"ಬಾಲಾಸ್ತಾವತ ಕ್ರೀಡಾಸಕ್ತಃ, ತರುಣಸ್ತಾವತ ತರುಣಿಸಕ್ತಃ ವೃದ್ಧಸ್ತಾವತ ಚಿಂತಾಸಕ್ತಃ..." ಹೀಗೆ ಆದಿಶಂಕರರು ರಚಿಸಿದ ಭಜಗೋವಿಂದಂನಲ್ಲಿ ಶ್ಲೋಕವು ಬರುತ್ತದೆ. ಇದರ ಅರ್ಥ ಬಾಲಕನಿದ್ದಾಗ ಆಟಗಳಲ್ಲಿ ಆಸಕ್ತಿ ಹೊಂದಿರುವ ಮನುಷ್ಯನು ಬೆಳೆದಂತೆ ಯೌವ್ವನದ ಹೊಸ್ತಿಲಲ್ಲಿದ್ದಾಗ ಹುಡುಗಿಯರ ವ್ಯಾಮೋಹಕ್ಕೆ ಒಳಗಾಗುತ್ತಾನೆ. ನಂತರ ಸಂಸಾರಸ್ಥನಾಗಿ ಜೀವನ ನಡೆಸಿ ವೃದ್ಧಾಪ್ಯ ಸಮೀಪಿಸಿದಂತೆ ಚಿಂತೆಗೆ ಶರಣಾಗುತ್ತಾನೆ ಹಾಗೂ ಇದೆ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಆಕರ್ಷಣೆಗೆ ಒಳಗಾಗುತ್ತಾನೆ.
ಚಿಂತೆಯ ಈ ಸಂದರ್ಭದಲ್ಲೂ ಮನುಷ್ಯನಿಗೆ ಉಂಟಾಗುವ ಮತ್ತೊಂದು ಆಕರ್ಷಣೆಯೆ ಧಾರ್ಮಿಕ ಯಾತ್ರೆ ಅಥವಾ ತೀರ್ಥ ಯಾತ್ರೆ ಮಾಡಬೇಕೆನ್ನುವುದು. ಬಹುತೇಕ ಎಲ್ಲ ಧರ್ಮಗಳಲ್ಲೂ ತೀರ್ಥಯಾತ್ರೆ ಎಂಬುದು ಮಹತ್ವ ಪಡೆದ ಅಂಶವಾಗಿದೆ. ಹಿಂದು ಸಂಸ್ಕೃತಿಯ ಪ್ರಕಾರ, ಜೀವಿತದಲ್ಲಿ ತೀರ್ಥ ಯಾತ್ರೆ ಕೈಗೊಂಡರೆ ಮನುಷ್ಯ ದೇವರ ಕೃಪೆಗೆ ಪಾತ್ರನಾಗಿ ಮೋಕ್ಷಕ್ಕೆ ಹತ್ತಿರನಾಗುತ್ತಾನೆ ಎಂದು ನಂಬಲಾಗಿದೆ. ಅದರಂತೆಯೆ ಹಲವು ದಂತಕಥೆಗಳು, ಪೌರಾಣಿಕ ಹಿನ್ನಿಲೆಗಳುಳ್ಳ ನಮ್ಮ ನಾಡಿನಲ್ಲಿ ದೇವರ ಕ್ಷೇತ್ರಗಳಿಗೇನೂ ಕಮ್ಮಿ ಇಲ್ಲ.
ಆದರೆ ಕೇವಲ ಹಿರಿಯರಿಗೆಂದೆ ತೀರ್ಥ ಯಾತ್ರೆ ದರ್ಶನ ಸೀಮಿತವಾಗಿಲ್ಲ. ಕಿರಿಯರಿಂದ ಹಿರಿಯರೆಲ್ಲರೂ ಮೆಚ್ಚುವ ಪ್ರವಾಸವಾಗಿಯೂ ತೀರ್ಥ ಯಾತ್ರೆ ಪ್ರಸಿದ್ಧವಾಗಿದೆ. ಪ್ರಸ್ತುತ ಲೇಖನವು ದಕ್ಷಿಣ ಭಾರತದಲ್ಲಿರುವ ಅಥವಾ ಬಹುಸಂಖ್ಯೆಯಲ್ಲಿ ಜನರು ತೆರಳುವ ಕೆಲವು ಪ್ರಮುಖ ಸ್ಥಳಗಳು ಯಾವುವೆಂಬುದರ ಕುರಿತು ತಿಳಿಯಪಡಿಸುತ್ತದೆ.
