ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಪಶ್ಚಿಮ ಘಟ್ಟಗಳು ನಿಜಕ್ಕೂ ಪ್ರಕೃತಿ ನೀಡಿದ ವರದಾನ. ಕಣ್ಮನ ಸೆಳೆಯುವ ಆಯಸ್ಕಾಂತೀಯ ವಾತಾವರಣವು ಈ ಘಟ್ಟ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅಲ್ಲದೆ ಚಳಿಗಾಲದ ಸಮಯದಲ್ಲಿ ಆಗಸದಿ ಮೋಡಿ ಮಾಡುವ ಮೋಡಗಳು ನಿರಾಳತೆಯಿಂದ ನರ್ತನಗೈಯುತ್ತಿರುವಂತೆ ಕಾಣುತ್ತವೆ.
ಅಪಾರವಾದ ಬಗೆ ಬಗೆಯ ಗಿಡ-ಮರಗಳು, ಸಸ್ಯರಾಶಿಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳು ಅನನ್ಯ ಜೀವ ಸಂಕುಲಕ್ಕೆ ಭದ್ರ ಬುನಾದಿಯಾಗಿದೆ. ನಿಸರ್ಗಪ್ರಿಯ ಪ್ರವಾಸಿಗರಿರಲಿ ಅಥವಾ ಶೈಕ್ಷಣಿಕ ಅಧ್ಯಯನ ಅಥವಾ ಸಂಶೋಧನಕಾರರಿರಲಿ ಎಲ್ಲರಿಗೂ ಪಶ್ಚಿಮ ಘಟ್ಟಗಳನ್ನು ಅನ್ವೇಷಿಸುವುದೆಂದರೆ ಬಲು ಪ್ರೀತಿ.
ಅಗಾಧ ಎತ್ತರದ ಬೆಟ್ಟ-ಗುಡ್ಡಗಳು, ದಟ್ಟ ಹಸಿರಿನ ಕಾಡುಗಳು, ಕಣಿವೆಗಳು, ಪ್ರಾಣಿ-ಪಕ್ಷಿಗಳು, ಜುಳು ಜುಳು ಎಂದು ಹರಿಯುವ ನದಿ-ಕೆರೆ-ತೊರೆಗಳು, ಜಲಪಾತಾದಿಗಳು ಪಶ್ಚಿಮ ಘಟ್ಟಗಳ ಪ್ರಮುಖ ಗುಣಲಕ್ಷಣಗಳು. ಕಾಡುಗಳ ಸುಶ್ರಾವ್ಯ ಪರಿಸ್ಥಿತಿಯನ್ನು ಸಹಜ ಬಗೆಯಲ್ಲಿ ಕರುಣಿಸುವ ಪಶ್ಚಿಮ ಘಟ್ಟಗಳು ಕೆಲವು ಅದ್ಭುತವಾದ ಒಮ್ಮೆಯಾದರೂ ನೋಡಲೇಬೇಕಾದ ಬೆಟ್ಟಗಳನ್ನು ಹೊಂದಿವೆ.
ಪಶ್ಚಿಮ ಘಟ್ಟಗಳ ಅನನ್ಯ ಜೀವ ಸಂಕುಲ!
ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಸಾಕಷ್ಟು ಬೆಟ್ಟಗಳು ಚಾರಣ ತಾಣಗಳಾಗಿಯೂ ಸಾಕಷ್ಟು ಹೆಸರುವಾಸಿಯಾಗಿರುವುದು ಗಮನಿಸಬೇಕಾದ ವಿಷಯ. ಪ್ರಸ್ತುತ ಲೇಖನದಲ್ಲಿ ಪಶ್ಚಿಮ ಘಟ್ಟಗಳಲ್ಲಿ ನೋಡಬಹುದಾದ ಕೆಲವೆ ಕೆಲವು ಆಯ್ದ ಹಾಗೂ ಅವಿಸ್ಮರಣೀಯ ಬೆಟ್ಟಗಳ ಕುರಿತು ತಿಳಿಸಲಾಗಿದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯಲು ಸ್ಲೈಡುಗಳನ್ನು ಒಂದೊಂದಾಗಿ ಕ್ಲಿಕ್ ಮಾಡಿ ನೋಡಿ.
