ಆ ಮಹಿಮಾನ್ವಿತವಾದ ದೇವಿಯನ್ನು ಪಾರ್ವತಿಯ ಅವತಾರ ಎಂದೇ ಹೇಳಬಹುದು. ಆಕೆಯನ್ನು ಶಕ್ತಿ, ದುರ್ಗಿ, ಕಾಳಿ ಎಂದೆಲ್ಲಾ ಕರೆಯಲಾಗುತ್ತದೆ. ಈ ದೇವಾಲಯದಲ್ಲಿನ ತಾಯಿಯು ಒಂದು ದಂತ ಕಥೆಯ ಪ್ರಕಾರ ಬೆಳಗಿನ ಸಮಯದಲ್ಲಿ ಕೇರಳ ರಾಜ್ಯದ ಪ್ರಸಿದ್ಧವಾದ ದೇವಾಲಯದಲ್ಲಿ ಭಕ್ತರನ್ನು ಹರಸಿ ತದನಂತರ ಸಂಜೆಯಾಗುತ್ತಿದ್ದಂತೆ ಕರ್ನಾಟಕದಲ್ಲಿನ ತನ್ನ ತವರು ಮನೆಗೆ ಬಂದು ನೆಲೆಸುವ ಶಕ್ತಿ ಪ್ರದಾಯಿನಿ ಈ ದೇವಿ.
ಭಾರತದಲ್ಲಿಯೇ ಮೊದಲ ದೇವಿಯ ದೇವಾಲಯ ಯಾವುದು ಗೊತ್ತ?
ಹಾಗಾಗಿ ಈ ದೇವಿಯ ದರ್ಶನಕ್ಕೆ ಕರ್ನಾಟಕ ಮಾತ್ರವಲ್ಲದೇ ಕೇರಳ ರಾಜ್ಯದಿಂದಲೂ ಸಹ ಭಕ್ತಾಧಿಗಳು ಈ ತಾಯಿಯ ದರ್ಶನ ಭಾಗ್ಯ ಪಡೆಯಲು ಬರುತ್ತಾರೆ. ಕೇರಳದ ಶ್ರೇಷ್ಟ ಗಾಯಕ ಎಂಬ ಖ್ಯಾತಿಯನ್ನು ಗಳಿಸಿರುವ ಅದ್ಭುತವಾದ ಸಂಗೀತಗಾರ ಕೆ.ಜೆ ಯೇಸುದಾಸ್ ಅವರು ಕೂಡ ಈ ದೇವಿಯ ಮಹಾ ಭಕ್ತ.
ಹಾಗಾದರೆ ಆ ದೇವಾಲಯ ಯಾವುದು ಎಂದು ಯೋಚಿಸುತ್ತಿದ್ದೀರಾ? ಆ ಪುಣ್ಯ ಕ್ಷೇತ್ರವೇ ಕೊಲ್ಲೂರಿನ ಮೂಕಾಂಬಿಕಾ ದೇವಿ. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಒಂದು ಪ್ರಸಿದ್ಧವಾದ ಯಾತ್ರ ಸ್ಥಳವಾಗಿದೆ. ಈ ದೇವಾಲಯ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಗಳಿಸಿದೆ.
ಮೂಕಾಂಬಿಕ ಕ್ಷೇತ್ರ
ಈ ಮಾಹಿಮನ್ವಿತವಾದ ದೇವಾಲಯವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರಿನಲ್ಲಿದೆ. ಇಲ್ಲಿ ಮೂಕಾಂಬಿಕೆ ದೇವಿಯು ನೆಲೆಸಿದ್ದಾಳೆ. ವರ್ಷವೀಡಿ ಈ ದೇವಾಲಯಕ್ಕೆ ಕರ್ನಾಟಕ ರಾಜ್ಯದಿಂದಲೇ ಅಲ್ಲದೇ ಕೇರಳ ರಾಜ್ಯದಿಂದಲೂ ಭೇಟಿ ನೀಡುತ್ತಿರುತ್ತಾರೆ.
ಹೇಗೆ ಸಾಗಬೇಕು?
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿರುವ ಚಿಕ್ಕ ದೇವಾಲಯ ಪಟ್ಟಣವಾದ ಕೊಲ್ಲೂರು ಕುಂದಾಪುರ ತಾಲ್ಲೂಕು ಕೇಂದ್ರದಿಂದ ಸುಮಾರು 38 ಕಿ.ಮೀ ದೂರದಲ್ಲಿ ಉಡುಪಿ ನಗರದಿಂದ ಸುಮಾರು 75 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು 458 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಮುಕಾಂಬಿಕಾ ರಸ್ತೆಯವರೆಗೆ ರೈಲು ಸೌಲಭ್ಯವಿದ್ದು, ಬೆಂಗಳೂರು, ಉಡುಪಿ ಹಾಗು ಕುಂದಾಪುರಗಳಿಂದ ಬಸ್ಸುಗಳು ಸಹ ದೊರೆಯುತ್ತವೆ.
ಶ್ರೀ ಚಕ್ರದ ದೇವಿ
ಇಲ್ಲಿನ ವಿಶೇಷ ಏನೆಂದರೆ ದೇವಿ ಮೂಕಾಂಬಿಕೆಯು ಶಿವಲಿಂಗದ ರೂಪದಲ್ಲಿ ನೆಲೆಸಿದ್ದಾಳೆ. ಈ ಶಿವಲಿಂಗವು ಮಹಾಶಿವ ಹಾಗು ಶಕ್ತಿಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಶ್ರೀ ಚಕ್ರದ ಮೇಲಿನ ಪಂಚಲೋಹದ ಮುಕಾಂಬಿಕೆಯ ವಿಗ್ರಹವನ್ನು ಅದ್ವೈತ ಗುರು ಶ್ರೀ ಶಂಕರಾಚಾರ್ಯರು ಪ್ರತಿಷ್ಟಾಪಿಸಿದರು ಎನ್ನಲಾಗಿದೆ.
wikimedia
ಇತರೆ ದೇವತಾ ಮೂರ್ತಿಗಳು
ಈ ದೇವಿಯು ಮೂರು ರೂಪದಲ್ಲಿ ದರ್ಶನವನ್ನು ನೀಡುತ್ತಾಳೆ ಎನ್ನಲಾಗಿದೆ. ಹಾಗಾಗಿ ಇಲ್ಲಿನ ತಾಯಿಯು ಶೀಘ್ರವಾಗಿ ಭಕ್ತರಿಗೆ ಒಲಿಯುತ್ತಾಳಂತೆ. ಹಾಗೆಯೇ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿದಾಯಿನಿಯಾಗಿದ್ದಾಳೆ. ಇಲ್ಲಿ ಬೇರೆ ಬೇರೆ ದೇವತಾ ಮೂರ್ತಿಗಳಿರುವ ಪುಟ್ಟ ದೇವಾಲಯಗಳನ್ನು ಕೂಡ ಕಾಣಬಹುದಾಗಿದೆ.
ಸ್ಥಳ ಪುರಾಣ
ಈ ದೇವಾಲಯದ ಸ್ಥಳ ಪುರಾಣ ಅತ್ಯಂಯ ರೋಚಕವಾಗಿದ್ದು, ಒಂದು ದಂತಕಥೆಯ ಪ್ರಕಾರ ಹಿಂದೆ ಈ ಪ್ರದೇಶದಲ್ಲಿ ಕೌಮಾಸುರನೆಂಬ ದೈತ್ಯನು ವಾಸ ಮಾಡುತ್ತಿದ್ದನು. ತನಗೆ ಇದ್ದ ಅಪಾರವಾದ ಶಕ್ತಿಗಳಿಂದ ದೇವತೆಗಳಿಂದ ಹಿಡಿದು ಮಾನವರಿಗೂ ಸಹ ಹಿಂಸೆ ನೀಡುತ್ತಿದ್ದ. ಇವನ ಶಕ್ತಿಯನ್ನು ಎದುರಿಸಲು ಆಗದೇ ದೇವತೆಗಳು ಅಸಹಾಯಕರಾಗಿದ್ದರು.
ಕೌಮಾಸುರನ ಅಂತ್ಯ
ಒಮ್ಮೆ ಕೌಮಾಸುರನ ಅಂತ್ಯ ಸಮೀಪಿಸುತ್ತಿದೆ ಎಂಬ ಸುದ್ದಿಯನ್ನು ತಿಳಿದ ದೇವತೆಗಳು ಅತ್ಯಂತ ಆನಂದದಿಂದ ಇದ್ದರು. ಇದರಿಂದ ಕಂಗಾಲದ ದೈತ್ಯನು ಹೇಗಾದರೂ ಮಾಡಿ ಸಾವನ್ನು ಗೆಲ್ಲಲೇ ಬೇಕು ಎಂದು ಪಣ ತೊಟ್ಟನು. ಆ ಸಮಯದಲ್ಲಿ ಶಿವನನ್ನು ಕುರಿತು ಘೋರವಾದ ತಪಸ್ಸು ಮಾಡಬೇಕು ಎಂದು ನಿಶ್ಚಯಿಸಿದನು. ಆತನ ತಪ್ಪಸ್ಸಿಗೆ ಮೆಚ್ಚಿದ ಮಹಾ ಶಿವನು ಕೌಮಾಸುರನ ಎದುರು ಪ್ರತ್ಯಕ್ಷನಾದನು.
ದೇವತೆಗಳಿಗೆ ಸಮಾಧಾನ ಹೇಳಿದ ಸರಸ್ವತಿ ದೇವಿ
ಇತ್ತ ದೇವತೆಗಳು ತ್ರಿಮೂರ್ತಿಗಳ ಮೊರೆ ಹೋಗಲು ಸರಸ್ವತಿ ಮಾತೆಯು ತನ್ನ ಅಭಯ ಹಸ್ತವನ್ನು ನೀಡಿ ದೇವತೆಗಳಿಗೆ ಸಮಾಧಾನ ಪಡಿಸಿದಳು. ಶಿವನು ಪ್ರತ್ಯಕ್ಷನಾಗಿ ಕೌಮಾಸುರನಿಗೆ ವರವನ್ನು ಕೇಳು ಎಂಬ ಸಮಯದಲ್ಲಿ ಸರಸ್ವತಿ ದೇವಿಯು ಆತನನ್ನು ಮೂಕನನ್ನಾಗಿ ಮಾಡಿದಳು. ಇದರಿಂದಾಗಿ ಆ ಕೌಮಾಸುರನು ಏನು ಮಾತನಾಡಲು ಆಗಲಿಲ್ಲ. ತದನಂತರ ವರವನ್ನು ಕೇಳದವನಾಗಿ ಮೂಕಾಸುರನೆಂದು ಹೆಸರುಗಳಿಸಿದನು.
ಮೂಕಾಂಬಿಕೆ
ದೈತ್ಯನಿಗೆ ಮೂಕನಾದರೂ ಕೂಡ ಆತನ ಶಕ್ತಿಗೇನು ಕಡಿಮೆ ಇರಲಿಲ್ಲ. ಮೂಕನಾದ್ದರಿಂದ ಇನ್ನೂ ಕೋಪಾವೇಶಗಳಿಂದ ಎಲ್ಲರಿಗೂ ಇನ್ನಷ್ಟು ಕಿರುಕುಳ ನೀಡಲು ಆರಂಭಿಸಿದ. ಹೀಗಿರುವಾಗ ದೇವಿಯರೆಲ್ಲಾ ಒಂದಾಗಿ ಒಂದು ಶಕ್ತಿ ಶಾಲಿ ದೇವಿಯ ಅವತಾರ ಹೊಂದಿ ಮೂಕಾಸುರನನ್ನು ಆ ಶಕ್ತಿಯು ಸಂಹಾರ ಮಾಡಿದಳು. ಮೂಕಾಸುರನನ್ನು ಕೊಂದ ಆ ಶಕ್ತಿಗೆ ಮೂಕಾಂಬಿಕೆ ಎಂದು ಹೆಸರು ಬಂದಿತು. ಆ ತಾಯಿಯೇ ಇಲ್ಲಿ ನೆಲೆಸಿರುವುದು.
ಮರಣ ಕಟ್ಟೆ
ದೇವಿಯು ಮೂಕಾಸುರನನ್ನು ವಧಿಸಿದ ಆ ಸ್ಥಳವು ಕೂಡ ಇಂದಿಗೂ ಅಲ್ಲಿಯೇ ಇದ್ದು, ಅದನ್ನು "ಮರಣ ಕಟ್ಟೆ" ಎಂದು ಕರೆಯುತ್ತಾರೆ. ಮೂಕಾಂಬಿಕೆಯ ಸನ್ನಿಧಿಯಲ್ಲಿ ಇತರೆ ದೇವಾಲಯಗಳು ಸಹ ಇವೆ. ಇಲ್ಲಿ ಶಿವನು ಚಂದ್ರ ಮೌಳೀಶ್ವರನಾಗಿ ಇಲ್ಲಿ ನೆಲೆಸಿದ್ದಾನೆ. ಈ ಮೂರ್ತಿಯನ್ನು ಸಹ ಶ್ರೀ ಶಂಕರಾಚಾರ್ಯರೇ ನಿರ್ಮಾಣ ಮಾಡಿದ್ದಾರೆ.
ಶಂಕರಾಚಾರ್ಯರು
ಈ ಕ್ಷೇತ್ರಕ್ಕೆ ಮತ್ತೊಂದು ದಂತಕಥೆಯು ಕೂಡ ಚಾಲ್ತಿಯಲ್ಲಿದೆ. ಅದೇನೆಂದರೆ ಒಂದೊಮ್ಮೆ ಜ್ಞಾನದಾಯಿನಿಯಾದ ಸರಸ್ವತಿ ಮಾತೆಗೆ ಸಂಬಧಿಸಿದಂತೆ ಯಾವ ದೇವಾಲಯವು ಕೇರಳದಲ್ಲಿ ಇಲ್ಲದ ಕಾರಣ ಶಂಕರಾಚಾರ್ಯರು ಅತ್ಯಂತ ಭಕ್ತಿ, ಶ್ರದ್ಧೆಗಳಿಂದ ಧ್ಯಾನ ತಪಸ್ಸು ಮಾಡಿ ಸರಸ್ವತಿಯನ್ನು ಮೆಚ್ಚಿಸಿದರು. ಇದರಿಂದ ಪ್ರಸನ್ನಾಳಾದ ದೇವಿಯು ಶಂಕರರನ್ನು ಕುರಿತು ಬೇಡಲು, ಶಂಕರರು ತನ್ನೊಡನೆ ತನ್ನ ಊರಿಗೆ ಬಂದು ನೆಲೆಸುವಂತೆ ಪ್ರಾರ್ಥನೆ ಮಾಡಿದರು.
ಒಪ್ಪಿಗೆ ಸೂಚಿಸಿದ ಸರಸ್ವತಿ
ಶಂಕರಾಚಾರ್ಯರ ಮಾತನ್ನು ಒಪ್ಪಿದ ಮಾತೆಯು ಒಂದು ಷರತ್ತನ್ನು ವಿಧಿಸಿದಳು. ಅದೆನೆಂದರೆ ಶಂಕರರು ಮುಂದೆ ಸಾಗುತ್ತಾ ತೆರಳಬೇಕು ಆಕೆಯು ಹಿಂದೆ ಬರುತ್ತೇನೆ ಎಂದು ಭರವಸೆ ನೀಡಿದಳು. ಏನಾದರೂ ಹಿಂದೆ ತಿರುಗಿ ನೋಡಿದರೆ ಆ ಸ್ಥಳದಲ್ಲಿಯೇ ಶಾಶ್ವತವಾಗಿ ನೆಲೆಯಾಗುತ್ತೇನೆ ಎಂದು ಹೇಳಿದಳು. ಇದಕ್ಕೆ ಒಪ್ಪಿದ ಶಂಕಾರಾಚಾರ್ಯರು ಮುನ್ನಡೆದರು.