ಕುಕ್ಕೆ ಸುಬ್ರಮಣ್ಯ:
ಸರ್ಪದೋಷ ನಿವಾರಣಾರ್ಥ ಇರುವ ಕುಕ್ಕೆ ಸುಬ್ರಮಣ್ಯ ನಮ್ಮ ನಾಡಿನ ಪ್ರಮುಖ ದೇವಸ್ಥಾನಗಳ ಪೈಕಿ ಒಂದಾಗಿದೆ. ಕೇವಲ ರಾಜ್ಯದಿಂದ ಮಾತ್ರವಲ್ಲದೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಸರ್ಪ ದೋಷದಿಂದ ಮುಕ್ತಿ ಹೊಂದಲು ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರಿನಿಂದ ಕುಕ್ಕೆಗೆ ತೆರಳಲು ರೈಲು ಹಾಗೂ ಬಸ್ಸುಗಳೆರಡೂ ಲಭ್ಯವಿದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: karthick siva
ಗೋಕರ್ಣ:
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿ ನೆಲೆಸಿರುವ ಗೋಕರ್ಣವು ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಐತಿಹಾಸಿಕವಾಗಿ ಏಳು ಪ್ರಮುಖ ಧಾರ್ಮಿಕ ಕೇಂದ್ರಗಳ ಪೈಕಿ ಗೋಕರ್ಣವು ಒಂದಾಗಿದೆ. ಶಿವನು ಮಹಾಬಲೇಶ್ವರನಾಗಿ ಈ ನೆಲೆಯನ್ನು ರಕ್ಷಿಸುತ್ತಿದ್ದಾನೆಂದು ಇಲ್ಲಿನ ಜನರ ನಂಬಿಕೆ. ಅದ್ಭುತ ಕಡಲ ತೀರವಿರುವುದರಿಂದ ಇಂದು ಗೋಕರ್ಣವು ಪ್ರವಾಸಿ ತಾಣವಾಗಿ ಬದಲಾಗಿದ್ದರೂ ಸಹ ಸಾಕಷ್ಟು ಜನರು ಇಲ್ಲಿನ ದೇವಸ್ಥಾನಕ್ಕೆ ದರುಶನ ಕೋರಿ ಇಲ್ಲಿಗೆ ಬರುತ್ತಾರೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Miran Rijavec
ಧರ್ಮಸ್ಥಳ:
ಧರ್ಮದಿಂದ ನಡೆಯುವವರನ್ನು, ಧರ್ಮ ಕಾಯುವವರನ್ನು ಪ್ರೀತಿಯಿಂದ ಅಶೀರ್ವದಿಸುವ ಮಂಜುನಾಥೇಶ್ವರನು ನೆಲೆಸಿರುವ ಕ್ಷೇತ್ರವೆ ಧರ್ಮಸ್ಥಳ. ಕುಕ್ಕೆ ಸುಬ್ರಮಣ್ಯದಿಂದ ಈ ಕ್ಷೇತ್ರವಿರುವುದು ಕೇವಲ ಅರ್ಧ ಘಂಟೆ ಪ್ರಯಾಣಾವಧಿಯಷ್ಟು ದೂರದಲ್ಲಿ. ವಿಶೇಷವೆಂದರೆ ಈ ಮಂಜುನಾಥೇಶ್ವರನ ದೇಗುಲದ ಉಸ್ತುವಾರಿ ಜೈನ ಕುಟುಂಬದವರು ಮಾಡುತ್ತಿದ್ದು ದೇವಸ್ಥಾನದ ಸಕಲ ವಿಧಿ ವಿಧಾನ, ಆಚರಣೆಗಳು ಹಿಂದು ಅರ್ಚಕರಿಂದ ನಡೆಯುತ್ತದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Gopal Venkatesan
ಹೊರನಾಡು:
ಹಿಂದೂ ಸಂಸ್ಕೃತಿಯು ಅನ್ನ ಅಂದರೆ ಊಟ/ಭೋಜನವನ್ನು ದೇವರಿಗೆ ಸಮ ಎಂದಿದೆ. ಅದರಂತೆ ನಾವೂ ಇಂದಿಗೂ ಅನ್ನವನ್ನು ಗೌರವದಿಂದ ಕಾಣುತ್ತೇವೆ. ಅನ್ನವನ್ನು ಅನ್ನಪೂರ್ಣೇಶ್ವರಿಯಾಗಿಯೆ ನಾವು ಪೂಜಿಸುತ್ತೇವೆ. ಈ ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುವುದೆ ಹೊರನಾಡಿನಲ್ಲಿ. ಹೊರನಾಡು ಶ್ರೀಕ್ಷೇತ್ರ ಪ್ರಖ್ಯಾತವಾಗಿರುವುದೆ ಅನ್ನಪೂರ್ಣೇಶ್ವರಿ ದೇವಾಲಯದಿಂದ. ಇಲ್ಲಿ ಬರುವ ಪ್ರತಿಯೊಬ್ಬ ಭಕ್ತನೂ ಅನ್ನವಿಲ್ಲದೆ ಹಸಿವಿನ ಹೊಟ್ಟೆಯಿಂದ ಮರಳಲಾರ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Gopal Venkatesan