ಪಶ್ಚಿಮ ಘಟ್ಟಗಳು ಪೆನಿನ್ಸುಲಾ ಭಾರತದ ಪಶ್ಚಿಮ ಭಾಗದ ಗುಜರಾತ್ ರಾಜ್ಯದ ದಕ್ಷಿಣದ ಗಡಿಯಿಂದ ಪ್ರಾರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಕನ್ಯಾಕುಮಾರಿಯವರೆಗೂ ಅರಬ್ಬಿ ಸಮುದ್ರದ ಸಮಾನಾಂತರದಲ್ಲಿ ಅದ್ಭುತವಾಗಿ ಚಾಚಿದೆ.
ಮಹಾರಾಷ್ಟ್ರ
ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣ ಮಹಾಬಲೇಶ್ವರದ ಆಕರ್ಷಣೆಗಳ ಪೈಕಿ ಒಂದಾದ ಅರ್ಥರ್ ಸೀಟ್ ವೀಕ್ಷಣಾ ತಾಣ.
ಚಿತ್ರಕೃಪೆ: The.sgr
ಹರಿಶ್ಚಂದ್ರಗಡ್
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಹರಿಶ್ಚಂದ್ರಗಡ್ ಬೆಟ್ಟ ಕೋಟೆಯ ತಾಣದ ಕೊಂಕಣ ಕಡಾದಿಂದ ಅದ್ಭುತವಾಗಿ ಗೋಚರಿಸುವ ಪಶ್ಚಿಮ ಘಟ್ಟಗಳ ಶ್ರೇಣಿಯ ಕಾಳಭೈರವ ಶಿಖರ ಶೃಂಗ.
ಚಿತ್ರಕೃಪೆ: Cj.samson
ಪುಣೆ
ಪುಣೆ ಜಿಲ್ಲೆಯ ಸಾವಿರ ವರ್ಷಗಳ ಇತಿಹಾಸವಿರುವ ಜುನ್ನಾರ್ ನಗರದ ಬಳಿಯಿರುವ ನಾನೆಘಾಟ್ ಒಂದು ಪ್ರಸಿದ್ಧ ಪ್ರವಾಸಿ ತಾಣ. ಪಶ್ಚಿಮ ಘಟ್ಟದ ಸುಂದರ ದೃಶ್ಯವನ್ನು ಕರುಣಿಸುವ ಅಮೋಘ ಬೆಟ್ಟ ಪ್ರದೇಶ. ಮಳೆಗಾಲ ಹಾಗೂ ನಂತರದ ಸಮಯ ಈ ಬೆಟ್ಟ ಪ್ರದೇಶಕ್ಕೆ ಭೇಟಿ ನೀಡಲು ಅದ್ಭುತವಾದ ಸಮಯ.
ಚಿತ್ರಕೃಪೆ: rohit gowaikar
ಅನನ್ಯ
ಪುಣೆ ಜಿಲ್ಲೆಯಲ್ಲಿರುವ ಮಾಲ್ಶೆಜ್ ಘಾಟ್ ಒಂದು ಪರ್ವತ ರಹದಾರಿಯಾಗಿದೆ. ಸುತ್ತಲೂ ಸಹ್ಯಾದ್ರಿ ಪರ್ವತ ಶ್ರೇಣಿಯ ವಿಹಂಗಮ ನೋಟವನ್ನು ಕರುಣಿಸುತ್ತದೆ ಮಾಲ್ಶೆಜ್ ಘಾಟ್. ಅಹ್ಮದ್ ನಗರ ಹಾಗೂ ಠಾಣೆ ಜಿಲ್ಲೆಗಳಗಳ ಗಡಿಯ ಬಳಿ ಈ ಘಾಟ್ ಸ್ಥಿತವಿದೆ. ಭೈರವಗಡ್ ಗುಡ್ಡ.
ಚಿತ್ರಕೃಪೆ: Dinesh Valke
ಶಿವಮೊಗ್ಗ
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಕುಂದಾದ್ರಿ ಒಂದು ಅದ್ಭುತ ಪ್ರವಾಸಿ ಆಕರ್ಷಣೆಯ ಬೆಟ್ಟವಾಗಿದೆ. ಹದಿನೇಳನೇಯ ಶತಮಾನದ ಜೈನ ದೇವಾಲಯದಿಂದಾಗಿ ಸಾಕಷ್ಟು ಹೆಸರುವಾಸಿಯಾಗಿರುವ ಈ ಬೆಟ್ಟವು ಉಡುಪಿ ನಗರದಿಂದ 70 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Manjeshpv
ತರಿಕೆರೆ
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿರುವ ಗಿರಿಧಾಮ ಹಲವಾರು ನಯನ ಮನೋಹರ ಬೆಟ್ಟ ಗುಡ್ಡಗಳಿಂದಾಗ ಮನ ಸೆಳೆಯುತ್ತದೆ. ಉತ್ತಮ ಪ್ರವಾಸಿ ತಾಣವಾಗಿಯೂ ಕೆಮ್ಮಣ್ಣುಗುಂಡಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Yathin S Krishnappa
ಚಾಮರಾಜ ನಗರ
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಬರುವ ಮಲೆ ಮಹದೇಶ್ವರ ಬೆಟ್ಟವು ಪಶ್ಚಿಮ ಘಟ್ಟಗಳ ಸುಂದರವಾದ ಬಾಹುಗಳಲ್ಲಿ ಬೆರೆತು ಹೋಗಿರುವ ಅದ್ಭುತ ಬೆಟ್ಟವಾಗಿದೆ. ಅಲ್ಲದೆ ಶಿವನಿಗೆ ಮುಡಿಪಾದ ದೇವಾಲಯವನ್ನು ಹೊಂದಿರುವ ಈ ಬೆಟ್ಟವು ಧಾರ್ಮಿಕವಾಗಿಯೂ ಬಲು ಮಹತ್ವ ಪಡೆದುಕೊಂಡಿದೆ.
ಚಿತ್ರಕೃಪೆ: Tumkurameen
ಚಿಕ್ಕಮಗಳೂರು
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಬಾ ಬುಡನ್ಗಿರಿ ಬೆಟ್ಟವು ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ಬೆಟ್ಟವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಬರುವ ಈ ನಯನಮನೋಹರ ಬೆಟ್ಟವು ತನ್ನ ಸೌಂದರ್ಯದಿಂದ ಭೇಟಿ ನೀಡುಗರ ಮನವನ್ನೆ ಕದಿಯುತ್ತದೆ.
ಚಿತ್ರಕೃಪೆ: S N Barid
ಕೊಡಗು
ಕರ್ನಾಟಕದ ಕೊಡಗು ಜಿಲ್ಲೆ ಹಾಗೂ ಕೇರಳದ ವಯನಾಡ್ ಜಿಲ್ಲೆಗಳ ಗಡಿಯಲ್ಲಿ ಸ್ಥಿತವಿರುವ ಬ್ರಹ್ಮಗಿರಿ ಬೆಟ್ಟ ಒಂದು ಅದ್ಭುತವಾದ ಚಾರಣ ತಾಣವಾಗಿದೆ.
ಚಿತ್ರಕೃಪೆ: Sharadaprasad
ವಯನಾಡ್
ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯಿರುವ ಚೆಂಬ್ರಾ ಶಿಖರ ಶೃಂಗ ನೋಡಲು ಬಲು ಅದ್ಭುತವಾಗಿದೆ. ವಯನಾಡ್ ಜಿಲ್ಲೆಯಲ್ಲೆ ಅತಿ ಎತ್ತರದ ಬೆಟ್ಟವಾಗಿ ಚೆಂಬ್ರಾ ಪೀಕ್ ಗಮನ ಸೆಳೆಯುತ್ತದೆ.
ಚಿತ್ರಕೃಪೆ: Karkiabhijeet
ಮಡಿಕೇರಿ
ಕರ್ನಾಟಕದ ಮಡಿಕೇರಿ ಪಟ್ಟಣದಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲಿದೆ ಮಂಡಲ್ಪಟ್ಟಿ ಶಿಖರ. ಸ್ಥಳೀಯವಾಗಿ ಇದನ್ನು ಮುಗಿಲು ಪೇಟೆ ಎಂದು ಪ್ರೀತಿಯಿಂದ ಕರೆಯುತ್ತಾರೆ. ಚಾರಣಕ್ಕೆ ಯೋಗ್ಯವಾದ ಬೆಟ್ಟ ಇದಾಗಿದೆ.
