆಂಬುದನ್ನು ಈ ಕಂಬಗಳ ರೀತಿಗಳಿಂದ ಊಹಿಸಬಹುದು. ಈ ಭಾಗದ ಮುಂದಿರುವ ಬಲಿಪೀಠವೂ ಬಹುಶಃ ಈ ಕಾಲದ್ದಾಗಿದ್ದು , ಒಳಗಿನ ಮಹಾದ್ವಾರದ ಕಲ್ಲಿನ ಭಾಗದಲ್ಲಿ ಇಕ್ಕೆಲದಲ್ಲೂ ಹಂಪೆಯ ರಚನೆಗಳನ್ನು ಹೋಲುವ ಕಂಬಗಳಿವೆ ಮೇಲಿನ ಗಾರೆಯ ಗೋಪುರ ವಿನ್ಯಾಸದಲ್ಲೂ ವಿಜಯನಗರ ಶೈಲಿಯನ್ನು ಗುರುತಿಸಬಹುದು. ದೇವಾಲಯದಲ್ಲಿ ಕೃಷ್ಣದೇವರಾಯನ ಒಂದು ದತ್ತಿಶಾಸನವೂ ಇರುವುದರಿಂದ ಈ ಮಹಾದ್ವಾರ ಮತ್ತು ಗೋಪುರ ಅವನ ಕಾಲದ ರಚನೆಯಿರಬಹುದು ಎನ್ನಲಾಗುತ್ತದೆ.
200ಕ್ಕೂ ಅಧಿಕ ವಿಗ್ರಹಗಳಿವೆ
PC: Prof tpms
ದೇವಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ವಿಗ್ರಹಗಳು ಪ್ರತಿಷ್ಠಾಪಿತವಾಗಿವೆ. ಇವುಗಳಲ್ಲಿ ಅರ್ಧದಷ್ಟು ಲಿಂಗಗಳು. ನಂಜುಂಡೇಶ್ವರ ಲಿಂಗ ಹಳೆಯದು; ಪೀಠಯುತವಾಗಿ ಸುಮಾರು 9 ಮೀ. ಎತ್ತರವಿದೆ. ಇತರ ಲಿಂಗಗಳ ಪೈಕಿ ಹೆಚ್ಚಿನವು ಬೇರೆಬೇರೆ ಕಾಲಗಳಲ್ಲಿ ಸ್ಥಾಪಿತವಾದವು. ಹೆಚ್ಚಿನವು ಪ್ರಾಕಾರದ ಗೋಡೆಗೆ ಸೇರಿದಂತಿರುವ ಒಳಸಾಲಿನಲ್ಲಿವೆ. ಗರ್ಭಗುಡಿಯ ಸಭಾಮಂಟಪದಲ್ಲಿಯೂ ದೇವಾಲಯದ ಈಶಾನ್ಯ ಮತ್ತು ವಾಯವ್ಯ ಭಾಗದ ಕೋಣೆಗಳಲ್ಲಿಯೂ ಅಲ್ಲಲ್ಲಿ ಬಿಡಿಬಿಡಿಯಾಗಿಯೂ ಕೆಲವು ಲಿಂಗಗಳು ಸ್ಥಾಪಿತವಾಗಿವೆ. ನಾರಾಯಣ ಮತ್ತು ಪಾರ್ವತಿ ಗುಡಿಗಳಲ್ಲಿರುವ ಮೂಲ ವಿಗ್ರಹಗಳು ಸುಮಾರು 13-14ನೆಯ ಶತಮಾನದವು. ಪಾರ್ವತಿ ಸುಂದರ ಶಿಲ್ಪ. ಇದರಲ್ಲಿ ಹೊಯ್ಸಳ ಶೈಲಿಯ ಛಾಯೆಯನ್ನು ಕಾಣಬಹುದು.
ಮುಮ್ಮಡಿ ಕೃಷ್ಣರಾಜ ಒಡೆಯರು ಹಾಗೂ ನಾಲ್ವರು ಪತ್ನಿಯರ ವಿಗ್ರಹ
PC: Dineshkannambadi
ಉತ್ಸವ ವಿಗ್ರಹದ ಗುಡಿಯ ನೇರ ಎದುರಿನಲ್ಲಿ ಪ್ರತ್ಯೇಕಗೊಳಿಸಿರುವ ಒಂದು ಕೋಣೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಅವರ ನಾಲ್ವರು ಪತ್ನಿಯರ ಆಳೆತ್ತರದ ವಿಗ್ರಹಗಳನ್ನು ಇಡಲಾಗಿದೆ. ಒಡೆಯರ ಕಾಲದ ವ್ಯಕ್ತಿಶಿಲ್ಪಗಳಲ್ಲಿ ಇವು ಅತ್ಯುತ್ತಮವಾದವು. ಬಸವನಕಟ್ಟೆಯ ಪಕ್ಕದಲ್ಲಿರುವ ಸುಮಾರು, 1.2 ಮೀ ಎತ್ತರದ ನಂದಿ ಈ ದೇವಾಲಯದ ಬಹು ಭವ್ಯ ಶಿಲ್ಪ. 1644ರಲ್ಲಿ ದಳವಾಯಿ ವಿಕ್ರಮರಾಯ ಇದನ್ನು ಸ್ಥಾಪಿಸಿದರು ಎಂಬುದು ಇಲ್ಲಿನ ಪೀಠದ ಮೇಲಿನ ಶಾಸನದಿಂದ ತಿಳಿಯುತ್ತದೆ.