ಕಟೀಲು:
ಕಟೀಲು ಶ್ರೀಕ್ಷೇತ್ರವು ದುರ್ಗಾಪರಮೇಶ್ವರಿಯ ಸನ್ನಿಧಿಯಿಂದಾಗಿ ಪ್ರಸಿದ್ಧಿ ಪಡೆದಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಲ್ಲಿ ಉಲ್ಲೇಖಗೊಂಡ ಮಹತ್ವದ ಸ್ಥಳವಾಗಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ ದೇವಾಲಯವು ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Premkudva
ಶೃಂಗೇರಿ:
ಶ್ರೀ ಆದಿ ಶಂಕರರು ಸ್ಥಾಪಿಸಿದ ಪವಿತ್ರ ಮಠಗಳ ಪೈಕಿ ಒಂದಾಗಿರುವ ಶೃಂಗೇರಿ ಶಾರದಾ ಪೀಠವು ಒಂದು ಪುಣ್ಯ ಕ್ಷೇತ್ರವಾಗಿದೆ[ಶೃಂಗೇರಿ ಹಾಗೂ ಸುತ್ತಮುತ್ತಲು]ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಶ್ರೀಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: umstwit
ಇಡಗುಂಜಿ:
ಇಡಗುಂಜಿ ಮಹಾಗಣಪತಿ ದೇವಸ್ಥಾನ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿಯಿರುವ ಇಡಗುಂಜಿ ಗ್ರಾಮವು ಮಹಾಗಣಪತಿಯ ದೇವಸ್ಥಾನಕ್ಕೆ ಬಹು ಪ್ರಖ್ಯಾತಿ ಪಡೆದಿದೆ. ಭಕ್ತಾದಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಇಡಗುಂಜಿ ಗಣಪನ ದರುಶನ ಕೋರಿ ಈ ಕ್ಷೇತ್ರಕ್ಕೆ ಬರುತ್ತಾರೆ. ವಿಶೇಷ ಗಣೇಶನ ದೇವಾಲಯಗಳು.
ಸವದತ್ತಿ:
ಉತ್ತರ ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ. ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿ ಗ್ರಾಮ. ಎಲ್ಲಮ್ಮ ದೇವಿಯ ದೇಗುಲದಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಇದು ಸುಪ್ರಸಿದ್ಧ ಅಮ್ಮನವರ ಕ್ಷೇತ್ರವಾಗಿ ಎಲ್ಲಮ್ಮಗುಡ್ಡ ಎಂದೆ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Manjunath Doddamani
ಮೇಲುಕೋಟೆ:
ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಯ ದೇಗುಲಕ್ಕೆ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷ ಇಲ್ಲಿ ಜರುಗುವ ವೈರಮುಡಿ ಉತ್ಸವವು ಲಕ್ಷಾಂತರ ಭಕ್ತಾದಿಗಳನ್ನು ಸೆಳೆಯುತ್ತದೆ. ಅಲ್ಲದೆ ಇಲ್ಲಿನ ಬೆಟ್ಟದ ಮೇಲಿರುವ ಯೋಗ ನರಸಿಂಹಸ್ವಾಮಿ ದೇವಾಲಯವೂ ಸಹ ಸಾಕಷ್ಟು ಜನರನ್ನು ಸೆಳೆಯುತ್ತದೆ.
ಚಿತ್ರಕೃಪೆ: Pallavi Damera
ಕೂಡಲಸಂಗಮ:
ಭಕ್ತಿ ಭಂಡಾರಿ, ವಚನ ಕವಿ ಬಸವಣ್ಣನವರು ಐಕ್ಯಗೊಂಡ ಕೂಡಲಸಂಗಮವು ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮುದಾಯದವರ ಪಾಲಿಗೆ ಒಂದು ಪ್ರಸಿದ್ಧ ತೀರ್ಥ ಕ್ಷೇತ್ರವಾಗಿದೆ. ಕೂಡಲಸಂಗಮದ ಕುರಿತು ತಿಳಿಯಿರಿ.