ಚಿತ್ರಕೃಪೆ: Leelavathy B.M
ಇಡುಕ್ಕಿ
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿ ಇರುವ, ಪಶ್ಚಿಮ ಘಟ್ಟಗಳ ಮೂರನೇಯ ಅತು ಎತ್ತರದ ಗಿರಿ ಶಿಖರ ಶೃಂಗ ಇದಾಗಿದೆ. ಇನ್ನೊಂದು ವಿಷಯವೆಂದರೆ ಪಶ್ಚಿಮ ಘಟ್ಟದಲ್ಲೆ ಅತಿ ಎತ್ತರದ ಚಾರಣ ಮಾರ್ಗ ಇದಾಗಿದೆ.
ಚಿತ್ರಕೃಪೆ: Niyas8001
ಕರ್ನಾಟಕದ ಅತಿ ಎತ್ತರ
ಕರ್ನಾಟಕದ ಅತಿ ಎತ್ತರದ ಶಿಖರವೆಂದರೆ ಮುಳ್ಳ್ಯ್ಯನಗಿರಿ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಅದ್ಭುತ ಬೆಟ್ಟವು ಆಕರ್ಷಕ ನೋಟಗಳನ್ನು ಒದಗಿಸುತ್ತದೆ.
ಚಿತ್ರಕೃಪೆ: RakeshRaju M
ಕೊಡಗು
ಕೊಡಗು ಜಿಲ್ಲೆಯಲ್ಲಿರುವ ಈ ನಯನಮನೋಹರ ಬೆಟ್ಟ ಕರ್ನಾಟಕದ ಮೂರನೇಯ ಅತಿ ಎತ್ತರದ ಬೆಟ್ಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಒಂದೆ ದಿನದಲ್ಲಿ ಈ ಬೆಟ್ಟವನ್ನೇರಿ ಮತ್ತೆ ಇಳಿದು ಬರಬಹುದು. ಅಲ್ಲದೆ ಇದು ರಾತ್ರಿಯನ್ನು ಕಳೆಯಲೂ ಸಹ ಆಕರ್ಷಕವಾಗಿದ್ದು ಕ್ಯಾಂಪಿಂಗ್ ಮಾಡಬಹುದಾಗಿದೆ.
ಚಿತ್ರಕೃಪೆ: Vijay S
ಸಕಲೇಶಪುರ
ಇದೊಂದು ಪ್ರಕೃತಿ ವೈಭೋಗದಿಂದ ತುಂಬಿ ತುಳುಕುತ್ತಿರುವ ಸುಂದರ ಗುಡ್ಡವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದಿಂದ ಸುಮಾರು 29 ಕಿ.ಮೀ ದೂರವಿರುವ ಈ ಗುಡ್ಡ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿದೆ. ಚಾರಣಪ್ರಿಯ, ನಿಸರ್ಗ ಪ್ರಿಯ ಪ್ರವಾಸಿಗರಿಗೆ ಭೇಟಿ ನೀಡಲು ಇದು ಆದರ್ಶಮಯ ಸ್ಥಳವಾಗಿದೆ.
ಚಿತ್ರಕೃಪೆ: L. Shyamal
ಬಂಡೀಪುರ
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟವು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1450 ಮೀ ಎತ್ತರವಿರುವ ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಅತಿ ಎತ್ತರದ ಪ್ರದೇಶವಾಗಿದ್ದು ಬೆಟ್ಟದ ತುದಿಯಲ್ಲಿರುವ ಕೃಷ್ಣನಿಗೆ ಮುಡಿಪಾದ ವೇಣುಗೋಪಾಲಸ್ವಾಮಿಯ ದೇವಸ್ಥಾನದಿಂದ ಪ್ರಖ್ಯಾತವಾಗಿದೆ.
ಚಿತ್ರಕೃಪೆ: Ananth BS
ತೇಣಿ
ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿರುವ ಮೇಘಮಲೈ ಗಿರಿಗಳ ಪ್ರದೇಶವು ಅದ್ಭುತವಾದ ಅನುಭವ ನೀಡುವ ಸುಂದರ ಗಿರಿಧಾಮ ಪ್ರದೇಶವಾಗಿದೆ. ಮೇಘಾಲಯದಂತೆಯೆ ಇಲ್ಲಿಯೂ ಸಹ ಮೇಘಗಳು ಬಾನಂಗಲದಲ್ಲಿ ಎಲ್ಲೆಡೆ ಹರಡಿರುವುದನ್ನು ಕಾಣಬಹುದು.
ಚಿತ್ರಕೃಪೆ: Vinoth Chandar
ತಿರುವನಂತಪುರಂ
ಸಮುದ್ರ ಮಟ್ಟದಿಂದ ಅಮೋಘ 1100 ಮೀ ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಆವರಿಸಿ, ನಿಸರ್ಗ ರಸಿಕರನ್ನು ತನ್ನದೆ ಆದ ಧಾಟಿಯಲ್ಲಿ ಕೈಬಿಸಿ ಕರೆಯುತ್ತದೆ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯಲ್ಲಿರುವ ಪೊನ್ಮುಡಿ ಎಂಬ ಚೊಕ್ಕಾದ ಸುಂದರ ಗಿರಿ ಶಿಖರ ಹೊಂದಿರುವ ಗಿರಿಧಾಮ ಪ್ರದೇಶ.
ಚಿತ್ರಕೃಪೆ: Thejas Panarkandy
ಕೊಟ್ಟಾಯಂ
ಕೊಟ್ಟಾಯಂ ಜಿಲ್ಲೆಯಲ್ಲಿರುವ ಈ ಗುಡ್ಡ ನೋಡಲು ಆಕರ್ಷಕವಾಗಿದ್ದು ಪ್ರವಾಸಿ ಆಕರ್ಷಣೆಯಾಗಿ ಗಮನಸೆಳೆಯುತ್ತದೆ. ಕೊಟ್ಟಾಯಂ-ವಗಮೋನ್ ರಸ್ತೆಯ ಮಾರ್ಗದಲ್ಲಿ ಈ ಬೆಟ್ಟವು ಸ್ಥಿತವಿದೆ.
ಚಿತ್ರಕೃಪೆ: Praveenp
ನೀಲ್ಗಿರಿ
ತಮಿಳುನಾಡಿನಲ್ಲಿ "ದೊಡ್ಡಬೆಟ್ಟ" ಎಂಬ ಹೆಸರಿನ ಸುಂದರ ಶಿಖರವಿರುವುದು ನಿಮಗೆ ತಿಳಿದಿದೆಯೆ? ಹೌದು ಈ ರೀತಿಯ ಹೆಸರಿನ ಒಂದು ಸುಂದರ ಪ್ರೇಕ್ಷಣೀಯ ಸ್ಥಳವು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿದೆ. ಈ ತಾಣಕ್ಕೆ ದೊಡ್ಡಬೆಟ್ಟ ಎಂಬ ಹೆಸರು ಬಡಗ ಭಾಷೆಯಿಂದ ಬಂದುದಾಗಿದೆ. ಬಡಗ ಭಾಷೆಯು ಹಳಗನ್ನಡದ ಒಂದು ಶಾಖೆಯಾಗಿದ್ದು ಕನ್ನಡ ಭಾಷೆಯೊಂದಿಗೆ ಹೆಚ್ಚಿನ ಸಾಮ್ಯತೆ ಹೊಂದಿದೆ.
ಚಿತ್ರಕೃಪೆ: Pradeep Kumbhashi
ಚಿಕ್ಕಮಗಳೂರು
ಚಿಕ್ಕಮಗಳೂರಿನಲ್ಲಿರುವ ಒಂದು ಆಕರ್ಷಕ ಗುಡ್ಡ ಇದಾಗಿದೆ. ದೂರದಿಂದ ನೋಡಿದಾಗ ಸಾಕಷ್ಟು ಅದ್ಭುತವಾಗಿ ಗೋಚರಿಸುತ್ತದೆ ಈ ಪರ್ವತ. ಪಶ್ಚಿಮ ಘಟ್ಟಗಳಿಂದ ಸುತ್ತುಅವರೆದಿರುವ ಚಿಕ್ಕಮಗಳೂರಿನ ಬಸರಿಕಟ್ಟೆ ಎಂಬಲ್ಲಿ ಈ ಮೆರ್ತಿ ಪರ್ವತವಿದೆ.
ಚಿತ್ರಕೃಪೆ: VASANTH S.N.