ಕೊಡಚಾದ್ರಿ ಬೆಟ್ಟ
ಹೀಗೆ ಸಾಗುತ್ತಿರುವಾಗ ತಾಯಿ ಹಾಕಿಕೊಂಡಿದ್ದ ಗೆಜ್ಜೆಯ ನಾದ ದೇವಿ ಬರುವಿಕೆಯನ್ನು ಸೂಚಿಸುತ್ತಿತ್ತು. ಹೀಗೆಯೇ ಕೊಡಚಾದ್ರಿ ಬೆಟ್ಟಗಳಲ್ಲಿ ನಡೆಯುತ್ತಿರುವಾಗ ಒಂದೊಮ್ಮೆ ಗೆಜ್ಜೆ ನಾದ ಆಕಸ್ಮಿಕವಾಗಿ ನಿಂತು ಹೋಯಿತು. ಇದರಿಂದ ಕಂಗಾಲದ ಶಂಕರಾಚಾರ್ಯರು ದೇವಿ ಇರುವಳೋ, ಇಲ್ಲವೋ ಎಂದು ಹಿಂದಿರುಗಿ ನೋಡಿದರು.
ತಾಯಿಯನ್ನು ಪಾರ್ಥನೆ
ಆದರೆ ದೇವಿ ಮಾತ್ರ ಹಿಂದೆಯೇ ಇದ್ದಳು. ಇದರಿಂದ ಆಕೆಯು ವಿಧಿಸಿದ್ದ ಷರತ್ತು ಮುರಿದ್ದರಿಂದ ದೇವಿಯು ಅಲ್ಲಿಯೇ ನೆಲೆನಿಂತಳು. ಹಾಗೆಯೇ ಆ ಕ್ಷೇತ್ರವೇ ಕೊಲ್ಲೂರು ಆಯಿತು. ಆದರೆ ಶಂಕರರು ಅಷ್ಟು ಸುಲಭವಾಗಿ ಬಿಟ್ಟು ಕೊಡುವವರು ಅಲ್ಲ. ವಿಧ ವಿಧವಾಗಿ ತಾಯಿಯನ್ನು ಪಾರ್ಥನೆ ಮಾಡಿ ಕ್ಷಮಾಪಣೆ ಕೇಳಿದರು.
ಶಂಕರಾಚಾರ್ಯರು
ಶಂಕರಾಚಾರ್ಯರ ಭಕ್ತಿಗೆ ಪ್ರಸನ್ನಳಾದ ದೇವಿಯು ಶಂಕರರನ್ನು ಕುರಿತು ಹೀಗೆ ಹೇಳಿದಳು " ನೀನು ಹೇಳುವ ಸ್ಥಳದಲ್ಲಿ ಬೆಳಗ್ಗೆ ಸಮಯದಲ್ಲಿ ಬಂದು ಭಕ್ತರಿಗೆ ದರ್ಶನ ನೀಡಿ ಮತ್ತೆ ಮಧ್ಯಾಹ್ನದ ನಂತರ ಕೊಲ್ಲೂರಿಗೆ ಮರುಳುವುದಾಗಿ ಹೇಳಿದಳು". ಇದಕ್ಕೆ ಒಪ್ಪಿದ ಶಂಕರಾಚಾರ್ಯರು ತಾಯಿಯ ಚರಣಕ್ಕೆ ಬಿದ್ದು ನಮಸ್ಕಾರ ಮಾಡಿದರು.
ಬೆಳ್ಳಗ್ಗೆ ಸರಸ್ವತಿ
ಹೀಗೆ ಮೂಕಾಂಬಿಕಾ ದೇವಿಯು ಬೆಳಗ್ಗೆಯ ಸಮಯದಲ್ಲಿ ಭಕ್ತರನ್ನು ಹರಸಲು ಕೇರಳ ರಾಜ್ಯದ ಚೊಟ್ಟನಿಕ್ಕರಾ ಭಗವತಿ ದೇವಾಲಯದಲ್ಲಿ ನೆಲೆಸುತ್ತಾಳೆ. ಈ ದೇವಾಲಯವು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಚೊಟ್ಟನಿಕ್ಕರಾ ಎಂಬ ಚಿಕ್ಕ ಪಟ್ಟಣದಲ್ಲಿ ಈ ದೇವಾಲಯವಿದೆ.