ಚಿತ್ರಕೃಪೆ: Mankalmadhu
ಮಲೆ ಮಹದೇಶ್ವರ ಬೆಟ್ಟ:
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟವು ಪ್ರಸಿದ್ಧ ಶೈವ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಮೈಸೂರಿನಿಂದ 150 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ.ಮೀ ಗಳಷ್ಟು ದೂರವಿರುವ ಈ ಪುಣ್ಯ ಕ್ಷೇತ್ರಕ್ಕೆ ಕರ್ನಾಟಕ ಹಾಗೂ ತಮಿಳುನಾಡು ಈ ಎರಡೂ ರಾಜ್ಯಗಳಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Vedamurthy J
ದೇವರಾಯನ ದುರ್ಗ:
ತುಮಕೂರು ಬಳಿಯಿರುವ ದೇವರಾಯನ ದುರ್ಗವು ಬೆಂಗಳೂರಿಗೆ ಹತ್ತಿರದಲ್ಲಿರುವ ಪುಟ್ಟ ಗಿರಿಧಾಮವೂ ಹೌದು ಹಾಗೂ ಪುಣ್ಯ ಕ್ಷೇತ್ರವೂ ಹೌದು. ಮೂಲವಾಗಿ ದೇವರಾಯನ ದುರ್ಗವು ಯೋಗನರಸಿಂಹ ಹಾಗೂ ಭೋಗನರಸಿಂಹ ದೇವಾಲಯಗಳಿಂದಾಗಿ ಪ್ರಖ್ಯಾತಿ ಪಡೆದಿದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Srinivasa83
ಕೊಲ್ಲೂರು:
ಹೆಚ್ಚು ಜನರು ಭೇಟಿ ನೀಡುವ ಕರ್ನಾಟಕದ ಮತ್ತೊಂದು ಪುಣ್ಯ ಕ್ಷೇತ್ರವೆಂದರೆ ಕೊಲ್ಲೂರು. ಮೂಕಾಂಬಿಕೆ ದೇವಿಯ ದೇಗುಲದಿಂದಾಗಿ ಕೊಲ್ಲೂರು ಹೆಸರುವಾಸಿಯಾಗಿದೆ. ಶ್ರೀ ಆದಿ ಶಂಕರರು ಭೇಟಿ ನೀಡಿರುವ, ಕರ್ನಾಟಕದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರಿಗೆ ಸುಲಭವಾಗಿ ತೆರಳಬಹುದಾಗಿದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: GaneshSB
ಘಾಟಿ ಸುಬ್ರಹ್ಮಣ್ಯ:
ಬೆಂಗಳೂರು ಬಳಿಯ ದೊಡ್ಡಬಳ್ಳಾಪುರದಲ್ಲಿರುವ ಘಾಟಿ ಗ್ರಾಮವು ಸುಬ್ರಹ್ಮಣ್ಯ ದೇವಾಲಯದಿಂದ ಪ್ರಖ್ಯಾತಿ ಪಡೆದಿದ್ದು ಘಾಟಿ ಸುಬ್ರಮಣ್ಯ ಎಂದೆ ಜನಜನಿತವಾಗಿದೆ. ಸರ್ಪ ದೋಷ ನಿವಾರಣಾರ್ಥವಿರುವ ಈ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Vedamurthy J
ಅಂಬಲಪುಳ ಶ್ರೀಕೃಷ್ಣ ದೇವಾಲಯ:
ಕೇರಳ ರಾಜ್ಯದ ಅಲಪ್ಪುಳ (ಅಲೆಪ್ಪಿ) ದಲ್ಲಿರುವ ಅಂಬಲಪುಳ ಒಂದು ಸಣ್ಣ ಪಟ್ಟಣವಾಗಿದೆ. ಮೂಲತಃ ಈ ಪಟ್ಟಣವು ಒಂದು ಮಹತ್ವದ ಧಾರ್ಮಿಕ ಯಾತ್ರಾ ಕೇಂದ್ರವಾಗಿದ್ದು ಶ್ರೀಕೃಷ್ಣನ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನವನ್ನು ಅಂಬಲಪುಳ ದೇವಸ್ಥಾನವೆಂದೆ ಕರೆಯಲಾಗುತ್ತದೆ ಹಾಗೂ ಇದು ಕೇರಳ ರಾಜ್ಯದಲ್ಲಿರುವ ಪ್ರಮುಖ ಮೂರು ಶ್ರೀಕೃಷ್ಣನ ದೇವಸ್ಥಾನಗಳ ಪೈಕಿ ಒಂದಾಗಿದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Srijithpv
ಗುರುವಾಯೂರು:
ಕೇರಳ ರಾಜ್ಯದ ತ್ರಿಸ್ಸೂರು ಜಿಲ್ಲೆಯಲ್ಲಿ ಕಳೆ ತುಂಬಿದ ಪಟ್ಟಣವೆಂದರೆ ಗುರುವಾಯೂರು. ಗುರುವಾಯೂರು ಶ್ರೀ ಕೃಷ್ಣ ಪರಮಾತ್ಮನ ಹಾಗೂ ಶ್ರೀ ಮಹಾ ವಿಷ್ಣುವಿನ ತವರು ಎಂದೇ ಗುರುತಿಸಲ್ಪಟ್ಟಿದೆ. ಕೇರಳದಲ್ಲಿ ಹಲವಾರು ಯಾತ್ರಾಸ್ಥಳಗಳಿದ್ದು ಅವುಗಳಲ್ಲಿ ಗುರುವಾಯೂರು ಕೂಡಾ ಅತ್ಯಂತ ಪ್ರಸಿದ್ಧವಾದ ಯಾತ್ರಾಸ್ಥಳ ಎನಿಸಿದೆ. ಇಲ್ಲಿ ಭಕ್ತಾದಿಗಳ ಮಹಾಪೂರವೇ ಹರಿದುಬರುತ್ತದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: RanjithSiji