ಹುಣ್ಣಿಮೆ ದಿನ ವಿಶೇಷ ಪೂಜೆ
PC: Dineshkannambadi
ಈ ದೇವಾಲಯ ವರ್ಷವಿಡೀ ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಸೋಮವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ. ಪ್ರತಿ ಹುಣ್ಣಿಮೆಯಂದು ರಾತ್ರಿ ರಥೋತ್ಸವ ನಡೆಯುತ್ತದೆ. ಅಲ್ಲದೆ ಇಲ್ಲಿ ಎರಡು ವಾರ್ಷಿಕ ಜಾತ್ರೆಗಳಾಗುತ್ತವೆ. ಅಕ್ಟೋಬರ್-ನವಂಬರ್ನಲ್ಲಿ ತ್ರಿರಥ ಜಾತ್ರೆ ನಡೆದರೆ, ಮಾರ್ಚ್-ಏಪ್ರಿಲ್ನಲ್ಲಿ ಪಂಚ ರಥ ಜಾತ್ರೆ ನಡೆಯುವುದು.
ಇನ್ನಿತರ ದೇವಾಲಯಗಳು
PC: Prof tpms
ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಾಲಯವಲ್ಲದೆ ಪರಶುರಾಮ, ಚಾಮುಂಡೇಶ್ವರಿ, ಸತ್ಯನಾರಾಯಣ, ದತ್ತಾತ್ರೇಯ, ಗಣಪತಿ ಮೊದಲಾದ ದೇವಾಲಯಗಳೂ ಇವೆ. ಈ ದೇವಾಲಯವನ್ನು ಸಂದರ್ಶಿಸದಿದ್ದಲ್ಲಿ ನಂಜನಗೂಡಿನ ಯಾತ್ರೆ ಅಪೂರ್ಣವೆಂದು ಹೇಳಲಾಗುತ್ತದೆ. ನಂಜನಗೂಡಿನಲ್ಲಿ ಶಂಕರ, ವೀರಶೈವ ಮತ್ತು ಮಾಧ್ವ ಸಂಪ್ರದಾಯದ ಮಠಗಳಿವೆ. ರಾಘವೇಂದ್ರಸ್ವಾಮಿ ಮಠ ಪ್ರಾಚೀನವಾದ್ದು. ಇದನ್ನು 15ನೆಯ ಶತಮಾನದಲ್ಲಿ ವಿಬುಧೇಂದ್ರತೀರ್ಥರು ಸ್ಥಾಪಿಸಿದರು ಎನ್ನಲಾಗುತ್ತದೆ.
ಪಾಪ ವಿಮೋಚನೆಯಾಗುತ್ತಂತೆ
PC: Nayvik
ಈ ಪಟ್ಟಣವು ಇಲ್ಲಿ ನೆಲೆಗೊಂಡಿರುವ ದೈವವಾದ ನಂಜುಂಡೇಶ್ವರನಿಂದ ನಂಜನಗೂಡು ಎಂದು ಹೆಸರು ಪಡೆಯಿತು. ಕ್ಷೀರಸಾಗರ ಮಂಥನ ಮಾಡಿದಾಗ ಹೊರಬಂದ ವಿಷದಿಂದ ಭೂಮಿಯ ಜೀವಸಂಕುಲವನ್ನು ರಕ್ಷಿಸಲು ಶಿವನು ಆ ವಿಷವನ್ನು ಕುಡಿದು ನಂಜುಂಡನಾಗಿ ಈ ಕ್ಷೇತ್ರದಲ್ಲಿ ನೆಲೆಸಿದನು ಎಂಬ ಪ್ರತೀತಿ ಇದೆ. ಇಲ್ಲಿ ಮಾಡುವ ತೀರ್ಥ ಸ್ನಾನ ಮತ್ತು ದೈವದ ದರ್ಶನ ಪಾಪ ವಿಮೋಚಕ ಗುಣವುಳ್ಳದೆಂದು ಹೇಳಲಾಗುತ್ತದೆ.
ಪ್ರಮುಖ ವ್ಯಾಪಾರ ಕೇಂದ್ರವಾಗಿದೆ
PC: Prof tpms
ಇದು ಮುಖ್ಯ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ ಬಟ್ಟೆ ಗಿರಣಿ, ಕಾಗದದ ಕಾರ್ಖಾನೆ, ಔಷಧ ಮತ್ತು ಸುಗಂಧ ದ್ರವ್ಯಗಳ ಕಾರ್ಖಾನೆ, ಅಕ್ಕಿ ಗಿರಣಿಗಳು ಮತ್ತು ಮರ ಕೊಯ್ಯುವ ಕಾರ್ಖಾನೆಗಳು ಇವೆ. ರೇಷ್ಮೆ ವ್ಯಾಪಾರ ಸ್ವಲ್ಪಮಟ್ಟಿಗೆ ನಡೆಯುತ್ತದೆ. ರೇಷ್ಮೆ ನೂಲುವ ಉದ್ಯಮವೂ ಇಲ್ಲಿ ಇದೆ.
ತಲುಪುವುದು ಹೇಗೆ?
PC: Suraj T S
ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 30 ಕಿ.ಮೀ ದೂರದಲ್ಲಿ ಇರುವ ನಂಜನಗೂಡಿಗೆ ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಇದು ಕೇವಲ ತೀರ್ಥಕ್ಷೇತ್ರವೆಂದಷ್ಟೆ ಅಲ್ಲದೆ, ಮಿತವ್ಯಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಣವಾಗಿದೆ.