ಸೃಷ್ಟಿ ಸೌಂದರ್ಯದ ಅದ್ಭುತ ರುಚಿಯನ್ನು ಆಸ್ವಾದಿಸಬೇಕೆಂದಿದ್ದರೆ ಸಾಮಾನ್ಯವಾಗಿ ನಗರ ಪ್ರದೇಶಗಳಿಂದ ದೂರವೇ ಹೋಗಬೇಕು. ಅದರಲ್ಲೂ ವಿಶೇಷವಾಗಿ ಕಣಿವೆ, ಪ್ರಪಾತಗಳು, ಗಿರಿಧಾಮ ಪ್ರದೇಶಗಳು, ಬೆಟ್ಟಗುಡ್ಡಗಳು, ಕಾಡು-ಮೇಡುಗಳಿಗೆ ಭೇಟಿ ನೀಡಿದರಂತೂ ನಿರಾಸಯಾಗುವುದೆ ಇಲ್ಲ.
ನಿಮಗಿಷ್ಟವಾಗಬಹುದಾದ : ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ
ಇಂತಹ ಕೆಲವು ತಾಣಗಳನ್ನು ಅರಸುತ್ತ ಸಾಗಿದರೆ ಸಾಕಷ್ಟು ಅದ್ಭುತ ಪ್ರಾಕೃತಿಕ ಆಕರ್ಷಣೆಯ ತಾಣಗಳು ಕಾಣಸಿಗುತ್ತವೆ. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ಮಂಜಂಪಟ್ಟಿ ವ್ಯಾಲಿ ಅಥವಾ ಕಣಿವೆ ಪ್ರದೇಶ. ತನ್ನ ಅದ್ಭುತ ಹಿನ್ನಿಲೆ ಹಾಗೂ ಸೊಬಗಿನಿಂದ ಸಾಕಷ್ಟು ಕುತೂಹಲ ಕೆರಳಿಸುವ ಈ ಕಣಿವೆ ತಾಣ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿದೆ.
ಚಿತ್ರಕೃಪೆ: Marcus334
ಮೂಲತಃ ಇದು ಅಣ್ಣಾಮಲೈ ಬೆಟ್ಟಗಳು, ವಾಲ್ಪಾರೈ, ಕೊಯಮತ್ತೂರು ಜಿಲ್ಲೆ ಹಾಗೂ ತಿರುಪುರ್ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಇಂದಿರಾಗಾಂಧಿ ವನ್ಯಜೀವಿಧಾಮ ಹಾಗೂ ರಾಷ್ಟ್ರೀಯ ಉದ್ಯಾನದ ಪೂರ್ವ ವಿಭಾಗದ ಪ್ರದೇಶದಲ್ಲಿ ಬರುತ್ತದೆ. ಈ ಕಣಿವೆಯು ತನ್ನ ಅಕ್ಕ ಪಕ್ಕಗಳಲ್ಲಿ ದಿಂಡುಗಲ್ ಹಾಗೂ ಕೊಡೈಕೆನಲ್ ಅರಣ್ಯಗಳೊಂದಿಗೆ ಹೊಂದಿಕೊಂಡಿದೆ.
ತಮಿಳಿನಲ್ಲಿ ಮಂಜಲ್ ಎಂದರೆ ಹಳದಿ ಎಂತಲೂ ಪಟ್ಟಿ ಎಂದರೆ ಗ್ರಾಮ, ಪ್ರದೇಶ ಎಂತಲೂ ಅರ್ಥಬರುತ್ತದೆ. ಅಲ್ಲದೆ ಇಲ್ಲಿ ಹಿಂದೆ ಸ್ಥಳೀಯವಾಗಿ ವಿಶೇಷವಾಗಿ ಬೆಳೆಯುವ ಹಳದಿ ಬಣ್ಣದ ಮಾವಿನ ಗಿಡಗಳ ಎಲ್ಲೆಡೆಯಿದ್ದವು. ಹೀಗಾಗಿ ಈ ಸ್ಥಳಕ್ಕೆ ಮಂಜಂಪಟ್ಟಿ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Marcus334
ಪರ್ವತ ಮಳೆಗಾಡುಗಳು ಹಾಗೂ ಶೋಲಾ ಅರಣ್ಯಗಳಿಂದ ನೀರು ಹರಿದು ಬರುವ ಪ್ರದೇಶ ಇದಾಗಿದ್ದು ಇಲ್ಲಿ ಸಾಕಷ್ಟು ಜೀವ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಈ ಒಂದು ಅಂಶವೆ ಅಧ್ಯಯನಕಾರರು ಈ ಕಣಿವೆಗೆ ಭೇಟಿ ನೀಡಲು ಪ್ರೇರಣೆಯಾಗಿದೆ. ಇಲ್ಲಿ ಶೇಖರಣೆಯಾಗುವ ನೀರು ಚಿನ್ನಾರ್ ಹಾಗೂ ಅಮರಾವತಿ ನದಿಗಳಲ್ಲಿ ಸೇರ್ಪಡೆಯಾಗಿ ಮುಂದೆ ಹರಿಯುತ್ತದೆ.
ತೆನ್ ಅರ್, ಅಲಂತೋನಿ ನೀರಿನ ತೊರೆ ಹಾಗೂ ಅಲಂತೋನಿ ಜಲಪಾತ ಈ ಕಣಿವೆಯಲ್ಲಿ ನೋಡಬಹುದಾದ ಸುಂದರ ಸ್ಥಳಗಳಾಗಿವೆ. ಈ ಪರಿಸರದಲ್ಲಿ ವಸತಿ ಪ್ರದೇಶಗಳಿದ್ದು ಸ್ಥಳೀಯ ಆದಿವಾಸಿಗಳ ಹೊರತಾಗಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ನೈಜ ಅಧ್ಯಯನಕಾರರು ಅಥವಾ ಸಂಶೋಧಕರು ಅನುಮತಿಯೊಂದಿಗೆ ಇಲ್ಲಿ ಭೇಟಿ ನೀಡಬಹುದು.
ಅನಂತೋನಿ ಜಲಪಾತ, ಚಿತ್ರಕೃಪೆ: Marcus334
ಆದಾಗ್ಯೂ ಭೇಟಿ ನೀಡಬಯಸುವ ಪ್ರವಾಸಿಗರು ಇದಕ್ಕೆ ಹತ್ತಿರದಲ್ಲಿರುವ ಅಮರಾವತಿ ಆಣೆಕಟ್ಟೆ ಬಳಿ ನಿರ್ಮಿಸಲಾಗಿರುವ ಉದ್ಯಾನ ಪ್ರದೇಶಕ್ಕೆ ಭೇಟಿ ನೀದಬಹುದು. ಇಲ್ಲಿಂದ ಚಾರಣ ಮಾಡುತ್ತ ಮಂಜಂಪಟ್ಟಿ, ಅಣ್ಣಾಮಲೈ ಹಾಗೂ ಪಳನಿ ಬೆಟ್ಟಗಳ ಅದ್ಭುತ ದೃಶ್ಯಗಳನ್ನು ಕಾಣಬಹುದು.
ಇದನ್ನು ಅಮರಾವತಿ ನಗರ ಎಂದು ಕರೆಯಲಾಗುತ್ತದೆ ಹಾಗೂ ಇದನ್ನು ಪ್ರವಾಸಿ ಸ್ಥಾನವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯಕ್ಕೆ ಇದಕ್ಕೆ ಹೊಂದಿಕೊಂಡಂತಿರುವ ಕ್ರೊಕೋಡೈಲ್ ಪಾರ್ಕ್ ನಲ್ಲಿ ಉಳಿಯುವ ವ್ಯವಸ್ಥೆಯಿದೆ. ಈ ಸ್ಥಳವು ಕೊಯಮತ್ತೂರಿನಿಂದ 96 ಕಿ.ಮೀ ದೂರವಿದ್ದು ರಸ್ತೆಯ ಮೂಲಕ ಪೊಲ್ಲಾಚಿ ಹಾಗೂ ಉಡುಮಲಪೇಟ್ ಮಾರ್ಗವಾಗಿ ಇದನ್ನು ತಲುಪಬಹುದು.
ಚಿತ್ರಕೃಪೆ: Marcus334
ಇನ್ನೊಂದು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿ ಇಂದು ಅವಶೇಷಗಳಾಗಿ ಹಲವು ದೇವ ದೇವತೆಯರ ವಿಗ್ರಹಗಳು ಕಂಡುಬರುತ್ತವೆ. ಇಲ್ಲಿನ ಕೆಲವೊಂದು ಸ್ಥಳದಲ್ಲಿ ದೊರೆತಿರುವ ವಿಗ್ರಹಗಳು ಹಿಂದೆ ಇಲ್ಲೊಂದು ಅತಿ ದೊಡ್ಡ ದೇವಾಲಯವಿತ್ತೆಂಬುದರ ಕುರಿತು ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.
ಭಯಾನಕ ಪ್ರಪಾತ ಕಣಿವೆಗಳಿರುವ ರಸ್ತೆ ಪ್ರವಾಸ
ವಿಜಯನಗರ ಸಾಮ್ರಾಜ್ಯದ ಸಮಯದ ವಿನ್ಯಾಸ ಹೋಲುವ ಹಲವು ವಿಗ್ರಹಗಳು ಅದರಲ್ಲೂ ವಿಶೇಷವಾಗಿ ಕೃಷ್ಣ, ಕೊಂಡೈ ಅಮ್ಮ ಹಾಗೂ ಗಣೇಶನ ವಿಗ್ರಹಗಳು ಇಲ್ಲಿ ಕಂಡುಬರುತ್ತವೆ. ಇಲ್ಲಿನ ಗ್ರಾಮಸ್ಥರಿಗೆ ಈ ಕುರಿತು ಅಥವಾ ಇಲ್ಲಿದ್ದಿರಬಹುದಾದ ದೇವಾಲಯದ ಕುರಿತು ಯಾವುದೆ ಮಾಹಿತಿಯಿಲ್ಲ. ಅಲ್ಲದೆ ಕೆಲವು ಡಾಲ್ಮೆನುಗಳನ್ನೂ ಇಲ್ಲಿ ಕಾಣಬಹುದು.