ಶಬರಿಮಲೆ:
ಕೇರಳದ ದಟ್ಟಾರಣ್ಯದ ನಡುವೆ ಬೆಟ್ಟಗಳ ಮೇಲೆ ನೆಲೆ ನಿಂತಿರುವ ಶಬರಿಮಲೆ ಹಿಂದೂಗಳ ಪಾಲಿಗೆ ಪುಣ್ಯಕ್ಷೇತ್ರ. ಪ್ರತಿ ಮಕರ ಸಂಕ್ರಾಂತಿ ಸಂದರ್ಭದಂದು ದಿವ್ಯ ಜ್ಯೋತಿಯ ದರುಶನ ಕೋರಿ ಲಕ್ಷಾಂತರ ಜನರು ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Avsnarayan
ಅರಣ್ಮೂಲ ಪಾರ್ಥಸಾರಥಿ:
ಅರಣ್ಮೂಲ ಕೇರಳದ ಪಥನಂತಿಟ್ಟ ಪಟ್ಟಣದಲ್ಲಿರುವ ಒಂದು ಚಿಕ್ಕ ಹಳ್ಳಿ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಈ ಗ್ರಾಮವು ಪಾರ್ಥಸಾರಥಿ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ದೇವಾಲಯವು ಪವಿತ್ರವಾದ ಪಂಬಾ ನದಿಯ ತಟದಲ್ಲಿ ಸಮೃದ್ಧವಾದ ಹಸಿರಿನ ನಡುವೆ ನಿರ್ಮಿತವಾಗಿದೆ. ಭಗವಾನ್ ಶ್ರೀ ಕೃಷ್ಣ ನ ರೂಪವಾದ ಪಾರ್ಥಸಾರತಿ ಇಲ್ಲಿನ ದೇವರು/ ದೇವತೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Pradeep717
ರಾಜರಾಜೇಶ್ವರ ದೇವಾಲಯ, ತಳಿಪರಂಬಾ
ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬಾ ಎಂಬಲ್ಲಿ ಪ್ರಖ್ಯಾತ ರಾಜರಾಜೇಶ್ವರ ದೇವಸ್ಥಾನವಿದೆ. ಶಿವ ಹಾಗೂ ವಿಷ್ಣುವಿನ ಶಕ್ತಿ ಹೊಂದಿರುವ ವಿಗ್ರಹವಾದ ರಾಜರಾಜೇಶ್ವರನನ್ನು ಸದಾಶಿವನಾಗಿ ಇಲ್ಲಿ ಪೂಜಿಸಲಾಗುತ್ತದೆ. ಮತ್ತೊಂದು ಪ್ರಮುಖ ಸಂಗತಿ ಎಂದರೆ. ಇದು ಪ್ರಶ್ನೆ ಕೇಳುವ ದೇವಸ್ಥಾನವೂ ಹೌದು. ದಕ್ಷಿಣ ಭಾರತದ ಯಾವುದೆ ದೇವಸ್ಥಾನಗಳಲ್ಲಿ ಏನಾದರೂ ಅವಗಢಗಳು ನಡೆದರೆ ಅದರ ಕುರಿತು ಏನಾದರೂ ನಿರ್ಧಾರ ತೆಗೆದುಕೊಳ್ಳಬೇಕಿದ್ದರೆ ಈ ದೇವಸ್ಥಾನದಲ್ಲಿ ಪ್ರಶ್ನೆ ಕೇಳಿ ಉತ್ತರ ಕಂಡುಕೊಳ್ಳಲಾಗುತ್ತದೆ. ಇದು ಚಾಲ್ತಿಯಲ್ಲಿರುವ ಶಿವನ ಪುರಾತನ 108 ದೇವಾಲಯಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Ajeesh.valliyot
ಮಧುರ ದೇವಾಲಯ, ಕಾಸರಗೋಡು
ಕೇರಳದ ಕಾಸರಗೋಡು ಪಟ್ಟಣದಿಂದ ಏಳು ಕಿ.ಮೀ ದೂರದಲ್ಲಿ ಮಧುರ ಗಣಪತಿ ದೇವಸ್ಥಾನವಿದೆ. ಸ್ಥಳಪುರಾಣದ ಪ್ರಕಾರ, ಒಮ್ಮೆ ಮಾದ ಸಮುದಾಯದ ಮಹಿಳೆಯೊಬ್ಬಳು ಇಲ್ಲಿ ಸ್ವಯಂಭು ಲಿಂಗವನ್ನು ಶೋಧಿಸಿದಳು ನಂತರ ಇದು ಮಾಧನಾಥೇಶ್ವರ ದೇವಾಲಯವಾಯಿತು. ತರುವಾಯ ಬ್ರಾಹ್ಮಣ ಹುಡುಗನೊಬ್ಬ ಗರ್ಭಗೃಹದ ಗೋಡೆಯ ಮೇಲೆ ಗಣಪನ ಚಿತ್ತಾರ ಬಿಡಿಸಿದ. ದಿನ ಕಳೆದಂತೆ ಗಣಪನ ವಿಗ್ರಹವು ಬೆಳೆಯಿತು ಹಾಗೂ ಪ್ರಸ್ತುತ ಗಣಪನಿಗೆ ಮುಡಿಪಾದ ರೋಚಕ ದೇಗುಲ ಇದಾಗಿದೆ ಹಾಗೂ ಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರವೂ ಆಗಿದೆ.
ಚಿತ್ರಕೃಪೆ: Vinayaraj
ಕೊಟ್ಟಿಯೂರು ಶಿವ ದೇವಾಲಯ:
ಕೊಟ್ಟಿಯೂರು ಶಿವನ ದೇವಾಲಯ ಕೇರಳದಲ್ಲಿ ಕಂಡುಬರುವ ಶಿವನ ಪ್ರಮುಖ ದೇವಾಲಯವಾಗಿದೆ ಹಾಗೂ ಮಹತ್ವದ ಧಾರ್ಮಿಕ ಕೇಂದ್ರವಾಗಿದೆ. ಸಾಮಾನ್ಯವಾಗಿ ವಡಕ್ಕೇಶ್ವರಂ ದೇವಾಲಯ ಎಂತಲೂ ಈ ದೇವಸ್ಥಾನಕ್ಕೆ ಕರೆಯಲಾಗುತ್ತದೆ. ಬಾವಲಿ ನದಿಯ ತಟದಲ್ಲಿ ನೆಲೆಸಿರುವ ಈ ದೇವಾಲಯವು ಎರಡು ಕಟ್ಟಡ ರಚನೆಗಳನ್ನು ಹೊಂದಿದೆ. ಒಂದು ದೇವಾಲಯ ಸಂಕೀರ್ಣವು ನದಿಯ ಪೂರ್ವದ ತಟದಲ್ಲಿದ್ದರೆ ಇನ್ನೊಂದು ದೇವಾಲಯ ಸಂಕೀರ್ಣವು ನದಿಯ ಪಶ್ಚಿಮ ತಟದಲ್ಲಿದೆ. ಇಲ್ಲಿ ಜರುಗುವ ವೈಶಾಖ ಮಹೋತ್ಸವವು ಅತ್ಯದ್ಭುತವಗಿರುತ್ತದೆ.
ಚಿತ್ರಕೃಪೆ: Satheesan.vn
ಅನಂತಪದ್ಮನಾಭ ಸ್ವಾಮಿ ದೇವಾಲಯ, ತಿರುವನಂತಪುರಂ:
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ವಿಷ್ಣುವಿನ ಅವತಾರದ ಶ್ರೀ ಪದ್ಮನಾಭಸ್ವಾಮಿಯ ದೇವಸ್ಥಾನವು ಹೆಚ್ಚು ಪ್ರಖ್ಯಾತಿ ಪಡೆದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಇತ್ತೀಚಿಗಷ್ಟೆ ಅನಾವರಣಗೊಂಡ ದೇವಸ್ಥಾನದ ಸಿರಿವಂತಿಕೆಯು ದೇವಸ್ಥಾನವನ್ನು ಮತ್ತಷ್ಟು ಪ್ರಸಿದ್ಧಗೊಳಿಸಿದ್ದು ಅಪಾರ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.
ಚಿತ್ರಕೃಪೆ: Ashcoounter
ಮದುರೈ ಮೀನಾಕ್ಷಿ:
ಮದುರೈ ದಕ್ಷಿಣ ಭಾರತದ ಖ್ಯಾತ ಧಾರ್ಮಿಕ ಪ್ರವಾಸಿ ಆಕರ್ಷಣೆ ಹಾಗೂ ಮೀನಾಕ್ಷಿ ಅಮ್ಮನವರು ನೆಲೆಸಿದ ಶ್ರೀಕ್ಷೇತ್ರ. ದೇಶ ವಿದೇಶಗಳಿಂದ ಸಾಕಷ್ಟು ಜನ ಪ್ರವಾಸಿಗರು, ಭಕ್ತಾದಿಗಳು ಮದುರೈ ಪಟ್ಟಣಕ್ಕೆ ವರ್ಷಪೂರ್ತಿ ಆಗಮಿಸುತ್ತಾರೆ. ಮದುರೈ ಕುರಿತು ಹೆಚ್ಚಿನ ವಿವರಗಳು.
ಚಿತ್ರಕೃಪೆ: McKay Savage
ಕಾಂಚೀಪುರಂ:
ಪ್ರತಿ ಹಿಂದೂ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಸಂದರ್ಶಿಸಬೇಕಾದ ಏಳು ಅತಿ ಪವಿತ್ರ ಸ್ಥಳಗಳಲ್ಲಿ ಕಾಂಚೀಪುರಂ ಒಂದಾಗಿರುವುದರಿಂದ ಹಿಂದೂಗಳಿಗೆ ಇದು ಒಂದು ಪೂಜ್ಯ ನಗರವಾಗಿದೆ. ಈ ನಗರವು ಶಿವಭಕ್ತರಿಗೂ ಹೇಗೋ ಹಾಗೆಯೇ ವಿಷ್ಣುವಿನ ಭಕ್ತರಿಗೂ ಪವಿತ್ರ ಸ್ಥಳವಾಗಿದೆ. ಕಾಂಚಿಪುರಂ ನಗರದಲ್ಲಿ ಶಿವ ಮತ್ತು ವಿಷ್ಣು ದೇವರುಗಳಿಗೆ ಮುಡಿಪಾದ ಹಲವಾರು ದೇವಾಲಯಗಳಿವೆ. "ಕಾ" ಎಂದರೆ ಬ್ರಹ್ಮನು. "ಅಂಚಿ" ಎಂದರೆ "ವಿಷ್ಣುವನ್ನು ಈ ಸ್ಥಳದಲ್ಲಿ ಪೂಜಿಸಿದನು" ಎಂದು ನಂಬಲಾಗಿರುವುದರಿಂದ ಈ ನಗರಕ್ಕೆ ಕಾಂಚೀಪುರಂ ಎಂದು ಹೆಸರು ಬಂದಿದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Balaji.B
ರಾಮೇಶ್ವರಂ:
ದೇಶದ 12 ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕೇಂದ್ರವಾದ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳ ಪೈಕಿ ಒಂದಾಗಿದೆ. ಸ್ವತಃ ರಾಮನೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿದ್ದನೆನ್ನಲಾಗಿದೆ. ರಾಮೇಶ್ವರಂ ಕುರಿತು ಪರಿಚಯ.
ಚಿತ್ರಕೃಪೆ: wishvam
ಕನ್ಯಾಕುಮಾರಿ:
ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿಯೂ ಹೆಸರುವಾಸಿಯಾಗಿದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಹೆಚ್ಚಿನ ವಿವರಗಳು. ಚಿತ್ರದಲ್ಲಿರುವುದು ವಿವೇಕಾನಂದ ಬಂಡೆ ಸ್ಮಾರಕ.
ಚಿತ್ರಕೃಪೆ: Premnath Thirumalaisamy
ಪಳನಿ:
ಪಳನಿ ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಇದು ಮುರುಗನು(ಸುಬ್ರಹ್ಮಣ್ಯ) ನೆಲೆಗೊಂಡಿರುವ ಪವಿತ್ರ ಸ್ಥಳವೆಂದು ಭಾವಿಸಲಾಗಿದೆ. ದಂಡಯುಕ್ತ ಸ್ವಾಮಿ ಮುರುಗನ ದೇವಾಲಯವು ಇಲ್ಲಿನ ಬೆಟ್ಟದ ಮೇಲಿದೆ. ಹೆಚ್ಚಿನ ಮರಗಳು.
ಚಿತ್ರಕೃಪೆ: Thejas Panarkandy
ಕುಂಭಕೋಣಂ:
ಕೂಂಬಕೋಣಂ ಎಂದೂ ಕರೆಯಲ್ಪಡುವ ಕುಂಭಕೋಣಂ ಒಂದು ಸುಂದರ ಹಾಗೂ ಪವಿತ್ರ ನಗರ. ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿರುವ ಕುಂಬಕೋಣಂ ಕಾವೇರಿ ಮತ್ತು ಅರ್ಸಲಾರ್ ನದಿಗಳ ನಡುವಣ ಸ್ಥಳದಲ್ಲಿರುವ ಕಾರಣ ಧಾರ್ಮಿಕ ಮಹತ್ವದ ಜೊತೆಗೇ ಅಹ್ಲಾದಕರ ವಾತಾವರಣವನ್ನೂ ಸಹ ಹೊಂದಿದೆ. ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಇಲ್ಲಿ ದೇವಾಲಯಗಳಿರುವುದರಿಂದ ಇದಕ್ಕೆ "ದೇವಾಲಯಗಳ ನಗರ" ಎಂದೂ ಸಹ ಕರೆಯಲಾಗಿದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Arian Zwegers
ತಿರುಪತಿ:
ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಆಂಧ್ರ ದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯಿರುವ ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರನ ದೇವಸ್ಥಾನಕ್ಕೆ ಪ್ರತಿ ವರ್ಷ ಏನಿಲ್ಲವೆಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಹೈದರಾಬಾದ್ ನಗರದಿಂದ 600 ಕಿ.ಮೀ ದೂರವಿರುವ ಈ ಕ್ಷೇತ್ರವು ಚೆನ್ನೈನಿಂದ 138 ಕಿ.ಮೀ ಹಾಗು ಬೆಂಗಳೂರು ನಗರದಿಂದ 291 ಕಿ.ಮೀ ಗಳಷ್ಟು ಅಂತರದಲ್ಲಿದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Raji.srinivas
ಶ್ರೀಕಾಳಹಸ್ತಿ:
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸಮೀಪವವೇ ಇರುವ ಇನ್ನೊಂದು ಪ್ರಮುಖ ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶ್ರೀಕಾಳಹಸ್ತಿ. ಶ್ರೀ ಕಾಳಹಸ್ತಿ ಎಂತಲೂ ಇದನ್ನು ಕರೆಯುತ್ತಾರೆ. ಸ್ವರ್ಣಮುಖಿ ನದಿಯ ದಡದಲ್ಲಿರುವ ಈ ಕ್ಷೇತ್ರ ಭಾರತದ ಪವಿತ್ರ ಕ್ಷೇತ್ರಗಳ ಪೈಕಿ ಅತೀ ಮಹತ್ವವುಳ್ಳದ್ದಾಗಿದ್ದು, ಪ್ರತೀ ವರ್ಷ ಲಕ್ಷಾಂತರ ಭಕ್ತರನ್ನು, ಪ್ರವಾಸಿಗರನ್ನು ಸೆಳೆಯುತ್ತದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Kalyan Kumar
ಭದ್ರಾಚಲಂ:
ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿರುವ ಭದ್ರಾಚಲಂ ಒಂದು ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಪುರಾಣ ಕಥೆಯೊಂದರ ಪ್ರಕಾರ ಭದ್ರಾಚಲಂ ಪಟ್ಟಣ ಇರುವ ಪ್ರದೇಶವು ಹಿಂದೊಮ್ಮೆ ದಂಡಕಾರಣ್ಯ ಇರುವ ಪ್ರದೇಶ ಎಂದು ಹೇಳಲಾಗುತ್ತದೆ. ಹಿಂದೂ ಪುರಾಣದ ನಂಬಿಕೆಯ ಪ್ರಕಾರ, ಶ್ರೀ ರಾಮ ಹಾಗೂ ಸೀತಾ ದೇವಿ ಹಾಗೂ ರಾಮನ ತಮ್ಮ ಲಕ್ಷ್ಮಣ ಸ್ವಲ್ಪ ಸಮಯದ ವರೆಗೆ ತಮ್ಮ ವನವಾಸದ ಸಂದಂರ್ಭದಲ್ಲಿ ಈ ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದರು ಎನ್ನಲಾಗುತ್ತದೆ. ಹೆಚ್ಚಿನ ವಿವರಗಳು.
ಚಿತ್ರಕೃಪೆ: Adityamadhav83
ಶ್ರೀಶೈಲಂ:
ಶ್ರೀಶೈಲಂ / ಶ್ರೀ ಶೈಲ ಹಿಂದುಗಳಿಗೆ ಧಾರ್ಮಿಕ ಸಂಪ್ರದಾಯಕ್ಕೆ ಪ್ರಾಮುಖ್ಯತೆಯನ್ನು ಪಡೆದಿರುವ ಪುಟ್ಟ ಪಟ್ಟಣ. ಈ ಪಟ್ಟಣವನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟದ ಮೇಲೆ ಕಾಣಬಹುದು. ಈ ನಗರವು ಕೃಷ್ಣಾ ನದಿಯ ತಟದಲ್ಲಿ ಸ್ಥಾಪಿತವಾಗಿದೆ. ಶ್ರೀ ಶೈಲಂ ಪಟ್ಟಣವು ರಾಜಧಾನಿ ಹೈದ್ರಾಬಾದ್ ನಗರದ ದಕ್ಷಿಣ ದಿಕ್ಕಿನಲ್ಲಿ ಸುಮಾರು 212 ಕೀ.ಮಿ ದೂರದಲ್ಲಿದೆ. ಇಲ್ಲಿನ ಅತ್ಯಂತ ಪ್ರಮುಖವಾದ ದೇವಾಲಯಗಳೆಂದರೆ ಶಿವ ಹಾಗೂ ಆತನ ಪತ್ನಿ ದೇವಿ ಪಾರ್ವತಿಗೆ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ. ಹೆಚ್ಚಿನ ವಿವರಗಳು.
ಚಿತ್ರಕೃಪೆ: sai sreekanth mulagaleti